ಕತ್ತಿಗಿಂತ ಮೊನಚು ಕಿಚ್ಚನ ಮಾತು ; ಮಾತು ಮಾತಿಗೂ ದಚ್ಚು & ಫ್ಯಾನ್ಸ್ಗೆ ಸುದೀಪ್ ಪಂಚ್..?
ತಮ್ಮ ಅಭಿನಯದಿಂದ ಕೇವಲ ಕನ್ನಡಿಗರ ಹೃದಯವನ್ನಷ್ಟೇ ಅಲ್ಲ, ಭಾರತದೆಲ್ಲೆಡೆ ಅನೇಕ ಚಿತ್ರಪ್ರೇಮಿಗಳ ಹೃದಯಗಳನ್ನು ಗೆದ್ದವರು ಕಿಚ್ಚ ಸುದೀಪ್. ಆ ಕಾಲದಲ್ಲಿಯೇ ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ ಸುದೀಪ್ ತಮ್ಮ ನೇರಾ ನೇರ ಮಾತುಗಳಿಂದ ಕೂಡ ಹೆಸರುವಾಸಿಯಾದವರು.
ಇಂಥಾ ಸುದೀಪ್ ಇಂದು ಜನುಮ ದಿನದ ಸಂಭ್ರಮದಲ್ಲಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮೇಲೆ ಅಪಾರವಾದ ಅಭಿಮಾನವನ್ನೊಂದಿರುವ ಅಭಿಮಾನಿಗಳ ಕುರಿತು ತುಂಬು ಅಭಿಮಾನದಿಂದ ಮಾತನಾಡಿದ್ದಾರೆ. ನಾನು ತಲೆ ಎತ್ತಿಕೊಂಡು ಓಡಾಡುತ್ತಿರುವುದೇ ನಿಮ್ಮಿಂದ ಎಂದು ತಮ್ಮ ಅಭಿಮಾನಿಗಳಿಗೆ ಕೈ ಮುಗಿದಿದ್ಧಾರೆ ಸುದೀಪ್.

