ದರ್ಶನ್ ಗೆಳೆತನದ ಬಗ್ಗೆ ಸುದೀಪ್ ಮಾತು: ಮೆಚ್ಚಿ ಕೊಂಡಾಡಿದ ನೆಟ್ಟಿಗರು
ದರ್ಶನ್ ಮತ್ತು ಸುದೀಪ್ ಕನ್ನಡ ಚಿತ್ರರಂಗದ ಎರಡು ದಿಕ್ಕುಗಳಂತಾಗಿಬಿಟ್ಟಿದ್ದರು. ಪರಸ್ಪರ ಇನ್ನೆಂದೂ ಜೊತೆ ಸೇರಲಾರರು ಎಂದೇ ಎಲ್ಲರೂ ಭಾವಿಸಿದ್ದಾಗಿದೆ. ಆದರೆ ಈ ಶೀಥಲ ಸಮರಕ್ಕೆ ಅಂತ್ಯ ಹಾಡುವ ಬಹಿರಂಗ ಸೂಚನೆಯನ್ನು ಸುದೀಪ್ ನೀಡಿದ್ದಾರೆ.
ಕನ್ನಡದ ಚಾನೆಲ್ ಒಂದರ ವೇದಿಕೆ ಮೇಲೆ ದರ್ಶನ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ನಟ ಸುದೀಪ್. ''ದರ್ಶನ್ ಸದಾ ನನ್ನ ಗೆಳೆಯನೇ'' ಎಂದಿರುವ ಸುದೀಪ್ ಆ ಮೂಲಕ ತಾವೊಬ್ಬ ವಿಶಾಲ ಹೃದಯಿ ವ್ಯಕ್ತಿ ಎಂಬುದನ್ನೂ ಜಾಹೀರು ಮಾಡಿದ್ದಾರೆ.
ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುದೀಪ್ಗೆ ನಿರೂಪಕರು ದರ್ಶನ್ ಹಾಗೂ ಸುದೀಪ್ ಒಟ್ಟಿಗಿರುವ ಚಿತ್ರವನ್ನು ತೋರಿಸಿ ಆ ಬಗ್ಗೆ ಮಾತನಾಡುವಂತೆ ಕೇಳಿದಾಗ ''ಅವನು ನನ್ನ ಗೆಳೆಯ, ಸದಾ ನನ್ನ ಗೆಳೆಯ, ಪರಸ್ಪರ ಮಾತನಾಡಿಲ್ಲ, ಒಟ್ಟಿಗೆ ಇಲ್ಲ ಎಂದ ಮಾತ್ರಕ್ಕೆ ಯಾವತ್ತೂ ನಾನು ಕೆಟ್ಟದು ಬಯಸಿಲ್ಲ. ಕೆಟ್ಟದ್ದು ಬಯಸೋದು ಇಲ್ಲ'' ಎಂದಿದ್ದಾರೆ ಸುದೀಪ್.

ಸುದೀಪ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ವೈರಲ್ ಆಗಿದೆ. ಸುದೀಪ್ ಮತ್ತು ದರ್ಶನ್ ಫ್ಯಾನ್ ಪೇಜ್ಗಳು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಮತ್ತೊಮ್ಮೆ ಸ್ನೇಹದ ಹಸ್ತ ಚಾಚುವಂಥಹಾ ಮಾತನ್ನಾಡಿರುವ ಸುದೀಪ್ ಸಹೃದಯತೆ ಬಗ್ಗೆ ಹೊಗಳಿಕೆಯ ಮಹಾಪೂರವೇ ಟ್ವಿಟ್ಟರ್ ಫೇಸ್ಬುಕ್ನಲ್ಲಿ ಆಗುತ್ತಿದೆ.
ಜೀ ಕುಟುಂಬ ಅವಾರ್ಡ್ಸ್ ಚಿತ್ರೀಕರಣ ಆಗಿದೆಯಾದರೂ ಇನ್ನೂ ಪ್ರಸಾರವಾಗಿಲ್ಲ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರ್ಯಕ್ರಮವು ಶನಿವಾರ ಹಾಗೂ ಭಾನುವಾರ ಪ್ರಸಾರವಾಗುವ ಸಾಧ್ಯತೆ ಇದೆ.
ಸುದೀಪ್ ಹಾಗೂ ದರ್ಶನ್ ಬಹಳ ಆತ್ಮೀಯ ಗೆಳೆಯರಾಗಿದ್ದರು ಆದರೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಇಬ್ಬರೂ ದೂರಾಗಿದ್ದರು. ಆ ನಂತರ ಇಬ್ಬರ ಅಭಿಮಾನಿಗಳು ಸ್ಟಾರ್ ವಾರ್ ಹುಟ್ಟುಹಾಕಿ ಇಬ್ಬರ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಿದ್ದರು. ಆದರೆ ಈಗ ಸುದೀಪ್ ಆಡಿರುವ ಮಾತುಗಳು ಹಳೆಯ ಗಾಯಗಳಿಗೆ ಮುಲಾಮು ಹಚ್ಚುವಂತಿದ್ದು, ಮತ್ತೊಮ್ಮೆ ಸುದೀಪ್ ಹಾಗೂ ದರ್ಶನ್ ಒಂದಾಗಿ ಹಳೆಯ ದಿನಗಳನ್ನು ನೆನಪಿಸುತ್ತಾರೊ ಕಾದು ನೋಡಬೇಕಿದೆ.
ಸುದೀಪ್, ತಾವು ಮತ್ತೊಮ್ಮೆ ಸ್ನೇಹದ ಹಸ್ತ ಚಾಚಿದ್ದಾರೆ ಆದರೆ ಇದಕ್ಕೆ ದರ್ಶನ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











