ಪ್ರದರ್ಶನವಾಗದ ಕೋಟಿಗೊಬ್ಬ-3: ಚಿತ್ರಮಂದಿರದೊಳಗೆ ನುಗ್ಗಿದ ಅಭಿಮಾನಿಗಳು
ಬೆಂಗಳೂರು, ಅ.14: ಬಹುನಿರೀಕ್ಷೆಯ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಗುರುವಾರ ತೆರೆಗೆ ಬರಬೇಕಿತ್ತು. ಆದರೆ, ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಬೆಳಗಿನ 7 ಗಂಟೆ ಪ್ರದರ್ಶನ ಆರಂಭವಾಗದ ಕಾರಣ ಅಭಿಮಾನಿಗಳು ಚಿತ್ರಮಂದಿರದೊಳಗೆ ನುಗ್ಗಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಚಿತ್ರ ವೀಕ್ಷಣೆಗಾಗಿ ಅಭಿಮಾನಿಗಳು ಬೆಳಿಗ್ಗೆ 4-5 ಗಂಟೆಗೇ ಚಿತ್ರಮಂದಿರ ಮುಂದೆ ಜಮಾಯಿಸಿದ್ದರು. ಬೆಳಿಗ್ಗೆ 7 ಗಂಟೆಗೆ (ಫ್ಯಾನ್ಸ್ ಶೋ) ವಿಶೇಷ ಪ್ರದರ್ಶನ ಆರಂಭವಾಗಬೇಕಿತ್ತು. ಆದರೆ, ಚಿತ್ರ ಮಂದಿರ ಮುಂದೆ ಬೆಳಗಿನ ಪ್ರದರ್ಶನ ರದ್ದಾಗಿದೆ ಎಂಬ ಬೋರ್ಡ್ ಹಾಕಲಾಯಿತು. ಇದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
ಬೆಳಗ್ಗಿಯೇ ಚಿತ್ರಮಂದಿರ ಮುಂದೆ ನೆರೆದಿದ್ದ ನೂರಾರು ಅಭಿಮಾನಿಗಳು ಸುದೀಪ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಅವರೆಲ್ಲ ಆನ್ಲೈನ್ ಮೂಲಕ ಮೊದಲೇ ಟಿಕೆಟ್ ಕಾಯ್ದಿರಿಸಿದ್ದರು. ಕಿಚ್ಚ, ಕಿಚ್ಚ ಎಂದು ಸುದೀಪ್ ಮೇಲಿನ ಅಭಿಮಾನದಿಂದ ಘೋಷಣೆಗಳನ್ನು ಕೂಗುತ್ತಿದ್ದರು. ಬೆಳಗಿನ ಮೊದಲ ಶೋ ವೀಕ್ಷಿಸಲು ಕಾತರರಾಗಿದ್ದರು. ಆದರೆ, ಚಿತ್ರ ತೆರೆಕಾಣದಿರುವುದು ಅವರಲ್ಲಿ ಬೇಸರ ಉಂಟುಮಾಡಿತು.

ಪ್ರಸನ್ನ ಚಿತ್ರಮಂದಿರ ಮುಂಭಾಗ "ಬೆಳಗಿನ 7 ಗಂಟೆ ಪ್ರದರ್ಶನ ರದ್ದಾಗಿದೆ. ಆನ್ಲೈನ್ ಟಿಕೆಟ್ ಹಣ ವಾಪಸ್ ಮಾಡಲಾಗುವುದು'' ಎಂಬ ಫಲಕ ಹಾಕಲಾಯಿತು. ಇದರಿಂದ ಬೇಸರಗೊಂಡ ಅಭಿಮಾನಿಗಳು ಚಿತ್ರಪ್ರದರ್ಶನ ರದ್ದು ಮಾಡುವುದಾದರೆ ಟಿಕೆಟ್ ನೀಡಿರುವುದು ಏಕೆ? ಎಂದು ಪ್ರಶ್ನಿಸಿದರು. ಸಿನಿಮಾ ವೀಕ್ಷಣೆಗಾಗಿ ಬೆಳಿಗ್ಗೆಯೇ ಚಿತ್ರಮಂದಿರ ಮುಂದೆ ಬಂದಿದ್ದೇವೆ. ಚಿತ್ರ ನೋಡಿಯೇ ಮರಳುವುದಾಗಿ ಪಟ್ಟು ಹಿಡಿದರು.
ಚಿತ್ರಮಂದಿರದೊಳಗೆ ನುಗ್ಗಿದ ಅಭಿಮಾನಿಗಳು:
ಚಿತ್ರ ಪ್ರದರ್ಶನ ಆಗದಿರುವುದರಿಂದ ಬೇಸರಗೊಂಡ ಕೆಲ ಅಭಿಮಾನಿಗಳು ಚಿತ್ರಮಂದಿರದೊಳಗೆ ನುಗ್ಗಿ ಗಲಾಟೆ ಆರಂಭಿಸಿದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಕೂಡಲೇ ಪೊಲೀಸರು ಸಹ ಸ್ಥಳಕ್ಕೆ ಧಾವಿಸಿ ಪರಿಸ್ತಿತಿ ತಿಳಿಗೊಳಿಸಿದರು. ಚಿತ್ರಮಂದಿರ ಮುಖ್ಯಸ್ಥರೈ ಸಹ ಬಂದು ತಾಂತ್ರಿಕ ಕಾರಣದಿಂದ ಚಿತ್ರ ಪ್ರದರ್ಶನ ಸಾಧ್ಯವಾಗುತ್ತಿಲ್ಲ ಎಂದು ಅಭಿಮಾನಿಗಳಿಗೆ ಮನವರಿಕೆ ಮಾಡಿಕೊಟ್ಟರು.
ತಾಂತ್ರಿಕ ಕಾರಣಗಳಿಂದಾಗಿ ಕೋಟಿಗೊಬ್ಬ-3 ರಾಜ್ಯದ ಯಾವ ಚಿತ್ರಮಂದಿಗಳಲ್ಲಿಯೂ ಬೆಳಗಿನ ಫ್ಯಾನ್ಸ್ ಶೋ ಪ್ರದರ್ಶನ ಕಂಡಿಲ್ಲ ಎಂದು ಹೇಳಲಾಗುತ್ತಿದೆ. ಚಿತ್ರನಟ ಸುದೀಪ್ ಸಹ ಮಧ್ಯಪ್ರವೇಶಿಸಿದ್ದು, ತಾಂತ್ರಿಕ ಕಾರಣಗಳನ್ನು ಸರಿಪಡಿಸಿ ಬೆಳಗ್ಗೆ 10 ಗಂಟೆ ಪ್ರದರ್ಶನ ಆರಂಭಿಸಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗಿದೆ.


Click it and Unblock the Notifications











