ಶುರುವಾಯ್ತು ಅರ್ಜುನ್ ಸರ್ಜಾ, ಲಕ್ಷ್ಮೀ ರೈ ರೊಮಾನ್ಸ್
ಕನ್ನಡದಲ್ಲಿ ಹೊಸದೊಂದು ವಿಶೇಷವಾದ ಚಿತ್ರ ಬರಲಿದೆ. ಅಂತಹ ವಿಶೇಷತೆಯೆಂದರೆ ಈ ಚಿತ್ರದಲ್ಲಿ, ಕನ್ನಡಿಗರೇ ಆಗಿದ್ದೂ ಪರಭಾಷೆ, ನೆರೆಭಾಷೆಗಳಲ್ಲಿ ಮಿಂಚುತ್ತಿರುವ ನಟ-ನಟಿಯರು ಹಾಗೂ ನಿರ್ದೇಶಕರು ಈ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಹೀಗೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಲಿರುವ ಈ ಚಿತ್ರವು ಎಲ್ಲಾ ಭಾಷೆಗಳ ಪ್ರೇಕ್ಷಕರಿಗೆ ಪರಿಚಿತವಾದ ತಾರಾಗಣವನ್ನು ಹೊಂದಿದೆ.
ತೆಲುಗಿನಲ್ಲಿ 'ಅರುಂಧತಿ' ಎಂಬ ಎವರ್ ಗ್ರೀನ್ ಚಿತ್ರ ಮಾಡಿ ಇದೀಗ ಕನ್ನಡದಲ್ಲಿ ದಿಗಂತ್-ರಮ್ಯಾರ ಚಿತ್ರ ನಿರ್ದೇಶಿಸುತ್ತಿರುವ ಕೋಡಿ ರಾಮಕೃಷ್ಟ, ಬರಲಿರುವ ಈ ಚಿತ್ರದ ನಿರ್ದೇಶಕರು. ನಾಯಕರಾಗಿ ಕನ್ನಡಿಗ ಅರ್ಜುನ್ ಸರ್ಜಾ ಹಾಗೂ ನಾಯಕಿಯಾಗಿ ಕನ್ನಡತಿ ಲಕ್ಷ್ಮೀ ರೈ ಅವರನ್ನು ಆಯ್ಕೆ ಮಾಡಿದ್ದಾರೆ ನಿರ್ದೇಶಕ ಕೋಡಿ ರಾಮಕೃಷ್ಣ. ಜೊತೆಗೆ ಎಲ್ಲಾ ಭಾಷಿಗರೂ ಬಲ್ಲ ಸೋನು ಸೂದ್ ಈ ಚಿತ್ರದಲ್ಲಿ ಖಳನಾಯಕರ ಪಾತ್ರ ಪೋಷಿಸಲಿದ್ದಾರೆ.
ಈಗಾಗಲೇ ಕೋಡಿ ನಿರ್ದೇಶನದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಇನ್ನೂ ಹೆಸರಿಡದ ರಮ್ಯಾ ಹಾಗೂ ದಿಗಂತ್ ಜೋಡಿಯ ಚಿತ್ರವು ಕನ್ನಡ ಮತ್ತು ತೆಲುಗು ಹೀಗೆ ಎರಡು ಬಾಷೆಗಳಲ್ಲಿ ಮಾತ್ರ ಬಿಡುಗಡೆ ಕಾಣುತ್ತಿದೆ. ಆದರೆ ನಂತರ ಬರಲಿರುವ ಆ ಚಿತ್ರವನ್ನು ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡಲು ಕೋಡಿ ನಿರ್ಧರಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರವನ್ನು ಸೌತ್ ಇಂಡಿಯಾ ತುಂಬ ತೋರಿಸಲಿರುವ ಪ್ರಯತ್ನ ಕೋಡಿಯವರದು.
ಈ ಆಫರ್ ಒಪ್ಪಿ ಮಾತನಾಡಿರುವ ನಟಿ ಲಕ್ಷ್ಮೀ ರೈ" ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಚಿತ್ರದಲ್ಲಿ ನಟಿಸುವ ಅವಕಾಶ ನನಗೆ ತುಂಬಾ ಖುಷಿ ನೀಡಿದೆ. 'ಅರುಂಧತಿ' ಎನ್ನುವ ಸ್ತ್ರೀ ಪ್ರಧಾನವಾದ ಸೂಪರ್ ಹಿಟ್ ತೆಲುಗು ಚಿತ್ರವನ್ನು ನೀಡಿರುವ ಇಂತಹ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಬಿಡುವುದುಂಟೇ?" ಎಂದಿದ್ದಾರೆ. ಸದ್ಯಕ್ಕೆ ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಕಲ್ಪನಾ' ಚಿತ್ರದಲ್ಲಿ ಬಿಜಿಯಾಗಿದ್ದಾರೆ ಲಕ್ಷ್ಮೀ ರೈ. (ಒನ್ ಇಂಡಿಯಾ ಕನ್ನಡ)


Click it and Unblock the Notifications











