ಹೆಣ್ಣಿನ ಶೋಷಣೆ ವಿರುದ್ಧ ಕೃಷ್ಣ ಅಜಯ್ ರಾವ್ 'ಯುದ್ಧಕಾಂಡ'
35 ವರ್ಷಗಳ ಹಿಂದೆ ಕೆ. ವಿ ರಾಜು ನಿರ್ದೇಶನದಲ್ಲಿ 'ಯುದ್ಧಕಾಂಡ' ಸಿನಿಮಾ ಬಂದಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್, ಭಾರತಿ ವಿಷ್ಣುವರ್ಧನ್ ನಟನೆಯ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ಹಂಸಲೇಖ ಸಂಗೀತ, ಸಾಹಿತ್ಯದಲ್ಲಿ ಚಿತ್ರದ ಆಲ್ಬಮ್ ಸಹ ಹಿಟ್ ಆಗಿತ್ತು. ಇದೀಗ ಇದೇ ಟೈಟಲ್ನಲ್ಲಿ ಮತ್ತೊಂದು ಕನ್ನಡ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಕೃಷ್ಣ ಅಜಯ್ ರಾವ್ ನಟನೆಯ 'ಯುದ್ಧಕಾಂಡ' ಚಿತ್ರಕ್ಕೆ ಪವನ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯ ಕಥೆ ಚಿತ್ರದಲ್ಲಿದೆ. ಅರ್ಚನಾ ಜೋಯಿಸ್ ಹಾಗೂ ಪ್ರಕಾಶ್ ಬೆಳವಾಡಿ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ಅಜಯ್ ರಾವ್ ನಟಿಸಿದ್ದಾರೆ.

ಈ ಹಿಂದೆ ವಕೀಲರಿಂದಲೇ 'ಯುದ್ಧಕಾಂಡ' ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಅಂತೂ ಇಂತೂ ಚಿತ್ರೀಕರಣ ಮುಗಿಸಿ ಸಿನಿಮಾ ಬಿಡುಗಡೆ ಆಗುತ್ತಿದೆ. ಏಪ್ರಿಲ್ 18ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಟೀಸರ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ಚಿತ್ರತಂಡ ಕುತೂಹಲ ಮೂಡುವಂತೆ ಮಾಡಿದೆ. ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಹೇಮಂತ್ ಜೋಯಿಸ್ ಸಂಗೀತ ಚಿತ್ರಕ್ಕಿದೆ.
ತನ್ನ ಮಗಳನ್ನು ದಾರುಣವಾಗಿ ಅ*ಚಾರ ಮಾಡಿದ ಕಾಮುಕನಿಗೆ ತಾಯಿಯೇ ಶಿಕ್ಷೆ ನೀಡುತ್ತಾಳೆ. ಆದರೆ ಆ ತಾಯಿ ಮಾಡಿದ್ದು ಸರಿ, ಅಂತಹ ದುಷ್ಟನಿಗೆ ಇಂತಹ ಶಿಕ್ಷೆಯೇ ಸರಿ ಎಂದು ಚಿತ್ರದ ನಾಯಕ ನ್ಯಾಯ ಕೊಡಿಸಲು ಮುಂದಾಗುವ ಕಥೆ ಚಿತ್ರದಲ್ಲಿದೆ. ಇದು ಬರೀ ಕೋರ್ಟ್ ರೂಮ್ ಡ್ರಾಮಾನಾ? ಅದಕ್ಕಿಂತಲೂ ಬೇರೆ ಏನಾದರೂ ವಿಚಾರಗಳು ಚಿತ್ರದಲ್ಲಿ ಇದ್ಯಾ? ಎಂದು ಕಾದು ನೋಡಬೇಕಿದೆ.
