ಕನ್ನಡ ಸಿನಿಮಾ ನೋಡಿ ಅತ್ಯದ್ಭುತ ಎಂದ ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್ ಒಳ್ಳೆಯ ನಿರ್ದೇಶಕ ಸಹ ಹೌದು. ಕೆಲವು ಗುಣಮಟ್ಟದ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ ಸುದೀಪ್. ಒಳ್ಳೆಯ ಸಿನಿಮಾ, ಸಿನಿಮಾ ತಂತ್ರಜ್ಞಾನ ಇವುಗಳ ಬಗ್ಗೆ ಬಹಳ ಆಸಕ್ತಿಯುಳ್ಳ ಕಿಚ್ಚ ಯಾರೇ ಒಳ್ಳೆಯ ಸಿನಿಮಾ ಮಾಡಿದರು ಅವರಿಗೆ ಶಹಭಾಸ್ ಹೇಳುವುದು ಮರೆಯುವುದಿಲ್ಲ.
ತಮ್ಮ ಬ್ಯುಸಿ ಶೆಡ್ಯೂಲ್ನಲ್ಲಿ ತಾವು ಹೆಚ್ಚು ಸಿನಿಮಾ ನೋಡಲಾಗುತ್ತಿಲ್ಲ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದ ಸುದೀಪ್, ಇದೀಗ ಒಂದೊಳ್ಳೆಯ ಸಿನಿಮಾಕ್ಕಾಗಿ ಸಮಯ ಹೊಂದಿಸಿಕೊಂಡು ನೋಡಿದ್ದಲ್ಲದೆ, ಸಿನಿಮಾದ ಬಗ್ಗೆ ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಸುದೀಪ್ ಮೆಚ್ಚಿಕೊಂಡಿರುವ ಸಿನಿಮಾ ಕನ್ನಡದ 'ಗರುಡ ಗಮನ ವೃಷಭ ವಾಹನ'. ರಾಜ್ ಬಿ ಶೆಟ್ಟಿ ನಿರ್ದೇಶಿಸಿರುವ ಈ ಸಿನಿಮಾವನ್ನು ನಿನ್ನೆಯಷ್ಟೆ (ಮೇ 05) ರಂದು ವೀಕ್ಷಿಸಿರುವ ಸುದೀಪ್, ಟ್ವಿಟ್ಟರ್ನಲ್ಲಿ ಉದ್ದದ ಪತ್ರವೊಂದನ್ನು ಬರೆದು ಸಿನಿಮಾದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
''ಒಳ್ಳೆಯ ಚಿತ್ರಕ್ಕಾಗಿ ಕ್ರಿಯೇಟರ್ ಒಬ್ಬ ನಡೆಸುವ ಹುಡುಕಾಟ ನಿರಂತರವಾದುದು. ಸಿನಿಮಾ ಮಾಡುವಾಗ ಎಲ್ಲರಲ್ಲೂ ಉತ್ಸಾಹ ತುಂಬಬಲ್ಲ ಚಿತ್ರಕತೆ, ಸಿನಿಮಾ ನೋಡುವಾಗ ಪ್ರೇಕ್ಷಕನಿಗೆ ಭಿನ್ನ ಅನುಭೂತಿ ನೀಡುವ ಚಿತ್ರಕತೆ'' ಎಂದಿರುವ ಸುದೀಪ್, ''ಈ ಮಾತುಗಳನ್ನು ನಾನು ಕೇವಲ ನನ್ನ ಅಭಿಪ್ರಾಯವಾಗಿ ಅಲ್ಲ, ಬದಲಿಗೆ ಈ ಸಿನಿಮಾ ನೀಡಿದ ಇಡೀ ತಂಡಕ್ಕೆ ನನ್ನ ಅಭಿನಂದನೆಗಳ ರೂಪದಲ್ಲಿ ಹೇಳುತ್ತಿದ್ದೇನೆ. ನೀವೊಂದು ಅದ್ಭುತವಾದ ಸಿನಿಮಾವನ್ನು ನೀಡಿದ್ದೀರಿ'' ಎಂದಿದ್ದಾರೆ.

