ಅಭಿಮಾನಿಗಳಲ್ಲಿ ಕಿಚ್ಚನ ಪ್ರೀತಿಯ ಮನವಿ; ಏನದು?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ. ಈಗಾಗಲೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕಿಚ್ಚನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಅಂದಹಾಗೆ ಕಿಚ್ಚ ಸೆಪ್ಟಂಬರ್ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬ ಆಚರಣೆಗೂ ಮೊದಲೇ ಸುದೀಪ್ ಅಭಿಮಾನಿಗಳಲ್ಲಿ ವಿಶೇಷವಾದ ಮನವಿ ಮಾಡಿದ್ದಾರೆ.
ಸುದೀಪ್ ಹುಟ್ಟುಹಬ್ಬ ಅಂದ್ಮೇಲೆ ಅಭಿಮಾನಿಗಳ ದಂಡೆ ಸೇರಿರುತ್ತೆ. ರಾತ್ರಿಯಿಂದನೇ ಅಭಿಮಾನಿಗಳು ಮನೆ ಮುಂದೆ ಕ್ಯೂ ನಿಂತಿರುತ್ತದ್ದರು. ಸುದೀಪ್ ನೋಡಲು, ಮಾತನಾಡಿಸಲು, ವಿಶ್ ಮಾಡಲು ಕಾತರದಿಂದ ಕಾಯುತ್ತಿದ್ದರು. ಕಿಚ್ಚನ ಮನೆ ಮುಂದೆ ಅಭಿಮಾನಿಗಳ ಸಂಭ್ರಮ, ಸಡಗರ ಮನೆ ಮಾಡಿರುತ್ತಿತ್ತು. ಆದರೆ ಕಳೆದ ವರ್ಷದಿಂದ ಈ ಸಂಭ್ರಮ ಸಡಗರಕ್ಕೆ ಬ್ರೇಕ್ ಬಿದ್ದಿದೆ. ಕೊರೊನಾ ಭೀಕರ ಪರಿಸ್ಥಿತಿ ಈ ಎಲ್ಲಾ ಸಂಭ್ರಮವನ್ನು ಕಿತ್ತುಕೊಂಡಿದೆ.
ಕೊರೊನಾ ಕಾರಣದಿಂದ ಅದ್ದೂರಿ ಹುಟ್ಟುಹಬ್ಬ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಿಚ್ಚ ಅಭಿಮಾನಿಗಳಲ್ಲಿ ಪ್ರೀತಿಯ ಮನವಿ ಮಾಡಿದ್ದಾರೆ. ಕೊರೊನಾ ಕಾರಣದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವ ಎಲ್ಲಿದ್ದಿರೋ ಅಲ್ಲಿಂದಲೇ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ ಎಂದು ಮನವಿ ಮಾಡಿದ್ದಾರೆ.

"ನನ್ನೆಲ್ಲಾ, ಪ್ರೀತಿಯ ಅಭಿಮಾನಿಗಳಿಗೆ ಸ್ನೇಹಿತರಲ್ಲಿ ಮನವಿ. ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ವರ್ಷವೂ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಆಗುತ್ತಿಲ್ಲ. ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ ಎಂದು ಕೋರುವ ನಿಮ್ಮ ಕಿಚ್ಚ" ಎಂದು ಪತ್ರ ಬರೆದಿದ್ದಾರೆ.
"ಕ್ಷಮೆ ಇರಲಿ, ಮುಂದೆ ಪರಿಸ್ಥಿತಿ ಸುಧಾರಿಸಿದ ಬಳಿಕ ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ" ಎಂದು ಹೇಳಿದ್ದಾರೆ.
ಅಂದಹಾಗೆ ಕಳೆದ ಎರಡು ವರ್ಷಗಳಿಂದ ಯಾವ ಸ್ಟಾರ್ ಕಲಾವಿದರು ಸಹ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಸುದೀಪ್ ಸಹ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ. ಇನ್ನು ಇತ್ತೀಚಿಗಷ್ಟೆ ಸುದೀಪ್ ಹುಟ್ಟುಹಬ್ಬದ ಸಿಡಿಪಿ ಬಿಡುಗಡೆ ಮಾಡಲಾಗಿದೆ. ದಿಗ್ಗಜ ಕ್ರಿಕೆಟ್ ಆಟಗಾರ ಅನಿಲ ಕುಂಬ್ಳೆ, ಸುದೀಪ್ ಹುಟ್ಟುಹಬ್ಬದ ಕಾಮನ್ ಡಿಪಿ ಬಿಡುಗಡೆ ಮಾಡಲಾಗಿದೆ.

ಅನಿಲ್ ಕುಂಬ್ಳೆ ಸರ್ಪ್ರೈಸ್ ಗೆ ಕಿಚ್ಚ ಸುದೀಪ್ ಫುಲ್ ಖುಷ್ ಆಗಿದ್ದಾರೆ. ಅನಿಲ್ ಕುಂಬ್ಳೆ ಟ್ವೀಟ್ ರಿಟ್ವೀಟ್ ಮಾಡಿ, "ಇದಕ್ಕಿಂತ ಉತ್ತಮವಾದ ಉಡುಗೊರೆ ಇನ್ನೇನು ಇರಲು ಸಾಧ್ಯ ಅನಿಲ್ ಕುಂಬ್ಳೆ ಸರ್. ಇದು ನಿಜಕ್ಕೂ ತುಂಬಾ ದೊಡ್ಡ ಸರ್ಪ್ರೈಸ್. ತುಂಬಾ ಧನ್ಯವಾದಗಳು" ಎಂದು ಬರೆದು ಅನಿಲ್ ಕುಂಬ್ಳೆ ಅವರಿಗೆ ಧನ್ಯವಾದ ತಿಳಿಸಿದ್ದರು.
ಇನ್ನು ಸುದೀಪ್ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಏನೆಲ್ಲ ಗಿಫ್ಟ್ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಸೆಪ್ಟಂಬರ್ 2ಕ್ಕೆ ಬಹುನಿರೀಕ್ಷೆಯ ಕೋಟಿಗೊಬ್ಬ-3 ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ವಿಕ್ರಾಂತ್ ರೋಣ ಸಿನಿಮಾದಿಂದ ಟೀಸರ್ ಬಿಡುಗಡೆಯಾಗುತ್ತಾ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಸುದೀಪ್ ಸದ್ಯ ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾ ಬಳಿಕ ಕಿಚ್ಚ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಹಾಗಾಗಿ ಹುಟ್ಟುಹಬ್ಬದ ದಿನ ಕಿಚ್ಚನ ಹೊಸ ಸಿನಿಮಾ ಅನೌನ್ಸ್ ಆಗುತ್ತಾ ಎಂದು ಕಾದುನೋಡಬೇಕು. ಕಿಚ್ಚನ ಮುಂದಿನ ಸಿನಿಮಾ ಯಾವುದು? ಯಾರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ತಮಿಳು ನಿರ್ದೇಶಕ ವೆಂಕಟ್ ಪ್ರಭು ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ, ಹುಟ್ಟುಹಬ್ಬದ ದಿನ ಅಧಿಕೃತವಾಗಿ ಘೋಷಣೆಯಾದರೂ ಅಚ್ಚರಿ ಇಲ್ಲ.


Click it and Unblock the Notifications











