ಟೋಲ್ ಬೂತ್ನಲ್ಲಿ ಕಿರಿಕ್ ಕೀರ್ತಿಯ ಸಕಾರಣ 'ಕಿರಿಕ್'
ಕಿರಿಕ್ ಕೀರ್ತಿ ಇಂದು ಕಿರಿಕ್ ಒಂದನ್ನು ಮಾಡಿಕೊಂಡಿದ್ದಾರೆ. ಹಾಗೆಂದು ಅವರೇನು ಯಾರೊಟ್ಟಿಗೊ ಜಗಳಕ್ಕೆ ಬಿದ್ದಿರಲಿಲ್ಲ, ಬದಲಿಗೆ ಸಕಾರಣವೊಂದಕ್ಕೆ ಟೋಲ್ ಬೂತ್ ವ್ಯವಸ್ಥಾಪಕರೊಂದಿಗೆ ತುಸು ಏರಿದ ದನಿಯಲ್ಲೇ ಪ್ರಶ್ನೆಗಳನ್ನು ಮಾಡಿದ್ದಾರೆ.
Recommended Video
ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರಾಕರಿಸಿರುವ ಕಾರಣ ಅಲ್ಲಿನ ಕೋತಿಗಳಿಗೆ ಹಣ್ಣು ನೀಡಲೆಂದು ಕಿರಿಕ್ ಕೀರ್ತಿ ಹಾಗೂ ನಟ ಚಂದನ್ ಅವರು ಇಂದು ಮುಂಜಾನೆ ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಕಾರಿನಲ್ಲಿ ಹೊರಟಿದ್ದರು.
ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಹೆಬ್ಬಾಳದಿಂದ ಸಾದಳ್ಳಿಯವರೆಗಿನ ಎಲ್ಲ ಫ್ಲೈಓವರ್ಗಳನ್ನು ಬಂದ್ ಮಾಡಿರುವ ಕಾರಣ ಸರ್ವೀಸ್ ರಸ್ತೆಯಲ್ಲಿಯೇ ಕಿರಿಕ್ ಕೀರ್ತಿ ಹಾಗೂ ಚಂದನ್ ಬಂದಿದ್ದಾರೆ. ಆದರೆ ಏರ್ಪೋರ್ಟ್ ಬಳಿಕ ನವಯುಗ ಟೋಲ್ನವರು ಕಿರಿಕ್ ಕೀರ್ತಿ ಅವರಿಗೆ 95 ರು. (ಒಂದು ಬದಿಗೆ) ಟೋಲ್ ಕಟ್ಟುವಂತೆ ಕೇಳಿದ್ದಾರೆ.

ಸೇವೆ ಬಳಿಸಿಲ್ಲದ ಮೇಲೆ ಶುಲ್ಕ ಏಕೆ ಪಾವತಿಸಲಿ: ಕೀರ್ತಿ
ಟೋಲ್ನವರೊಂದಿಗೆ ವಾಗ್ವಾದ ಆರಂಭಿಸಿದ ಕಿರಿಕ್ ಕೀರ್ತಿ, 'ನಾನು ನಿಮ್ಮ ಸೇವೆಯನ್ನೇ ಬಳಸಿಲ್ಲ ಹಾಗಿದ್ದ ಮೇಲೆ ನಾನು ಏಕೆ ಶುಲ್ಕ ಕಟ್ಟಬೇಕು? ನಾನು ಶುಲ್ಕ ಕಟ್ಟುವುದಿಲ್ಲ' ಎಂದಿದ್ದಾರೆ ಕೀರ್ತಿ. 'ಫ್ಲೈ ಓವರ್ ಬಂದ್ ಮಾಡಿರುವುದು ನಾವಲ್ಲ, ಸರ್ಕಾರದವರು, ನೀವು ಬೇಕಿದ್ದರೆ ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿಯ ಬಳಿ ಮಾತನಾಡಿಕೊಳ್ಳಿ ಆದರೆ ಟೋಲ್ ಕಟ್ಟಿ' ಎಂದು ಅಲ್ಲಿನ ವ್ಯವಸ್ಥಾಪಕ ಕೇಳಿದ್ದಾರೆ. ಘಟನೆಯ ವಿಡಿಯೋವನ್ನು ಕಿರಿಕ್ ಕೀರ್ತಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಫ್ಲೈಓವರ್ ತೆಗೆಸಿ ಅಥವಾ ಟೋಲ್ ಬಂದ್ ಮಾಡಿ: ಕೀರ್ತಿ
ಇದಕ್ಕೆ ಒಪ್ಪದ ಕೀರ್ತಿ, ನಾನು ಸಾಮಾನ್ಯ ಮನುಷ್ಯ ನನಗೆ ಸಮಸ್ಯೆ ಆಗಿರುವುದು ನಿಮ್ಮ ಟೋಲ್ನಲ್ಲಿ ನಾನೇಕೆ ಎಲ್ಲೋ ಕೂತಿರುವ ಅಧಿಕಾರಿ ಬಳಿ ಮಾತನಾಡಲಿ. ಇಲ್ಲಿ ದಿನಕ್ಕೆ ಇಷ್ಟೋಂದು ವಾಹನಗಳು ಓಡಾಡುತ್ತವೆ. ಅವರ್ಯಾರೂ ನಿಮ್ಮ ಸೇವೆ ಬಳಸಿಲ್ಲ ಹಾಗಿದ್ದ ಮೇಲೆ ಶುಲ್ಕ ಏಕೆ ಕಟ್ಟಬೇಕು. ಒಂದೋ ಫ್ಲೈ ಓವರ್ ತೆಗೆಸಿ ಇಲ್ಲವೇ ಟೋಲ್ ಬೂತ್ ಬಂದ್ ಮಾಡಿ' ಎಂದು ಕೇಳಿದ್ದಾರೆ ಕೀರ್ತಿ. ಇದಕ್ಕೆ ವ್ಯವಸ್ಥಾಪಕನ ಬಳಿ ಉತ್ತರವಿಲ್ಲ.

