Don't Miss!
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಅಜೇಯ್ ರಾವ್ ಬೆಳ್ಳಿತೆರೆಯ ಬಂಗಾರದ ಕಥೆ
'ಕೃಷ್ಣ' ಅಜೇಯ್ ರಾವ್ ನಟಿಸಿ, ಮೊದಲ ಬಾರಿಗೆ ನಿರ್ಮಾಣದ ಹೊಣೆ ಹೊತ್ತಿರುವ 'ಕೃಷ್ಣಲೀಲಾ' ಸಿನಿಮಾ ನಾಳೆ (ಮಾರ್ಚ್ 20) ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರ ಸೇರಿದಂತೆ 100 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ 'ಕೃಷ್ಣಲೀಲಾ' ನಿಮ್ಮನ್ನ ರಂಜಿಸಲು ಬರುತ್ತಿದ್ದಾರೆ.
ಕಳೆದ ವರ್ಷ ಅಜೇಯ್ ರಾವ್ ಹುಟ್ಟುಹಬ್ಬದಂದು ಸೆಟ್ಟೇರಿದ 'ಕೃಷ್ಣಲೀಲಾ' ಸಿನಿಮಾ ಈ ವರ್ಷ ತೆರೆ ಕಾಣುತ್ತಿದೆ. ನಿಜ ಹೇಳುವುದಾದರೆ, 'ಕೃಷ್ಣಲೀಲಾ' ಸಿನಿಮಾ ಇಷ್ಟೊತ್ತಿಗಾಗಲೇ ತೆರೆ ಕಂಡು ಅರ್ಧಶತಕದ ಸಂಭ್ರಮದಲ್ಲಿರಬೇಕಿತ್ತು. ಆದ್ರೆ, ಇಷ್ಟೊಂದು ಡಿಲೇ ಆಗುವುದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ.
ಹೊಸ ವರ್ಷದ ಹೊತ್ತಿಗೆ 'ಕೃಷ್ಣಲೀಲಾ' ಚಿತ್ರವನ್ನ ತೆರೆಗೆ ತರಬೇಕು ಅಂತ ನಿರ್ಮಾಪಕ ಅಜೇಯ್ ರಾವ್ ಮತ್ತು ನಿರ್ದೇಶಕ ಶಶಾಂಕ್ ತುಂಬಾ ಓಡಾಡಿದ್ದರು. ಆದ್ರೆ, ಅದು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ 'ಕಪಾಲಿ' ಚಿತ್ರಮಂದಿರ..!
ನಿರ್ಮಾಪಕ ಕಮ್ ನಟ ಅಜೇಯ್ ರಾವ್ ಗೆ 'ಕೃಷ್ಣಲೀಲಾ' ಚಿತ್ರವನ್ನ 'ಕಪಾಲಿ' ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕೆನ್ನುವ ಹಂಬಲ ಇತ್ತು. ಹೀಗಾಗಿ 'ಕಪಾಲಿ'ಗಾಗಿ ಎರಡು ತಿಂಗಳು ಕಾದು ಕಡೆಗೂ ಅದೇ ಥಿಯೇಟರ್ ನಲ್ಲಿ ಚಿತ್ರವನ್ನ ರಿಲೀಸ್ ಮಾಡುತ್ತಿದ್ದಾರೆ. [ಅಜೇಯ್ ರಾವ್ ಜೀವನದಲ್ಲಿ ಮರೆಯಲಾಗದ ದಿನ]
'ಕಪಾಲಿ' ಚಿತ್ರಮಂದಿರವೇ ಯಾಕೆ ಅಂದ್ರೆ, ನಿರ್ಮಾಪಕ ಅಜೇಯ್ ರಾವ್ ಒಂದು ಸೆಂಟಿಮೆಂಟ್ ಕಹಾನಿಯನ್ನ ಬಿಚ್ಚಿಟ್ಟರು. ಅದು, 2001 ನೇ ಇಸವಿ. ಬಣ್ಣದ ಬದುಕಿನಲ್ಲಿ ಮಿಂಚಬೇಕು, ದೊಡ್ಡ ಹೀರೋ ಆಗಬೇಕು ಅಂತ ಊರು ಬಿಟ್ಟು ಅಜೇಯ್ ರಾವ್ ಬೆಂಗಳೂರಿಗೆ ಬಂದ ವರ್ಷ.
