"ರಜನಿ 'ಜೈಲರ್' ರಿಲೀಸ್ನಿಂದ 'ನಮೋ ಭೂತಾತ್ಮ-2' ತೊಂದರೆ ಇಲ್ಲ": ದಾವಣಗೆರೆಯಲ್ಲಿ ಕೋಮಲ್ ಸ್ಪಷ್ಟನೆ
ದಾವಣಗೆರೆ: ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ ಜೈಲರ್ ಸಿನಿಮಾ ಆಗಸ್ಟ್ 10ರಂದು ದೇಶಾದ್ಯಂತ ತೆರೆ ಕಾಣುತ್ತಿದೆ. ಕರ್ನಾಟಕದಲ್ಲಿಯೂ ಸಾವಿರಾರು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ನಟ ಕೋಮಲ್ ಕುಮಾರ್ ನಟನೆಯ ನಮೋ ಭೂತಾತ್ಮ -2 ಸಿನಿಮಾವು ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದೆ. 109 ಸಿನಿಮಾ ಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಜೈಲರ್ ಸಿನಿಮಾ ತೆರೆಗೆ ಬರುತ್ತಿದ್ದರೂ ನಮ್ಮ ಚಿತ್ರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಕೋಮಲ್ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಜಿನಿಕಾಂತ್ ಸಿನಿಮಾ ಅಂದರೆ ಅದು ದೊಡ್ಡ ಮಟ್ಟದ ಸಿನಿಮಾ. ದೇಶಾದ್ಯಂತ ತೆರೆ ಕಾಣುವಾಗ ಥಿಯೇಟರ್ ಸಮಸ್ಯೆ ಎದುರಾಗುವುದು ಸಹಜ. ಅದೇ ರೀತಿಯಲ್ಲಿಯೂ ಪ್ರದರ್ಶನ ಕಡಿತಗೊಳಿಸಲಾಗುತ್ತದೆ. ಆದ್ರೆ, ನಮ್ಮ ಚಿತ್ರಕ್ಕೆ ಈ ಭಯ ಇಲ್ಲ ಎಂದು ತಿಳಿಸಿದರು.

ಈಗಾಗಲೇ ನಮೋ ಭೂತಾತ್ಮ-2 ಚಿತ್ರವು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಹಾರರ್ ಹಾಗೂ ಕಾಮಿಡಿ ಇರುವುದರಿಂದ ಜನರಿಗೆ ಇಷ್ಟವಾಗಿದೆ. ಜನರು ಥಿಯೇಟರ್ ನತ್ತ ಬರುತ್ತಿದ್ದಾರೆ. ಪ್ರದರ್ಶನವೂ ಉತ್ತಮವಾಗಿ ಸಾಗುತ್ತಿದೆ. ಸಾಮಾಜಿಕ ಜಾಲತಾಣ ಈಗ ಫಾಸ್ಟ್ ಇದ್ದು, ಜನರಿಗೆ ಮುಟ್ಟಿದೆ. ಕುಟುಂಬ ಸಮೇತರಾಗಿ ಸಿನಿಮಾ ಮಂದಿರಕ್ಕೆ ಪ್ರೇಕ್ಷಕರು ಬರುತ್ತಿದ್ದಾರೆ. ಜನರು ಹೆಚ್ಚಾಗಿ ಬರುತ್ತಿರುವ ಕಾರಣ ಕಲೆಕ್ಷನ್ ಸಹ ಚೆನ್ನಾಗಿಯೇ ಇದೆ. ಸಿನಿಮಾ ಮಂದಿರಗಳಲ್ಲಿ ಚಿತ್ರ ತೆಗೆಯುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಸಿನಿಮಾಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಮೆಚ್ಚಿಕೊಂಡಿದ್ದಾರೆ. ಎಲ್ಲಾ ಕಡೆಗಳಲ್ಲಿಯೂ ಚಿತ್ರದ ಪ್ರಮೋಷನ್ ಗೆ ಹೋಗುತ್ತಿದ್ದೇನೆ. ಅದೇ ರೀತಿಯಲ್ಲಿ ಜನರು ತೋರುತ್ತಿರುವ ಪ್ರೀತಿ, ವಿಶ್ವಾಸ, ಸ್ಪಂದನೆ ಸಹ ಖುಷಿ ತಂದಿದೆ ಎಂದು ಹೇಳಿದರು.
ಕೋಮಲ್ ಹೇಳಿದ ಕೇತುದೆಸೆ...?
