Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೋಟಿಗೊಬ್ಬ 3' ಪೈರಸಿ ಕಾಟ: ಗೃಹ ಸಚಿವರಿಗೆ ದೂರು ನೀಡಿದ ನಿರ್ಮಾಪಕ
ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಅಕ್ಟೋಬರ್ 14 ರಂದು ಚಿತ್ರಮಂದರಿಗಳಲ್ಲಿ ಬಿಡುಗಡೆ ಆಗುವುದು ಖಾತ್ರಿಯಾಗಿದೆ. ಆದರೆ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಪೈರಸಿ ಕಾಟ ಆರಂಭವಾಗಿದೆ.
ಟೆಲಿಗ್ರಾಂ ಅಪ್ಲಿಕೇಶನ್ನಲ್ಲಿ 'ಕೋಟಿಗೊಬ್ಬ 3' ಹೆಸರಿನ ಚಾನೆಲ್ಗಳು ಹುಟ್ಟಿಕೊಂಡಿದ್ದು ಸಿನಿಮಾವನ್ನು ಪೈರಸಿ ಮಾಡಿ ಇದರಲ್ಲಿ ಪ್ರಕಟಿಸಲು ಈ ರೀತಿ ಚಾನೆಲ್ಗಳನ್ನು ಮಾಡಲಾಗಿದೆ ಎಂದು ಚಿತ್ರತಂಡ ಆರೋಪಿಸಿದೆ.
ತಮ್ಮ ಸಿನಿಮಾ ಪೈರಸಿ ಆಗುವುದನ್ನು ತಡೆಗಟ್ಟಬೇಕು ಎಂದು 'ಕೋಟಿಗೊಬ್ಬ 3' ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ಇಂದು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರನ್ನು ಭೇಟಿ ನೀಡಿ ದೂರು ನೀಡಿದ್ದಾರೆ. ದೂರಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಿರ್ಮಾಪಕ ಸೂರಪ್ಪ ಬಾಬು, ''ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪೈರಸಿಯ ಚಾನೆಲ್ಗಳನ್ನು ತೆರೆದಿದ್ದಾರೆ. ನಾವು ಕಳೆದ ಒಂದು ವಾರದಿಂದ ಇವುಗಳನ್ನೆಲ್ಲ ಪತ್ತೆ ಹಚ್ಚುತ್ತಿದ್ದೇವೆ. ಆದರೆ ನಮಗೆ ಅವರ ಮೊಬೈಲ್ ಸಂಖ್ಯೆಗಳು ಸಿಗುತ್ತಿಲ್ಲ. ಹಾಗಾಗಿ ನಾವೆಲ್ಲ ನಿಶ್ಚಯಿಸಿ ಗೃಹ ಸಚಿವರ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ದೂರು ನೀಡಿದ್ದೇವೆ. ಬೆಂಗಳೂರು ಪೊಲೀಸ್ ಆಯುಕ್ತರನ್ನು ಹಾಗೂ ಸೈಬರ್ ವಿಭಾಗದ ಆಯುಕ್ತರನ್ನು ಭೇಟಿಯಾಗಿ ದೂರು ನೀಡಲಿದ್ದೇವೆ'' ಎಂದರು.
''ಸಿನಿಮಾ ಉಳಿಸಿಕೊಳ್ಳಲು ಏನು ಮಾಡಬೇಕೊ ಅದನ್ನೆಲ್ಲ ಮಾಡ್ತೀನಿ''
''ನಿರ್ಮಾಪಕನಾಗಿ ನಮ್ಮ ಸಿನಿಮಾವನ್ನು ಉಳಿಸಿಕೊಳ್ಳಲು ಏನು ಪ್ರಯತ್ನ ಮಾಡಬೇಕೊ ಅದನ್ನೆಲ್ಲ ಮಾಡುತ್ತಿದ್ದೇನೆ. ನನ್ನ ಸಿನಿಮಾವನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ, ಮಿತಿ ಮೀರಿದಾಗಷ್ಟೆ ನಮ್ಮ ನಾಯಕ ನಟರನ್ನು ನಾವು ಕರೆಯಬೇಕಾಗುತ್ತದೆ. ಈ ಸಣ್ಣ ವಿಷಯಗಳಿಗೆಲ್ಲ ಸುದೀಪ್ ಅವರನ್ನು ಕರೆಯಲು ಆಗುವುದಿಲ್ಲ. ಅವರು ಬರುತ್ತಾರೆಂದರೆ ಜನ ಸೇರಿ ಸಮಸ್ಯೆ ಆಗುತ್ತೆ, ಕೋವಿಡ್ ನಿಯಮವನ್ನೂ ಪಾಲಿಸಬೇಕಿದೆ. ನಿರ್ಮಾಪಕನಾಗಿ ನಾನೇ ಮುಂಚೂಣಿಯಲ್ಲಿ ನಿಂತು ಎಲ್ಲೆಡೆ ಓಡಾಡುತ್ತಿದ್ದೇನೆ'' ಎಂದಿದ್ದಾರೆ ಸೂರಪ್ಪ ಬಾಬು.
