ದುರ್ಗವೆಂದರೆ ನೆನಪಿಗೆ ಬರುವುದು ನಾಗರಹಾವು.
'ಐದು ಕೇಂದ್ರಗಳಲ್ಲಿ ನೂರು, ಇಪ್ಪತ್ತೆೈದು ಕೇಂದ್ರಗಳಲ್ಲಿ ಐವತ್ತು "
ಕೋಟಿಗೊಬ್ಬನ ಯಶಸ್ಸನ್ನು ನಿರ್ಮಾಪಕ ಸೂರಪ್ಪ ಬಾಬು ಎದೆತುಂಬಿ ಬಣ್ಣಿಸುವುದು ಹೀಗೆ. ಚಿತ್ರ ಬಿಡುಗಡೆಯಾಗುವ ಮುನ್ನವೇ ಕೋಟಿಗೊಬ್ಬ ಸೆಂಚುರಿ ಹೊಡೆಯುವುದು ಗ್ಯಾರಂಟಿ ಎಂದು ಸೂರಪ್ಪ ಹಾಗೂ ನಿರ್ದೇಶಕ ನಾಗಣ್ಣ ಆತ್ಮ ವಿಶ್ವಾಸದಿಂದ ಹೇಳಿಕೊಂಡಿದ್ದರು. ನಿರೀಕ್ಷೆ ನಿಜವಾಗಿದೆ. ಕೋಟಿಗೊಬ್ಬ ಸೆಂಚುರಿ- ನಾಟೌಟ್!
ಕೋಟಿಗೊಬ್ಬ ಯಶಸ್ಸಿನ ದಾರಿಯಲ್ಲಿ ಮುಂದುವರಿಯುತ್ತಿರುವಂತೆಯೇ ಇನ್ನೊಂದು ಚಿತ್ರಕ್ಕೆ ಸೂರಪ್ಪ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಥೆ ರೆಡಿಯಾಗುತ್ತಿದೆ. ಈ ಚಿತ್ರಕ್ಕೂ ವಿಷ್ಣು ಅವರೇ ನಾಯಕ.
'ಪ್ರಸ್ತುತ ವಿಷ್ಣು ಸಾರ್ ಬಿಜಿಯಾಗಿದ್ದಾರೆ. ಅವರಿಗೆ ಸ್ವಲ್ಪ ರೆಸ್ಟ್ ಬೇಕು. ಏಪ್ರಿಲ್ನಲ್ಲಿ ಹೊಸ ಚಿತ್ರ ಪ್ರಾರಂಭವಾಗಬಹುದು" ಎನ್ನುತ್ತಾರೆ ಸೂರಪ್ಪ . ಈ ಚಿತ್ರದಲ್ಲಿ ವಿಷ್ಣು ಜೊತೆ ಮತ್ತೆ ನಾಲ್ಕು ಮಂದಿ ಪ್ರಮುಖರು ನಟಿಸುವ ಸಾಧ್ಯತೆಯೂ ಇದೆ. ಸದ್ಯಕ್ಕೆ ಸಸ್ಪೆನ್ಸ್ .
ಅಂದಹಾಗೆ, ಕೋಟಿಗೊಬ್ಬ ಶತ ದಿನೋತ್ಸವ ಸಮಾರಂಭವನ್ನು ಚಿತ್ರದುರ್ಗದಲ್ಲಿ ನಡೆಸಲು ಸೂರಪ್ಪ ನಿರ್ಧರಿಸಿದ್ದಾರೆ. ದುರ್ಗ ಎಂದರೆ ವಿಷ್ಣು ಭಾವುಕರಾಗುತ್ತಾರೆ. ಅವರು ನಾಯಕರಾಗಿ ಪ್ರಸಿದ್ಧಿಗೆ ಬಂದ ನಾಗರಹಾವು ಚಿತ್ರೀಕರಣ ನಡೆದದ್ದು ಅಲ್ಲಿಯೇ. ಶತ ದಿನೋತ್ಸವ ಕಾರ್ಯಕ್ರಮದಲ್ಲಿ ಚಿತ್ರದ ಯಶಸ್ಸಿಗಾಗಿ ದುಡಿದ ಕಲಾವಿದರು- ತಂತ್ರಜ್ಞರನ್ನು ಗೌರವಿಸಲು ಸೂರಪ್ಪ ಬಾಬು ಉದ್ದೇಶಿಸಿದ್ದಾರೆ. ಅಂತೂ ಕೃತಜ್ಞತಾ ಅರ್ಪಣ ಸಮಾರಂಭವೊಂದಕ್ಕೆ ದುರ್ಗ ಸಜ್ಜಾಗುತ್ತಿದೆ.


Click it and Unblock the Notifications