ಇತ್ತೀಚಿನ ಕೆಲ ವರ್ಷಗಳಲ್ಲಿ ಕೋಮಲ್ ಕುಮಾರ್ ಅವರು ಜ್ಯೋತಿಷ್ಯ ಶಾಸ್ತ್ರ ನಂಬುತ್ತಿದ್ದಾರೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಅಣ್ಣ ಜಗ್ಗೇಶ್ ಪ್ರತಿ ಹಂತದಲ್ಲಿಯೂ ನನ್ನನ್ನು ಬೆಂಬಲಿಸಿದ್ದಾರೆ, ಬೆಂಬಲಿಸುತ್ತಾ ಬಂದಿದ್ದಾರೆ. ಚಿತ್ರರಂಗ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಸಹಕಾರ ಕೊಡುತ್ತಿದ್ದಾರೆ. ಅಣ್ಣನ ಮಾತಿನಂತೆ ನಡೆಯುತ್ತಿದ್ದೇನೆ. ಏಳು ವರ್ಷಗಳ ಕಾಲ ಕೇತು ದೆಸೆ ಇಲ್ಲ. ಆನಂತರ ಶುಕ್ರದೆಸೆ ಬರುತ್ತದೆ ಎಂದು ಹೇಳಿದ್ದರು. ಹಾಗಾಗಿ, ಏಳು ವರ್ಷಗಳ ಕಾಲ ಯಾವ ಸಿನಿಮಾದ ಆಫರ್ ಬಂದರೂ ತಿರಸ್ಕರಿಸಿದ್ದೆ ಎಂದು ತಿಳಿಸಿದರು.

ಭೈರವನಿಗೆ ಪೂಜೆ:
ಭೈರವ ದೇವರು ನಮ್ಮ ಮನೆ ದೇವರು. 450 ವರ್ಷಗಳ ಪುರಾತನ ಕಾಲಭೈರವೇಶ್ವರ ದೇವರ ಪೂಜೆ ನೆರವೇರಿಸುತ್ತಿದೆ. ಈಗಲೂ ನೆರವೇರಿಸುತ್ತಿದ್ದೇನೆ. ಮುಂದೆಯೂ ದೇವಸ್ಥಾನದಲ್ಲಿ ಪೂಜೆ ಮಾಡುವುದನ್ನು ಮುಂದುವರಿಸುತ್ತೇನೆ. ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನಾಲ್ಕೂವರೆ ವರ್ಷಗಳಿಂದಲೂ ಪೂಜೆ ಸಲ್ಲಿಸಿಕೊಂಡು ಬಂದಿದ್ದೇನೆ ಎಂದು ತಿಳಿಸಿದರು.
"ಗೋವಿಂದಾಯ ನಮಃ ಚಿತ್ರ ಯಶಸ್ವಿಯಾಗಿತ್ತು. ಅದರಲ್ಲಿಯೂ ಪ್ಯಾರ್ಗೆ ಆಗ್ಬುಟೈತೆ ಆಡು ಸಿಕ್ಕಾಪಟ್ಟೆ ಫೇಮಸ್ ಆಗಿದ್ದು. ಈ ಹಾಡಿಗೆ ಕೊರಿಯೋಗ್ರಾಫಿ ಮಾಡಿದ್ದವರು ಈ ಚಿತ್ರದ ನಿರ್ದೇಶಕ. ಮುರುಳಿ ಹೊಸಬರಾದರೂ ಯಾವ ನಟರನ್ನು ಯಾವ ರೀತಿ ಕುಣಿಸಬೇಕು ಎಂಬುದು ಗೊತ್ತು. ನನ್ನಂತ ನೃತ್ಯ ಬಾರದವರಿಂದಲೂ ಚೆನ್ನಾಗಿಯೇ ಡ್ಯಾನ್ಸ್ ಮಾಡಿಸುತ್ತಾರೆ. ಅಷ್ಟು ಕಲೆ ಅವರಲ್ಲಿ ಅಡಗಿದೆ. ಚಿತ್ರದ ಕಥೆ ಕೇಳುತ್ತಿದ್ದಂತೆ ಥ್ರಿಲ್ ಆದೆ. ಒಂದು ಲೈನ್ ಕಥೆ ಹೇಳಿದ್ದರು. ಅದು ಇಷ್ಟವಾಗಿತ್ತು" ಎಂದು ಕೋಮಲ್ ಹೇಳಿದ್ದಾರೆ.
