"ವಿಕ್ರಂ ಬದಲು ಆ ತಮಿಳು ಚಿತ್ರದಲ್ಲಿ ನಾನೇ ನಟಿಸ್ಬೇಕಿತ್ತು"; ಕಿಚ್ಚ ಸುದೀಪ್
ಚಿತ್ರರಂಗದಲ್ಲಿ ಯಾರೋ ಮಾಡಬೇಕಿದ್ದ ಪಾತ್ರ ಮತ್ಯಾರೋ ಮಾಡುವುದು ಹೊಸದೇನು ಅಲ್ಲ. ಒಂದು ಕಥೆ ಅಂದಾಗ ನಾಲ್ಕಾರು ಜನರ ಬಳಿ ಚರ್ಚೆ ಆಗುತ್ತದೆ. ಅಂತಿಮವಾಗಿ ಯಾರೋ ನಟಿಸುವಂತಾಗುತ್ತದೆ. ಆ ಗೆದ್ದ ಸಿನಿಮಾ ಗೆದ್ದ ಮೇಲೆ ಕೈಕೈ ಹಿಸುಕಿಕೊಳ್ಳುವವರು ಇದ್ದಾರೆ. ಕೆಲವೊಮ್ಮೆ ನಾನಾ ಕಾರಣಗಳಿಂದ ಮಾತುಕತೆ ಹಂತದಲ್ಲೇ ಸಿನಿಮಾಗಳು ನಿಂತು ಹೋಗುತ್ತವೆ.
ಕನ್ನಡ ನಟ ಕಿಚ್ಚ ಸುದೀಪ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ರೀಮೆಕ್ ಚಿತ್ರಗಳಲ್ಲಿ ಕೂಡ ಕಮಾಲ್ ಮಾಡಿದ್ದಾರೆ. ತಾವೇ ನಿರ್ದೇಶಕರಾಗಿ ಕೂಡ ಸಕ್ಸಸ್ ಕಂಡಿದ್ದಾರೆ. ಕಿಚ್ಚನ ನಟನೆ ಮೆಚ್ಚಿ ರಾಮ್ಗೋಪಾಲ್ ವರ್ಮಾ, ಎಸ್. ಎಸ್ ರಾಜಮೌಳಿ ರೀತಿಯ ಖ್ಯಾತ ಫಿಲ್ಮ್ ಮೇಕರ್ಸ್ ಕರೆದು ಅವಕಾಶ ಕೊಟ್ಟಿದ್ದಾರೆ. 'ಈಗ' ರೀತಿಯ ಸಿನಿಮಾಗಳಲ್ಲಿ ನಟಿಸಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದಾರೆ. ಇವತ್ತಿಗೂ ಪರಭಾಷೆಯಿಂದ ಅವಕಾಶಗಳ ಸುರಿಮಳೆ ಆಗುತ್ತಿದೆ.

'ಮ್ಯಾಕ್ಸ್' ಸಿನಿಮಾ ಮೂಲಕ ಕಿಚ್ಚ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. ಸದ್ಯ ಎರಡು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಬಾಷ' ಚಿತ್ರದ ಒಂದು ಶೆಡ್ಯೂಲ್ ಮುಗಿಸಿದ್ದಾರೆ. 'ಮ್ಯಾಕ್ಸ್' ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಆರಂಭವಾಗಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಆ ಚಿತ್ರದ ಮೊದಲ ಶೆಡ್ಯೂಲ್ ಕೂಡ ಕಂಪ್ಲೀಟ್ ಆಗಿದೆ. ಈ ಬಾರಿ ಮತ್ತೆ ಕಿಚ್ಚ ಖಾಕಿ ಖದರ್ ತೋರಿಸೋಕೆ ಬರ್ತಿದ್ದಾರೆ.
