ಸತ್ಯ- ಮಿಥ್ಯ; ದರ್ಶನ್ ಬಗ್ಗೆ ಸುದೀಪ್ ಆ ರೀತಿ ಹೇಳಿಯೇ ಇಲ್ಲ- ಒಂದಾಗುವ ಟೈಮಲ್ಲಿ ಇದೆಲ್ಲ ಬೇಕಾ..?
ಒಂದು ಕಡೆ ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಸ್ನೇಹ ಮತ್ತೆ ಮೊಳಕೆಯೊಡೆಯಲಿ ಎಂದು ಒಂದು ವರ್ಗ ಪ್ರಾರ್ಥನೆ ಮಾಡ್ತಿದೆ. ಇನ್ನೊಂದು ಕಡೆ ಚಿಗುರೊಡೆಯುತ್ತಿರುವ ಸ್ನೇಹವನ್ನ ಚಿವುಟಿ ಬಿಡುವ ಕೆಲಸವನ್ನ ಇನ್ನೊಂದು ವರ್ಗ ಪ್ರಾಮಾಣಿಕವಾಗಿ ಮಾಡ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದ ಸಹಾಯದಿಂದ ಸುಳ್ ಸುದ್ದಿಯೊಂದನ್ನ ಹಬ್ಬಿಸಲಾಗಿದೆ.
ಹೌದು, ನಿಮಗೆ ಗೊತ್ತಿರಬೇಕು. ಮೊನ್ನೆ ಬಿಗ್ ಬಾಸ್ ನ ಗ್ರ್ಯಾಂಡ್ ಫಿನಾಲೆಯ ನಂತರ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೋತ್ತರದ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು. ಇದೇ ವೇಳೆ ಹತ್ತು ಹಲವು ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಸುದೀಪ್ ಉತ್ತರವನ್ನ ಕೂಡ ಕೊಟ್ಟರು. ಆ ಪೈಕಿ ಎರಡು ಪ್ರಶ್ನೆಗಳು ಸುದೀಪ್ ಅವರ ಒಂದ್ಕಾಲದ ಕುಚಿಕು ಗೆಳೆಯ ದರ್ಶನ್ ಅವರಿಗೆ ಸಂಬಂಧಿಸಿದ್ದೇ ಆಗಿದ್ದವು.

ಆದರೂ ಬೇಸರ ಮಾಡಿಕೊಳ್ಳದ ಸುದೀಪ್, ಸಂಯಮದಿಂದ ಉತ್ತರವನ್ನ ಕೊಟ್ಟಿದ್ದರು. ದರ್ಶನ್ ಗೆ ನಾನು ಯಾವಾಗಲೂ ಒಳ್ಳೇಯದನ್ನೇ ಬಯಸುತ್ತೇನೆ ಎಂದಿದ್ದರು. ಇನ್ನೊಂದು ಪ್ರಶ್ನೆಗೆ ನಮ್ಮಿಬ್ಬರ ನಡುವೆ ಇರುವ ಸಮಸ್ಯೆ ಏನು ಅನ್ನುವುದನ್ನ ನಾವಿಬ್ಬರು ಹುಡುಕುತ್ತಿದ್ದೇವೆ ಎಂದಿದ್ದರು.
ಆದರೆ, ಬಾಯಲ್ಲಿ ಬಸಪ್ಪ.. ಹೊಟ್ಟೆಯಲ್ಲಿ ವಿಷಪ್ಪ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಇರುವ ಕೆಲವು ಕಿಡಿಗೇಡಿಗಳು, ಆತುರಗೆಟ್ಟವರು, ಅಭಿಮಾನದ ಹೆಸರಿನಲ್ಲಿ ರಗಳೆ ಎಬ್ಬಿಸೋರಿಗೆ ಇಷ್ಟೇ ಸಾಕಿತ್ತು. ಸುದೀಪ್ ಮಾಡಿದ್ದ ಎರಡು ಎಕ್ಸ್ ಪೋಸ್ಟ್ ಗಳನ್ನ ಎತ್ತಿಕೊಂಡು ಎಡಿಟ್ ಮಾಡಿ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೇಲಿ ಬಿಟ್ಟಿದ್ದಾರೆ. ದರ್ಶನ್ ಅವರನ್ನ ಸುದೀಪ್ ಆರಾಧ್ಯ ದೈವ ಎಂದಿದ್ದಾರೆ ಎಂದು ಹುಯಿಲೆಬ್ಬಿಸಿದ್ದಾರೆ.