'ಯುದ್ಧಕಾಂಡ' ಚಿತ್ರಕ್ಕೆ ಶ್ರೀ ಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ / ಅಜಯ್ ರಾವ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸ್ವತಃ ಅಜಯ್ ರಾವ್ ನಿರ್ಮಾಪಕರಾಗಿ ಹಣ ಹೂಡಿದ್ದಾರೆ. ತಮ್ಮದೇ ತಂಡ ಕಟ್ಟಿಕೊಂಡು ಕಥೆ, ಚಿತ್ರಕಥೆ ಬರೆಸಿದ್ದಾರೆ. ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ತಮ್ಮ ಬಹುತೇಕ ಸಿನಿಮಾಗಳಲ್ಲಿ ಅಜಯ್ ರಾವ್ ಲವ್ ಬಾಯ್ ಆಗಿಯೇ ಕಾಣಿಸಿಕೊಂಡಿದ್ದರು. ಇದೀಗ ಕಪ್ಪು ಕೋಟ್ ಧರಿಸಿ ವಕೀಲನ ಪಾತ್ರಕ್ಕೆ ಜೀವ ತುಂಬಿದ್ದಾರೆ. 3 ವರ್ಷಗಳಿಂದ 'ಯುದ್ಧಕಾಂಡ' ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಲೈಂಗಿಕ ದೌರ್ಜನ್ಯದ ನೋವು ಹಾಗೂ ನ್ಯಾಯಕ್ಕಾಗಿ ಹೋರಾಟ ಮಾಡುವ ಸಂತ್ರಸ್ತರ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಸಿನಿಮಾ ಮೂಲಕ ಕಟ್ಟಿಕೊಡುವ ಪ್ರಯತ್ನ ನಡೆಯುತ್ತಿದೆ.
ಇದು ಸೌಜನ್ಯ ಪ್ರಕರಣದ ಕುರಿತಾದ ಸಿನಿಮಾ ಎಂದು ಈ ಹಿಂದೆ ಚರ್ಚೆ ಆಗಿತ್ತು. ಆದರೆ ಇದು ಯಾರೋ ಒಬ್ಬ ಹೆಣ್ಣು ಮಗುವಿನ ಮೇಲೆ ನಡೆಯುವ ದೌರ್ಜನ್ಯದ ಕಥೆಯಲ್ಲ. ದೇಶದಲ್ಲಿ ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಹೆಣ್ಣು ಮಕ್ಕಳ ಕಥೆ ಚಿತ್ರದಲ್ಲಿ ಎಂದು ನಟ, ನಿರ್ಮಾಪಕ ಅಜಯ್ ರಾವ್ ಟೀಸರ್ ರಿಲೀಸ್ ವೇಳೆ ತಿಳಿಸಿದ್ದಾರೆ.
'ಯುದ್ಧಕಾಂಡ' ಕಥೆಯ ಬಗ್ಗೆ ಚಿತ್ರದ ಟೀಸರ್ ಹೇಳುವಂತಿದೆ. ತನ್ನ ಮಗಳಿಗೆ ಆದ ಅನ್ಯಾಯ ಪ್ರತಿಯಾಗಿ ನಿವೇದಿತಾ(ಅರ್ಚನಾ ಜೋಯಿಸ್) ಎಂಬ ಮಹಿಳೆ ಕಾನೂನು ಕೈಗೆ ತೆಗೆದುಕೊಂಡು ಶಿಕ್ಷೆ ನೀಡುತ್ತಾಳೆ. ಅದನ್ನು ಒಬ್ಬ ಟೀ ಕೊಡುವ ಹುಡುಗನಿಗೆ ನಾಯಕ ಹೇಳುತ್ತಾ ಆ ತಾಯಿ ಜೈಲಿಗೆ ಹೋಗದಂತೆ ವಾದಿಸುವುದಾಗಿ ಹೇಳುತ್ತಾನೆ.
ಈ ಕಥೆ ಕೇಳಿದಾಗ ನನಗೆ ನನ್ನ ಮಗಳ ನೆನಪಾಯಿತು. ನಾನೇ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ನಿರ್ದೇಶಕ ಪವನ್ ಭಟ್ಗೆ ಹೇಳಿದೆ ಎಂದು ಅಜಯ್ ರಾವ್ ತಿಳಿಸಿದ್ದಾರೆ. ಸಾಲ ಮಾಡಿ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.


Click it and Unblock the Notifications











