15 ವರ್ಷ ನಾನು ಕೋಮಾದಲ್ಲಿದ್ದೇ, ಖುಷಿ ನಟಿ ಚೈತ್ರಾ ಹಳ್ಳಿಕೇರಿ ಮನದಾಳ !
ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಬಹುತೇಕರ ವ್ಯೆಯಕ್ತಿಕ ಜೀವನದಲ್ಲಿ ಪ್ರೀತಿ-ಪ್ರೇಮ-ಪ್ರಣಯ-ಮದುವೆ ಮತ್ತು ವಿಚ್ಛೇದನ ಮಾಮೂಲು. ಇಲ್ಲಿ ಮದುವೆಯಾದ ಆರಂಭದಲ್ಲಿ ಬದುಕು ತುಂಬಾ ಸಂತೋಷಮಯವಾಗಿರುತ್ತೆ. ಆದರೆ ದಾಂಪತ್ಯ ಜೀವನ ನಡೆಸುತ್ತಾ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುವ ಅನೇಕರು ಆ ನಂತರ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿ ಹೊರ ಬಂದಿದ್ದಾರೆ. ಪರಸ್ಪರ ಮುಖ ನೋಡಲು ಕೂಡ ಥೂ ಅಸಹ್ಯ ಎಂದುಕೊಂಡವರು ಇದ್ದಾರೆ.
ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಬಹುತೇಕರ ಬದುಕಿನಲ್ಲಿ ಲವ್ಗಿಂತ ಹೆಚ್ಚು ಅಹಂಗೆ ಬೆಲೆ ಇರುತ್ತೆ. ದಾಂಪತ್ಯದಲ್ಲಿ ಜಗಳ..ಮನಸ್ತಾಪ.. ಸರ್ವೇ ಸಾಮಾನ್ಯವಾಗಿರುತ್ತೆ. ಎಷ್ಟೇ ಜತನದಿಂದ ಆ ಸಂಬಂಧವನ್ನು ಕಾಪಾಡಿಕೊಳ್ಳುವ ಪ್ರಯತ್ನವನ್ನು ಮಾಡಿದರು ಕೂಡ ಅದು ಸಾಧ್ಯವಾಗುವುದೇ ಇಲ್ಲ. ಬದಲಿಗೆ ಈ ಸಾಲಿನಲ್ಲಿರುವ ಕೆಲವರು ಒಂದಿಲ್ಲೊಂದು ರೀತಿಯಲ್ಲಿ ನರಕಯಾತನೆಯನ್ನು ಅನುಭವಿಸಿಯೇ ಅನುಭವಿಸಿರುತ್ತಾರೆ.

ಎಷ್ಟರ ಮಟ್ಟಿಗೆ ಅಂದರೆ ತಮ್ಮ ಮದುವೆ ಮತ್ತು ವಿಚ್ಛೇದನದ ಕುರಿತು ಕೂಡ ಮಾತನಾಡಲು ಇವರು ಹಿಂಜರಿಯುತ್ತಾರೆ. ಮದುವೆಯ ಕುರಿತಾಗಲಿ ಅಥವಾ ಸಡಿಲಗೊಂಡು ಕಳಚಿ ಬಿದ್ದ ಸಂಬಂಧದ ಬಗ್ಗೆಯಾಗಲಿ ಕೇಳಿದರೆ ಬೆಚ್ಚಿ ಬೀಳುತ್ತಾರೆ. ಕೆರೆದು ಕೆರೆದು ಮತ್ತೆ ಗಾಯ ಮಾಡಿಕೊಳ್ಳಲು ಮನಸಿಲ್ಲ ಎಂದು ಮುಖಕ್ಕೆ ಹೊಡೆದಂತೆಯೇ ಹೇಳಿ ಬಿಡುತ್ತಾರೆ. ಉದಾಹರಣೆಗೆ ಚೈತ್ರಾ ಹಳ್ಳಿಕೇರಿ.
ಹೌದು, ಚೈತ್ರಾ ಹಳ್ಳಿಕೇರಿ.. ಶಿಷ್ಯ ಮತ್ತು ಖುಷಿ ಚಿತ್ರಗಳ ಮೂಲಕ ಅನೇಕರ ಹೃದಯವನ್ನು ಗೆದ್ದ ಚೆಲುವೆ. ಅವಕಾಶಗಳ ಮಹಾಪೂರ ಹರಿದು ಬರುತ್ತಿದ್ದ ಸಂದರ್ಭದಲ್ಲಿಯೇ ಚಿತ್ರರಂಗವನ್ನು ಎಡಗಾಲಿನಲ್ಲಿ ಒದ್ದು ಬಾಲಾಜಿ ಎಂಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದರು ಇವರು. ಇಷ್ಟೇ ಅಲ್ಲ ಮದುವೆಯ ನಂತರ ಚಿತ್ರರಂಗದಿಂದ ದೂರವಾದರು. ಇಬ್ಬರು ಮಕ್ಕಳ ತಾಯಿ ಕೂಡ ಆದರು.
