ನನ್ನನ್ನು ತಲೆ ತಗ್ಗಿಸಲು ಬಿಟ್ಟಿಲ್ಲ ಆ ವ್ಯಕ್ತಿ: ಕೊನೆಯುಸಿರೋ ತನಕ ಆ ಸಹಾಯ ಮರೆಯಲ್ಲ- ಸುದೀಪ್
ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುತ್ತಲೇ ಶ್ರೀಮಂತರು. ಅವರ ತಂದೆ ಸಂಜೀವ್ ಹೋಟೆಲ್ ಉದ್ಯಮಿ. ಅಂದಿನ ಸಮಯಕ್ಕೆ ಖ್ಯಾತ ಚಲನಚಿತ್ರ ನಟರೆಲ್ಲ ಅವರ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿದ್ದರು. ಆರ್ಥಿಕವಾಗಿ ಶ್ರೀಮಂತರಾಗಿದ್ದ ಹಾಗೂ ಚಿತ್ರರಂಗದ ಉತ್ತಮ ಒಡನಾಟ ಹೊಂದಿದ್ದ ಕುಟುಂಬದಿಂದ ಬಂದರೂ ಸುದೀಪ್ ಸಿನಿ ಜರ್ನಿ ಸುಖಕರವಾಗಿರಲಿಲ್ಲ.
Recommended Video
ಅವಕಾಶಕ್ಕಾಗಿ ಕಾದಿದ್ದಾರೆ. ಯಶಸ್ಸಿಗಾಗಿ ಅಲೆದಾಡಿದ್ದಾರೆ, ಸಹಾಯಕ್ಕೆ ಕೈ ಚಾಚಿದ್ದಾರೆ. ಇದೆಲ್ಲ ಅನುಭವ ಕಂಡ ಮೇಲೆಯೇ ಸುದೀಪ್ ಸೂಪರ್ ಸ್ಟಾರ್ ಆಗಿ ನಿಂತಿರುವುದು. ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ 'ಕೋಟಿಗೊಬ್ಬ 3' ಚಿತ್ರತಂಡ ಬೆಂಗಳೂರಿನಲ್ಲಿ 'ಬೆಳ್ಳಿ ಸಂಭ್ರಮ' ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್ ತನ್ನ ಆರಂಭಿಕ ಜೀವನದಲ್ಲಿ ಸಹಾಯ ಮಾಡಿದ ಓರ್ವ ವ್ಯಕ್ತಿಯನ್ನು ವಿಶೇಷವಾಗಿ ನೆನೆದರು. ಯಾರದು? ಮುಂದೆ ಓದಿ....

ನನಗೆ ತೊಂದರೆ ಆದಾಗ ಸಹಾಯಕ್ಕೆ ನಿಂತಿದ್ದು ರಾಕ್ಲೈನ್
ಕಲಾವಿದ ಆದ್ಮೇಲೆ ನನಗೂ ಕೆಲವು ತೊಂದರೆ, ಕಷ್ಟಗಳು ಎದುರಾಯಿತು. ಆ ಸಂದರ್ಭದಲ್ಲಿ ನನ್ನ ಸಹಾಯಕ್ಕೆ ನಿಂತ ಒಬ್ಬ ವ್ಯಕ್ತಿ ರಾಕ್ಲೈನ್ ವೆಂಕಟೇಶ್ ಎಂದು ಸುದೀಪ್ ಹೇಳಿಕೊಂಡರು. ''ಹುಚ್ಚ ಸಿನಿಮಾ ಮಾಡಿದ್ದೆ. ಈ ಸಿನಿಮಾ ಆದ್ಮೇಲೆ ಅವರ ಬಳಿ ಆರ್ಥಿಕವಾಗಿ ಸಹಾಯ ಕೇಳಿದ್ದೆ'' ಎಂದು ಸುದೀಪ್ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.

ಮಧ್ಯರಾತ್ರಿ ಅವರ ಮನೆಗೆ ಹೋಗಿದ್ದೆ
''ಮಧ್ಯರಾತ್ರಿ ರಾಕ್ಲೈನ್ ವೆಂಕಟೇಶ್ ಅವರಿಗೆ ಫೋನ್ ಮಾಡಿ 'ಸರ್ ಸ್ವಲ್ಪ ಮಾತಾಡಬೇಕಿತ್ತು, ಮನೆಗೆ ಬರ್ತೀನಿ ಅಂದೆ, ಅದಕ್ಕೆ ಅವರು ನಾನೇ ಬರ್ತೀನಿ ಅಂದ್ರು. ಇಲ್ಲ ಸಾರ್ ನಾನು ಬರ್ತೀನಿ' ಅಂತ ಮನೆಗೆ ಹೋದೆ. ನನ್ನನ್ನು ತಲೆ ತಗ್ಗಿಸೋಕೆ ಸಹ ಬಿಡಲಿಲ್ಲ. ಏನ್ ಬೇಕು ಕೇಳಿ ಎಂದು ಸಹಾಯ ಮಾಡಿದ ವ್ಯಕ್ತಿ'' ಎಂದು ರಾಕ್ಲೈನ್ ಮಾಡಿದ ಸಹಾಯಕ್ಕೆ ಧನ್ಯವಾದ ತಿಳಿಸಿದರು.

ನನ್ನ ಜೀವನದ ಕೊನೆವರೆಗೂ ಆ ಸಹಾಯ ಮರೆಯಲ್ಲ
''ನಮ್ಮ ನಡುವೆ ಜಗಳ ಇರಲಿ, ಮನಸ್ತಾಪ ಇರಲಿ. ಅವರು ಯಾವತ್ತಿದ್ದರೂ ರಾಕ್ಲೈನ್ ವೆಂಕಟೇಶ್. ಅವರು ಯಾವತ್ತಿದ್ದರೂ ನನ್ನ ಹಿರಿಯ ಸಹೋದರರೇ. ನನ್ನ ಜೀವನದ ಕೊನೆ ಘಳಿಗೆವರೆಗೂ ಆ ಸಹಾಯವನ್ನು ನಾನು ಮರೆಯಲ್ಲ'' ಎಂದರು ಸುದೀಪ್.

ಶಿವಣ್ಣ-ರವಿಚಂದ್ರನ್-ರಮೇಶ್ ಭಾಗಿ
'ಕೋಟಿಗೊಬ್ಬ-3' ಚಿತ್ರತಂಡ ಆಯೋಜಿಸಿದ್ದ ಸುದೀಪ್ ಬೆಳ್ಳಿ ಹಬ್ಬ ಸಂಭ್ರಮದಲ್ಲಿ ಸಿಎಂ ಯಡಿಯೂರಪ್ಪ ಮುಖ್ಯ ಅತಿಥಿಯಾಗಿದ್ದರು. ಹಿರಿಯ ನಟರಾದ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ರಾಕ್ಲೈನ್ ವೆಂಕಟೇಶ್, ರವಿಶಂಕರ್, ಕರಿಸುಬ್ಬು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Click it and Unblock the Notifications