ಸಮಯ ಮಾಡಿಕೊಂಡು ಸಿನಿಮಾ ನೋಡಿದ ಸುದೀಪ್
''ಸಾಕಷ್ಟು ಸಿನಿಮಾಗಳನ್ನು ಮಾಡಿರುವ ನನಗೆ ನೋಡಲು ಸಮಯ ಸಿಗುವುದು ಕೆಲವು ಸಿನಿಮಾಗಳನ್ನಷ್ಟೆ. ಅಂಥಹುದರಲ್ಲಿ ನಾನು ನಿನ್ನೆ 'ಗರುಡ ಗಮನ ವೃಷಭ ವಾಹನ' ಸಿನಿಮಾ ವೀಕ್ಷಿಸಿದೆ. ಸಿನಿಮಾ ಬಗ್ಗೆ ಅನ್ನಿಸಿದ್ದದು ಹೇಳಬೇಕೆಂದರೆ ಮೊದಲು ಹೊಳೆಯುವ ಉದ್ಘಾರ 'ವಾವ್'' ಎಂದಿದ್ದಾರೆ ಸುದೀಪ್ ಹಾಗೂ ''ಸಿನಿಮಾದ ಬರವಣಿಗೆ 'ಅದ್ಭುತ', ಕತೆಯ ಮೇಲೆ ನಂಬಿಕೆ ಹುಟ್ಟುವಂತೆ ಮಾಡಿರುವ ವಿಧಾನ ಅತ್ಯದ್ಭುತ. ಸಿನಿಮಾದ ತಂತ್ರಗಾರಿಕೆ ಪ್ರತಿಯೊಬ್ಬರಿಗೂ ಪಾಠ. ಸಿನಿಮಾದ ಎಲ್ಲ ಪಾತ್ರಗಳು ಅತ್ಯದ್ಭುತ, ಪಾತ್ರಗಳಲ್ಲಿ ನಟಿಸಿದ ನಟರೂ ಸಹ ಅದ್ಭುತವಾಗಿ ನಟಿಸಿದ್ದಾರೆ'' ಎಂದು ಹೊಗಳಿದ್ದಾರೆ.

''ಸಿನಿಮಾದ ಸರಳತೆಯೇ ಸಿನಿಮಾದ ಬಹುದೊಡ್ಡ ಅಂಶ''
''ಸಿನಿಮಾದ ಸರಳತೆಯೇ ಸಿನಿಮಾದ ಬಹುದೊಡ್ಡ ಅಂಶ. ಸಿನಿಮಾದ ಯಾವ ದೃಶ್ಯ ಅಥವಾ ಪಾತ್ರವೂ ಸಹ ಬಲವಂತದಿಂದ ತುರುಕಲಾಗಿದೆ ಎನಿಸುವುದಿಲ್ಲ. ಹಿನ್ನೆಲೆ ಸಂಗೀತ ಸಿನಿಮಾದ ತೀವ್ರತೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ನಾನು ಸಿನಿಮಾದ ಕತೆಯಲ್ಲಿ ಮುಳುಗಿ ಹೋಗಿದ್ದರೂ ಸಹ ಸಂಗೀತದಿಂದ ನನ್ನ ಗಮನ ಬೇರೆಯಡೆ ಹರಿಯಲಿಲ್ಲ. ಸಂಗೀತ ನಿರ್ದೇಶಕ ಮುಕುಂದ್ಗೆ ಅಭಿನಂದನೆ'' ಎಂದು ಹೊಗಳಿದ್ದಾರೆ ಸುದೀಪ್.
ಮುಂದುವರೆದು ''ರಿಷಬ್ ಶೆಟ್ಟಿ ಹರಿಯ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಅವರ ಸಂಭಾಷಣೆ ಹೇಳುವ ರೀತಿ ಸೂಪರ್. ಅವರು ತಮ್ಮನ್ನು ತಾವು ಒಬ್ಬ ಅದ್ಭುತ ನಟನಾಗಿ ತಯಾರಿಸಿಕೊಂಡಿದ್ದಾರೆ. ಇನ್ನು ರಾಜ್ ಶೆಟ್ಟಿ ಬಗ್ಗೆ ನಾನು ಏನನ್ನು ಹೇಳಲಿ, ಅವರೊಂದು ಅದ್ಭುತ'' ಎಂದು ಸಿನಿಮಾದ ಮುಖ್ಯ ನಟರ ಬಗ್ಗೆ ಬರೆದಿದ್ದಾರೆ ಸುದೀಪ್.

