ಕ್ರಾಂತಿ, ಯುವರತ್ನ, ರಾಜಕುಮಾರ, ಕಬ್ಜ; ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ?
ಇಂದು ( ಮಾರ್ಚ್ 17 ) ಸಿನಿ ರಸಿಕರ ನೆಚ್ಚಿನ ಮತ್ತೊಂದು ಶುಕ್ರವಾರ ಬಂದಿದೆ ಹಾಗೂ ಈ ದಿನದಂದು ವಿವಿಧ ಭಾಷೆಯ ಹಲವು ಚಿತ್ರಗಳು ಬಿಡುಗಡೆಯಾಗಿವೆ. ಕನ್ನಡದಲ್ಲಿ ಬಹು ನಿರೀಕ್ಷಿತ ಸಿನಿಮಾ ಕಬ್ಜ ಈ ದಿನದಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ತೆರೆಗೆ ಬಂದಿದೆ. ಆರ್ ಚಂದ್ರು ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವ ರಾಜ್ಕುಮಾರ್ ನಟಿಸಿದ್ದು, ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡಿದೆ.
ಇನ್ನು ಕಬ್ಜ ಜತೆಗೆ ಪುನೀತ್ ರಾಜ್ಕುಮಾರ್ ನಟನೆಯ ಹಿಟ್ ಚಿತ್ರ ಯುವರತ್ನ ಸಹ ಇದೇ ದಿನ ಮರುಬಿಡುಗಡೆಗೊಂಡಿದೆ. ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಯುವರತ್ನ ಸಿನಿಮಾವನ್ನು ಬಿಡುಗಡೆಗೊಳಿಸಲಾಗಿದೆ. ನಿನ್ನೆ ( ಮಾರ್ಚ್ 16 ) ಬೆಂಗಳೂರಿನ ಜೆಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಅದ್ದೂರಿಯಾದ ಆಚರಣೆ ಜತೆಗೆ ಯುವರತ್ನ ಚಿತ್ರದ ವಿಶೇಷ ಪ್ರದರ್ಶನವನ್ನು ರಾತ್ರಿ ಆಯೋಜಿಸಲಾಗಿತ್ತು. ಈ ವಿಶೇಷ ಪ್ರದರ್ಶನಕ್ಕೆ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ರಾಮ್ ಸಹ ಅಭಿಮಾನಿಗಳ ಜತೆ ಆಗಮಿಸಿ ಚಿತ್ರವನ್ನು ವೀಕ್ಷಿಸಿದರು.

ಯುವರತ್ನ ಜತೆಗೆ ಇದೇ ಪುನೀತ್ ರಾಜ್ಕುಮಾರ್ ಹಾಗೂ ಸಂತೋಷ್ ಆನಂದ್ರಾಮ್ ಕಾಂಬಿನೇಶನ್ನ ಇಂಡಸ್ಟ್ರಿ ಹಿಟ್ ಚಿತ್ರ ರಾಜಕುಮಾರ ಸಹ ಮರು ಬಿಡುಗಡೆಯಾಗಿದ್ದು, ಪುನೀತ್ ಜನ್ಮದಿನದಂದು ನೆಚ್ಚಿನ ನಟನನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡುವ ಅವಕಾಶ ಲಭಿಸಿದೆ.
