ಹಾಲಿನ ಪ್ಯಾಕೆಟ್ ಮೇಲೆ ಅಪ್ಪು ಚಿತ್ರ: ಗೌರವ ಸಲ್ಲಿಸಿದ ಕೆಎಂಎಫ್
ನಟ ಪುನೀತ್ ರಾಜ್ಕುಮಾರ್ ಯಾವುದೇ ಸರ್ಕಾರಿ ಜಾಹೀರಾತಿನಲ್ಲಿ ನಟಿಸಲು ಹಣ ಪಡೆಯುತ್ತಿರಲಿಲ್ಲ. ಸರ್ಕಾರಿ ಜಾಹೀರಾತೆ ಎಂದಲ್ಲ, ರೈತರಿಗೆ, ಸಾರ್ವಜನಿಕರಿಗೆ ಸಹಾಯವಾಗುವಂಥಹಾ ಜಾಹೀರಾತಿನಲ್ಲಿ ನಟಿಸಲು ಎಂದೂ ಹಣ ಪಡೆದವರಲ್ಲ ಪುನೀತ್ ರಾಜ್ಕುಮಾರ್.
ಅದರಲ್ಲಿಯೂ ಕರ್ನಾಟಕ ಹಾಲು ಒಕ್ಕೂಟದ ಜಾಹೀರಾತಿನಲ್ಲಿ ಹಲವು ವರ್ಷಗಳಿಂದಲೂ ಪುನೀತ್ ರಾಜ್ಕುಮಾರ್ ನಟಿಸುತ್ತಾ ಬಂದಿದ್ದಾರೆ ಎಂದೂ ಅದಕ್ಕಾಗಿ ಹಣ ಪಡೆದವರಲ್ಲ. ನಂದಿನಿ ಜನಪ್ರಿಯವಾಗುವಲ್ಲಿ ಪುನೀತ್ ರಾಜ್ಕುಮಾರ್ ಪಾತ್ರ ದೊಡ್ಡದು. ನಟ ರಾಜ್ಕುಮಾರ್ ಸಹ ಕೆಎಂಎಫ್ ಉತ್ಪನ್ನ ಜಾಹೀರಾತಿಗೆ ಹಣ ಪಡೆದಿರಲಿಲ್ಲ. ಅದನ್ನೇ ಪುನೀತ್ ಸಹ ಪಾಲಿಸಿದ್ದರು.
ಹಠಾತ್ತನೆ ಎಲ್ಲರನ್ನೂ ಬಿಟ್ಟು ಅಗಲಿರುವ ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಕೆಎಂಎಫ್ ಮಾಡಿದೆ. ತನ್ನ ಬಹು ಜನಪ್ರಿಯ ಉತ್ಪನ್ನವಾದ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಅಪ್ಪುವಿನ ಚಿತ್ರವನ್ನು ಪ್ರಕಟಿಸಿದೆ. ಆ ಮೂಲಕ ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಿದೆ.
ಪುನೀತ್ ರಾಜ್ಕುಮಾರ್ ನಿಧನ ಹೊಂದಿದಾಗಲೂ ಕೆಎಂಎಫ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ಇದೀಗ ಹಾಲಿನ ಪ್ಯಾಕೆಟ್ ಮೇಲೆ ನಟನ ಚಿತ್ರ ಪ್ರಕಟಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಗೌರವ ಸಲ್ಲಿಸಿದೆ ಕೆಎಂಎಫ್.