ಒಬ್ಬನು ಸಿಕ್ಕಿದರೂ ಇಡೀ ತಂಡವನ್ನು ಹಿಡಿಯುತ್ತೀವಿ: ಸೂರಪ್ಪ
''ನಮ್ಮ ಸಿನಿಮಾಕ್ಕೆ ಮಾತ್ರವಲ್ಲ, ಪೈರಸಿ ಎಂಬುದು ಇಡೀಯ ಚಿತ್ರರಂಗಕ್ಕೆ ಮಾರಕ. ನಮ್ಮನ್ನು ಕುಗ್ಗಿಸಲು ಹೀಗೆ ಮಾಡುತ್ತಿದ್ದಾರೆಯೇ? ಇದರಿಂದ ಅವರಿಗೆ ಏನಾದರೂ ಲಾಭವಿದೆಯೇ ಗೊತ್ತಾಗಬೇಕಿದೆ. 50-60 ಮಂದಿ ಪೈರಸಿ ಮಾಡುವ ಯತ್ನ ಮಾಡುತ್ತಿದ್ದಾರೆ. ಅವರಲ್ಲಿ ನಮಗೆ ಒಬ್ಬರು ಸಿಕ್ಕಲಿ ಸಾಕು ಇಡೀಯ ತಂಡವನ್ನು ನಾವು ಹಿಡಿದು ಪೊಲೀಸರ ಮುಂದೆ ಕರೆದುಕೊಂಡು ಬರುತ್ತೀವಿ. ನಾವು ಈ ಬಗ್ಗೆ ಬಹಳ ಗಂಭೀರವಾಗಿದ್ದೇವೆ'' ಎಂದಿದ್ದಾರೆ ಸೂರಪ್ಪ ಬಾಬು.
ಚಿತ್ರರಂಗ ಬಹಳ ಕಷ್ಟಪಟ್ಟಿದೆ: ಸೂರಪ್ಪ ಬಾಬು
''ಕಳೆದ ಹದಿನೆಂಟು ತಿಂಗಳಿಂದ ಚಿತ್ರರಂಗ ಬಹಳ ಕಷ್ಟಪಟ್ಟಿದೆ. ಕೊರೊನಾ ಪರಿಣಾಮ ಸಾಲ ಕಟ್ಟಲಾಗದೆ ಕಷ್ಟ ಪಟ್ಟಿದ್ದೇವೆ, ಇನ್ನೂ ಹಲವು ಕಷ್ಟಗಳನ್ನು ನಾವು ಅನುಭವಿಸಿದ್ದೇವೆ. ಈ ಪೈರಸಿ ಎನ್ನುವುದು ಸಹ ಇನ್ನೊಂದು ಅಗ್ನಿಪರೀಕ್ಷೆ ಎಂದು ಕೊಂಡು ಅದರ ವಿರುದ್ಧ ಹೋರಾಡುತ್ತಿದ್ದೇವೆ'' ಎಂದಿದ್ದಾರೆ ಸೂರಪ್ಪ.
ಅಕ್ಟೋಬರ್ 14ಕ್ಕೆ ಬಿಡುಗಡೆ
ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಇದೇ ಅಕ್ಟೋಬರ್ 14 ರಂದು ಬಿಡುಗಡೆ ಆಗಲಿದೆ. ಅದೇ ದಿನ ದುನಿಯಾ ವಿಜಯ್ ನಟನೆಯ 'ಸಲಗ' ಸಿನಿಮಾ ಸಹ ಬಿಡುಗಡೆ ಕಾಣಲಿದೆ. 'ಕೋಟಿಗೊಬ್ಬ 3' ಸಿನಿಮಾದಲ್ಲಿ ಸುದೀಪ್ ಎದುರು ಮಡೋನಾ ಸೆಬಾಸ್ಟಿಯನ್, ಅಶಿಕಾ ರಂಗನಾಥ್ ನಟಿಸಿದ್ದಾರೆ. ಸಿನಿಮಾದಲ್ಲಿ ಅಫ್ತಾಬ್ ಶಿವದಾಸನಿ, ದಾನಿಶ್ ಅಖ್ತರ್, ಶ್ರದ್ಧಾ ದಾಸ್, ನವಾಬ್ ಶಾ ಅಂಥಹಾ ಬಾಲಿವುಡ್ ನಟರು ನಟಿಸಿದ್ದಾರೆ. ರವಿಶಂಕರ್ ಸಹ ಸಿನಿಮಾದಲ್ಲಿದ್ದಾರೆ. ಶಿವ ಕಾರ್ತಿಕ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಹಲವು ಬಾರಿ ಬಿಡುಗಡೆ ಮುಂದೂಡಿದ ಬಳಿಕ ದಸರಾ ಹಬ್ಬದ ಸಂದರ್ಭದಲ್ಲಿ ಕೊನೆಗೂ 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಕಾಣುತ್ತಿದೆ.