ರಾಜಮೌಳಿ, ಮಹೇಶ್ ಬಾಬು 'ವಾರಣಾಸಿ' ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸೋದು ನಿಜಾನಾ?
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ವಾರಣಾಸಿ' ಸಿನಿಮಾ ನಿರ್ಮಾಣವಾಗ್ತಿದೆ. ಐಮ್ಯಾಕ್ಸ್ ಸ್ಕ್ರೀನ್ಗಳಿಗೆ ಅಂತ ಈ ಚಿತ್ರವನ್ನು ಮಾಡುತ್ತಿರುವುದಾಗಿ ರಾಜಮೌಳಿ ಹೇಳಿದ್ದಾರೆ. ಮಹೇಶ್ ಬಾಬು ಜೊತೆಗೆ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸುತ್ತಿದ್ದಾರೆ.
ಕಲಿಯುಗದಿಂದ ತ್ರೇತಾಯುಗ ಹಾಗೂ ವಾರಣಾಸಿಯಿಂದ ಅಂಟಾರ್ಟಿಕಾ ಖಂಡದವರೆಗೆ ಚಿತ್ರದ ಕಥೆಯನ್ನು ರಾಜಮೌಳಿ ಹೇಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೈಟಲ್ ಟೀಸರ್ ಹಿಟ್ ಆಗಿದೆ. ಸಾಕಷ್ಟು ವಿಚಾರಗಳನ್ನು ಈ ಚಿತ್ರದಲ್ಲಿ ಬಿಚ್ಚಿಟ್ಟಿದ್ದಾರೆ. ಲಂಕೆಯಲ್ಲಿ ನಡೆದ ಶ್ರೀರಾಮ ಹಾಗೂ ರಾವಣನ ಯುದ್ಧದ ಸನ್ನಿವೇಶವನ್ನು ಕೂಡ ತೆರೆಗೆ ತರಲಾಗ್ತಿದೆ. ಶ್ರೀರಾಮನಾಗಿ ಮಹೇಶ್ ಬಾಬು ನಟಿಸುತ್ತಾರೆ ಎಂದು ರಾಜಮೌಳಿ ಹೇಳಿದ್ದಾರೆ.

ಶ್ರೀರಾಮನಾಗಿ ಮಹೇಶ್ ಬಾಬು ನಟಿಸಿದರೆ ಹನುಮಂತನ ಪಾತ್ರದಲ್ಲಿ ನಟಿಸೋದು ಯಾರು ಎನ್ನುವ ಚರ್ಚೆ ಶುರುವಾಗಿದೆ. ಕನ್ನಡ ನಟ ಸುದೀಪ್ ಈ ಚಿತ್ರದಲ್ಲಿ ನಟಿಸುತ್ತಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದೆ. ಈ ಹಿಂದೆ ರಾಜಮೌಳಿ ನಿರ್ದೇಶನದ 'ಈಗ' ಹಾಗೂ 'ಬಾಹುಬಲಿ ದಿ ಬಿಗಿನಿಂಗ್' ಚಿತ್ರಗಳಲ್ಲಿ ಸುದೀಪ್ ನಟಿಸಿದ್ದರು. ಹಾಗಾಗಿ 'ವಾರಣಾಸಿ' ಚಿತ್ರಕ್ಕೂ ಅವರನ್ನು ಪರಿಗಣಿಸುತ್ತಾರೆ ಎಂದು ಗುಲ್ಲಾಗಿದೆ.
ಬಲ್ಲ ಮೂಲಗಳ ಪ್ರಕಾರ 'ವಾರಣಾಸಿ' ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಇದೆಲ್ಲಾ ಕೇವಲ ಊಹಾಪೋಹ ಮಾತ್ರ. ಸುದೀಪ್ ಸದ್ಯ 'ಮಾರ್ಕ್' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಮುಂದೆ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ನಟಿಸಬೇಕಿದೆ. ಈಗಾಗಲೇ ಆ ಚಿತ್ರದ ಒಂದು ಶೆಡ್ಯೂಲ್ ಕೂಡ ಮುಕ್ತಾಯವಾಗಿದೆ. ಬಿಗ್ಬಾಸ್ ಸೀಸನ್ 12 ಶೋ ನಿರೂಪಣೆ ಕೂಡ ಮಾಡುತ್ತಿದ್ದಾರೆ.