ಆರಾಧ್ಯ ದೈವದ ಹಿಂದಿನ ಸತ್ಯ ಕಥೆ ಏನು..?
ಅಸಲಿಗೆ ಇದೇ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಬಗ್ಗೆ ಒಂದು ಪದದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ ಎಂಬ ಮನವಿಯನ್ನ ಅಭಿಮಾನಿಯೊಬ್ಬರು ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಕಿಚ್ಚ ಸುದೀಪ್, ಮೈ ಐಡಲ್ ಅಂದರೆ ನನ್ನ ಆರಾಧ್ಯ ದೈವ ಎಂದಿದ್ದರು. ಸುದೀಪ್ ಅವರ ಈ ಪೋಸ್ಟ್ ನ ದುರುಪಯೋಗ ಪಡಿಸಿಕೊಂಡ ಕೆಲ ಕಿಡಿಗೇಡಿಗಳು, ದರ್ಶನ್ ಹಾಗೂ ಸುದೀಪ್ ಜೊತೆಯಲ್ಲಿ ಇರುವ ಫೋಟೋ ಎಡಿಟ್ ಮಾಡಿದ್ದಾರೆ.
ವಿಷ್ಣು ದಾದಾ ಎಂದು ಇದ್ದ ಹೆಸರನ್ನ, ದರ್ಶನ್ ಸರ್ ಎಂದು ಬದಲಿಸಿದ್ದಾರೆ. ದರ್ಶನ್ ಅವರನ್ನ ಸುದೀಪ್ ಆರಾಧ್ಯ ದೈವ ಅಂದಿದ್ದಾರೆ ಎಂದು ಬಿಂಬಿಸುವ ಪ್ರಯತ್ನವನ್ನ ಪಟ್ಟಿದ್ದಾರೆ. ಸದ್ಯಕ್ಕೆ ಸತ್ಯ-ಮಿಥ್ಯದ ಹುಡುಕಾಟವನ್ನ ಮಾಡದ ಅನೇಕರು ಶುದ್ಧ ಸುಳ್ಳನ್ನ ನಿಜ ಎಂದು ನಂಬಿದ್ದಾರೆ.

ಅಭಿಮಾನಿಗಳ ಬೇಸರ !
ದರ್ಶನ್ ಅವರ ಬಗ್ಗೆ ಯಾವಾಗ ಪ್ರಶ್ನೆ ತೂರಿ ಬಂದರು, ಸುದೀಪ್ ಪ್ರಾಮಾಣಿಕ ಉತ್ತರವನ್ನ ಕೊಡ್ತಾನೇ ಬಂದಿದ್ದಾರೆ. ಅನೇಕ ಸಂದರ್ಶನಗಳಲ್ಲಿ ಕೂಡ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ. ಆದರೆ ದರ್ಶನ್ ಮಾತ್ರ ಇಲ್ಲಿಯವರೆಗೆ ಸುದೀಪ್ ವಿಚಾರದಲ್ಲಿ ಮೌನವನ್ನ ಕಾಪಾಡಿಕೊಂಡು, ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಇನ್ನೂ ಸುದೀಪ್ ಅವರಲ್ಲಿ ದರ್ಶನ್ ಅವರ ಬಗ್ಗೆ ಕೇಳಿದಂತೆ, ದರ್ಶನ್ ಅವರಲ್ಲಿ ಕೇಳುವ ಧೈರ್ಯವನ್ನ ಯಾರು ಮಾಡಿಲ್ಲ.
ಈ ಕಾರಣಕ್ಕೆ ದರ್ಶನ್ ಅವರ ಬಗ್ಗೆ ಪದೇ ಪದೇ ಮಾತನಾಡಬೇಡಿ ಎಂಬ ಮನವಿಯನ್ನ ಸುದೀಪ್ ಅವರಲ್ಲಿ ಅವರ ಅಭಿಮಾನಿಗಳು ಮಾಡಿಕೊಳ್ತಿದ್ದಾರೆ. ಸ್ನೇಹ ಆಗಲಿ.. ಪ್ರೀತಿಯಾಗಲಿ.. ಪರಸ್ಪರ ಇರಬೇಕೆ ಹೊರತು, ಓನ್ ಸೈಡ್ ಆಗಬಾರದು ಎಂದು ನೀವೆ ಹೇಳಿದ್ದೀರಾ ಹೀಗಾಗಿ ದರ್ಶನ್ ಅವರ ಬಗ್ಗೆ ಹೆಚ್ಚೆಚ್ಚು ಮಾತನಾಡಬೇಡಿ ಎಂದು ಒತ್ತಾಯವನ್ನೂ ಮಾಡುತ್ತಿದ್ದಾರೆ

