'ನನ್ನ ಅವಶ್ಯಕತೆ ಅಲ್ಲಿ ಇರ್ಲಿಲ್ಲ ಹಾಗಾಗಿ ನಾನು ಅಲ್ಲಿಗೆ ಹೋಗಿಲ್ಲ': ಸುದೀಪ್
Recommended Video
ಮಂಡ್ಯ ಲೋಕಸಭಾ ಚುನಾವಣೆ(2019) ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಸದ್ದು ಮಾಡಿತ್ತು. ಸುಮಲತಾ ಅವರ ಪರವಾಗಿ ಇಬ್ಬರು ಸ್ಟಾರ್ ನಟರು ಅಖಾಡಕ್ಕೆ ಇಳಿದ ನಂತರ ಚುನಾವಣೆಯ ದಿಕ್ಕೆ ಬದಲಾಗಿ ಹೋಗಿತ್ತು. ಜೋಡೆತ್ತುಗಳ ಅಬ್ಬರಕ್ಕೆ ಮಂಡ್ಯ ರಣಕಣದ ಕಾವು ಮತ್ತಷ್ಟು ಹೆಚ್ಚಾಗಿತ್ತು.
ಸುಮಲತಾ ಪರವಾಗಿ ಪ್ರಚಾರಕ್ಕೆ ಚಿತ್ರರಂಗದಿಂದ ಯಾರೆಲ್ಲ ಬರ್ತಾರೆ ಎನ್ನುವ ಕುತೂಹಲ ಕಾಡುತ್ತಿತ್ತು. ಅಲ್ಲದೆ ಸಿನಿಮಾದವರಿಂದ ಏನಾಗುತ್ತೆ ಎನ್ನುವ ಮಾತುಗಳು ಸಹ ಬಲವಾಗಿ ಕೇಳಿ ಬರುತ್ತಿತ್ತು. ಆ ಸಮಯದಲ್ಲಿ ಎಂಟ್ರಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್ ಇಬ್ಬರು ಸುಮಕ್ಕನ ಎಡಕ್ಕೆ-ಬಲಕ್ಕೆ ನಿಂತು ಹೋರಾಡಿ ಗೆಲ್ಲಿಸಿಯೆ ಬಿಟ್ಟರು.
ಒಂದಡೆ ಜೋಡೆತ್ತುಗಳು ಅಬ್ಬರದ ಪ್ರಚಾರ ಮಾಡುತ್ತಿದ್ರೆ ಮತ್ತೊಂದೆಡೆ ಕಿಚ್ಚ ಸುದೀಪ ಅವರು ಯಾಕೆ ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಯಾಕಂದ್ರೆ ಅಂಬರೀಶ್ ಅವರ ಅಂತ್ಯಂತ ಆಪ್ತರಲ್ಲಿ ಸುದೀಪ ಕೂಡ ಒಬ್ಬರಾಗಿದ್ದರು. ಹಾಗಾಗಿ ಮಂಡ್ಯ ರಾಜಕೀಯ ಕಣದಲ್ಲಿ ಸುದೀಪ ಅವರ ಗೈರು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಆದ್ರೀಗ ಕಿಚ್ಚ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ನನ್ನ ಅವಶ್ಯಕತೆ ಇರ್ಲಿಲ್ಲ ಅಲ್ಲಿ
ಇತ್ತೀಚಿಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಸುದೀಪ ಅವರಿಗೆ ಮಂಡ್ಯ ರಾಜಕೀಯದ ಪ್ರಶ್ನೆ ಎದುರಾಗಿತ್ತು. ಮಂಡ್ಯ ಪ್ರಚಾರದಲ್ಲಿ ಕಾಣಿಸಿಕೊಳ್ಳದಿರಲು ಅಸಲಿ ಕಾರಣವನ್ನು ಬಹಿರಂಗ ಪಡಿಸಿದ್ದಾರೆ. "ನಾನು ಯಾವತ್ತು ಬರ್ತೀನಿ ಅಂತ ಮಾತು ಕೊಟ್ಟು, ಮಾತು ತಪ್ಪಿದವನಲ್ಲ. ನನ್ನ ಅವಶ್ಯಕತೆ ಅಲ್ಲಿ ಇಲ್ಲ ಅಂತ ಅನಿಸಿತು. ನನ್ನ ಅವಶ್ಯಕತೆ ಬೇಡ ಅಂತ ಅನಿಸಿತು" ಎಂದು ಹೇಳಿದ್ದಾರೆ.