ಸದ್ಯ ಕಬ್ಜ ಚಿತ್ರದ ಮೊದಲ ಎರಡು ಪ್ರದರ್ಶನಗಳು ಮುಕ್ತಾಯವಾಗಿದ್ದು, ಚಿತ್ರ ವೀಕ್ಷಿಸಿ ಹೊರಬಂದ ಸಿನಿ ರಸಿಕರು ಚಿತ್ರ ಚೆನ್ನಾಗಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗೆ ಈ ಶುಕ್ರವಾರದಂದು ಹೊಸ ಚಿತ್ರಗಳ ಆಗಮನವಾದ ನಂತರ ಬೆಂಗಳೂರಿನ ಮುಖ್ಯ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ಕಬ್ಜ ( ಕನ್ನಡ ) ಐದು ಪ್ರದರ್ಶನಗಳು
ಸಪ್ನ ಚಿತ್ರಮಂದಿರ: ರಾಜಕುಮಾರ ( ಕನ್ನಡ ) ನಾಲ್ಕು ಪ್ರದರ್ಶನಗಳು
ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಯುವರತ್ನ ( ಕನ್ನಡ ) ನಾಲ್ಕು ಪ್ರದರ್ಶನಗಳು
ಅನುಪಮಾ ಚಿತ್ರಮಂದಿರ : ಕ್ರಾಂತಿ ( ಕನ್ನಡ ) ನಾಲ್ಕು ಪ್ರದರ್ಶನಗಳು
ಭೂಮಿಕಾ ಚಿತ್ರಮಂದಿರ: ಫಲನ ಅಬ್ಬಾಯಿ ಫಲನ ಅಮ್ಮಾಯಿ ( ತೆಲುಗು ) ನಾಲ್ಕು ಪ್ರದರ್ಶನಗಳು
ತ್ರಿವೇಣಿ ಚಿತ್ರಮಂದಿರ : ಕಬ್ಜ ( ತೆಲುಗು ) ನಾಲ್ಕು ಪ್ರದರ್ಶನಗಳು
ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಕಣ್ಣೈ ನಂಬಾದೆ ( ತಮಿಳು ) ಎರಡು ಪ್ರದರ್ಶನಗಳು, ಶಜಾಮ್ ದ ಫ್ಯುರಿ ಆಫ್ ದ ಗಾಡ್ಸ್ ( ಇಂಗ್ಲಿಷ್ ) ನಾಲ್ಕು ಪ್ರದರ್ಶನಗಳು ಹಾಗೂ 19.20.21 ( ಕನ್ನಡ ) ಎರಡು ಪ್ರದರ್ಶನಗಳು.
ಊರ್ವಶಿ ಚಿತ್ರಮಂದಿರ: ಕಬ್ಜ ( ಕನ್ನಡ ) ನಾಲ್ಕು ಪ್ರದರ್ಶನಗಳು
ಹೀಗೆ ಮತ್ತೊಂದು ಶುಕ್ರವಾರ ಬಂದು ಹಲವು ಚಿತ್ರಗಳು ಬಿಡುಗಡೆಯಾದರೂ ಸಹ ಕ್ರಾಂತಿ ಚಿತ್ರತಂಡ ಮಾತ್ರ ಅನುಪಮಾ ಚಿತ್ರಮಂದಿರವನ್ನು ಬಿಟ್ಟುಕೊಟ್ಟಿಲ್ಲ. ಇಲ್ಲಿ ಕ್ರಾಂತಿ ಐವತ್ತು ದಿನಗಳನ್ನು ಪೂರೈಸಿದ್ದು ಶತದಿನದತ್ತ ಹೆಜ್ಜೆ ಇಟ್ಟಿದೆ. ಈ ಮೂಲಕ ಕ್ರಾಂತಿ ಓಟಿಟಿಗೆ ಬಂದ ನಂತರವೂ ಬೆಂಗಳೂರಿನ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರಗಳಲ್ಲಿ ಐವತ್ತು ದಿನಗಳ ಪ್ರದರ್ಶವನ್ನು ಕಂಡ ಮೂರನೇ ಚಿತ್ರ ಎನಿಸಿಕೊಂಡಿದೆ. ಈ ಹಿಂದೆ ರಿಷಬ್ ಶೆಟ್ಟಿ ನಟನೆಯ ಕಾಂತಾರ ಹಾಗೂ ಶಿವ ರಾಜ್ಕುಮಾರ್ ನಟನೆಯ ವೇದ ಚಿತ್ರಗಳು ಈ ಸಾಧನೆಯನ್ನು ಮಾಡಿದ್ದವು.


Click it and Unblock the Notifications











