ಸಾವಿನ ಮನೆ ಬಾಗಿಲು ತಟ್ಟಿ ವಾಪಸ್ಸಾದ ಕೋಮಲ್: ರಾಯರ ಪವಾಡ ಎಂದ ಜಗ್ಗೇಶ್
ಹಿರಿಯ ನಟ ಜಗ್ಗೇಶ್ ಅವರ ಸಹೋದರ ಸ್ವತಃ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟ ಕೋಮಲ್ ಅವರು ಕೊರೊನಾ ಸೋಂಕಿತರಾಗಿ ತೀವ್ರ ಅನಾರೋಗ್ಯ ಅನುಭವಿಸಿದ್ದರು. ಆದರೆ ಈಗ ಹುಷಾರಾಗಿದ್ದಾರೆ. ಅವರ ಅನಾರೋಗ್ಯದ ವಿಚಾರವನ್ನು ಬಹಿರಂಗಗೊಳಿಸದಿದ್ದ ಜಗ್ಗೇಶ್ ಇಂದು ಕೋಮಲ್ ಆರೋಗ್ಯ ಸುಧಾರಿಸಿದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Recommended Video
ಕೋಮಲ್ ಅವರು ಮುಖಕ್ಕೆ ಆಮ್ಲಜನಕದ ನಳಿಕೆ ಹಾಕಿಕೊಂಡು ಆತಂಕದಿಂದ ನೋಡುತ್ತಿರುವ ಚಿತ್ರ ಹಂಚಿಕೊಂಡಿರುವ ಜಗ್ಗೇಶ್, 'ಈ ವಿಷಯವನ್ನು ಯಾರಿಗೂ ಹೇಳದೆ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ಆ ರಾಯರಿಗೆ ಮಾತ್ರ ಗೊತ್ತು' ಎಂದಿದ್ದಾರೆ.
ಕೋಮಲ್ ಪರಿಸ್ಥಿತಿ ಬಗ್ಗೆ ಅವರಿಗೆ ಕೊರೊನಾ ಆಗಲು ಕಾರಣವಾದ ಅಂಶದ ಬಗ್ಗೆ ವಾಸಿಯಾದದ್ದು ಹೇಗೆ ಇತರ ವಿಷಯಗಳ ಬಗ್ಗೆ ಭಾವುಕವಾಗಿ ಸರಣಿ ಟ್ವೀಟ್ ಮಾಡಿದ್ದಾರೆ ಜಗ್ಗೇಶ್.

ರಾಯರಲ್ಲಿ ಬೇಡಿಕೊಂಡಿದ್ದು ಇಷ್ಟೆ: ಜಗ್ಗೇಶ್
''ನಾನು ಇಷ್ಟುದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ ಮಾತ್ರ ಗೊತ್ತು. ಭಕ್ತನ ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ. ಅದು ಒಂದೆ, ರಾಯರೆ ನಾನು ಕಾಯ-ವಾಚ-ಮನ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ, ಪಕ್ಷಿ, ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ, ಯಾರಿಗೂ ಕೇಡುಬಯಸದೆ ಮೋಸ ವಂಚನೆ ಅನ್ಯಾಯ ಮಾರ್ಗದಲ್ಲಿ ನಡೆಯದೆ ನೊಂದವರಿಗೆ, ನಂಬಿದವರಿಗು ಭುಜಕೊಟ್ಟು ಬದುಕಿದ್ದರೆ, ನನ್ನ ತಂದೆತಾಯಿಯನ್ನು ನೋಯಿಸದೆ ಉತ್ತಮ ಮಗನಂತೆ ಸಂತೈಸಿದ್ದರೆ,
ಅನ್ನಕೊಟ್ಟ ಶಾರದೆಯ ಸೇವೆ ನಿಷ್ಟೆಯಿಂದ ಮಾಡಿದ್ದರೆ, ಕಾಯಕಮಾಡುವ ಎಲ್ಲ ಕ್ಷೇತ್ರದಲ್ಲು ಪ್ರಾಮಾಣಿಕನಾಗಿದ್ದರೆ, ರಾಯರು ನನ್ನ ಹೃದಯಲ್ಲಿದ್ದರೆ''

ನನ್ನ ತಮ್ಮನನ್ನು ಉಳಿಸಿಕೊಡಿ ಎಂದು ಕೇಳಿಕೊಂಡಿದ್ದೆ: ಜಗ್ಗೇಶ್
''ಸಾವಿನ ಮನೆ ಕದತಟ್ಟುತ್ತಿರುವ ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಎಂದು. ರಾಯರು ನನ್ನ ಬೇಡಿಕೆಗೆ ಬೃಂದಾವನದಿಂದ ಎದ್ದು ಬಂದು ತಮ್ಮನ ಪಕ್ಕನಿಂತು ಅವನ ಉಳಿಸಿಬಿಟ್ಟರು. komal is safe, ಕೋಮಲ್ ಈಗ ಆರೋಗ್ಯವಾಗಿದ್ದಾನೆ'' ಎಂದಿದ್ದಾರೆ ನಟ ಜಗ್ಗೇಶ್.

'ಲಂಚಬಾಕ ಅಧಿಕಾರಿಗಳಿಂದ ಅಲೆದು-ಅಲೆದು ಕೊರೊನಾ ತರಿಸಿಕೊಂಡ'
''ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು ಸ್ವಂತ ವ್ಯೆವಹಾರ ಬೆಂಗಳೂರಿನ ಕಾರ್ಪೊರೇಷನ್ ನಲ್ಲಿ ಶುರುಮಾಡಿ ಯಶಸ್ವಿಯಾದ. ಆದರೆ ಇತ್ತೀಚೆಗೆ ತನಗೆ ಬರಬೇಕಾದ ಬಾಕಿ ಬಿಲ್ ಅನ್ನು ಪಡೆಯಲು ಕೆಲ ಲಂಚ ಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು. ಬಿಲ್ ಅನ್ನು ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೋನ ಮಾರಿ ಮೈಸೇರಿ ತುಂಬ ಗಂಭೀರ ಸ್ಥಿತಿ ತಲುಪಿಬಿಟ್ಟಿದ್ದ.

ಕೋಮಲ್ಗೆ ಸಹಾಯ ಮಾಡಿದ ವೈದ್ಯರು, ನರ್ಸ್ಗಳ ಪಾದಕ್ಕೆ ನಮನ: ಜಗ್ಗೇಶ್
''ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ. ಅವನಿಗೆ ಸಹಾಯಮಾಡಿದ ಡಾ.ಮಧುಮತಿ, ನಾದನಿ ಡಾ ಲಲಿತ, ನರ್ಸಗಳ ಪಾದಕ್ಕೆ ನನ್ನ ನಮನ, ರಾಯರಿಗೆ ಶರಣು'' ಎಂದಿದ್ದಾರೆ ನಟ ಜಗ್ಗೇಶ್. ಕೋಮಲ್ ಅವರ ಬಾಯಿಗೆ ಆಮ್ಲಜನಕದ ಮಾಸ್ಕ್ ಹಾಕಿರುವ ಚಿತ್ರವನ್ನೂ ಹಂಚಿಕೊಂಡಿದ್ದಾರೆ.


Click it and Unblock the Notifications