ರಾತ್ರಿ ಶೂಟಿಂಗ್ಗೆ ಹೋಗಲ್ಲ
ನಾನು ರಾತ್ರಿ ವೇಳೆ ಶೂಟಿಂಗ್ನಲ್ಲಿ ಪಾಲ್ಗೊಳ್ಳುವುದಿಲ್ಲ, ಯಾಕೆಂದರೆ ನನ್ನ ಕಣ್ಣು ಕೆಂಪಾಗುತ್ತೆ, ಕಣ್ಣು ಗುಡ್ಡೆ ಮೇಲೆ ಬಂದ ರೀತಿ ತೋರುತ್ತದೆ. ನೋಡಿದವರು ಮದ್ಯಪಾನ ಮಾಡಿದ್ದೇನೆ ಎಂದುಕೊಳ್ಳುವಂತೆ ಭಾಸವಾಗುತ್ತದೆ. ಹಾಗಾಗಿ, ರಾತ್ರಿ ಶೂಟಿಂಗ್ನಲ್ಲಿ ಪಾಲ್ಗೊಳ್ಳುವುದಿಲ್ಲ. ನನ್ನ ಚಿತ್ರವಾದರೂ ಅಷ್ಟೇ. ಆದ್ರೆ, ಮುರುಳಿ ಅವರ ತಂಡ ತುಂಬಾನೇ ಕಷ್ಟಪಡ್ತು. ಕಥೆ ಹೇಳಲು ಬಂದಾಗ ಸಿನಿಮಾ ನಿರ್ಮಾಣ ಮಾಡಲು ಕೇಳುತ್ತಾರೆ ಎಂದುಕೊಂಡೆ. ಆದ್ರೆ, ಅವ್ರು ಡೇಟ್ಸ್ ಮಾತ್ರ ಕೇಳಿದ್ದರು ಖುಷಿಯಾಯ್ತು. ಹಾಗಾಗಿ ನಟಿಸಿದೆ. ಈ ಸಿನಿಮಾದಲ್ಲಿ ರಾತ್ರಿಯೂ ನಟಿಸಿದ್ದೇನೆ ಎಂದು ಹೇಳಿದರು.
ಹೊಸ ನಿರ್ದೇಶಕರ ಫೈರ್
"ಹೊಸ ನಿರ್ದೇಶಕರ ಕೈಯಲ್ಲಿ ಕೆಲಸ ಮಾಡಲು ಸಂತೋಷವಾಗುತ್ತದೆ. ಅವರಲ್ಲಿ ಫೈರ್ ಹೆಚ್ಚಿರುತ್ತದೆ. ಸುಮಾರು ನೂರು ಸಿನಿಮಾಗಳಲ್ಲಿ ನಟಿಸಿದ್ದೇನೆ. 47 ಸಿನಿಮಾಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದೇನೆ. 'ನಮೋ ಭೂತಾತ್ಮ-1' ಸಿನಿಮಾ ಯಶಸ್ಸು ಕಂಡಿತ್ತು. 'ನಮೋ ಭೂತಾತ್ಮ-2'ಗೂ ಸಹ ಅಷ್ಟೇ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಾವಣಗೆರೆಯ ತ್ರಿಶೂಲ್ ಥಿಯೇಟರ್ನಲ್ಲಿ 'ಗೋವಿಂದಾಯ ನಮಃ' ಸಿನಿಮಾ ನೂರು ದಿನಗಳ ಕಾಲ ಪ್ರದರ್ಶನ ಕಂಡಿತ್ತು. 13 ವರ್ಷಗಳ ಬಳಿಕ ದಾವಣಗೆರೆಗೆ ಸಿನಿಮಾ ಪ್ರಮೋಷನ್ಗೆ ಬಂದಿದ್ದೇನೆ" ಎಂದು ಹೇಳಿದರು.
"ಭೂತ ಅಂದ್ರೆ ಪಾಸಿಟಿವ್, ನೆಗೆಟಿವ್ ಇದ್ದೇ ಇರುತ್ತೆ. ನಾವು ಯಾವ ರೀತಿ ಸ್ವೀಕರಿಸುತ್ತೇವೆಯೋ ಹಾಗೆ ನಮಗೆ ಭಾಸವಾಗುತ್ತೆ. ಯಾರನ್ನೋ ಮೆಚ್ಚಿಸಲು ವಿಭೂತಿ, ಕುಂಕುಮ ಧರಿಸಿಲ್ಲ. ಶ್ರದ್ಧಾ, ಭಕ್ತಿಯಿಂದ ಧರಿಸುತ್ತೇನೆ" ಎಂದು ಕೋಮಲ್ ಕುಮಾರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಡೈರೆಕ್ಟರ್ ಮುರುಳಿ ಹೇಳಿದ್ದೇನು?
