ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರದ ಬಗ್ಗೆ ಅಪ್ಡೇಟ್ ಸಿಕ್ಕಿದೆ. ತಮಿಳಿನ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಬಹುತೇಕ ಮಹಾಬಲಿಪುರಂನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಕಿಚ್ಚ ಅಬ್ಬರಿಸಿಲಿದ್ದಾರೆ.
'ವಿಕ್ರಾಂತ್ ರೋಣ' ಸಿನಿಮಾ ಬಂದೋಗಿ ಒಂದೂವರೆ ವರ್ಷ ಕಳೆದರೂ ಸುದೀಪ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬರಲಿದೆ. ಬರೋಬ್ಬರಿ ಒಂದು ವರ್ಷದ ಬಳಿಕ 'ಮ್ಯಾಕ್ಸ್' ಸಿನಿಮಾ ಆರಂಭಿಸಿದ್ದರು. ತಮಿಳಿನ ಕಲೈಪುಲಿ ಎಸ್ ತನು ಜೊತೆ ಸೇರಿ ಸುದೀಪ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಕಿಚ್ಚನ ಜೊತೆ ಕಾಮರಾಜ್, ಉಗ್ರಂ ಮಂಜು ಹಾಗೂ ಸಂಯುಕ್ತಾ ಹೊರನಾಡ್ ಕೂಡ ನಟಿಸುತ್ತಿದ್ದಾರೆ.

'ಮ್ಯಾಕ್ಸ್' ಚಿತ್ರದಲ್ಲಿ ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾರೆಗಮ ಸೌತ್ ಚಿತ್ರದ ಆಡಿಯೋ ರೈಟ್ಸ್ ಕೊಂಡುಕೊಂಡಿದೆ. ಛಾಯಾಗ್ರಾಹಕ ಶೇಖರ್ ಚಂದ್ರ ಚಿತ್ರವನ್ನು ಸೆರೆಹಿಡಿಯುತ್ತಿದ್ದಾರೆ.
ಅಂದಹಾಗೆ ಬಿಗ್ಬಾಸ್ ನಡುವೆಯೂ ಸುದೀಪ್ 'ಮ್ಯಾಕ್ಸ್' ಚಿತ್ರೀಕರಣ ನಡೆಸಿದ್ದರು. ಬೆಂಗಳೂರು, ಚೆನ್ನೈ ವಿಮಾನ ಏರಿ ಇಳಿದಿದ್ದರು. ಬಳಿಕ ಕೆಸಿಸಿ ಕ್ರಿಕೆಟ್, ಸಿಸಿಎಲ್ ಕ್ರಿಕೆಟ್ ಅಂತೆಲ್ಲಾ ಸುದೀಪ್ ಕೊಂಚ ಬ್ಯುಸಿಯಾಗಿದ್ದರು. ಇದೀಗ ಕೊನೆ ಹಂತದ ಚಿತ್ರೀಕರಣ ಆರಂಭವಾಗಿದೆ. ಈ ಬಗ್ಗೆ ನಟಿ ಸಂಯುಕ್ತಾ ಹೊರನಾಡ್ ಮಾಹಿತಿ ನೀಡಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಒಂದಷ್ಟು ಕುಡಗೋಲು, ಕತ್ತಿಗಳನ್ನು ಪೇರಿಸಿಟ್ಟ ಫೋಟೊ ಹಂಚಿಕೊಂಡು ತಮಿಳುನಾಡಿನ ಮಹಾಬಲಿಪುರಂನಲ್ಲಿ 'ಮ್ಯಾಕ್ಸ್' ಕೊನೆ ಹಂತದ ಚಿತ್ರೀಕರಣ ಆರಂಭ ಎಂದು ಪೋಸ್ಟ್ ಮಾಡಿದ್ದಾರೆ,
ಅಭಿಮಾನಿಗಳು 'ಮ್ಯಾಕ್ಸ್' ಸಿನಿಮಾ ಅಪ್ಡೇಟ್ ಕೇಳಿ ಕೇಳಿ ಸುಮ್ಮನಾಗಿದ್ದಾರೆ. ಇತ್ತೀಚೆಗೆ ನಟ ಸುದೀಪ್ ಸುಖಾಸುಮ್ಮನೆ ಅಪ್ಡೇಟ್ ಕೇಳಬೇಡಿ. ಸಮಯ ಬಂದಾಗ ಕಂಡಿತ ಹೇಳುತ್ತೇವೆ ಎಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು. "ಎಲ್ಲಾ ಸ್ನೇಹಿತರಿಗೆ ಶುಭೋದಯ, ಪ್ರೀತಿ ತುಂಬಿದ ಅಪ್ಪುಗೆ. ಅಪ್ಡೇಟ್ಸ್ ಬಗ್ಗೆ ಹರಿದುಬರುತ್ತಿರುವ ಟ್ವೀಟ್ಗಳನ್ನು ನೋಡಿ ಖುಷಿಯಾಗುತ್ತದೆ. ಆದರೆ ಬೇರೆ ನಟರ ಸಿನಿಮಾಗಳು ಬಿಡುಗಡೆ ಆಗಿದೆ ಎಂದು ಅಥವಾ ಬೇರೆ ನಟರಿಗೆ ಪೈಪೋಟಿ ಕೊಡಬೇಕೆಂದು ಅಪ್ಡೇಟ್ ಕೊಡುವುದಕ್ಕೆ ಸಾಧ್ಯವಿಲ್ಲ. ಚಿತ್ರತಂಡ ಏನಾದರೂ ರಿಲೀಸ್ ಮಾಡಲು ಅಥವಾ ಘೋಷಿಸಲು ಸಿದ್ಧವಿದ್ದಾಗ ಮಾತ್ರ ಅಪ್ಡೇಟ್ ಕೊಡಲು ಸಾಧ್ಯ" ಎಂದಿದ್ದರು.

