ಮತ್ತೆ ಪ್ರಾರಂಭವಾಗಲಿದೆ 'ಕಾಫಿ ವಿತ್ ಕರಣ್' ರಶ್ಮಿಕಾ ಸೇರಿ ಹಲವು ಅತಿಥಿಗಳು
ಬಾಲಿವುಡ್ನ ಜನಪ್ರಿಯ ಹಾಗೂ ವಿವಾದಾತ್ಮಕ ಟಾಕ್ ಶೋ 'ಕಾಫಿ ವಿತ್ ಕರಣ್' ಮತ್ತೆ ಶುರುವಾಗುತ್ತಿದೆ. ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಈ ಶೋ ಅನ್ನು ದೀರ್ಘ ಸಮಯದ ಕಾಲ ನಿಲ್ಲಿಸಲಾಗಿತ್ತು.
ಹಾಸ್ಯ, ತಮಾಷೆಗಳ ಜೊತೆಗೆ ವಿವಾದಗಳಿಗೂ ಹೆಸರುವಾಸಿಯಾಗಿರುವ ಈ ಶೋ ಬಗ್ಗೆ ಪ್ರೇಕ್ಷಕರಲ್ಲಿ ಮಿಶ್ರ ಭಾವವಿತ್ತು. ಈ ಶೋ ಮುಂದಿನ ತಿಂಗಳು ಪ್ರಾರಂಭವಾಗಲಿದ್ದು, ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ಗಳು ಶೋನಲ್ಲಿ ಭಾಗವಹಿಸಲಿದ್ದಾರೆ.
ಈವರೆಗೆ ಕಾಫಿ ವಿತ್ ಕರಣ್ನ ಆರು ಸೀಸನ್ಗಳು ಪ್ರಸಾರವಾಗಿವೆ. ಇದೀಗ ಏಳನೇ ಸೀಸನ್ ಪ್ರಸಾರವಾಗಲಿದೆ. 2020ರಲ್ಲಿ ಈ ಶೋ ಅನ್ನು ಇನ್ನು ಮುಂದೆ ನಿಲ್ಲಿಸಲಾಗುತ್ತದೆ ಎನ್ನಲಾಗಿತ್ತು. ಆದರೆ ಈಗ ಮತ್ತೆ ಹೊಸ ಸೀಸನ್ ಪ್ರಾರಂಭವಾಗುತ್ತಿದೆ.

ಕಾಫಿ ವಿತ್ ಕರಣ್ಗೆ ಈ ಬಾರಿ ಹಲವು ಭಿನ್ನ ಭಿನ್ನ ಅತಿಥಿಗಳು ಆಗಮಿಸಲಿದ್ದಾರೆ. ಬಾಲಿವುಡ್ಗೆ ಹೊಸದಾಗಿ ಪಾದಾರ್ಪಣೆ ಮಾಡಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಈ ಬಾರಿಯ ಅತಿಥಿಗಳಲ್ಲಿ ಪ್ರಮುಖವಾದವರು. ಜೊತೆಗೆ ಹೊಸ ಜೋಡಿಗಳಾದ ಆಲಿಯಾ ಭಟ್-ರಣ್ಬೀರ್ ಕಪೂರ್ ಹಾಗೂ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್, ಸಿದ್ಧಾರ್ಥ್ ಹಾಗೂ ಕಿಯಾರಾ ಸಹ ಆಗಮಿಸಲಿದ್ದಾರೆ. ಇವರನ್ನು ಹೊರತುಪಡಿಸಿ ಇನ್ನೂ ಹಲವು ಮಂದಿ ಶೋಗೆ ಆಗಮಿಸಲಿದ್ದಾರೆ.
ಕಾಫಿ ವಿತ್ ಕರಣ್ ಸಾಕಷ್ಟು ವಿವಾದಗಳಿಗೆ ಸಹ ಕಾರಣವಾಗಿದೆ. ನಿರೂಪಣೆ ಮಾಡುವ ಕರಣ್ ಜೋಹರ್ ಹಲವು ಬಾರಿ ಸೆಲೆಬ್ರಿಟಿಗಳಿಗೆ ತೀರ ಖಾಸಗಿ ಪ್ರಶ್ನೆಗಳನ್ನು ಸಹ ಕೇಳುತ್ತಾರೆ. ಕಳೆದ ಸೀಸನ್ನಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಹಾಗೂ ಕರ್ನಾಟಕದ ಕೆಎಲ್ ರಾಹುಲ್ ಅತಿಥಿಗಳಾಗಿ ಭಾಗವಹಿಸಿದ್ದರು. ಆ ಶೋನಲ್ಲಿ ಹಾರ್ದಿಕ್ ಪಾಂಡ್ಯಾ ಆಡಿದ್ದ ಮಾತುಗಳು ತೀವ್ರ ವಿವಾದ ಎಬ್ಬಿಸಿದ್ದವು. ಹಾರ್ದಿಕ್ ಅನ್ನು ಕೆಲ ಪಂದ್ಯಗಳಿಗೆ ಕೈ ಬಿಡಲಾಯ್ತು ಸಹ. ಆ ಬಳಿಕ ಕಾಫಿ ವಿತ್ ಕರಣ್ ಶೋ ಅನ್ನು ಬಂದ್ ಮಾಡಲಾಗಿತ್ತು.


Click it and Unblock the Notifications











