ಕಾಮಿಡಿ ಸ್ಟಾರ್ ಕುರಿ ಪ್ರತಾಪ್ ಈಗ ಹೀರೋ
ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಕುರಿ ಪ್ರತಾಪ್ ಈಗ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಚಂದನವನದಲ್ಲಿ ಈಗಾಗಲೇ ಅನೇಕ ಹಾಸ್ಯ ಕಲಾವಿದರು ನಾಯಕರಾಗಿ ಮಿಂಚಿ ಸಕ್ಸಸ್ ಕಂಡಿದ್ದಾರೆ. ಕಾಮಿಡಿ ನಟರಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಅನೇಕ ಕಲಾವಿದರು ಖ್ಯಾತಿಗಳಿಸುತ್ತಿದ್ದಂತೆ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಇದೀಗ ಅದೇ ಸಾಲಿಗೆ ಕುರಿ ಪ್ರತಾಪ್ ಸಹ ಸೇರಿಕೊಂಡಿದ್ದಾರೆ.
ಅಂದಹಾಗೆ ಕುರಿ ಪ್ರತಾಪ್ ಹೀರೋ ಆಗಿ ನಟಿಸುತ್ತಿರುವ ಮೊದಲ ಸಿನಿಮಾಗೆ 'ಆರ್ ಸಿ ಬ್ರದರ್ಸ್' ಎಂದು ಟೈಟಲ್ ಇಡಲಾಗಿದೆ. ಪ್ರಕಾಶ್ ಕುಮಾರ್ ಎನ್ನುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಹೋದರ ನಡುವಿನ ಸಂಬಂಧದ ಬಗ್ಗೆ ಇರುವ ಸಿನಿಮಾ ಇದಾಗಿದೆ. ಚಿತ್ರದಲ್ಲಿ ತಬಲ ನಾಣಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಕುರಿ ಪ್ರತಾಪ್ ಅಣ್ಣನ ಪಾತ್ರದಲ್ಲಿ ತಬಲ ನಾಣಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುವ ಕಾಮಿಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಂದಹಾಗೆ ಆರ್ ಸಿ ಬ್ರದರ್ಸ್ ಸಿನಿಮಾ ಮಾರ್ಚ್ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಸ್ಯಾಂಡಲ್ ವುಡ್ ನಲ್ಲಿ ಸಖತ್ ಬ್ಯುಸಿ ಇರುವ ಕಾಮಿಡಿ ನಟರಲ್ಲಿ ಒಬ್ಬರಾಗಿರುವ ಕುರಿ ಪ್ರತಾಪ್ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಮಿಂಚುತ್ತಿರುವ ಕುರಿ ಪ್ರತಾಪ್ ಕಳೆದ ಬಾರಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಮನೆಯಿಂದ ಹೊರಬರುತ್ತಿದ್ದಂತೆ ಮತ್ತೆ ಸಿನಿಮಾಗಳಲ್ಲಿ ನಿರತರಾಗಿರುವ ಕುರಿ ಪ್ರತಾಪ್ ಇದೀಗ ನಾಯಕನಾಗಿ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ.


Click it and Unblock the Notifications











