ದುನಿಯಾ ವಿಜಯ್ 'ಸಲಗ' ಎದುರು 'ಕೋಟಿಗೊಬ್ಬ 3' ಸೋತಿದ್ದನ್ನು ವೇದಿಕೆ ಮೇಲೆ ಒಪ್ಪಿಕೊಂಡ ಕಿಚ್ಚ ಸುದೀಪ್!
ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಚಿತ್ರಮಂದಿರದ ಅಂಗಳಕ್ಕೆ ಬಂದು ಕ್ಲಾಷ್ ಆದ ಹಲವಾರು ಉದಾಹರಣಗಳಿವೆ. ಅದರಲ್ಲಿಯೂ ಹಬ್ಬದ ದಿನಗಳಂದು ಸ್ಟಾರ್ ನಟರ ಚಿತ್ರಗಳು ಪರಸ್ಪರ ಮುಖಾಮುಖಿಯಾಗಿ ಬಾಕ್ಸ್ ಆಫೀಸ್ನಲ್ಲಿ ಗುದ್ದಾಡಿವೆ.
ಒಮ್ಮೊಮ್ಮೆ ಇಬ್ಬರೂ ಸ್ಟಾರ್ ನಟರ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಗೆದ್ದರೆ, ಇನ್ನೂ ಕೆಲವೊಂದು ಬಾರಿ ಒಂದು ಚಿತ್ರ ಗೆದ್ದು ಮತ್ತೊಂದು ಚಿತ್ರ ಹೀನಾಯವಾಗಿ ಸೋತಿದೆ. ಹೀಗೆ ಒಂದು ಚಿತ್ರ ಗೆದ್ದು ಬೀಗಿ ಮತ್ತೊಂದು ಚಿತ್ರ ಸೋತ ಉದಾಹರಣೆಗಳೇ ಹೆಚ್ಚಿದೆ.

ಅದೇ ರೀತಿ 2021ರಲ್ಲಿ ದಸರಾ ಪ್ರಯುಕ್ತ ಬಿಡುಗಡೆಗೊಂಡಿದ್ದ ಕೋಟಿಗೊಬ್ಬ 3 ಹಾಗೂ ಸಲಗ ಚಿತ್ರಗಳೂ ಸಹ ಬಾಕ್ಸ್ ಆಫೀಸ್ನಲ್ಲಿ ಎದುರಾಳಿಗಳಾಗಿ ತೊಡೆ ತಟ್ಟಿದ್ದವು. ಕೋಟಿಗೊಬ್ಬ 3 ಚಿತ್ರ ಸುದೀಪ್ ನಟನೆಯ ಹಾಗೂ ಶಿವ ಕಾರ್ತಿಕ್ ನಿರ್ದೇಶನದ ಚಿತ್ರವಾಗಿತ್ತು. ಅತ್ತ ಸಲಗ ದುನಿಯಾ ವಿಜಯ್ ನಟನೆಯ ಹಾಗೂ ಅವರೇ ನಿರ್ದೇಶಿಸಿದ್ದ ಮೊದಲ ಸಿನಿಮಾವಾಗಿತ್ತು.
ಈ ಪೈಕಿ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡಿದ್ದವು. ಸಲಗ 2021ರ ಅಕ್ಟೋಬರ್ 14ರಂದು ಬಿಡುಗಡೆಯಾದರೆ, ಕೋಟಿಗೊಬ್ಬ 3 ಚಿತ್ರ 2021ರ ಅಕ್ಟೋಬರ್ 15ರಂದು ತೆರೆಗೆ ಬಂದಿತ್ತು. ಒಂದು ದಿನ ಮುಂಚಿತವಾಗಿಯೇ ಬಂದ ಅಂಡರ್ವರ್ಲ್ಡ್ ಕಥೆಯನ್ನೊಂದಿದ್ದ ಸಲಗ ಚಿತ್ರ ಮಾಸ್ ಸಿನಿ ರಸಿಕರ ಮೆಚ್ಚುಗೆಯನ್ನು ಗಿಟ್ಟಿಸಿಕೊಂಡು ಮೊದಲ ದಿನವೇ ಬ್ಲಾಕ್ಬಸ್ಟರ್ ರಿಪೋರ್ಟ್ ಪಡೆದುಕೊಂಡುಬಿಟ್ಟಿತ್ತು.
