ತೆರೆಮೇಲೆ ತೇಜಸ್ವಿ 'ಜುಗಾರಿ ಕ್ರಾಸ್' ಕಾದಂಬರಿ; ದ್ಯಾಮವ್ವ, ಗೌರಿ- ಸುರೇಶ್ ಪಾತ್ರಗಳಲ್ಲಿ ನಟಿಸೋದ್ಯಾರು?
ಇಂದು(ಸೆಪ್ಟೆಂಬರ್ 8) ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಜನ್ಮ ದಿನದ ಸವಿನೆನಪು. ಈ ವಿಶೇಷ ದಿನದಂದು ಅವರ ಪ್ರಸಿದ್ಧ ಕಾದಂಬರಿ 'ಜುಗಾರಿ ಕ್ರಾಸ್' ಸಿನಿಮಾ ಆಗುವ ಸುದ್ದಿ ಬಂದಿದೆ. ಈ ಹಿಂದೆ ಹಲವರು ಈ ಕಾದಂಬರಿಯನ್ನು ದೃಶ್ಯರೂಪಕ್ಕಿಳಿಸುವ ಪ್ರಯತ್ನ ಮಾಡಿದ್ದರು. ಇದೀಗ ಯುವ ನಿರ್ದೇಶಕ ಗುರುದತ್ ಗಾಣಿಗ ಆ ಸಾಹಸಕ್ಕೆ ಕೈ ಹಾಕಿದ್ದಾರೆ.
ತೇಜಸ್ವಿಯವರ ಬರೆದ ಕಥೆ ಆಧರಿಸಿ ಮಾಡಿದ್ದ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾ ಸಕ್ಸಸ್ ಕಂಡಿತ್ತು. ಅವರ ಓದುಗರೇ ಆ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಇದೀಗ 'ಜುಗಾರಿ ಕ್ರಾಸ್' ಸರದಿ. ಕನ್ನಡ ಓದುಗರ ನೆಚ್ಚಿನ ಕಾದಂಬರಿ ಇದು. ಇಷ್ಟು ದಿನ ಓದಿ ಕಲ್ಪಿಸಿಕೊಂಡವರಿಗೆ ಇದೀಗ ತೆರೆಮೇಲೆ ದೃಶ್ಯರೂಪದಲ್ಲಿ ನೋಡುವ ಅವಕಾಶ ಸಿಗುತ್ತಿದೆ. ಸದ್ಯಕ್ಕೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ತೇಜಸ್ವಿ ಹುಟ್ಟುಹಬ್ಬಕ್ಕೆ ಸಿನಿಮಾ ಘೋಷಣೆ ಮಾತ್ರ ಆಗಿದೆ.

ನಟ ಸುದೀಪ್ ಗರಡಿಯಲ್ಲಿ ಪಳಗಿದ ಗುರುದತ್ ಗಾಣಿಗ 'ಅಂಬಿ ನಿಂಗ್ ವಯಸ್ಸಾಯ್ತೊ' ಚಿತ್ರ ಕಟ್ಟಿಕೊಟ್ಟಿದ್ದರು. ಇದೀಗ ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಳಿಕ 'ಜುಗಾರಿ ಕ್ರಾಸ್'ಗೆ ಬಂದು ನಿಲ್ಲಲಿದ್ದಾರೆ. ಮಲೆನಾಡಿನ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆ ಈ ಕಾದಂಬರಿಯಲ್ಲಿದೆ. ಒಂದೇ ದಿನದಲ್ಲಿ ನಡೆಯುವಂತಹ ಕಥೆ ಇರುವ ಪತ್ತೇದಾರಿ ಕಾದಂಬರಿ ಇದಾಗಿದೆ.
ಪರಿಸರ ಪ್ರೇಮಿಯಾಗಿದ್ದ ತೇಜಸ್ವಿಯವರು ವನ್ಯ ಸಂಪತ್ತು, ಕಳ್ಳತನ, ದರೋಡೆ, ಭೂಗತ ಕೆಲಸಗಳ ಬಗ್ಗೆ ವಿವರಿಸುತ್ತಾ ಕಾದಂಬರಿ ಕಥೆಯನ್ನು ಹೇಳುತ್ತಾ ಸಾಗಿದ್ದಾರೆ. ಜನ ಪ್ರಕೃತಿ ಸಂಪತನ್ನು ಹೇಗೆ ಕೊಳ್ಳೆ ಹೊಡೆಯುತ್ತಿದ್ದಾರೆ ಎನ್ನುವುದನ್ನು ಹೇಳಿದ್ದಾರೆ. ಈ ಕಾದಂಬರಿಯನ್ನು ಓದುತ್ತಲೇ ಓದುಗರು ಕಲ್ಪನಾಲೋಕದಲ್ಲಿ ಕಥೆಯ ಪಾತ್ರಗಳ ನಡುವೆ ಸುತ್ತಾಡುವಂತಿದೆ. ಇಂತಾದೊಂದು ಅದ್ಭುತ ಕಾದಂಬರಿಯನ್ನು ಇದೀಗ ಸಿನಿಮಾ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.