ಟೋಲ್ ಕಟ್ಟದೆ ಬೇರೆ ರಸ್ತೆ ಬಳಸಿ ನಂದಿಗೆ ಹೋದೆವು: ಕೀರ್ತಿ
ಘಟನೆ ಬಗ್ಗೆ ಫಿಲ್ಮೀಬೀಟ್ ಕನ್ನಡದೊಂದಿಗೆ ಮಾತನಾಡಿದ ಕಿರಿಕ್ ಕೀರ್ತಿ, 'ನಿಮ್ಮ ಸೇವೆ ಬಳಸಿಲ್ಲವಾದ್ದರಿಂದ ನಾನು ಶುಲ್ಕ ಕೊಡುವುದಿಲ್ಲ ಎಂದು ಟೋಲ್ ಬೂತ್ನವರಿಗೆ ಹೇಳಿದೆ. ಆದರೆ ಅದಕ್ಕೆ ಅವರು ಒಪ್ಪುವ ಸ್ಥಿತಿಯಲ್ಲಿರಲಿಲ್ಲ. ನನ್ನ ಕಾರಿನ ಹಿಂದೆ ಬ್ಯಾರಿಕೇಡ್ ಇಟ್ಟು ಯಾರೂ ಆ ಲೇನ್ಗೆ ಬರದ ಹಾಗೆ ಮಾಡಿದರು. ಕೊನೆಗೆ ನಾನು, ಕಾರನ್ನು ಹಿಂದೆ ತಿರುಗಿಸಿ ಬೇರೆ ರಸ್ತೆಯಲ್ಲಿ ನಂದಿ ಬೆಟ್ಟಕ್ಕೆ ನನ್ನ ಪಯಣ ಮುಂದುವರೆಸಿದೆ. ನನ್ನ ಬಳಿ ಫಾಸ್ಟ್ಟ್ಯಾಗ್ ಇತ್ತು ಆದರೆ ಬಳಸದ ಸೇವೆಗೆ ಶುಲ್ಕ ತೆರುವುದು ನನಗೆ ಸೂಕ್ತವೆನಿಸಲಿಲ್ಲ' ಎಂದರು ಕೀರ್ತಿ.

ಬೇರೆಯವರಿಗೆ ಸಹಾಯವಾಗಬಹುದು ಎಂಬ ನಿರೀಕ್ಷೆ: ಕೀರ್ತಿ
ಮುಂದುವರೆದು, 'ಏರ್ಪೋರ್ಟ್ ರಸ್ತೆಯಾಗಿರುವ ಕಾರಣ ಆ ಟೋಲ್ ಮೂಲಕ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಟ್ಯಾಕ್ಸಿ ಚಾಲಕರು ಅದೇ ರಸ್ತೆಯಲ್ಲಿ ಏರ್ಪೋರ್ಟ್ಗೆ ಸಂಚರಿಸುತ್ತಾರೆ. ಯಾರೂ ಸಹ ಟೋಲ್ನವರ ರಸ್ತೆ ಬಳಸುತ್ತಿಲ್ಲ. ಆದರೂ ಟೋಲ್ ಕಟ್ಟುವುದು ನ್ಯಾಯವಲ್ಲ. ಹಾಗಾಗಿಯೇ ನಾನು ದನಿ ಎತ್ತಿದೆ. ನನ್ನಿಂದ ಇನ್ನು ಕೆಲವರಿಗಾದರೂ ಸಹಾಯವಾಗಬಹುದು ಎಂಬುದು ನನ್ನ ನಿರೀಕ್ಷೆ' ಎಂದರು.


Click it and Unblock the Notifications











