ಫ್ಲಾಪ್ಸ್ ಕೊಟ್ರೂ ಓಕೆ ರಾಜಕಾರಣಕ್ಕೆ ಹೋಗಬೇಡಿ; ಬಿಜೆಪಿ ಸೇರಲು ಹೊರಟ ಕಿಚ್ಚನಿಗೆ ಫ್ಯಾನ್ಸ್ ಮನವಿ
ನಟ ಕಿಚ್ಚ ಸುದೀಪ್ ಹೆಸರು ಕಳೆದ ಎರಡು ಮೂರು ದಿನಗಳಿಂದ ಸತತವಾಗಿ ಟ್ರೆಂಡ್ ಆಗ್ತಿದೆ. ಮೂರು ಸಿನಿಮಾಗಳ ಕಥೆ ಒಪ್ಪಿಕೊಂಡಿದ್ದೇನೆ ಎಂದು ಮೊನ್ನೆಯಷ್ಟೇ ಪೋಸ್ಟ್ ಹಂಚಿಕೊಂಡಿದ್ದ ಸುದೀಪ್ ತಮ್ಮ ಮುಂದಿನ ಸಿನಿಮಾಗಳಿಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಹಾಗೂ ಸಿನಿ ರಸಿಕರಿಗೆ ಸಂತಸದ ಸುದ್ದಿ ಕೊಟ್ಟಿದ್ದರು.
ಹೀಗೆ ಬಿಗ್ ಬ್ರೇಕ್ ಬಳಿಕ ಸಿನಿಮಾ ಮಾಡುವ ಕುರಿತು ತಮ್ಮ ನೆಚ್ಚಿನ ನಟ ಪ್ರತಿಕ್ರಿಯಿಸಿದ್ದನ್ನು ಕಂಡು ಖುಷಿಗೊಂಡಿದ್ದ ಕಿಚ್ಚನ ಅಭಿಮಾನಿಗಳು ಇದೀಗ ಬೇಸರಕ್ಕೆ ಒಳಗಾಗಿದ್ದಾರೆ. ಇನ್ನು ಅಭಿಮಾನಿಗಳು ಬೇಸರಕ್ಕೆ ಒಳಗಾಗಲು ಕಾರಣ ಸುದೀಪ್ ರಾಜಕೀಯ ಪ್ರವೇಶ ಮಾಡ್ತಾರೆ ಎಂಬುದು.

ಹೌದು, ( ಏಪ್ರಿಲ್ 5 ) ಮಧ್ಯಾಹ್ನ 1.30ಕ್ಕೆ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಕಿಚ್ಚ ಸುದೀಪ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇನ್ನು ಸುದೀಪ್ ಅವರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಬಿಜೆಪಿ ಪಕ್ಷದವರು ಮನವೊಲಿಸುವ ಯತ್ನದಲ್ಲಿ ಯಶಸ್ವಿಯಾಗಿದ್ದು, ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಕ್ಕೆ ಫಿದಾ ಆಗಿರುವ ಸುದೀಪ್ ಬಿಜೆಪಿ ಸೇರಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಹರಿದಾಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ರಾಜಕೀಯಕ್ಕೆ ಬರಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ಕೆಳಕಂಡಂತೆ ಮನವಿ ಮಾಡಿದ್ದಾರೆ ಹಾಗೂ ಸಲಹೆ ನೀಡಿದ್ದಾರೆ.
ಎರಡು ನಾಲಿಗೆ ಇರೋ ರಾಜಕಾರಣಿಗಳನ್ನ ನಂಬಿ ರಾಜಕೀಯಕ್ಕೂ ರಾಜಕೀಯ ಪಕ್ಷದ ಪ್ರಚಾರಕ್ಕೋ, ಹೋಗೋದಕ್ಕಿಂತ, ಸದಾ ನಿಮ್ಮ ಶ್ರೇಯೋಭಿಲಾಷಿಗಳಾಗಿ ಇರೋ ಅಭಿಮಾನಿಗಳಿಗಾಗಿ ಕೆಲಸ ಮಾಡಿ. ನಮಗೆ ಕಿಚ್ಚ ರಾಜಕೀಯಕ್ಕೆ ಬರುವುದು ಬೇಡ. ಎಂದು ಟೀಮ್ ಕಿಚ್ಚ ಸುದೀಪ್ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.

