ಇತಿಹಾಸ ಪ್ರಸಿದ್ಧ ಕಿತ್ತೂರು ಉತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ
ಬೆಳಗಾವಿ, ಅ.22: ಇಂದಿನಿಂದ (ಅ.23) ಮೂರು ದಿನಗಳಕಾಲ ನಡೆಯಲಿರುವ ಕಿತ್ತೂರು ಉತ್ಸವಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಚಂದ್ರಶೇಖರ ಕಂಬಾರ ಚಾಲನೆ ನೀಡಲಿದ್ದಾರೆ.
ಇಂದು ಸಂಜೆ 7ರ ವೇಳೆಗೆ ಇಲ್ಲಿನ ಅರಮನೆ ಪಕ್ಕದ ಬತ್ತೇರಿ ಮೇಲೆ ದೀಪೋತ್ಸವವನ್ನು ಮಾಜಿ ಸಚಿವ ಡಿ.ಬಿ. ಇನಾಂದರ್ ಉದ್ಘಾಟಿಸುವರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರಗು:
ಇಂದು ಸಂಜೆ 6 ರ ನಂತರ ಭರತನಾಟ್ಯ, ಡೊಳ್ಳುಕುಣಿತ, ಖ್ಯಾತ ನೃತ್ಯಗಾರ್ತಿ ಮಾಯಾರಾವ್ ತಂಡದಿಂದ ನೃತ್ಯರೂಪಕ, ರತ್ನಮಾಲಾ ಪ್ರಕಾಶ್ ತಂಡದಿಂದ ಸುಗಮ ಸಂಗೀತ, ಜೋಗತಿ ನೃತ್ಯ, ಶಾಸ್ತ್ರೀಯ ಸಂಗೀತ, ಸಂಗೊಳ್ಳಿ ರಾಯಣ್ಣ ನಾಟಕ ಮತ್ತು ಧಾರವಾಡದ ಅಭಿವ್ಯಕ್ತಿ ಕಲಾ ತಂಡದಿಂದ ಕಿರು ಹಾಸ್ಯನಾಟಕ ಪ್ರದರ್ಶನವಿರುತ್ತದೆ.
ಅ.23ರಂದು ಬೆಳಗ್ಗೆ 6ಕ್ಕೆ ಬೈಲಹೊಂಗಲದಿಂದ ವೀರರಾಣಿ ಕಿತ್ತೂರು ಚೆನ್ನಮ್ಮಳ ವಿಜಯ ಜ್ಯೋತಿ ಹೊತ್ತ ಮೆರವಣಿಗೆ ಸಾಗಲಿದ್ದು ಕಿತ್ತೂರಿನಲ್ಲಿ ಸಂಸದ ಸುರೇಶ ಅಂಗಡಿ ಸ್ವಾಗತ ಕೋರಲಿದ್ದಾರೆ.
ಕಿತ್ತೂರು ಕೋಟೆಗೆ ಏನಾಗಿದೆ?
1824ರ ಅ.23ರಂದು ಬ್ರಿಟಿಷರ ವಿರುದ್ಧ ಸಮರಗೈದಿದ್ದ ರಾಣಿ ಚೆನ್ನಮ್ಮಾಜಿ ಅಭೂತಪೂರ್ವ ಜಯ ದಾಖಲಿಸಿದ್ದರು.ವಿಶಾಲವಾದ ಕೋಟೆ ಬ್ರಿಟಿಷರಿಗೆ ಅಭೇದ್ಯವಾಗಿತ್ತು. ಕೋಟೆಯತ್ತ ಬರುವ ವೈರಿಯನ್ನು ಸುಮಾರು 8 ರಿಂದ 10 ಕಿ.ಮೀ ದೂರದಿಂದಲೇ ಗ್ರಹಿಸುವ ಸೂಕ್ಷ್ಮತೆಯನ್ನು ಪಡೆದ ಐತಿಹಾಸಿಕ ಸ್ಥಳವಾಗಿತ್ತು. ಆದರೆ ಈಗ ಕೋಟೆ ಪಾಳು ಬಿದ್ದಿದೆ.ಇದೇ ಪರಿಸ್ಥಿತಿ ಚೆನ್ನಮ್ಮಾಜಿಯ ಹುಟ್ಟೂರು ಕಾಕತಿ ಗ್ರಾಮಕ್ಕೂ ಆಗಿದೆ. ರಾಜ್ಯಸರ್ಕಾರ, ಪುರಾತತ್ವ ಇಲಾಖೆ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ.
(ದಟ್ಸ್ ಕನ್ನಡ ಸುದ್ದಿಮನೆ)


Click it and Unblock the Notifications