Exclusive; ನಾಗಾಭರಣ ಕಾನೂನು ಸಮರಕ್ಕೆ ಡೋಂಟ್ಕೇರ್; ಲಂಡನ್ನಲ್ಲಿ 'ಕೆಂಪೇಗೌಡ' ಸಿನಿಮಾ ರಿಜಿಸ್ಟರ್
ಕನ್ನಡದಲ್ಲಿ ಮತ್ತೊಂದು ಸಿನಿಮಾ ವಿಚಾರ ವಿವಾದ ಸೃಷ್ಟಿಸುವ ಸುಳಿವು ಸಿಗುತ್ತಿದೆ. ನಾಡಪ್ರಭು ಕೆಂಪೇಗೌಡರ ಜೀವನಾಧರಿತ ಸಿನಿಮಾ ಮಾಡಲು ನಾನಾ? ನೀನಾ? ಎನ್ನುವ ಹಗ್ಗಜಗ್ಗಾಟ ಶುರುವಾಗಿದೆ. ಇತ್ತೀಚೆಗೆ ದಿನೇಶ್ ಬಾಬು ನಿರ್ದೇಶನದಲ್ಲಿ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ಘೋಷಣೆ ಆಗಿತ್ತು.
ಕೆಂಪೇಗೌಡರ ಜೀವನವನ್ನಾಧರಿಸಿ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಇದರ ವಿರುದ್ಧ ಟಿ.ಎಸ್. ನಾಗಾಭರಣ ಮತ್ತು ನಿರ್ಮಾಪಕ ಡಾ ಎಂ ಎನ್ ಶಿವರುದ್ರಪ್ಪ ಕೋರ್ಟ್ ಮೆಟ್ಟಿಲೇರಿದ್ದಾರೆ. ನಾವು ಕೆಂಪೇಗೌಡರ ಜೀವನವನ್ನಾಧರಿಸಿ ಸಿನಿಮಾ ಮಾಡುತ್ತಿದ್ದೇವೆ. ಹಾಗಾಗಿ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಲನಚಿತ್ರ ಕುರಿತ ನಿರ್ಮಾಣ, ನಿರ್ದೇಶನ, ಜಾಹೀರಾತು, ವಿತರಣೆ ಅಥವಾ ಸಾರ್ವಜನಿಕರಿಗೆ ಸಂವಹನಗಳನ್ನು ಮಾಡದಂತೆ ಆಗ್ರಹಿಸಿದ್ದಾರೆ. ಇದೀಗ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿದೆ.

ಈ ಹಿಂದೆ ಮದಕರಿ ನಾಯಕರ ಜೀವನಾಧರಿತ ಸಿನಿಮಾ ಮಾಡಲು ದಾಸ ದರ್ಶನ್ ಹಾಗೂ ಕಿಚ್ಚ ಸುದೀಪ್ ನಡುವೆ ಇದೇ ರೀತಿಯ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಹೀರೊ ಆಗಿ ಸಿನಿಮಾ ಸೆಟ್ಟೇರಿತ್ತು. ಅದಾಗಲೇ ಮದಕರಿ ನಾಯಕರ ಕುರಿತು ಸಿನಿಮಾ ಮಾಡಲು ತಯಾರಿ ನಡೆಸಿದ್ದ ಸುದೀಪ್ ಸುಮ್ಮನಾಗಿದ್ದರು. ಇದೀಗ ನಾಡಪ್ರಭು ಕೆಂಪೇಗೌಡರ ಕಥೆಯನ್ನು ಸಿನಿಮಾ ಮಾಡಲು ಎರಡೂ ತಂಡಗಳು ಪೈಪೋಟಿ ನಡೆಸಿವೆ.
ಅತ್ತ ನಾಗಾಭರಣ ಮತ್ತವರ ತಂಡ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಇತ್ತ ನಿರ್ಮಾಪಕ ಕಿರಣ್ ತೋಟಂಬೈಲ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್ ಮಾಡಿದ್ದಾರೆ. ನಮ್ಮದು ಪ್ಯಾನ್ ವರ್ಲ್ಡ್ ಸಿನಿಮಾ. ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದೇವೆ. ಅದೇ ರೀತಿ ಸಿನಿಮಾ ನಿರ್ಮಿಸುತ್ತೇವೆ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಅವರು ತಂದಿರುವ ತಡೆಯಾಜ್ಞೆಗೆ ನಮ್ಮ ಲೀಗಲ್ ಟೀಂ ಎಂದಿದ್ದಾರೆ.
'ದಿ ಫೌಂಡರ್ ಆಫ್ ಬೆಂಗಳೂರು' ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾಗಿರುವ ಕಿರಣ್ ತೋಟಂಬೈಲ್ ಈ ಬಗ್ಗೆ ಫಿಲ್ಮಿಬೀಟ್ಗೆ ಪ್ರತಿಕ್ರಿಯಿಸಿದ್ದಾರೆ. "ಕೆಂಪೇಗೌಡರ ಕಥೆ ಇತಿಹಾಸ. ಇದನ್ನು ಕಾಪಿರೈಟ್ ಮಾಡುತ್ತೇವೆ ಎನ್ನುವುದು ತಪ್ಪಾಗುತ್ತದೆ. ಅದು ಅವರ ದಡ್ಡತನ. ಈ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಲೀಗಲ್ ಟೀಂ ಕೋರ್ಟ್ನಲ್ಲಿ ಇದಕ್ಕೆ ಉತ್ತರ ಕೊಡುತ್ತಾರೆ" ಎಂದಿದ್ದಾರೆ.