ಮತ್ತೊಂದು ಕಿಚ್ಚ ಸುದೀಪ್ ಅಭಿಮಾನಿ ಬಳಗ ಈ ಕುರಿತು ಟ್ವೀಟ್ ಮಾಡಿದ್ದು, ನೀವು ಎಷ್ಟೇ ಫ್ಲಾಪ್ ಚಿತ್ರಗಳನ್ನು ಕೊಟ್ರೂ ಪರವಾಗಿಲ್ಲ, ಆದ್ರೆ ರಾಜಕೀಯಕ್ಕೆ ಮಾತ್ರ ಹೋಗಬೇಡಿ ಎಂದು ಬರೆದುಕೊಂಡಿದ್ದಾರೆ.
ಇನ್ನು #WeDontWantKichchaInPolitics ( ಕಿಚ್ಚ ರಾಜಕೀಯಕ್ಕೆ ಬರುವುದು ನಮಗೆ ಬೇಡ ) ಎಂಬ ಟ್ಯಾಗ್ ಬಳಸಿ ಸಾಲು ಸಾಲು ಟ್ವೀಟ್ ಮಾಡಿ ರಾಜಕೀಯಕ್ಕೆ ಬಾರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಹೀಗೆ ಕಿಚ್ಚ ಸುದೀಪ್ ಮಾತ್ರವಲ್ಲದೇ ಇತರೆ ನಟರ ಅಭಮಾನಿಗಳೂ ಸಹ ಹಾಗೂ ಸಾಮಾನ್ಯ ಸಿನಿ ರಸಿಕರೂ ಸಹ ರಾಜಕೀಯಕ್ಕೆ ಹೋಗಬೇಡಿ ಎಂದು ಕಿಚ್ಚ ಸುದೀಪ್ಗೆ ಮನವಿ ಹಾಗೂ ಸಲಹೆಗಳನ್ನು ನೀಡಿದ್ದು, ಕಿಚ್ಚ ಸುದೀಪ್ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೋ ಕಾದು ನೋಡಬೇಕಿದೆ. ಹೀಗೆ ರಾಜಕೀಯ ಪ್ರವೇಶದ ಕುರಿತು ಚರ್ಚೆಗಳು ನಡೆಯುತ್ತಲೇ ಇರುವಾಗಲೇ ಕಿಚ್ಚ ಸುದೀಪ್ಗೆ ಬೆದೆರಿಕೆಯೊಂದು ಬಂದಿದೆ.
ಹೌದು, ಕಿಚ್ಚ ಸುದೀಪ್ ಅವರಿಗೆ ಪತ್ರವೊಂದನ್ನು ಕಿಡಿಗೇಡಿಗಳು ಬರೆಯಲಾಗಿದ್ದು, ಇದರಲ್ಲಿ ಸುದೀಪ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಖಾಸಗಿ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಪತ್ರ ಸುದೀಪ್ ಮ್ಯಾನೇಜರ್ ಜಾಕ್ ಮಂಜು ಕೈ ತಲುಪಿದ್ದು, ಇದರ ವಿರುದ್ಧ ಅವರು ದೂರು ದಾಖಲಿಸಿದ್ದಾರೆ. ಇದೇ ವೇಳೆ ಸುದೀಪ್ ರಾಜಕೀಯಕ್ಕೆ ಬರಲಿದ್ದಾರೆ, ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಕೇಳಿ ಈ ರೀತಿಯ ಬೆದರಿಕೆಗಳನ್ನು ಯಾರಾದರೂ ಹಾಕಿರಬಹುದಾ ಎಂಬ ಅನುಮಾನವೂ ಸಹ ಮೂಡಿದೆ.


Click it and Unblock the Notifications











