ಕ್ರೇಜಿಗೆ ಮುತ್ತಿಟ್ಟ ಮತ್ತೇರಿದ ಹುಡುಗಿ
ಅಲ್ಲೊಂದು ಪಾರ್ಟಿ ವಂಚಕರ ವಂಚನೆಗೊಳಗಾಗಿ ನಾಯಕಿ ಶಹೀನಾ ಮತ್ತೇರುವ ಪಾನೀಯ ಕುಡಿದೇ ಬಿಡುತ್ತಾಳೆ. ತೂರಾಡುತ್ತಾ, ಬಂದು ತನ್ನ ಕಾರ್ ಸ್ಟಾರ್ಟ್ ಮಾಡುವ ಹೊತ್ತಿಗೆ ರೌಡಿಗಳು ವಕ್ಕರಿಸುತ್ತಾರೆ. ಅಲ್ಲೇ ಪಾರ್ಕಿನಲ್ಲಿ ಏಕಾಂಗಿಯಾಗಿ ಕುಳಿತ ಕ್ರೇಜಿ ಸ್ಟಾರ್ ರವಿಚಂದ್ರನ್ ನಾಯಕಿಯನ್ನು ರೌಡಿಗಳಿಂದ ಕಾಪಾಡುತ್ತಾರೆ.
ನಾಯಕನ ಶೌರ್ಯ ಸಾಹಸಕ್ಕೆ ಮೆಚ್ಚಿದ ನಾಯಕಿ ನಿನಗೇನು ಉಡುಗೊರೆ ಬೇಕು ಎನ್ನುತ್ತಾಳೆ. ಪ್ರೇಮಲೋಕದ ಕ್ರೇಜಿ ಸ್ಟಾರ್ ಒಂದೇ ಒಂದು ಸಿಹಿಮುತ್ತು ಎನ್ನುವುದೇ ತಡ ಮತ್ತೇರಿದ ಹುಡುಗಿ ಅಮಲೇರುವಂತೆ ಸಿಹಿಮುತ್ತಿನ ಮಳೆಗರೆಯುತ್ತಾಳೆ.
ಕ್ರೇಜಿಗೆ ಮತ್ತೇರುವಂತೆ ಮುತ್ತನಿಡುವ ಈ ದೃಶ್ಯವನ್ನು 'ಪ್ರೇಮಕ್ಕೆ ಸೈ" ಚಿತ್ರಕ್ಕಾಗಿ ಕೆ.ಡಿ. ವೆಂಕಟೇಶ್ ಸಾಹಸ ಸಂಯೋಜನೆಯಲ್ಲಿ ನಿರ್ದೇಶಕ ಕೋದಂಡರಾಮಿರೆಡ್ಡಿ ಕಂಠೀರವ ಸ್ಟುಡಿಯೋದ ಹಚ್ಚ ಹಸುರಿನ ಹುಲ್ಲುಗಾವಲ ಸೆಟ್ನಲ್ಲಿ ಚಿತ್ರೀಕರಿಸಿಕೊಂಡರು.
ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಈಗ ಅಂತಿಮ ಹಂತದಲ್ಲಿದೆ. ವೈಜಯಂತಿ ಮೂವೀಸ್ ಅವರ ರಜತ ವರ್ಷದ (25) ಕೊಡುಗೆಯಾಗಿ ಅಶ್ವಿನಿದತ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಣಿಶರ್ಮಾ ಸಂಗೀತ, ಶ್ಯಾಂ ಯಾದವ್ ಸಂಕಲನ, ನಾಗೇಂದ್ರ ಪ್ರಸಾದ್ ಸಂಭಾಷಣೆ, ಕೆ. ಕಲ್ಯಾಣ್ ಸಾಹಿತ್ಯ ಇದೆ.
ತಾರಾಗಣದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಬೆಡಗಿನ ಹುಡುಗಿ ಶಹೀನಾ, ಕಸ್ತೂರಿ, ಪ್ರಕಾಶ್ ರೈ, ಲಕ್ಷ್ಮಣ್, ರಮೇಶ್ ಭಟ್, ಪದ್ಮಾವಾಸಂತಿ, ಶಿವಕುಮಾರ್, ಅಶೋಕ್ ಬಾದರದಿನ್ನಿ, ಶ್ರೀನಾಥ್, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್ ಮೊದಲಾದವರು ಇದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ಗಳು ಬೆಂಗಳೂರಲ್ಲಿ ರಾರಾಜಿಸುತ್ತಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಚಿತ್ರ ಬಿಡುಗಡೆಯಾಗುವ ಲಕ್ಷಣಗಳಿವೆ.


Click it and Unblock the Notifications