2027ರಲ್ಲಿ 'ವಾರಣಾಸಿ' ಸಿನಿಮಾ ತೆರೆಗೆ ಬರಲಿದೆ. ಶ್ರೀದುರ್ಗಾ ಆರ್ಟ್ಸ್ ಹಾಗೂ ಶೋಯಿಂಗ್ ಬ್ಯುಸಿನೆಸ್ ಸಂಸ್ಥೆಗಳು ಜಂಟಿಯಾಗಿ ಚಿತ್ರ ನಿರ್ಮಾಣ ಮಾಡುತ್ತಿವೆ. ಕೆ. ಎಲ್ ನಾರಾಯಣ್ ಹಾಗೂ ಎಸ್. ಗೋಪಾಲ್ ರೆಡ್ಡಿ ಜೊತೆ ರಾಜಮೌಳಿ ಪುತ್ರ ಕಾರ್ತಿಕೇಯ ಚಿತ್ರಕ್ಕೆ ಹಣ ಹೂಡಿದ್ದಾರೆ. ಚಿತ್ರದ ಬಜೆಟ್ ಸಾವಿರ ಕೋಟಿ ರೂ.ಗೂ ಅಧಿಕ ಎನ್ನಲಾಗ್ತಿದೆ.
ಅಂದಹಾಗೆ 'ವಾರಣಾಸಿ' ಚಿತ್ರದಲ್ಲಿ ತಮಿಳು ನಟ ಆರ್. ಮಾಧವನ್ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹನುಂತನ ವೇಷದಲ್ಲಿ ಬಣ್ಣ ಹಚ್ಚುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಹಾಗಾಗಿ ಸುದೀಪ್ ಈ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವುದೆಲ್ಲಾ ಸತ್ಯಕ್ಕೆ ದೂರವಾದ ಮಾತು ಎನ್ನಲಾಗ್ತಿದೆ. ರಾಜಮೌಳಿ ಯಾವುದೇ ಸಿನಿಮಾ ಘೋಷಿಸಿದರೂ ಸುದೀಪ್ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎನ್ನುವ ವದಂತಿ ಹರಿದಾಡುತ್ತದೆ. ಈ ಹಿಂದೆ 'RRR' ಸಿನಿಮಾ ಸಮಯದಲ್ಲಿ ಕೂಡ ಇದೇ ರೀತಿಯ ಮಾತುಗಳು ಕೇಳಿಬಂದಿತ್ತು.
ಪ್ಯಾನ್ ವರ್ಲ್ಡ್ ಸಿನಿಮಾ ಆಗಿರುವುದರಲ್ಲಿ ಬೇರೆ ಬೇರೆ ಭಾಷೆಯ ಕಲಾವಿದರನ್ನು ರಾಜಮೌಳಿ ಆಯ್ಕೆ ಮಾಡಿಕೊಳ್ಳುತ್ತಾರೆ. 'RRR' ಚಿತ್ರದಲ್ಲಿ ಕೂಡ ಬಾಲಿವುಡ್ ನಟ ಅಜಯ್ ದೇವಗನ್, ನಟಿ ಆಲಿಯಾ ಭಟ್ ನಟಿಸಿದ್ದರು. ಇದೀಗ 'ವಾರಣಾಸಿ' ಚಿತ್ರದಲ್ಲಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಹಾಗೂ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಆಯ್ಕೆ ಆಗಿದ್ದಾರೆ.
ಈಗಾಗಲೇ 60 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆದಿದೆ. ಪಿ. ಎಸ್ ವಿನೋದ್ ಛಾಯಾಗ್ರಹಣ, ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕಿದೆ. ತೆಲುಗಿನಲ್ಲಿ ಸಿನಿಮಾ ನಿರ್ಮಿಸಿ ಬಳಿಕ ಹಲವು ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಎಸ್. ಎಸ್ ಕಾಂಚಿ ಹಾಗೂ ಎಸ್. ಎಸ್ ರಾಜಮೌಳಿ ಕೂಡ ಕಥೆ, ಚಿತ್ರಕಥೆಗೆ ಕೈ ಜೋಡಿಸಿದ್ದಾರೆ.
ಇಂಡಿಯಾನಾ ಜೋನ್ಸ್ ರೀತಿಯ ಆಕ್ಷನ್ ಅಡ್ವೆಂಚರ್ಸ್ ಸಿನಿಮಾ 'ವಾರಣಾಸಿ'. ಹಾಗಾಗಿ ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ಒರಿಸ್ಸಾ, ಆಫ್ರಿಕಾದಲ್ಲಿ ಚಿತ್ರೀಕರಣ ನಡೆದಿದೆ. ಶ್ರೀರಾಮ ವೇಷದಲ್ಲಿ ಮಹೇಶ್ ಬಾಬು ಫೋಟೊಶೂಟ್ ಕೂಡ ಮಾಡಿ ಮುಗಿಸಿದ್ದಾರೆ. ಇದೆಲ್ಲದರ ನಡುವೆ ಹನುಮಂತನ ಕುರಿತು ರಾಜಮೌಳಿ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ದೂರು ಸಹ ದಾಖಲಾಗಿದೆ.


Click it and Unblock the Notifications