ದರ್ಶನ್ ಗೆ ಕಿಚ್ಚನ ಹಾರೈಕೆ.. ಬೆಂಬಲ !
2018ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಮೈಸೂರಲ್ಲಿ ಅಪಘಾತಕ್ಕೀಡಾದಾಗ, ಸುದೀಪ್ ಕಳವಳ ವ್ಯಕ್ತಪಡಿಸಿದ್ದರು. ನೀನು ಆರೋಗ್ಯವಾಗಿರೋ ಸುದ್ದಿ ಕೇಳಿದೆ. ಬೇಗನೆ ಹುಷಾರಾಗು ಗೆಳೆಯಾ ಎಂದು ಟ್ವಿಟ್ ಮಾಡೋ ಮೂಲಕ ಶುಭ ಕೋರಿದ್ದರು. ಇನ್ನೂ ದರ್ಶನ್ ಮೇಲೆ ಚಪ್ಪಲಿ ಎಸೆತ ಪ್ರಕರಣದ ಸಮಯದಲ್ಲಿ ಕೂಡ ಗುಡುಗಿದ್ದ ಸುದೀಪ್, ಈ ರೀತಿ ಮಾಡಿದ್ದು ಸರಿ ಅಲ್ಲವೆಂದಿದ್ದರು.
ಘಟನೆಯನ್ನ ಖಂಡಿಸಿದ್ದರು. ತೀರಾ ಇತ್ತೀಚಿಗೆ ಸುಮಲತಾ ಅಂಬರೀಷ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಮುನಿಸು ಮರೆತು ದರ್ಶನ್ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇವೆಲ್ಲ ಕಾರಣಗಳಿಂದ ಅದ್ಯಾವುದೋ ಮುನಿಸಿನಿಂದ ದೂರವಾಗಿದ್ದ ಕಿಚ್ಚ ಹಾಗೂ ದಚ್ಚು ಮತ್ತೆ ಒಂದಾಗ್ತಾರೆ ಎಂಬ ಭರವಸೆ ಮೂಡಿತ್ತು. ಆ ಭರವಸೆ ಇನ್ನೂ ಜೀವಂತವಾಗಿದೆ ಕೂಡ
ಒಟ್ಟಿನಲ್ಲಿ ಸದ್ಯಕ್ಕೆ ಸುದೀಪ್ ಹಾಗೂ ದರ್ಶನ್ ಮತ್ತೆ ಒಂದಾಗ್ತಾರೆ ಎಂಬ ಆಶಾಕಿರಣ ಮೂಡುವ ಸಮಯದಲ್ಲಿ, ಕೆಲ ಕಿಡಿಗೇಡಿಗಳು ಇಬ್ಬರ ನಡುವೆ ಮತ್ತೆ ತಂದಿಟ್ಟು ತಮಾಷೆ ನೋಡುವ ಪ್ರಯತ್ನವನ್ನ ಮಾಡ್ತಿರುವುದು ವಿಪರ್ಯಾಸ.


Click it and Unblock the Notifications