ಹಳ್ಳಿಯಿಂದ ಪೇಟೆಗೆ ಬಸ್ ನಲ್ಲಿ ಬಂದ ಅಜೇಯ್ ರಾವ್, ಆನಂದ್ ರಾವ್ ಸರ್ಕಲ್ ಬಳಿ ಇಳಿದುಕೊಂಡರು. ಎಲ್ಲಿ ಹೋಗಬೇಕು, ಏನ್ ಮಾಡಬೇಕು ಅಂತ ಗೊತ್ತಾಗದೇ, ಪಕ್ಕದಲ್ಲೇ ಇದ್ದ ಗಣೇಶ ದೇವಸ್ಥಾನದ ಮುಂದೆ ಕೂತಿದ್ದರಂತೆ. [ಸೆನ್ಸಾರ್ ನಲ್ಲಿ 'ಕೃಷ್ಣ' ಪಾಸ್! ಯುಗಾದಿಯಲ್ಲಿ ಅಜೇಯ್ 'ಲೀಲೆ']
ಆಗ ಗಣೇಶ ದೇವಸ್ಥಾನದ ಅರ್ಚಕರು ಬಂದು, ''ದೇವಸ್ಥಾನದ ಬಾಗಿಲು ತೆಗೆಯಬೇಕು ಎದ್ದೇಳು'' ಅಂತ ಎಬ್ಬರಿಸಿದರಂತೆ. ಆಗ, ವಿಘ್ನ ವಿನಾಶಕನ ಆಶೀರ್ವಾದ ಪಡೆದು ಇಡೀ ಗಾಂಧಿನಗರ ಸುತ್ತೋಕೆ ಶುರುಮಾಡಿದರು.
ಬಡವರ ಬಾದಾಮಿ ಕಡಲೆಕಾಯಿ ಸವಿಯುತ್ತಾ, ಕಪಾಲಿ ಚಿತ್ರಮಂದಿರದ ಮುಂದೆ ಬಂದು ನಿಂತ ಅಜೇಯ್ ರಾವ್, ''ನನ್ನ ಕಟೌಟ್ ಕೂಡ ಇಲ್ಲಿ ಹೀಗೇ ದೊಡ್ಡದಾಗಿ ಹಾಕುವ ಹಾಗೆ ಆಗಬೇಕು'' ಅಂತ ಅಂದುಕೊಂಡಿದ್ದರು.
ಅಜೇಯ್ ರಾವ್ ಕನಸಿಗೆ, ಗಣಪ ಅಸ್ತು ಅಂದಿದ್ದರ ಪರಿಣಾಮ, ಅವರು ನಾಯಕರಾಗಿ ಅಭಿನಯಿಸಿದ ಮೊದಲ ಸಿನಿಮಾ 'ಎಕ್ಸ್ ಕ್ಯೂಸ್ ಮೀ' ಅದೇ ಕಪಾಲಿ ಥಿಯೇಟರ್ ನಲ್ಲಿ ತೆರೆಕಂಡು ಸಿಲ್ವರ್ ಜ್ಯೂಬ್ಲೀ ಆಚರಿಸಿಕೊಂಡಿತು. ಇದಾಗಿದ್ದು 2003 ರಲ್ಲಿ. ['ಕೃಷ್ಣಲೀಲಾ' ಚಿತ್ರಕ್ಕೆ ಸ್ಪೂರ್ತಿ ನೀಡಿರುವ ನೈಜ ಕಥೆ ಯಾವುದು?]
'ಕೃಷ್ಣಲೀಲಾ' ಸಿನಿಮಾ ಪ್ರಚಾರ ಕಾರ್ಯಕ್ರಮದ ಅಂಗವಾಗಿ 'ಒನ್ ಇಂಡಿಯಾ' ಕಛೇರಿಗೆ ಆಗಮಿಸಿದ ಅಜೇಯ್ ರಾವ್, ತಮ್ಮ 12 ವರ್ಷದ ಹಿಂದಿನ ಸೆಂಟಿಮೆಂಟ್ ಕಹಾನಿಯನ್ನ ನೆನಪಿಸಿಕೊಂಡರು.
ಅಂದು ಮೊದಲ ಬಾರಿ ಹೀರೋ ಆಗಿ ಕಪಾಲಿ ಚಿತ್ರಮಂದಿರದಲ್ಲಿ ಅಜೇಯ್ ರಾವ್ ಕಟೌಟ್ ಹಾಕಿಸಿಕೊಂಡಂತೆ, ಇಂದು ಅದೇ ಚಿತ್ರಮಂದಿರದಲ್ಲಿ ಅವರು ನಿರ್ಮಾಣದ ಮೊದಲ ಚಲನಚಿತ್ರ ತೆರೆ ಕಾಣಬೇಕು ಅಂತ ಇಲ್ಲಿಯವರೆಗೂ ಕಾದರಂತೆ. [ಧ್ವನಿ ಸಾಂದ್ರಿಕೆ ವಿಮರ್ಶೆ: ಮಸ್ತ್ ಹಾಡುಗಳ ಗುಚ್ಛ 'ಕೃಷ್ಣಲೀಲಾ']
ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಾ, 'ಕೃಷ್ಣಲೀಲಾ' ಪ್ರೊಮೋಷನ್ ನಲ್ಲಿ ತೊಡಗಿರುವ ಅಜೇಯ್ ರಾವ್ ಇಂದು ಆನಂದ್ ರಾವ್ ಸರ್ಕಲ್ ಬಳಿಯಿರುವ ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಗಣೇಶನ ಆಶೀರ್ವಾದ ಪಡೆದು 'ಕೃಷ್ಣಲೀಲಾ' ಸಿನಿಮಾ ಯಶಸ್ವಿಯಾಗಲಿ ಅಂತ ಹರಕೆ ಮಾಡಿಕೊಳ್ಳುತ್ತಾರಂತೆ. (ಫಿಲ್ಮಿಬೀಟ್ ಕನ್ನಡ)