Sudeep: ರಕ್ತದಲ್ಲಿ ಸುದೀಪ್ ಚಿತ್ರ ಬಿಡಿಸಿದ ಮಹಿಳಾ ಅಭಿಮಾನಿ: ಕಿಚ್ಚನಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
ನೆಚ್ಚಿನ ನಟ, ನಟಿಯರ ಮೇಲೆ ಅಭಿಮಾನಿಗಳು ಪದೇ ಪದೆ ಹುಚ್ಚು ಅಭಿಮಾನ ಪ್ರದರ್ಶಿಸುತ್ತಿರುತ್ತಾರೆ. ನಟ ಕಿಚ್ಚ ಸುದೀಪ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಸುದೀಪಿಯನ್ಸ್ ತಮ್ಮ ಆರಾಧ್ಯ ದೈವವನ್ನು ತಮ್ಮ ಹೃದಯಲ್ಲಿಟ್ಟುಕೊಂಡು ಪೂಜಿಸುತ್ತಾರೆ. ಅವರಿಗಾಗಿ ಗುಡಿ ಕಟ್ಟುತ್ತಾರೆ. ದೇಹಕ್ಕೆ ನೋವು ಮಾಡಿಕೊಂಡು ಕಿಚ್ಚನ ಹೆಸರು, ಭಾವಚಿತ್ರ ತಮ್ಮೊಟ್ಟಿಗೆ ಶಾಶ್ವತವಾಗಿ ಇರಬೇಕೆಂದು ಹಚ್ಚೆ ಹಾಕಿಸಿಕೊಳ್ಳುತ್ತಾರೆ.
ಶಿವಮೊಗ್ಗದ ವೈಷ್ಣವಿ ಎನ್ನುವ ಮಹಿಳಾ ಅಭಿಮಾನಿಯೊಬ್ಬರು ಇದೀಗ ತಮ್ಮ ರಕ್ತದಲ್ಲಿ ಕಿಚ್ಚನ ಭಾವಚಿತ್ರ ಬಿಡಿಸಿದ್ದಾರೆ. ವೈದ್ಯರ ಸಹಾಯದಿಂದ ತಮ್ಮದ ದೇಹದ ರಕ್ತವನ್ನು ಹೊರ ತೆಗೆದು ಸುದೀಪ್ ಭಾವಚಿತ್ರ ಬರೆದು ಅದಕ್ಕೆ ರಕ್ತವನ್ನು ಬಣ್ಣವಾಗಿ ತುಂಬಿದ್ದಾರೆ. ಈ ವಿಡಿಯೋವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿರುವ ಸುದೀಪ್ ಧನ್ಯವಾದ(ಎಮೋಜಿ) ಎಂದು ಕಾಮೆಂಟ್ ಮಾಡಿದ್ದಾರೆ.

ವೈಷ್ಣವಿ ತಮ್ಮ ನೆಚ್ಚಿನ ನಟನ ಮೇಲೆ ಅಭಿಮಾನ ಪ್ರದರ್ಶಸಿರುವ ವಿಡಿಯೋ ಸಖತ್ ಸದ್ದು ಮಾಡ್ತಿದೆ. ಸಾಕಷ್ಟು ಜನ ಅಭಿಮಾನಿಗಳು ಇದಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಸುದೀಪ್ ಧನ್ಯವಾದ ತಿಳಿಸಿರುವ ಪೋಸ್ಟ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಕಿಚ್ಚನಿಗೆ ಕಿವಿಮಾತು ಹೇಳಿದ್ದಾರೆ.
ಇಂಥದ್ದನ್ನು ಪ್ರೇರೇಪಿಸಬೇಡಿ
ಅಭಿಮಾನದ ಹೆಸರಿನಲ್ಲಿ ಯಾರು ಯಾರಿಗೂ ನೋವು ಮಾಡುವುದು ಅಥವಾ ತಮಗೆ ತಾವೇ ನೋವು ಮಾಡಿಕೊಳ್ಳುವುದು ಸರಿಯಲ್ಲ. ಕೆಲ ವೀರಾಭಿಮಾನಿಗಳು ಈ ರೀತಿ ನೆಚ್ಚಿನ ನಟನ ಹೆಸರು, ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಹೀಗೆ ರಕ್ತದಲ್ಲಿ ಪತ್ರ ಬರೆಯುವ, ಚಿತ್ರ ಬಿಡಿಸುವ ಸಾಹಸ ಮಾಡುತ್ತಾರೆ. ಇಂಥದ್ದನ್ನೆಲ್ಲಾ ಸ್ಟಾರ್ ನಟರು ಪ್ರೇರೇಪಿಸಬಾರದು, ಇಂತಹ ವಿಚಾರದಲ್ಲಿ ತಮ್ಮನ್ನು ಆರಾಧಿಸುವ ಅಭಿಮಾನಿಗಳಿಗೆ ಕಲಾವಿದರು ತಿಳಿ ಹೇಳಬೇಕು ಅನ್ನೋದು ಕೆಲವರ ವಾದ.