ನಟರನ್ನು ಆಯ್ಕೆ ಮಾಡುತ್ತಿರಲಿಲ್ಲ: ಸುದೀಪ್
''ಇದೇ ಮೊದಲ ಬಾರಿಗೆ ರಾಜ್ ಶೆಟ್ಟಿ ನಟಿಸಿರುವ ಸಿನಿಮಾವನ್ನು ನಾನು ನೋಡಿದೆ. ಆತ ಕ್ಯಾಮೆರಾದ ಮುಂದೆ ಮತ್ತು ಹಿಂದೆ ಅತ್ಯದ್ಭುತ. ಇದೇ ಚಿತ್ರಕತೆಯನ್ನು ಬೇರೊಬ್ಬರು ಮಾಡಿದ್ದರೆ, ಖಂಡಿತವಾಗಿ ಶಿವನ ಪಾತ್ರಕ್ಕೆ ರಾಜ್ ಬಿ ಶೆಟ್ಟಿಯನ್ನು ಯಾರೂ ಹಾಕಿಕೊಳ್ಳುತ್ತಿರಲಿಲ್ಲ. ಆತನ ವ್ಯಕ್ತಿತ್ವ ಅಂಥಹದ್ದು. ಆತ ಶಿವನ ಪಾತ್ರಕ್ಕೆ ಅದ್ಭುತವಾಗಿ ಸೂಟ್ ಆಗಿದ್ದಾನೆ ಮತ್ತು ಅದನ್ನು ಅದ್ಭುತವಾಗಿ ನಿಭಾಯಿಸಿದ್ದಾನೆ. ಪಾತ್ರದ ಒಟ್ಟಾರೆ ಗುಣವನ್ನು ಪ್ರತಿ ದೃಶ್ಯದಲ್ಲೂ ಹೊರಗೆ ತರಲು ವರ್ಷಗಳ ಅನುಭವ ಅವಶ್ಯಕವಾಗಿರುತ್ತದೆ, ರಾಜ್ ಶೆಟ್ಟಿ ದೈವದತ್ತ ನಟ'' ಎಂದು ರಾಜ್ ಶೆಟ್ಟಿಯ ಅಭಿನಯವನ್ನು ಕೊಂಡಾಡಿದ್ದಾರೆ.

ಶಹಭಾಶ್ ಹೇಳಲೇ ಬೇಕು: ಸುದೀಪ್
''ನಿನ್ನ ಬೆನ್ನಿಗೆ ಹೊಡೆದು ಶಹಭಾಶ್ ಹೇಳಲೇಬೇಕು ಸಹೋದರ. ನಿನ್ನ ಬರವಣಿಗೆ ವಿಧಾನ ನನಗೆ ಆಶ್ಚರ್ಯ ಉಂಟು ಮಾಡಿದೆ. ಸಿನಿಮಾವನ್ನು ನೀನು ಹೊರತಂದಿರುವ ರೀತಿ ಅತ್ಯದ್ಭುತ. ಇದು ಸಾಮಾನ್ಯ ಸಿನಿಮಾ ಅಲ್ಲ. ನೀನು ಎಂಥಹಾ ಮಾಸ್ಟರ್ ಪೀಸ್ ಸೃಷ್ಟಿ ಮಾಡಿದ್ದೀಯ ಎಂಬ ಕಲ್ಪನೆ ನಿನಗೆ ಇದಿಯಾ ಎಂಬುದು ಸಹ ನನಗೆ ಗೊತ್ತಿಲ್ಲ. ಒಟ್ಟಾರೆ ನನಗೆ ಈ ಸಿನಿಮಾ ನೋಡಲು ಸಾಧ್ಯವಾಗಿದ್ದಕ್ಕೆ ಬಹಳ ಖುಷಿಯಾಗಿದೆ ಹಾಗೂ ನನ್ನ ಮೆಚ್ಚುಗೆಗಳನ್ನು ಈ ಪತ್ರದ ಮೂಲಕ ನಿಮಗೆ ತಲುಪಿಸಲು ಸಾಧ್ಯವಾಗಿದ್ದಕ್ಕೆ ಖುಷಿಯಾಗಿದೆ'' ಎಂದಿದ್ದಾರೆ ಸುದೀಪ್.


Click it and Unblock the Notifications