ಪುನೀತ್ ರಾಜ್ಕುಮಾರ್ ಅವರು ಬದುಕಿದ್ದಾಗ ಹಲವು ಜನೋಪಯೋಗಿ ಜಾಹೀರಾತುಗಳಲ್ಲಿ ಚಿಕ್ಕಾಸು ಪಡೆಯದೆ ಉಚಿತವಾಗಿ ನಟಿಸಿದ್ದರು. ಕೆಎಂಎಫ್ ಜಾಹೀರಾತಿನ ಜೊತೆಗೆ ಚಾಮರಾಜ ನಗರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಯಭಾರಿಯಾಗಿದ್ದರು ನಟ ಪುನೀತ್ ರಾಜ್ಕುಮಾರ್. ಇದಕ್ಕಾಗಿಯೂ ಅವರು ಚಿಕ್ಕಾಸು ಪಡೆದಿರಲಿಲ್ಲ. ಸ್ವತಃ ನಿಸರ್ಗ ಪ್ರೇಮಿಯಾಗಿದ್ದ ಪುನೀತ್ ಈ ಕಾರ್ಯವನ್ನು ಉಚಿತವಾಗಿ ಮಾಡಿದ್ದರು. ಕೌಶಲ್ಯ ಕರ್ನಾಟಕ ಯೋಜನೆಯ ರಾಯಭಾರಿಯೂ ಆಗಿದ್ದರು ಪುನೀತ್. ಉದ್ಯಮಶೀಲತೆ, ಎಫಿಷಿಯಂಟ್ ಲೈಂಟಿಂಗ್ ಪ್ರೋಗ್ರಾಂಗೂ ಪುನೀತ್ ರಾಯಭಾರಿ ಆಗಿದ್ದರು. ಸಬ್ಸಿಡಿ ದರದಲ್ಲಿ ಎಲ್ಇಡಿ ಬಲ್ಬ್ ವಿತರಣೆ ಯೋಜನೆ ಹೊರತಂದಾಗ ಅದಕ್ಕೆ ಜಾಹೀರಾತು ನೀಡಿದ್ದು ಪುನೀತ್ ರಾಜ್ಕುಮಾರ್. ಅವರೊಟ್ಟಿಗೆ ನಟಿ ರಮ್ಯಾ ಸಹ ಇದ್ದರು. ಆಗ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದರು.
ಬಿಎಂಟಿಸಿ ಬಸ್ ಆದ್ಯತಾ ಪಥ ಕಾರ್ಯಕ್ರಮಕ್ಕೂ ಪುನೀತ್ ರಾಜ್ಕುಮಾರ್ ಅಂಬಾಸಿಡರ್ ಆಗಿದ್ದರು. ಪುನೀತ್ ನಿಧನ ಹೊಂದಿದಾಗ ಬಿಎಂಟಿಸಿಯು ಅದೇ ಜಾಹೀರಾತನ್ನು ಟ್ವಿಟ್ಟರ್ನಲ್ಲಿ ಪ್ರಕಟಿಸಿ ಪುನೀತ್ ಅಗಲಿಕೆಗೆ ಸಂತಾಪ ಸೂಚಿಸಿತು. ಕಿಮ್ಮನೆ ರತ್ನಾಕರ್ ಶಿಕ್ಷಣ ಮಂತ್ರಿಗಳಾಗಿದ್ದಾಗ ಸಂಭಾವನೆ ಪಡೆಯದೆ ಆರ್ಟಿಇ ಕಾರ್ಯಕ್ರಮಕ್ಕೆ ಪ್ರಚಾರ ನೀಡಿದ್ದರು ಪುನೀತ್ ರಾಜ್ಕುಮಾರ್. ಪುನೀತ್ ಧನ್ಯವಾದ ಸಲ್ಲಿಸುತ್ತಾ, ''ನೀವು ರಾಜಕುಮಾರನೇ ಮಗನೇ ಹೆಸರಲ್ಲೇ ಅಲ್ಲ ಗುಣದಲ್ಲೂ'' ಎಂದಿದ್ದರಂತೆ ಕಿಮ್ಮನೆ. ಆಗ ನಗುತ್ತಾ, ''ಅಪ್ಪಾಜಿಯ ಆಶೀರ್ವಾದ'' ಎಂದಿದ್ದರಂತೆ. ಈ ವಿಷಯವನ್ನು ಕಿಮ್ಮನೆ ಕೆಲ ದಿನಗಳ ಹಿಂದೆ ನೆನಪಿಸಿಕೊಂಡಿದ್ದರು.
ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗದ ಜೊತೆ ಸೇರಿ ಮತದಾನ ಜಾಗೃತಿ ಅಭಿಯಾನ ಮಾಡುತ್ತಿದ್ದರು. ಸ್ವತಃ ಪ್ರತಿ ಬಾರಿಯು ಜವಾಬ್ದಾರಿಯುತ ನಾಗರೀಕನಂತೆ ಮತದಾನ ಮಾಡುತ್ತಿದ್ದರು ಅಪ್ಪು.


Click it and Unblock the Notifications