'ಛಾವ' ಪ್ರೊಪಾಗಂಡಾ ಸಿನಿಮಾ ಅಂತ ಗೊತ್ತಿತ್ತು, 'ಕಾಂತಾರ-1'ನಲ್ಲಿ ಯಾಕೆ ನಟಿಸ್ಲಿಲ್ಲ ಅಂದ್ರೆ; ಕಿಶೋರ್
ಬಹುಭಾಷಾ ನಟ ಕಿಶೋರ್ ತಮ್ಮ ಹೇಳಿಕೆಗಳಿಗೆ ಸದಾ ಸುದ್ದಿ ಆಗುತ್ತಾರೆ. ದಿಟ್ಟ ಮತ್ತು ಪ್ರಗತಿಪರ ಸಿದ್ಧಾಂತಗಳ ಮೂಲಕ ಯಾವುದೇ ವಿಚಾರವನ್ನು ನೋಡುತ್ತಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ನಿರ್ಧಾರಗಳ ಟೀಕೆ ವ್ಯಕ್ತಪಡಿಸುತ್ತಲೇ ಇರ್ತಾರೆ. ಪ್ರೊಪಾಗಂಡಾ ಸಿನಿಮಾಗಳ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸುತ್ತಾರೆ. 'ಛಾವ' ಚಿತ್ರದಲ್ಲಿ ನಟಿಸುವ ಅವಕಾಶ ಬಂದಿತ್ತು. ಪ್ರೊಪಾಗಂಡಾ ಎನ್ನುವ ಕಾರಣಕ್ಕೆ ಒಪ್ಪಲಿಲ್ಲ ಎಂದಿದ್ದಾರೆ.
ಕಳೆದ ವರ್ಷ ತೆರೆಗೆ ಬಂದಿದ್ದ 'ಛಾವ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಐತಿಹಾಸಿಕ ಕಥಾಹಂದರದ ಸಿನಿಮಾ 750 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಛತ್ರಪತಿ ಶಿವಾಜಿ ಪುತ್ರ ಸಾಂಬಾಜಿ ಶೌರ್ಯ ಸಾಹಸದ ಕಥೆ ಚಿತ್ರದಲ್ಲಿತ್ತು. ಔರಂಗಜೇಬ್ ವಿರುದ್ಧ ಸಾಂಬಾಜಿ ಹೋರಾಟದ ಕಥೆ ಸಿನಿರಸಿಕರ ಮನಗೆದ್ದಿತ್ತು. ಚಿತ್ರದಲ್ಲಿ ಔರಂಗಜೇಬ್ ಪಾತ್ರಕ್ಕೆ ಆಡಿಯನ್ ಕೊಡಲು ಹೇಳಿದ್ದರು. ಆದರೆ ನಾನು ಒಪ್ಪಲಿಲ್ಲ ಎಂದು KadakkClips ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟ ಕಿಶೋರ್ ಹೇಳಿದ್ದಾರೆ.

ಪಾತ್ರಗಳ ಆಯ್ಕೆ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸುತ್ತೇನೆ. ಬಹಳ ಸೂಕ್ಷ್ಮವಾಗಿ ಆಲೋಚಿಸಿ ಒಪ್ಪಿಕೊಳ್ಳುತ್ತೇನೆ ಎಂದು ನಟ ಕಿಶೋರ್ ತಿಳಿಸಿದ್ದಾರೆ. "ಛಾವ ಚಿತ್ರಕ್ಕೆ ಆಡಿಷನ್ ಮಾಡು ಅಂತ ಕೇಳಿದ್ರು. ಆಯ್ಕೆ ಆಗಿರಲಿಲ್ಲ. ಆದ್ರೆ ಔರಂಗಜೇಬ್ ಪಾತ್ರಕ್ಕೆ ಆಡಿಷನ್ ಅಂದ್ರು. ಆ ಟೀಂ ನೋಡಿದಾಗ ವಿಷಯ ನೋಡಿದಾಗ ಇದು ಪ್ರೊಪಾಗಂಡ ಸಿನಿಮಾ,ಹಿಂದೂ-ಮುಸ್ಲಿಂ ಅಂತ ತೋರಿಸ್ತಾರೆ ಅಂತ ಗೊತ್ತಾಯ್ತು. ಮುಂದೆ ಅದೇ ಆಯ್ತು. ಔರಂಗಜೇಬ್ನ ಸಮಾಧಿಯಿಂದ ತೆಗೆದು ಎಲ್ಲಾ ಕಡೆ ಮೆರೆಸಿ, ಹಿಂದೂ, ಮುಸ್ಲಿಂನ ಮತ್ತಷ್ಟು ಒಡೆದ್ರು. ಒಬ್ಬರ ವಿರುದ್ಧ ಒಬ್ಬರನ್ನು ಎತ್ತಿ ಕಟ್ಟುವುದು ಮನೆಹಾಳು ಕೆಲಸ. ಅಂತಹ ಮನೆಹಾಳು ಸಿನಿಮಾ ಬೇಡ ಅನ್ನಿಸ್ತು" ಎಂದಿದ್ದಾರೆ.
ಸಿನಿಮಾದಲ್ಲಿ ನಟಿಸಿ ಕಥೆಯಲ್ಲಿ ಯಾವುದು ಸರಿ, ತಪ್ಪು ಎಂದು ಮಾತನಾಡಬಹುದು ಅನ್ನಿಸುತ್ತದೆ. ಆದರೆ ಸಿನಿಮಾ ಬಹಳ ಪವರ್ಫುಲ್ ಮಾಧ್ಯಮ. ಆ ರೀತಿ ಮಾಡೋಕೆ ಆಗಲ್ಲ ಎಂದು ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ. "ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದ್ವಿ ಅಲ್ವಾ? ಸಿನಿಮಾ ನೋಡಿ ಮುಸ್ಲಿಂ ಹೆಣ್ಣು ಮಕ್ಕಳನ್ನು ರೇ*ಪ್ ಮಾಡಬೇಕು ಎಂದು ಪ್ರೇಕ್ಷಕರು ಕಿರುಚಿದ್ದರು. ಜನರನ್ನು ಆ ಮಟ್ಟಕ್ಕೆ ತಳ್ಳಿ ಹಣ ಮಾಡ್ತೀರಾ, ವೋಟ್ ಗಿಟ್ಟಿಸ್ತೀರಾ ಅಂದ್ರೆ ಅದು ಮನೆಹಾಳು, ದೇಶದ್ರೋಹದ ಕೆಲಸ" ಎಂದು ಕಿಶೋರ್ ಹೇಳಿದ್ದಾರೆ.

