ಕೈಲಾಸ್ ಚಿತ್ರಮಂದಿರದಲ್ಲಿ 'ರಾಯಣ್ಣ' 51ನೇ ವಾರ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಎರಡು ಚಿತ್ರಮಂದಿರಗಳಲ್ಲಿ 51ನೇ ವಾರಕ್ಕೆ ಅಡಿಯಿಟ್ಟಿದೆ. ಬೆಂಗಳೂರಿನ ಕೈಲಾಸ್ ಹಾಗೂ ಹುಬ್ಬಳ್ಳಿಯ ಚಂದ್ರಕಲಾ ಚಿತ್ರಮಂದಿರಗಳಲ್ಲಿ ರಾಯಣ್ಣ 357 ದಿನಗಳನ್ನು ಪೂರೈಸಿದೆ.
ಭಾರಿ ಬಜೆಟ್ ನಲ್ಲಿ ಆನಂದ್ ಬಿ ಅಪ್ಪುಗೋಳ್ ಅವರು ನಿರ್ಮಿಸಿದ ಈ ಚಿತ್ರ ಟ್ರಿಪಲ್ ಸೆಂಚುರಿ ಪೂರೈಸಿ ನಾಲ್ಕನೆ ಸೆಂಚುರಿಗೆ ಹತ್ತಿರವಾಗುತ್ತಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೊಸ ದಾಖಲೆ ಎಂದೇ ಹೇಳಬೇಕು. 2012ರಲ್ಲಿ ತೆರೆಕಂಡ ಐತಿಹಾಸಿಕ ಬ್ಲಾಕ್ ಬಸ್ಟರ್ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಇದನ್ನು ನಾಗಣ್ಣ ಅವರು ನಿರ್ದೇಶನ ಮಾಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಜಯಪ್ರದಾ ಮತ್ತು ನಿಖಿತಾ ತುಕ್ರಾಲ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವು 357 ದಿನಗಳ ಗಡಿದಾಟಿ ಮುನ್ನುಗ್ಗಿದೆ. ಇನ್ನೊಂದು ಮುಖ್ಯ ವಿಚಾರ ಅಂದರೆ ಈ ಚಿತ್ರವನ್ನು ಭಾರತದ 18 ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಪ್ರಮುಖವಾಗಿ ತಮಿಳು,ತೆಲುಗು, ಮಲಯಾಳಂ, ಬೆಂಗಾಲಿ, ಭೋಜಪುರ, ಒರಿಸ್ಸಾ, ರಾಜಾಸ್ತಾನ, ಹಿಂದಿ- ಈಗ ರೆಡಿಯಾಗಿದೆ.

ಕನ್ನಡ ಚಿತ್ರರಂಗದಲ್ಲೇ ಇಲ್ಲಿಯವರೆಗೆ ಅತ್ಯಂತ ಅದ್ಧೂರಿಯಾಗಿ ತೆಗೆದ, ಬೃಹತ್ ಮೊತ್ತವನ್ನು ಹೂಡಿಕೆ ಮಾಡಿ ಚಿತ್ರೀಕರಿಸಿದ ಏಕೈಕ ಐತಿಹಾಸಿಕ ಚಿತ್ರ ಇದಾಗಿದೆ. 'ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ'ನ ಪಾತ್ರವನ್ನು ದರ್ಶನ್ ಅಭಿನಯಿಸಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದು ನಾಯಕ ನಟನನ್ನು ಕೊಂಡಾಡಲಾಗುತ್ತಿದೆ.
ಒಟ್ಟಿನಲ್ಲಿ ಕುಟುಂಬ ಸಮೇತರಾಗಿ ಒಟ್ಟಾಗಿ ಕುಳಿತು ನೋಡುವಂತಹ ಜೊತೆಗೆ ಕ್ರಾಂತಿವೀರನ ಹೋರಾಟ, ದೇಶಪ್ರೇಮ, ಗೌರವ , ಅಭಿಮಾನ ಮುಂತಾದವುಗಳನ್ನು ಮೆರೆಯುವಂತಹ ಚಲನಚಿತ್ರ ಇದಾಗಿದೆ.
ಕನ್ನಡ ಚಲನಚಿತ್ರರಂಗದಲ್ಲೇ ಅತ್ಯಂತ ಅದ್ಧೂರಿ ಚಿತ್ರವನ್ನು ನಿರ್ದೆಶಿಸಿದ ನಾಗಣ್ಣ ಮತ್ತು ನಿರ್ಮಿಸಿದ ಆನಂದ ಬಿ ಅಪ್ಪುಗೋಳ ಅವರದು ಚಾಲೆಂಜಿಂಗ್ ಪ್ರಯತ್ನ ವಾಗಿದೆ. ಇಂತಹ ಅದ್ಭುತ ಸಿನೆಮಾ ಹಕ್ಕುಗಳನ್ನು ಸುವರ್ಣವಾಹಿನಿಯ ಪಾಲಾಗಿ ಈಗಾಗಲೆ ಪ್ರಸಾರವೂ ಆಗಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