ಸಲಗ ಬಿಡುಗಡೆಗೊಂಡ ಮರುದಿನ ತೆರೆಗೆ ಬಂದ ಕೋಟಿಗೊಬ್ಬ 3 ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಕಿಚ್ಚ ಸುದೀಪ್ ಸ್ಟಾರ್ಡಂ ಚಿತ್ರ ಒಳ್ಳೆಯ ಗಳಿಕೆ ಮಾಡುವಂತೆ ಮಾಡಿತ್ತು. ಹೀಗೆ 2021ರ ದಸರಾ ಪ್ರಯುಕ್ತ ಬಿಡುಗಡೆಗೊಂಡಿದ್ದ ಈ ಎರಡೂ ಚಿತ್ರಗಳೂ ಸಹ ಒಳ್ಳೆಯ ಗಳಿಕೆ ಮಾಡಿದರೂ ಸಹ ದುನಿಯಾ ವಿಜಯ್ ನಟನೆಯ ಸಲಗ ಚಿತ್ರ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರಕ್ಕಿಂತ ಮೇಲುಗೈ ಸಾಧಿಸಿತ್ತು.
ಇನ್ನು ಈ ವಿಷಯ ಆಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೂ ಸಹ ಕಾರಣವಾಗಿತ್ತು. ಹಲವರು ಈ ಬಾರಿಯ ದಸರಾ ವಿನ್ನರ್ ಸಲಗ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪರ ವಿರೋಧಗಳೂ ಸಹ ವ್ಯಕ್ತವಾಗಿತ್ತು. ಇದೀಗ ಈ ಕುರಿತು ಸ್ವತಃ ಕಿಚ್ಚ ಸುದೀಪ್ ಅವರೇ ತೆರೆದ ವೇದಿಕೆಯಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಹೌದು, ನಿನ್ನೆ ( ಜೂನ್ 25 ) ನಡೆದ ಜಿಮ್ಮಿ ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಈ ಕುರಿತು ಮಾತನಾಡಿದ್ದಾರೆ. ಮೊದಲಿಗೆ ತಮ್ಮ ಅಕ್ಕನ ಮಗ ಸಂಚಿತ್ ಸಂಜೀವ್ ಅವರನ್ನು ತಮ್ಮ ಆಸೆಯಂತೆ ವೇದಿಕೆಗೆ ಕರೆತಂದ ಶಿವ ರಾಜ್ಕುಮಾರ್ ಹಾಗೂ ರವಿಚಂದ್ರನ್ ಅವರಿಗೆ ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್ ತದನಂತರ ಸಂಚಿತ್ಗೆ ಯಾವುದೇ ಕಾರಣಕ್ಕೂ ಜಿಮ್ಮಿ ಚಿತ್ರವನ್ನು ತಮ್ಮ ಚಿತ್ರ ಬಿಡುಗಡೆಯಾಗುವ ದಿನ ಬಿಡುಗಡೆ ಮಾಡದಂತೆ ಸಲಹೆ ನೀಡಿದರು.
ಇದು ರವಿಚಂದ್ರನ್ ತಮಗೆ ಹೇಳಿಕೊಟ್ಟ ಪಾಠ ಎಂದ ಕಿಚ್ಚ ಸುದೀಪ್ ಶುಕ್ರವಾರ ನನ್ನದೇ ಆಗಿರಬೇಕು ಹಾಗಾಗಿ ಜಿಮ್ಮಿ ಚಿತ್ರವನ್ನು ತನ್ನ ಸಿನಿಮಾ ಜತೆ ಬಿಡುಗಡೆ ಮಾಡಬೇಡಿ ಎಂದು ಹೇಳಿದರು. ಅಷ್ಟೇ ಅಲ್ಲದೇ ಅಲ್ಲಿಯೇ ಇದ್ದ ಕೆಪಿ ಶ್ರೀಕಾಂತ್ ಕಡೆ ನೋಡಿದ ಸುದೀಪ್ "ಎಲ್ಲಾ ಸರಿ ಸಲಗ ಆಗಲ್ಲಮ್ಮ" ಎಂದು ಹೇಳಿದರು. ಈ ಮೂಲಕ ಕೆಪಿ ಶ್ರೀಕಾಂತ್ ನಿರ್ಮಾಣದ ಸಲಗ ತಮ್ಮ ಕೋಟಿಗೊಬ್ಬ 3 ಚಿತ್ರದ ವಿರುದ್ಧ ಗೆದ್ದಿತ್ತು ಎಂಬುದನ್ನು ಕಿಚ್ಚ ಸುದೀಪ್ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.


Click it and Unblock the Notifications











