'ಕೋಟಿಗೊಬ್ಬ'ನೊಂದಿಗೆ ಮನಸ್ತಾಪ: ಹೊರನಡೆದ ಪೋಸ್ಟರ್ ಡಿಸೈನರ್ ಸಾಯಿ ಕೃಷ್ಣ
ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-3' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಇದ್ದಿದ್ದರೆ ಏಪ್ರಿಲ್ ಕೊನೆಯಲ್ಲಿ ಬೆಳ್ಳಿತೆರೆ ಮೇಲೆ ಕೋಟಿಗೊಬ್ಬ ಭರ್ಜರಿ ಎಂಟ್ರಿ ಕೊಡಬೇಕಿದೆ. ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಿನಿಮಾರಂಗದ ಮೇಲೂ ಪ್ರಭಾವ ಬೀರಿದೆ. ಹೀಗಾಗಿ, ರಿಲೀಸ್ಗೆ ನಿಗದಿಯಾಗಿ ಚಿತ್ರಗಳು ಮುಂದೂಡಿಕೆಯಾಗಿವೆ.
ಈ ನಡುವೆ ಕೋಟಿಗೊಬ್ಬ 3 ಚಿತ್ರತಂಡದಿಂದ ಪೋಸ್ಟರ್ ಡಿಸೈನರ್ ಸಾಯಿ ಕೃಷ್ಣ ಎನ್ರೆಡ್ಡಿ ಹೊರಬಂದಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರತಂಡದೊಂದಿಗೆ ಅಂತರ ಮತ್ತು ಭಿನ್ನಾಭಿಪ್ರಾಯದಿಂದ ಡಿಸೈನರ್ ಅವರನ್ನು ನಿರ್ಮಾಣ ಸಂಸ್ಥೆ ಕೈಬಿಟ್ಟಿದೆ. ಈ ಬಗ್ಗೆ ಸಾಯಿ ಕೃಷ್ಣ ಎನ್ರೆಡ್ಡಿ ಟ್ವಿಟ್ಟರ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ.....