ಇಂತಹ ಸಿದ್ಧಾಂತಗಳನ್ನು ಮಾತನಾಡುವುದು, ಹೇಳಿಕೆಗಳನ್ನು ಕೊಡುವುದರಿಂದ ನಿಮಗೆ ಸಿನಿಮಾ ಅವಕಾಶಗಳು ಕಮ್ಮಿ ಆಗಿದ್ಯಾ? ಎನ್ನುವ ಪ್ರಶ್ನೆಗೆ ಇಲ್ಲ, ಗೊತ್ತಿಲ್ಲ. ನೇರವಾಗಿ ಅಲ್ಲದೇ ಇದ್ದರೂ ಪರೋಕ್ಷವಾಗಿ ಆಗಬಹುದು ಎಂದಿದ್ದಾರೆ.
'ಕಾಂತಾರ' ಚಿತ್ರದ ಮೊದಲ ಭಾಗದಲ್ಲಿ ಇದ್ದವರೆಲ್ಲಾ ಚಾಪ್ಟರ್-1ನಲ್ಲಿ ಕೂಡ ಕಾಣಿಸಿಕೊಂಡಿದ್ದರು. ನೀವು ಯಾಕೆ ನಟಿಸಲಿಲ್ಲ ಎನ್ನುವ ಪ್ರಶ್ನೆಗೆ "ಗೊತ್ತಿಲ್ಲ.. ಆ ತರಹದ ಪಾತ್ರ ಇರಲಿಲ್ಲ ಅನ್ಸತ್ತೆ ಅಷ್ಟೆ.. ನಾನು, ರಿಷಬ್ ಸುಮಾರು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅಂತಹ ಪಾತ್ರ ಇದ್ದಿದ್ದರೆ ಕಂಡಿತ ಕೇಳುತ್ತಿದ್ರು.. ನಾನು 'ಕಾಂತಾರ-1' ಸಿನಿಮಾ ನೋಡೋಕೆ ಆಗಲಿಲ್ಲ. ಚಿತ್ರಮಂದಿರದಲ್ಲೇ ನೋಡಬೇಕು ಎಂದುಕೊಂಡೆ.. ಬಹಳ ಬ್ಯುಸಿ ಇದ್ದಿದ್ದರಿಂದ ನೋಡಲಿಲ್ಲ. ಯಾವುದೋ ಚಿತ್ರೀಕರಣಕ್ಕೆ ಹೋದಾಗ ಅಲ್ಲಿ ಪೋಸ್ಟರ್ ನೋಡಿ ಸಿನಿಮಾ ನೋಡೋಣ ಅಂದುಕೊಂಡೆ. ಇಲ್ಲ ಸರ್, ಪೋಸ್ಟರ್ ಮಾತ್ರ ಇದೆ. ಸಿನಿಮಾ ಪ್ರದರ್ಶನ ಇಲ್ಲ ಅಂದ್ರು, ಹಾಗಾಗಿ ಸಾಧ್ಯವಾಗಲೇ ಇಲ್ಲ" ಎಂದಿದ್ದಾರೆ.


Click it and Unblock the Notifications