ಹೀಗೆ ಮಾಡ್ಬೇಡಿ ಎಂದ ಫ್ಯಾನ್ಸ್
ಅಭಿಮಾನಿಯ ವಿಡಿಯೋಗೆ ಧನ್ಯವಾದ ತಿಳಿಸಿ ಸುದೀಪ್ ಟ್ವೀಟ್ ಮಾಡಿರುವುದಕ್ಕೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಾಮೆಂಟ್ ಬಾಕ್ಸ್ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. "ನೀವು ಇಂತಹ ಹುಚ್ಚಾಟಗಳಿಗೆ ಪ್ರೋತ್ಸಾಹ ಕೊಡುವುದು ಖಂಡನೀಯ. ರಕ್ತದಲ್ಲಿ ಚಿತ್ರ ಬಿಡಿಸುವ ಬದಲಿಗೆ ರಕ್ತ ದಾನ ಮಾಡಿರುತ್ತಿದ್ದರೆ 3 ಪ್ರಾಣಗಳನ್ನು ಉಳಿಸಿರುವ ಪುಣ್ಯವನ್ನು ಪಡೆಯಬಹುದಿತ್ತು." ಎಂದು ಒಬ್ಬರು ಕಾಮೆಂಟ್ ಮಾಡಿದ್ಧಾರೆ.
ಆ ಹುಡುಗಿಗೆ ಬುದ್ಧಿ ಹೇಳಬೇಕಿತ್ತು
ಮತ್ತೊಬ್ಬರು "ಸುದೀಪ್ ಸರ್ ನೀವು ಆ ಹುಡುಗಿಗೆ ಬುದ್ಧಿಮಾತು ಹೇಳಬೇಕಿತ್ತು. ಹೀಗೆಲ್ಲಾ ಮಾಡೋದು ತಪ್ಪು ಅಂತ. ನೀವು ದೇವರಲ್ಲ. ನೀವು ಸೆಲಿಬ್ರೆಟಿ ಅಷ್ಟೇ. ದಯವಿಟ್ಟು ಇಂತಹ ವಿಷಯಗಳಿಗೆ ಪ್ರೋತ್ಸಾಹ ಕೊಡಬೇಡಿ" ಎಂದು ಬರೆದಿದ್ದಾರೆ. "ಸಾಮಾಜಿಕ ಕಳಕಳಿ ಇರುವ ವ್ಯಕ್ತಿಯಾಗಿ ಇಂಥದ್ದನ್ನು ಪ್ರೋತ್ಸಾಹಿಸಬೇಡಿ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ಧಾರೆ.
ಶೀಘ್ರದದಲ್ಲೇ Kichcha46 ಶೂಟಿಂಗ್
ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಒಂದು ವರ್ಷ ಪೂರೈಸಿದೆ. ಸದ್ಯ ಮುಂದಿನ ತಿಂಗಳು ಸುದೀಪ್ ನಟನೆಯ 46ನೇ ಸಿನಿಮಾ ಚಿತ್ರೀಕರಣ ಮಹಾಬಲಿಪುರಂನಲ್ಲಿ ಶುರುವಾಗಲಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿದ್ದ ಟೀಸರ್ ಸೂಪರ್ ಹಿಟ್ ಆಗಿತ್ತು. ಅಂದ ಹಾಗೆ ಈ ಚಿತ್ರವನ್ನು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಜೊತೆ ಸೇರಿ ತಮಿಳಿನ ಕಲೈಪುಲಿ ಎಸ್. ತನು ನಿರ್ಮಾಣ ಮಾಡಲಿದ್ದಾರೆ.


Click it and Unblock the Notifications