ಸುಮಕ್ಕನ ಬಳಿ ಮಾತನಾಡಿದ್ದೆ
"ರಾಜಕೀಯ ವಿಚಾರವಾಗಿ ಅಕ್ಕ ನನ್ನ ಹತ್ರ ಮೊದಲು ಮಾತನಾಡಿದ್ರು. ಆಗ ಬ್ಯುಸಿ ಇದ್ದ ಕಾರಣ ಮತ್ತೊಮ್ಮೆ ಮಾತನಾಡುವುದಾಗಿ ಹೇಳಿದ್ದೆ. ಆಮೇಲೆ ಮತ್ತೆ ಫೋನ್ ಮಾಡಿದ್ದೆ ಆಗ ಅವರು ಬ್ಯುಸಿ ಇದ್ರು. ಆ ಮಾತುಕತೆ ಅಲ್ಲಿಗೆ ನಿಂತುಹೋಯ್ತು. ಆದ್ರೆ ಆ ನಂತರ ಅವರು ಚುನಾವಣೆಗೆ ನಿಂತಮೇಲೆ ಪೋನ್ ಮಾಡಿ ಅವರ ನಿರ್ಧಾರ ಹೇಳಿದ್ರು. ಅಮೇಲೆ ನಾನು ವಿಶ್ ಕಳುಹಿಸಿದ್ದೆ"

ನಾಮಪತ್ರ ಸಲ್ಲಿಸುವ ವೇಳೆ ಕರೆಯಲಿಲ್ಲ
"ಚುನಾವಣೆಗೆ ನಿಂತ ನಂತರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರೆ ಹೋಗಿ ಮಾಡಿದ್ರು. ಅವಾಗ ಅವರು ನನ್ನನ್ನು ಕರೆಯಲಿಲ್ಲ. ಆದ್ರೆ ಕರೆಯಲಿಲ್ಲ ಎನ್ನುವುದು ನನಗೆ ತಲೆಗೆ ಬಂದಿಲ್ಲ. ಆದ್ರೆ ನನಗೆ ಅನಿಸಿತು ನನ್ನ ಅವಶ್ಯಕತೆ ಅಲ್ಲಿ ಇಲ್ಲ ಎನ್ನುವುದು. ನನ್ನನ್ನು ಕರೆಯಲಿಲ್ಲ ಎನ್ನುವ ಬೇಸರ ಇದ್ದರು ಇರಬಹುದು. ಆದ್ರೆ ಕೆಲವು ಭಾವನೆಗಳು ನನ್ನದು. ಅದೂ ನನ್ನ ಬಳಿಯೆ ಇರಲಿ" ಎಂದು ಹೇಳಿದ್ದಾರೆ.

ಸಂಬಂದ ಸುಳ್ಳು ಅಂತ ಹೇಳಿದ್ರೆ ನಂಬಲ್ಲ
ಈ ಹಿಂದೆ ಕೆಲವು ಚುನಾವಣೆಯಲ್ಲಿ ಪ್ರಚಾರ ಮಾಡಿದ್ದೆ. ಆದ್ರೆ ನಂತರ ಯಾಕೊ ಬೇಡ ಎನಿಸಿತು. ಹಾಗಾಗಿ ಅವತ್ತೆ ನನ್ನ ನಿರ್ಧಾರವನ್ನು ಹೇಳಿದ್ದೆ. ನಾನು ಇನ್ನು ಮುಂದೆ ಚುನಾವಣೆಗೆ ಹೋಗಲ್ಲ ಎಂದು ಪತ್ರ ಬರೆದಿದ್ದೆ. ಹಾಗಾಗಿ ಹೋಗಿಲ್ಲ. ನಾನು ಅಲ್ಲಿಗೆ ಹೋಗಿ ಬಿಟ್ಟರೆ ಏನು ಪ್ಯಾಲೇಸ್ ಕಟ್ಟಿ ಬಿಡ್ತೀನಿ ಅಂತಲ್ಲ. ಹೋಗಿಲ್ಲ ಅಂದ್ರೆ ಏನು ಬಿದ್ದೋಗುತ್ತೆ ಅಂತಾನೂ ಅಲ್ಲ. ಹಾಗಂತ ಸಂಬಂದ ಸುಳ್ಳು ಅಂತ ಹೇಳಿದ್ರೆ ನಾನು ನಂಬಲ್ಲ. ನಂಬುವವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ಹೇಳುತ್ತಾ
ರಾಜಕೀಯ ವಿಚಾರವಾಗಿ ಇದ್ದ ಗೊಂದಲಕ್ಕೆ ತೆರೆಎಳೆದಿದ್ದಾರೆ ಮಾಣಿಕ್ಯ.


Click it and Unblock the Notifications