ಕೋಟಿಗೊಬ್ಬ ಪೋಸ್ಟರ್ ಹಿಂದಿನ ರೂವಾರಿ
ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾದ ಪೋಸ್ಟರ್ಗಳು ಬಹಳ ಆಕರ್ಷಿತವಾಗಿದೆ. ಮೊದಲ ದಿನದಿಂದ ಇಲ್ಲಿಯವರೆಗೂ ಕೋಟಿಗೊಬ್ಬ ಚಿತ್ರದ ಪೋಸ್ಟರ್ಗಳನ್ನು ಡಿಸೈನ್ ಮಾಡಿರುವುದು ಸಾಯಿ ಕೃಷ್ಣ ಎನ್ರೆಡ್ಡಿ. ಬರಹಗಾರ, ನಿರ್ದೇಶಕರೂ ಆಗಿರುವ ಸಾಯಿ ಕೃಷ್ಣ ಸುದೀಪ್ ಅವರ ಹಲವು ಚಿತ್ರಗಳಿಗೆ ಪೋಸ್ಟರ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದರು. ಆದ್ರೆ, ಇದ್ದಕ್ಕಿದ್ದಂತೆ ಕೋಟಿಗೊಬ್ಬ ಚಿತ್ರತಂಡದಿಂದ ಹೊರನಡೆದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಮಾಹಿತಿ ಕೂಡಾ ನೀಡದೆ ನಿರ್ಧಾರ ಕೈಗೊಂಡಿದೆ
''ಕಿಚ್ಚನ ಅಭಿಮಾನಿಗಳಿಗೆ, ಇಂದಿನಿಂದ ನಾನು ಕೋಟಿಗೊಬ್ಬ-3 ಚಿತ್ರದ ಅಧಿಕೃತ ಪೋಸ್ಟರ್ ಡಿಸೈನರ್ ಅಲ್ಲ, ಕಾರಣ ಮತ್ತು ಅಂತರಗಳಿಂದ ನನಗೆ ಮಾಹಿತಿ ಕೂಡಾ ನೀಡದೆ ನಿರ್ಮಾಣ ಸಂಸ್ಥೆ ನಿರ್ಣಯಿಸಿದೆ, ಈ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣಗಳು. 1- ಸುದೀಪ್ ಸರ್, 2- ಅವರ ಅಭಿಮಾನಿಗಳು, 3- ದುಡ್ಡು (ಕೋವಿಡ್ ಪರಿಣಾಮ). ಇನ್ಯಾರೂ ಅಲ್ಲ. ಕ್ಷಮೆ ಇರಲಿ ಗೆಳೆಯರೇ'' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಪೋಸ್ಟರ್ ಡಿಸೈನ್ ಮಾಡುವುದು ನಿಲ್ಲಿಸಿದ್ದರು
ಅಂದ್ಹಾಗೆ, ಸಾಯಿ ಕೃಷ್ಣ ಎನ್ರೆಡ್ಡಿ ಅವರು ಇತ್ತೀಚಿನ ದಿನಗಳಲ್ಲಿ ಪೋಸ್ಟರ್ ಡಿಸೈನ್ ಮಾಡುವುದನ್ನು ನಿಲ್ಲಿಸಿದ್ದರು. ಕೋವಿಡ್ ಕಾರಣದಿಂದ ಅನಿವಾರ್ಯತೆಯಿಂದ ಕೋಟಿಗೊಬ್ಬ ಸಿನಿಮಾ ಒಪ್ಪಿಕೊಂಡಿದ್ದರು ಎಂದು ಖುದ್ದು ಅವರೇ ತಿಳಿಸಿದ್ದಾರೆ. ''ಗೆಳೆಯ, ನಾನು ಪೋಸ್ಟರ್ ಡಿಸೈನ್ ನಿಲ್ಲಿಸಿ ತುಂಬಾ ದಿನ ಆಯ್ತು, ಲಾಕ್ ಡೌನ್ ಟೈಮಲ್ಲಿ ಈ ಒಂದು ಸಿನಿಮಾ ಒಪ್ಪಿಕೊಂಡಿದ್ದೆ. ನನ್ನ ಮೊದಲನೇ ಸಿನಿಮಾನೆ ಅಪ್ಪು ಅವರದ್ದು...ಅಜಯ್... ನಂತರ ಪರಮಾತ್ಮ...ರಣವಿಕ್ರಮ ಮಾಡಿದಿನಿ...ಇನ್ನೇನಿದ್ರೂ ಕಾಲ ಕೂಡಿಬಂದರೆ (ಹಣೆಬರಹ ಚೆನ್ನಾಗಿದ್ದಲ್ಲಿ) ನಿರ್ದೇಶನ ಮಾಡ್ತಿನಿ'' ಎಂದಿದ್ದಾರೆ.
Recommended Video

ಸುದೀಪ್ಗೆ ನಿರ್ದೇಶನ ಮಾಡುವ ಆಸೆ ಇದೆ
ಇನ್ನು ಕಿಚ್ಚನ ಹಲವು ಚಿತ್ರಗಳಲ್ಲಿ ಪೋಸ್ಟರ್ ಡಿಸೈನರ್ ಆಗಿ ಕೆಲಸ ಮಾಡಿರುವ ಸಾಯಿ ಕೃಷ್ಣ ಎನ್ರೆಡ್ಡಿಗೆ ಸುದೀಪ್ ಗೆ ನಿರ್ದೇಶನ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ. ಆದರೆ, ಅದಕ್ಕೆ 'ಯೋಗ ಬರಲಿ' ಎಂದು ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ 'ಕ' ಎಂಬ ಚಿತ್ರಕ್ಕೆ ನಿರ್ದೇಶನ, ಬರಹಗಾರನಿಗೆ ಕಾರ್ಯನಿರ್ವಹಿಸಿದ್ದಾರೆ. ಮುದ್ದು ಮುದ್ದಾಗಿ ಚಿತ್ರಕ್ಕೂ ಬರಹಗಾರರಾಗಿದ್ದರು.


Click it and Unblock the Notifications