"ನನ್ನ ಕೆಲಸದ ಮೇಲೆ ನೀವು ಅಭಿಮಾನಿಗಳು ತೋರುತ್ತಿರುವ ಪ್ರೀತಿಗೆ ಖುಷಿಯಾಗುತ್ತದೆ. ಆದರೆ ಬಿಗ್ಬಾಸ್ ಅಥವಾ ಸಿಸಿಎಲ್ ಮೇಲಿನ ವ್ಯಂಗ್ಯ ಸರಿಯಲ್ಲ. ಇದು ಚಿತ್ರದ ಕಡೆಗೆ ಒಬ್ಬರ ಆಸಕ್ತಿ, ಕುತೂಹಲವನ್ನು ಪ್ರದರ್ಶಿಸುವ ಮಾರ್ಗವಲ್ಲ. 'ಮ್ಯಾಕ್ಸ್' ಸಿನಿಮಾ ಚೆನ್ನಾಗಿ ರೂಪುಗೊಳುತ್ತಿದೆ. ನಾವು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನಿಮ್ಮನ್ನು ರಂಜಿಸಲು ಪ್ರಯತ್ನಿಸುತ್ತಿದ್ದೇನೆ. ಅದಕ್ಕೆ ನಮ್ಮ ಮೊದಲ ಆದ್ಯತೆ" ಎಂದು ಸುದೀಪ್ ಟ್ವೀಟ್ ಮಾಡಿ ತಿಳಿಸಿದ್ದರು. ಬಳಿಕ ಅಭಿಮಾನಿಗಳು ಸುಮ್ಮನಾಗಿದ್ದರು.
ಇನ್ನು ಬುಕ್ಮೈ ಶೋನಲ್ಲಿ 'ಮ್ಯಾಕ್ಸ್' ಚಿತ್ರದ ಒನ್ಲೈನ್ ಸ್ಟೋರಿ ಕೂಡ ರಿವೀಲ್ ಆಗಿದೆ. ಖಡಕ್ ಪೊಲೀಸ್ ಆಫೀಸರ್ ಅರ್ಜುನ್ ಮಹಾಕ್ಷಯ್. 2 ತಿಂಗಳು ಅಮಾನತಿನಲ್ಲಿದ್ದ ಅರ್ಜುನ್ ನಂತರ ಹೊಸ ಪೊಲೀಸ್ ಠಾಣೆಯಲ್ಲಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುತ್ತಾನೆ. ಮಂತ್ರಿಗಳ ಮಗ ತನ್ನ ಇಲಾಖೆಯ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೋಡಿ ಬಂಧಿಸುತ್ತಾನೆ. ದುರದೃಷ್ಟವಶಾತ್ ಆತ ಸಾಯ್ತಾನೆ. ಮುಂದೆ ಅರ್ಜುನ್ ಏನು ಮಾಡ್ತಾನೆ? ಅನ್ನೋದೇ ಇನ್ನುಳಿದ ಕಥೆ ಎಂದು ಅದರಲ್ಲಿ ತಿಳಿಸಲಾಗಿದೆ. ಅರ್ಜುನ್ ಮಹಾಕ್ಷಯ್ನ ಎಲ್ಲರೂ 'ಮ್ಯಾಕ್ಸ್' ಎಂದು ಶಾರ್ಟ್ ಆಗಿ ಕರೆಯುತ್ತಾರೆ. ಅದಕ್ಕೆ ಈ ಟೈಟಲ್ ಎಂದು ಅಭಿಮಾನಿಗಳು ಊಹಿಸಿದ್ದಾರೆ.


Click it and Unblock the Notifications











