'ಕುರುಕ್ಷೇತ್ರ'ದ ಭೀಮನಿಗೆ ಯಶ್ ಜತೆಗೆ ನಟಿಸುವ ಆಸೆ..!
Recommended Video
ಎಲ್ಲವೂ ನಿರ್ಮಾಪಕ ಮುನಿರತ್ನ ಅವರು ಅಂದುಕೊಂಡಂತೆ ಆಗಿದ್ದಲ್ಲಿ ಈಗಾಗಲೇ ಮುನಿರತ್ನ ಕುರುಕ್ಷೇತ್ರದಲ್ಲಿ ಯಶ್ ನಟಿಸಿರಬೇಕಿತ್ತು. ದುರ್ಯೋಧನನಾಗಿ ದರ್ಶನ್ ಕಾಣಿಸಿಕೊಳ್ಳುವಾಗ ಮತ್ತೊಂದು ಪ್ರಮುಖ ಪಾತ್ರವಾದ ಅಭಿಮನ್ಯುವಾಗಿ ನಟಿಸಲು ಮುನಿರತ್ನ ಮೊದಲು ಸಮೀಪಿಸಿದ್ದೇ ರಾಕಿಂಗ್ ಸ್ಟಾರ್ ಯಶ್ ಅವರನ್ನು.
ಅದಾಗಲೇ ಕೆಜಿಎಫ್ ಚಿತ್ರದಲ್ಲಿ ಬ್ಯುಸಿಯಾಗಿದ್ದ ಕಾರಣ ಇದರ ನಡುವೆ ತನಗೆ ಕಾಲ್ ಶೀಟ್ ನೀಡಲು ಸಾಧ್ಯವಾಗುವುದಿಲ್ಲ ಎಂದು ಯಶ್ ಹೇಳಿದ್ದರಂತೆ. ಇದೇ ಕಾರಣದಿಂದ ಆ ಪಾತ್ರ ಮುಂದೆ ನಿಖಿಲ್ ಪಾಲಾಗಿದೆ.
ಒಂದು ವೇಳೆ ಯಶ್ ಅಭಿನಯಿಸಿದ್ದರೆ ಆ ಪಾತ್ರದ ಗತ್ತೇ ಬೇರೆ ಆಗಿರುತ್ತಿತ್ತು ಎನ್ನುವ ಸತ್ಯ ಎಲ್ಲರಿಗೂ ಗೊತ್ತು. ಅದರಲ್ಲಿ ಕೂಡ ಕೆಜಿಎಫ್ ಬಿಡುಗಡೆಯ ಬಳಿಕ ದೇಶ ವಿದೇಶಗಳಲ್ಲಿ ಕೂಡ ಗುರುತಿಸಿಕೊಳ್ಳುವಂತಾಗಿದ್ದ ಯಶ್ ವಿಚಾರ ಕುರುಕ್ಷೇತ್ರ ಸೆಟ್ ನಲ್ಲಿ ಕೂಡ ಪ್ರಸ್ತಾಪವಾಗಿತ್ತು. ಮುಂದೆ ಓದಿ...

ಮೊದಲ ಚಿತ್ರದಲ್ಲೇ ದರ್ಶನ್ ಜತೆಗೆ ಮಿಂಚಿದ ಡ್ಯಾನಿಶ್
ನಮ್ಮ ಕನ್ನಡದ ಸ್ಟಾರ್ ಕಲಾವಿದರು ದೊರಕದ ಜಾಗಕ್ಕೆಲ್ಲ ಪರಭಾಷೆಯ ಹೆಸರಾಂತ ನಟರನ್ನು ತಂದು ಕೂರಿಸುತ್ತಿದ್ದರು ನಿರ್ಮಾಪಕ ಮುನಿರತ್ನ. ಆದರೆ ಭೀಮನ ಪಾತ್ರಕ್ಕೆ ಮಾತ್ರ ಮೊದಲ ಆಯ್ಕೆಯೇ ಡ್ಯಾನಿಶ್ ಅಖ್ತರ್ ಸೈಫಿಯದಾಗಿತ್ತು. ಮತ್ತು ತಾವು ಚಿತ್ರಕ್ಕೆ ಸಂಬಂಧಿಸಿದ ಹಾಗೆ ಸೂಚಿಸಿದ ಏಕೈಕ ಕಲಾವಿದ ಕೂಡ ಆತನೇ ಆಗಿದ್ದರು ಎನ್ನುತ್ತಾರೆ ದರ್ಶನ್. ಅದಕ್ಕೆ ಕಾರಣ ಹನುಮಾನ್ ಪಾತ್ರದಲ್ಲಿ ಅವರನ್ನು ನೇರವಾಗಿ ನೋಡಲು ಸಾಧ್ಯವಾಗಿದ್ದು ಕೂಡ ಹೌದು ಎನ್ನುತ್ತಾರೆ.