ಒಂದ್ಕಾಲದಲ್ಲಿ ಕನ್ನಡದಲ್ಲಿ ಹಲವು ಕಾದಂಬರಿಗಳನ್ನು ಸಿನಿಮಾ ಮಾಡಲಾಗಿತ್ತು. ಇಂತಹ ಸಿನಿಮಾಗಳು ಗೆದ್ದಿರುವುದೇ ಹೆಚ್ಚು. ಬಳಿಕ ಆ ಪ್ರಯತ್ನ ಕಮ್ಮಿ ಆಗುತ್ತಾ ಬಂದಿತ್ತು. ಸದ್ಯ ಹಲವರು ತೆರೆಗೆ ತರುಲು ಬಯಸಿದ್ದ ಕಾದಂಬರಿಯನ್ನು ಗುರುದತ್ ಗಾಣಿಕ ಕೈಗೆತ್ತಿಕೊಂಡಿರುವುದು ವಿಶೇಷ. ಇದೀಗ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ.
'ಜುಗಾರಿ ಕ್ರಾಸ್' ಚಿತ್ರದ ಪ್ರಮುಖ ಪಾತ್ರಗಳಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಮುಖ್ಯವಾಗಿ ದ್ಯಾಮವ್ವ, ಸುರೇಶ್ ಹಾಗೂ ಗೌರಿ ದಂಪತಿಗಳ ಪಾತ್ರಗಳಲ್ಲಿ ಯಾರು ನಟಿಸುತ್ತಾರೆ? ಎನ್ನುವುದನ್ನು ಕಾದು ನೋಡಬೇಕಿದೆ. ಈ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಇರಲಿದೆ. ಇನ್ನು ತಾಂತ್ರಿಕ ವರ್ಗ, ಉಳಿದ ಎಲ್ಲಾ ಕಲಾವಿದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗಬೇಕಿದೆ.
'ಜುಗಾರಿ ಕ್ರಾಸ್' ಸಿನಿಮಾ ಆಗಿ ತೆರೆಮೇಲೆ ಬರುತ್ತದೆ ಎನ್ನುವ ಸುದ್ದಿ ಕೇಳಿಯೇ ತೇಜಸ್ವಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಹಾಗಾಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತಾಗಿದೆ. ಹೊಸ ಪ್ರತಿಭೆಗಳು ಕೂಡ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. 30 ಅಧ್ಯಾಯಗಳ 200 ಪುಟಗಳ ಕಾದಂಬರಿಯನ್ನು 2 ಗಂಟೆಯ ಸಿನಿಮಾ ಹೇಗೆ ಮಾಡುತ್ತಾರೆ ಎನ್ನುವ ಕುತೂಹಲ ಕೂಡ ಹಲವರಲ್ಲಿದೆ.
ಈಗಾಗಲೇ 'ಜುಗಾರಿ ಕ್ರಾಸ್' ಕಾದಂಬರಿಯನ್ನು ಸಿನಿಮಾ ಮಾಡಲು ರೈಟ್ಸ್ ಪಡೆದು ಚಿತ್ರಕಥೆ ಮಾಡುವ ಕೆಲಸಗಳು ಆರಂಭವಾಗಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಅದಕ್ಕೂ ಮುನ್ನ ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಸಿನಿಮಾ ತೆರೆಗೆ ಬರಬೇಕಿದೆ. ಪೋಸ್ಟರ್ ಹಾಗೂ ಟೀಸರ್ನಿಂದಲೇ ಈ ಸಿನಿಮಾ ಸದ್ದು ಮಾಡ್ತಿದೆ.


Click it and Unblock the Notifications