ಹೌದು, ಬೆಂಗಳೂರಿನ ಜಯನಗರದ ಎಂಇಎಸ್ ಮೈದಾನದಲ್ಲಿ ಅಭಿಮಾನಗಳ ಅಭಿಮಾನದ ಮಳೆಯಲ್ಲಿ ಇಂದು ಹುಟ್ಟುಹಬ್ಬದ ನೆಪದಲ್ಲಿ ಮಿಂದೆದ್ದ ಸುದೀಪ್, ನನ್ನ ಫ್ಯಾನ್ಸ್ ಒಳ್ಳೇಯವರು ಅದಕ್ಕೆ ನಾನು ಒಳ್ಳೆಯವನಾಗಿರುವುದು ಎಂದಿದ್ದಾರೆ. ಬೆಳೆಯೋದು ದೊಡ್ಡದಲ್ಲ. ನಾವು ಯಾವ ವಾತಾವರಣದಲ್ಲಿ ಬೆಳಿಯುತ್ತೇವೆ ಎನ್ನುವುದು ಮುಖ್ಯ ಎಂದಿರುವ ಸುದೀಪ್ ನನ್ನ ಅಭಿಮಾನಿಗಳಲ್ಲಿ ಒಳ್ಳೆತನ ಇರುವುದರಿಂದನೇ ನಾನು ಒಳ್ಳೆಯವನಾಗಲು ಸಾಧ್ಯವಾಗಿದೆ ಎಂದಿದ್ದಾರೆ. ನನ್ನ ಅಭಿಮಾನಿಗಳೆಲ್ಲ ಒಳ್ಳೆಯ ಕೆಲಸ ಮಾಡ್ತಿರುವುದು ನಾನು ಹೇಳಿದೆ ಎಂಬ ಕಾರಣಕ್ಕೆ ಅಲ್ಲ ಅವರಲ್ಲಿರುವ ಒಳ್ಳೆತನದಿಂದ ಅವರು ಆ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ನಾನು ಹೋದ ಕಡೆಯೆಲ್ಲ ತಲೆ ಎತ್ತುಕೊಂಡು ಓಡಾಡುತ್ತೀನಿ ಅಂದರೆ ಅದಕ್ಕೆ ನೀವೇ ಕಾರಣ ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ಸುದೀಪ್, ಇದೇ ವೇಳೆ ನಿಮ್ಮ ಅಭಿಮಾನಕ್ಕೆ ಕಳಂಕ ತರುವ ಕೆಲಸವನ್ನು ನಾನು ಯಾವತ್ತು ಮಾಡುವುದಿಲ್ಲ ಎಂದಿದ್ದಾರೆ. ಅಭಿಮಾನಿಗಳು ನಮ್ಮ ಪ್ರತಿಬಿಂಬ ಎಂದಿರುವ ಸುದೀಪ್ ಇದೇ ವೇಳೆ ಕೇವಲ ಸಿನಿಮಾ ಮಾಡುವುದರಿಂದ ಯಾರು ಹೀರೋ ಆಗಲು ಸಾಧ್ಯ ಇಲ್ಲ. ವ್ಯಕ್ತಿತ್ವ ಅನ್ನುವುದು ಬಹಳ ಮುಖ್ಯ, ವ್ಯಕ್ತಿತ್ವದಿಂದಲೇ ನಾವು ದೊಡ್ಡೋರು ಆಗೋಕೆ ಸಾಧ್ಯ ಎಂದು ಹೇಳಿದ್ದಾರೆ. ದೊಡ್ಡವರಾಗಲು ಕೇವಲ ಸಿನಿಮಾ ಮಾತ್ರ ಸಾಕಾಗಲ್ಲ. ಅದಕ್ಕೆ ಅಭಿಮಾನಿಗಳ ಜೊತೆ ನನ್ನ ಕುಟುಂಬ, ಗೆಳೆಯರು ಎಲ್ಲರು ಮುಖ್ಯವಾಗುತ್ತಾರೆ ಎಂದು ಕೂಡ ಕಿಚ್ಚ ಸುದೀಪ್ ಹೇಳಿದ್ದಾರೆ. ಮುಂದುವರೆದು ತಗ್ಗಿ-ಬಗ್ಗಿ ನನ್ನನ್ನೂ ನಡೆಯುವಂತೆ ಮಾಡಿರುವುದು ನಿಮ್ಮ ಈ ಬೆಲೆ ಕಟ್ಟಲಾಗದ ಕೂಗು ಮತ್ತು ಪ್ರೀತಿಯೆಂದು ಕೂಡ ಸುದೀಪ್ ಹೇಳಿದ್ಧಾರೆ

ಸದ್ಯಕ್ಕೆ ಸುದೀಪ್ ಮಾತನಾಡಿರುವ ಈ ಮಾತುಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ದರ್ಶನ್ ಮತ್ತು ದರ್ಶನ್ ಅವರ ಅಭಿಮಾನಿಗಳಿಗೆ ಸುದೀಪ್ ತಮ್ಮ ಮಾತುಗಳ ಮೂಲಕ ಪರೋಕ್ಷವಾಗಿ ಪಂಚ್ ನೀಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಭಿಮಾನ ಮತ್ತು ಅಂಧಾಭಿಮಾನದ ನಡುವೆ ಇರುವ ವ್ಯತ್ಯಾಸವನ್ನು ಸುದೀಪ್ ಈ ಮೂಲಕ ಹೇಳಿದ್ದಾರೆ ಎಂಬ ಮಾತು ಕೂಡ ಸಾಮಾಜಿಕ ಜಾಲತಾಣದ ಮೂಲಕ ಕೇಳಿ ಬರುತ್ತಿದೆ. ನಿಜಕ್ಕೂ ದರ್ಶನ್ ಮತ್ತು ದರ್ಶನ್ ಅವರ ಅಭಿಮಾನಿಗಳಿಗೆ ತಮ್ಮ ಮಾತುಗಳ ಮೂಲಕ ಸುದೀಪ್ ಉತ್ತರವನ್ನು ನೀಡಿದ್ದಾರಾ..? ಎಲ್ಲವೂ ಅವರವರ ಭಾವಕ್ಕೆ ಅವರವರ ಭಕುತಿಗೆ.


Click it and Unblock the Notifications