'K47' ಚಿತ್ರದಲ್ಲಿ ಬಹಳ ವಿಭಿನ್ನ ಅವತಾರದಲ್ಲಿ ಸುದೀಪ್ ಮಿಂಚಲಿದ್ದಾರೆ. ಅವರ ಹೊಸ ಹೇರ್ಸ್ಟೈಲ್ ಅಭಿಮಾನಿಗಳ ಗಮನ ಸೆಳೆದಿದೆ. ಉದ್ದನೆಯ ಗುಂಗುರು ಕೂದಲಿನ ಲುಕ್ನಲ್ಲಿ ಕಿಚ್ಚ ಕಾಣಿಸಿಕೊಳ್ಳುತ್ತಿದ್ದಾರೆ. 'K47' ಚಿತ್ರಕ್ಕಾಗಿ ಈ ಲುಕ್ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ತಮಿಳಿನ ಟೂರಿಂಗ್ ಟಾಕೀಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸುದೀಪ್ ಭಾಗಿ ಆಗಿದ್ದಾರೆ. ತಮ್ಮ ಸಿನಿಜೀವನದ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಐರೆನ್ ಲೆಗ್ ಹಣೆಪಟ್ಟಿ ಕಟ್ಟಿದ್ದು ಸೇರಿ ಹಲವು ವಿಚಾರಗಳನ್ನು ಮೆಲುಕು ಹಾಕಿದ್ದಾರೆ.

ತಮಿಳಿನ 'ಸೇತು' ಚಿತ್ರವನ್ನು ಕನ್ನಡದಲ್ಲಿ 'ಹುಚ್ಚ' ಹೆಸರಿನಲ್ಲಿ ರೀಮೆಕ್ ಮಾಡಿ ಸುದೀಪ್ ಗೆದ್ದಿದ್ದರು. ತಮಿಳಿನಲ್ಲಿ ಚಿಯಾನ್ ವಿಕ್ರಂ ಮಾಡಿದ್ದ ಪಾತ್ರದಲ್ಲಿ ಕನ್ನಡದಲ್ಲಿ ಸುದೀಪ್ ನಿರ್ವಹಿಸಿ ಸಕ್ಸಸ್ ಕಂಡಿದ್ದರು. ಅಂದಹಾಗೆ 'ಸೇತು' ಚಿತ್ರಕ್ಕೆ ಬಾಲ ಆಕ್ಷನ್ ಕಟ್ ಹೇಳಿದ್ದರು. ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಬಾಲ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿದ್ದಾರೆ. 'ನಂದ', 'ಪಿತಾಮಗನ್', 'ನಾನ್ ಕಡವುಳ್', 'ಅವನ್ ಇವನ್', 'ಪರದೇಸಿ', 'ನಾಚಿಯಾರ್' ರೀತಿಯ ಅದ್ಭುತ ಸಿನಿಮಾಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. 'ಹುಚ್ಚ' ಸಿನಿಮಾ ರೀಮೆಕ್ ಮಾಡಿ ಗೆದ್ದ ಬಳಿಕ ನಾನು ನಿರ್ದೇಶಕ ಬಾಲ ಅವರೊಟ್ಟಿಗೆ ಸಂಪರ್ಕದಲ್ಲಿದ್ದೆ. ಒಂದು ಸಿನಿಮಾ ಮಾಡುವ ಬಗ್ಗೆಯೂ ಚರ್ಚೆ ನಡೆದಿತ್ತು ಎಂದು ಸುದೀಪ್ ನೆನಪಿಸಿಕೊಂಡಿದ್ದಾರೆ.