"ನಾವು ಮಾಡುತ್ತಿರುವುದು ಸ್ಟ್ರೈಟ್ ಇಂಗ್ಲೀಷ್ ಫಿಲ್ಮ್. ಅದು ಅವರಿಗೆ ಗೊತ್ತಿಲ್ಲ. ಇಂಗ್ಲೀಷ್ ಹಾಗೂ ಕನ್ನಡದಲ್ಲಿ ನಾವು ಸಿನಿಮಾ ಘೋಷಣೆ ಮಾಡಿದ್ದೇವೆ. ನಾವು ಮಾಡುತ್ತಿರುವುದು ಇಂಗ್ಲೀಷ್ ಸಿನಿಮಾ. ಇದು ಬ್ರಿಟೀಷ್ ಕೌನ್ಸಿಲ್, ಐಎಂಡಿಬಿ ಎಲ್ಲರದಲ್ಲೂ ನಮ್ಮ ಸಿನಿಮಾ ರಿಜಿಸ್ಟರ್ ಆಗಿದೆ. ಇಂಗ್ಲೀಷ್ ಸಿನಿಮಾ ಆಗಿರುವುದರಿಂದ ಇಲ್ಲಿನ ಕಾನೂನು ಅದಕ್ಕೆ ತೊಡಕಾಗುವುದಿಲ್ಲ" ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
"ನಾವು 100 ಕೋಟಿ ರೂ. ಬಜೆಟ್ನಲ್ಲಿ ನಾವು ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದೇವೆ. ನಮ್ಮ ಸಿನಿಮಾ ಹೀರೊ ಕನ್ನಡದವರೇ ಆಗಿರುತ್ತಾರೆ. ಇನ್ನುಳಿದ ಕಲಾವಿದರು ತಂತ್ರಜ್ಞರು ಕೂಡ ಇಲ್ಲಿನವರೇ ಇರುತ್ತಾರೆ. ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ 'ಗಾಂಧಿ' ಸಿನಿಮಾ ಬಂದಿತ್ತಲ್ಲ. ಅದೇ ರೀತಿ ನಮ್ಮ ಸಿನಿಮಾ ಇರುತ್ತದೆ. ಅವರಿಗೆ ಇನ್ನು ನಿರ್ಮಾಪಕರು ಸಿಕ್ಕಿಲ್ಲ, ಧನಂಜಯ ಅವರ ಕಾಲ್ಶೀಟ್ ಸದ್ಯಕ್ಕೆ ಸಿಗಲ್ಲ. ಸದ್ಯಕ್ಕೆ ನಮ್ಮ ಸಿನಿಮಾಗೆ ತಡೆತಂದು ಮುಂದೆ ಸಿನಿಮಾ ಮಾಡಲು ಅವರು ತೀರ್ಮಾನಿಸಬಹುದು" ಎಂದಿದ್ದಾರೆ.
"ಜೂನ್ 27ರಂದು ಕೆಂಪೇಗೌಡರ ಹುಟ್ಟುಹಬ್ಬದ ದಿನವೇ ಮಾಗಡಿಯಲ್ಲಿ ಬಹಳ ಅದ್ಧೂರಿಯಾಗಿ ನಮ್ಮ ಸಿನಿಮಾ ಮುಹೂರ್ತ ನಡೆಯಲಿದೆ. ಅಂದೇ ಚಿತ್ರದ ನಾಯಕ ಯಾರು ಎನ್ನುವುದು ಗೊತ್ತಾಗಲಿದೆ. ಕನ್ನಡದಲ್ಲಿ ಮೂರ್ನಾಲ್ಕು ಸಿನಿಮಾ ಮಾಡಿರುವ ನಟ ನಮ್ಮ ಚಿತ್ರದ ಹೀರೊ. ಬಹಳ ಎತ್ತರದ ನಟ, ಕೆಂಪೇಗೌಡರ ಪಾತ್ರಕ್ಕೆ ಸರಿಯಾಗಿ ಹೊಂದಿಕೆಯಾಗುವ ನಟ ಅವ್ರು" ಎಂದು ಕಿರಣ್ ತೋಟಂಬೈಲ್ ಮಾಹಿತಿ ನೀಡಿದ್ದಾರೆ.
ಕೆಂಪೇಗೌಡರ ಪಾತ್ರದಲ್ಲಿ ನಟಿಸೋಕೆ ಮೂವರ ಜೊತೆ ಕಿರಣ್ ತೋಟಂಬೈಲ್ ಮತ್ತವರ ತಂಡ ಚರ್ಚೆ ನಡೆಸುತ್ತಿದೆ. ಈ ಚಿತ್ರದಲ್ಲಿ ಧರ್ಮೇಂದ್ರ ಕುಮಾರ್ ಅರೇನಳ್ಳಿ ಕಥೆ, ಚಿತ್ರಕಥೆ ಬರೆಯುತ್ತಿದ್ದು ದಿನೇಶ್ ಬಾಬು ನಿರ್ದೇಶನ ಮಾಡಲಿದ್ದಾರೆ.


Click it and Unblock the Notifications