ಇನ್ನು ಚಿತ್ರದ ನಿರ್ದೇಶಕ ಮುರುಳಿ ಅವರು ಮಾತನಾಡಿ, ಕೋಮಲ್ ಸರ್ ರಾತ್ರಿ ವೇಳೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಅವರ ಪ್ರೊಡಕ್ಷನ್ ಸಿನಿಮಾ ಇದ್ದಾಗಲೂ ರಾತ್ರಿ 8.30ಕ್ಕೆ ಶೂಟಿಂಗ್ ಮುಗಿಸುತ್ತಿದ್ದರು. ಆದ್ರೆ, ನಮ್ಮ ಚಿತ್ರಕ್ಕೆ ರಾತ್ರಿ ಹಾಗೂ ಬೆಳಿಗ್ಗೆ 2 ಗಂಟೆಯವರೆಗೆ ಶೂಟಿಂಗ್ಗೆ ಬಂದಿದ್ದಾರೆ. ಈ ಮೂಲಕ ಹೊಸಬರಿಗೆ ಸಹಕಾರ ನೀಡುವ ಜೊತೆಗೆ ಅವರ ಜೊತೆ ಕೆಲಸ ಮಾಡಿದ್ದು ತೃಪ್ತಿ ತಂದಿದೆ ಎಂದು ಚಿತ್ರದ ನಿರ್ದೇಶಕ ಮುರುಳಿ ತಿಳಿಸಿದರು.
ದಾವಣಗೆರೆಯಲ್ಲಿ ಪ್ರಮೋಷನ್
'ನಮೋ ಭೂತಾತ್ಮ' ಚಿತ್ರವು 9 ವರ್ಷಗಳ ಹಿಂದೆ ತೆರೆಕಂಡು ಹಿಟ್ ಆಗಿತ್ತು. ಈಗ 'ನಮೋ ಭೂತಾತ್ಮ-2' ಶುಕ್ರವಾರ ಬಿಡುಗಡೆಗೊಂಡು ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದಕ್ಕಾಗಿ ತಂಡವು ಖುದ್ದು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದೆ. ಪ್ರಥಮ ಹಂತವಾಗಿ ದಾವಣಗೆರೆಯ ತ್ರಿಶೂಲ್ ಚಿತ್ರಮಂದಿರಕ್ಕೆ ಹೋದ ಸಂದರ್ಭದಲ್ಲಿ ಕೋಮಲ್ಕುಮಾರ್ ಅಭಿಮಾನಿಗಳು, ಪ್ರೇಕ್ಷಕರು ಜೈಕಾರ ಹಾಕಿ ಸ್ವಾಗತಿಸಿದ್ದಾರೆ.
ಎಲ್ಲಾ ಯಶಸ್ಸಿನ ಸ್ಟೋರಿಗಳ ಹಿಂದೆ ಭಯಾನಕ ಕಥೆ ಅಲ್ಲದೇ ಹಾಸ್ಯ ಉತ್ತಮವಾಗಿ ಸಾಥ್ ನೀಡುತ್ತದೆ ಎನ್ನುವುದಕ್ಕೆ ಇಂತಹ ಚಿತ್ರಗಳೆ ಸಾಕ್ಷಿಯಾಗಿದೆ. ಬಹುತೇಕ ಶೂಟಿಂಗ್ ರಾತ್ರಿ ವೇಳೆ ನಡೆಸಲಾಗಿದೆ. ಎಲ್ಲಾ ವರ್ಗದವರು ನೋಡಬಹುದಾದ ಸಿನಿಮಾ. ನಿಮ್ಮ ಸಹಕಾರದಿಂದ ಸಿನಿಮಾವೂ ಗೆದ್ದಿದೆ. ಹೊಸ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಾರಂಭದಲ್ಲಿ 104 ಕೆಜಿ ತೂಕ ಇದ್ದು, ವಿರಾಮಾದ ತರುವಾಯ 77 ಕೆಜಿಗೆ ಬದಲಾದೆ. ಇದರಿಂದ ಒಂದಷ್ಟು ಜನರು ಹಳೇ ಕೋಮಲ್ ಎಲ್ಲಿ ಅಂತ ಕೇಳುತ್ತಿದ್ದರು.
ಎಂ.ಎಸ್.ಗೋಲ್ಡನ್ ಪಿಕ್ಚರ್ಸ್ ಮೂಲಕ ನಿರ್ದೇಶಕರ ಅಕ್ಕನ ಮಗ ಸಂತೋಷ್ ಶೇಖರ್ ಹಾಗೂ ಮುರಳಿ ಜಂಟಿಯಾಗಿ ನಿರ್ಮಿಸಿದ್ದಾರೆ. ತಾರಾಗಣದಲ್ಲಿ ಲೇಖಾಚಂದ್ರ, ಮೋನಿಕಾ, ಜಿ.ಜಿ.ರುದ್ರೇಶ್, ಮಾಂತೇಶ್, ವರುಣ್ ಮುಂತಾದವರು ನಟಿಸಿದ್ದಾರೆ.


Click it and Unblock the Notifications