"ಹುಚ್ಚ ಸಿನಿಮಾ ಬಳಿಕ ನಾನು ನಿರ್ದೇಶಕ ಬಾಲ ಅವರನ್ನು ಭೇಟಿ ಆಗಿದ್ದೆ. 'ಪಿತಾಮಗನ್' ಸಿನಿಮಾ ಮಾಡಲು ಅವರು ನನ್ನನ್ನು ಸಂಪರ್ಕಿಸಿದ್ದರು. ಚಿತ್ರದಲ್ಲಿ ಚಿಯಾನ್ ವಿಕ್ರಂ ಮಾಡಿದ್ದ ಪಾತ್ರ ನಾನು ಮಾಡಬೇಕಿತ್ತು. ವಿಕ್ರಂ ಸರ್ ಮಾಡಿದಂತೆ ನಾನು ಮಾಡ್ತಿದ್ದೆ ಅನ್ನುವದಕ್ಕೆ ಆಗಲ್ಲ. ಆದರೆ ಆಗ ಬಾಲ ಹಾಗೂ ವಿಕ್ರಂ ನಡುವೆ ಕಿರಿಕ್ ಆಗಿತ್ತು ಅನ್ನಿಸುತ್ತದೆ. ನನ್ನ ಕೇಳಿದ್ರು, ಆಗ ನನಗೆ ಅಷ್ಟಾಗಿ ತಮಿಳು ಮಾತನಾಡಲು ಬರುತ್ತಿರಲಿಲ್ಲ. ನಿಮ್ಮ ಪಾತ್ರಕ್ಕೆ ಡೈಲಾಗೇ ಇಲ್ಲ ಸರ್ ಅಂದ್ರು. ಹಾಗಿದ್ದರೆ ಓಕೆ ಎಂದು ಒಪ್ಪಿಕೊಂಡೆ" ಎಂದು ಸುದೀಪ್ ಹೇಳಿದ್ದಾರೆ.
ಮಾತು ಮುಂದುವರೆಸಿದ ಕಿಚ್ಚ "ಆ ಚರ್ಚೆ ನಡೆದ ಬಳಿಕ ಬಾಲ- ವಿಕ್ರಂ ಸಂಧಾನ ಮಾಡಿಕೊಂದು ಸಿನಿಮಾ ಮಾಡಲು ಮುಂದಾದರು. ಬಳಿಕ ಮತ್ತೊಂದು ಪಾತ್ರ ಮಾಡುವಂತೆ ಕೇಳಿದ್ದರು. ಬೇಡ ಸರ್ ನೀವು ಅವರೊಟ್ಟಿಗೆ ಮಾಡಿ ಎಂದೆ. ಅದೇ ಚಿತ್ರದ ವಿಚಾರವಾಗಿ ಮೂರ್ನಾಲ್ಕು ಬಾರಿ ಬಾಲ ಅವರನ್ನು ಭೇಟಿ ಮಾಡಿದ್ದೆ. ಕೊನೆಗೆ ನಾನು 'ಪಿತಾಮಗನ್' ಸಿನಿಮಾ ನೋಡಿದೆ. ಆಗ ನನಗೆ ಅನ್ನಿಸಿದ್ದು ವಿಕ್ರಂ ಅದಕ್ಕೆ ಒಳ್ಳೆ ಆಯ್ಕೆ ಎನಿಸಿತು" ಎಂದು ಸುದೀಪ್ ವಿವರಿಸಿದ್ದಾರೆ.
ಅಚ್ಚರಿ ಎಂದರೆ 'ಪಿತಾಮಗನ್' ಚಿತ್ರ ಕನ್ನಡಕ್ಕೂ ರೀಮೇಕ್ ಆಗಿತ್ತು. ವಿಕ್ರಂ ಹಾಗೂ ಸೂರ್ಯ ನಟಿಸಿದ್ದ ಪಾತ್ರಗಳಲ್ಲಿ ಉಪೇಂದ್ರ ಹಾಗೂ ದರ್ಶನ್ ನಟಿಸಿ ಗೆದ್ದಿದ್ದರು. ಮುನಿರತ್ನ ನಿರ್ಮಾಣದ ಚಿತ್ರಕ್ಕೆ ಸಾಧು ಕೋಕಿಲ ಆಕ್ಷನ್ ಕಟ್ ಹೇಳಿದ್ದರು.
'ಅನಾಥರು' ಚಿತ್ರದಲ್ಲಿ ಉಪ್ಪಿ ಹಾಗೂ ದರ್ಶನ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಭಾರೀ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ಬಳಿಕ ಮುಗ್ಗರಿಸಿತ್ತು. ಅದೇ ವಾರ ಬಿಡುಗಡೆಯಾಗಿದ್ದ ಪುನೀತ್ ರಾಜ್ಕುಮಾರ್ ನಟನೆಯ 'ಮಿಲನಾ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು.


Click it and Unblock the Notifications