ಭೀಮ ಅವರೇ ಮಾಡಬೇಕು
ಸಿಯಾ ಕೆ ರಾಮ್ ಎನ್ನುವ ಹಿಂದಿ ಧಾರಾವಾಹಿಯಲ್ಲಿ ಹನುಮಂತನಾಗಿ ನಟಿಸಿದ್ದ ಡ್ಯಾನಿಶ್ ಚಿತ್ರೀಕರಣದ ಸಂದರ್ಭದಲ್ಲಿ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ನೀಡಿದ್ದ ದರ್ಶನ್ ಕಣ್ಣಿಗೆ ಬಿದ್ದಿದ್ದರು. ತಾವೇ ತಲೆ ಎತ್ತಿ ನೋಡುವಷ್ಟು ಎತ್ತರದ ವ್ಯಕ್ತಿಯನ್ನು ಕಂಡು ಮನಸಲ್ಲೇ ಮೆಚ್ಚಿಕೊಂಡಿದ್ದರು ದರ್ಶನ್. ಮುಂದೆ ಅದೇ ಮೆಚ್ಚುಗೆಯೇ ಭೀಮನ ಪಾತ್ರಕ್ಕೆ ಅವರನ್ನು ಆಯ್ದುಕೊಳ್ಳುವ ಆಕಾಂಕ್ಷೆಯನ್ನು ಪ್ರಕಟಿಸುವಂತೆ ಮಾಡಿತ್ತು. ಹಾಗೆ ಡ್ಯಾನಿಶ್ ಅವರನ್ನು ಸಂಪರ್ಕಿಸಿದಾಗ ಅವರು ತಕ್ಷಣವೇ ಒಪ್ಪಿಕೊಂಡಿದ್ದರು. ಯಾಕೆಂದರೆ ಡ್ಯಾನಿಶ್ ಮುಂಬೈಯ ಕಲಾವಿದರಾದರೂ ನಟಿಸಿದ್ದು ಧಾರಾವಾಹಿಯಲ್ಲಿ ಮಾತ್ರ. ಹಾಗಾಗಿ ಇದು ಅವರ ಪ್ರಥಮ ಸಿನಿಮಾ ಆಗಿತ್ತು. ಹಾಗೆ ಮೊದಲ ಚಿತ್ರದಲ್ಲೇ ಉತ್ತಮ ಪೌರಾಣಿಕ ಪಾತ್ರವೊಂದು ಲಭಿಸಿದಾಗ ಖುಷಿಯಿಂದಲೇ ಒಪ್ಪಿಕೊಂಡು ನಟಿಸಿದ್ದಾರೆ.

ಬಿಡುಗಡೆಯಾದ ಪ್ರಥಮ ಚಿತ್ರ ಕುರುಕ್ಷೇತ್ರವಲ್ಲ!
ಡ್ಯಾನಿಶ್ ಒಪ್ಪಿದ ಮೊದಲ ಕುರುಕ್ಷೇತ್ರವಾದರೂ, ಅವರು ಆನಂತರ ಅವರು ಒಂದಷ್ಟು ಕನ್ನಡ ಚಿತ್ರಗಳನ್ನು ಒಪ್ಪಿಕೊಂಡರು. ಅವುಗಳಲ್ಲಿ ಸುನೀಲ್ ಕುಮಾರ್ ದೇಸಾಯಿಯವರ ‘ಉದ್ಭರ್ಷ' ಸಿನಿಮಾ ಕೂಡ ಒಂದು. ಚಿತ್ರ ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದೇನೋ ನಿಜವಾದರೂ, ಬಿಡುಗಡೆಯ ಬಳಿಕ ಜನಾಕರ್ಷಣೆ ಪಡೆಯುವಲ್ಲಿ ಸೋತಿತು. ಚಿತ್ರದ ಆಕ್ಷನ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದ ಡ್ಯಾನಿಶ್ ತಮ್ಮ ದೈತ್ಯಾಕಾರದಿಂದ ಗಮನ ಸೆಳೆದಿದ್ದರು. ಇದೀಗ ಡ್ಯಾನಿಶ್ ಗೆ ಹಲವಾರು ಕನ್ನಡ ಚಿತ್ರಗಳಿಂದ ಆಫರ್ ಗಳು ಬರುತ್ತಿವೆಯಂತೆ. ಅವುಗಳಲ್ಲಿ ಕೆಲವೊಂದನ್ನು ಒಪ್ಪಿಕೊಂಡಿದ್ದಾರೆ ಕೂಡ.

ಯಶ್ ಜೊತೆ ನಟಿಸುವ ಆಸೆ
ಡ್ಯಾನಿಶ್ ಅವರಿಗೊಂದು ಕನಸಿದೆ. ಅದು ಯಶ್ ಕುರಿತಾದದ್ದು. ಈಗಾಗಲೇ ಕೆಜಿಎಫ್ ಚಿತ್ರವನ್ನು ಹಲವಾರು ಬಾರಿ ನೋಡಿ ಮೆಚ್ಚಿರುವ ಡ್ಯಾನಿಶ್ ಗೆ ಯಶ್ ಜತೆಗೆ ಚಿತ್ರವೊಂದರಲ್ಲಿ ನಟಿಸುವ ಆಸೆ ಇದೆಯಂತೆ. ಅವರ ಕಡೆಯಿಂದ ಇದುವರೆಗೆ ಯಾವುದೇ ಆಫರ್ ಬಂದಿಲ್ಲ. ಆದರೆ ಅವಕಾಶ ಬಂದಲ್ಲಿ ಕಣ್ಣುಮುಚ್ಚಿ ಒಪ್ಪಿಕೊಳ್ಳುವುದಾಗಿ ಡ್ಯಾನಿಶ್ ತಿಳಿಸಿದ್ದಾರೆ. ಹಾಗಂತ ಡ್ಯಾನಿಶ್ ಖುದ್ದಾಗಿ ಫಿಲ್ಮೀಬೀಟ್ ಜತೆಗೆ ಹೇಳಿಕೊಂಡಿದ್ದಾರೆ. ಕೆಜಿಎಫ್ ಭಾಗ ಎರಡರಲ್ಲಿ ಸಾಧ್ಯವಾಗದಿದ್ದರೂ, ಮುಂದಿನ ಯಾವುದಾದರೂ ಒಂದು ಚಿತ್ರದಲ್ಲಿ ಡ್ಯಾನಿಶ್ ಆಸೆ ಈಡೇರಲಿ ಎಂದು ಫಿಲ್ಮೀಬೀಟ್ ಹಾರೈಸುತ್ತದೆ.


Click it and Unblock the Notifications