ಆದರೆ.. ದುರಾದೃಷ್ಟ ಚೈತ್ರಾಗೆ ಸಂಸಾರದ ಸುಖ ಸಿಗಲಿಲ್ಲ. ಸಿಗಬೇಕಿದ್ದ ಮಾನ-ಮರ್ಯಾದೆ ಕೂಡ ಗಂಡನಿಂದ ಸಿಗಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ 2018ರಲ್ಲಿ ಚೈತ್ರಾ ದಾಂಪತ್ಯ ಕಲಹ ಬೀದಿಗೆ ಬಂದಿತ್ತು. ಕಂಡವರ ಬಾಯಿಗೆ ಇವರ ದಾಂಪತ್ಯ ಜೀವನ ಆಹಾರವೂ ಆಗಿತ್ತು. ಆ ನಂತರ ಮಕ್ಕಳ ಹಿತದೃಷ್ಟಿಯಿಂದ ಅನ್ಯೋನ್ಯವಾಗಿ ಇರಲು ಇಬ್ಬರು ಒಪ್ಪಂದ ಮಾಡಿಕೊಂಡರು.
ಆದರೆ .. 2021ರಲ್ಲಿ ಈ ಒಪ್ಪಂದ ಕೂಡ ಮುರಿದು ಬಿತ್ತು. 2021ರಲ್ಲಿ ಇಬ್ಬರ ಸಾಂಸಾರಿಕ ಜೀವನ ಇನ್ನೊಮ್ಮೆ ಸುದ್ದಿಯಾಯ್ತು. ವಿಚ್ಛೇದನದ ಅರ್ಜಿ ವಿಚಾರಣೆ ಕೌಟಂಬಿಕ ನ್ಯಾಯಾಲಯದಲ್ಲಿ ಶುರುವಾಯಿತು.

ಹೀಗೆ ತಮ್ಮ ವ್ಯೆಯಕ್ತಿಕ ಜೀವನದಿಂದ ಆಗಾಗ ಸುದ್ದಿಯಾಗುತ್ತಾ ಬಂದ ಚೈತ್ರಾ ಹಲವಾರು ಬಾರಿ ತಮ್ಮ ಮದುವೆ ಮತ್ತು ವಿಚ್ಛೇದನದ ಕುರಿತು ಇಲ್ಲಿಯವರೆಗೆ ಮಾತನಾಡಿದ್ದಾರೆ. ಚೈತ್ರಾ ಮಾತನಾಡಿದ ಈ ಮಾತುಗಳಿಗೆ ಸಾಕ್ಷಿ ಎಂಬಂತೆ 'ಗೂಗಲ್' ಮತ್ತು 'ಯೂಟ್ಯೂಬ್'ನಲ್ಲಿ ಇಲ್ಲಿಯವರೆಗೆ ಹಲವಾರು ಮಾಹಿತಿಗಳಿವೆ. ವಿಡಿಯೋಗಳಿವೆ.
ಆದರೂ ಕೂಡ ಚೈತ್ರಾ ಅವರ ಮುರಿದು ಬಿದ್ದ ದಾಂಪತ್ಯದ ಬಗ್ಗೆ ಹಲವರಲ್ಲಿ ಇನ್ನೂ ಕುತೂಹಲ ಇದ್ದೇ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಚೈತ್ರಾ ಅವರಿಗೆ ಮತ್ತೊಮ್ಮೆ ದಾಂಪತ್ಯ ಜೀವನದ ಕುರಿತು ಪ್ರಶ್ನೆಯನ್ನು ಕೇಳಲಾಗಿದೆ.
ಹೌದು, ಚೈತ್ರಾ ಹಳ್ಳಿಕೇರಿ ''ವಿಶ್ವವಾಣಿ'' ಯೂಟ್ಯೂಬ್ ಚಾನೆಲ್ಗೆ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಚೈತ್ರಾ ತಮ್ಮ ಬದುಕಿನ ಹಲವು ವಿಚಾರಗಳ ಕುರಿತು, ತಮ್ಮ ಚಿತ್ರರಂಗದ ಆರಂಭಿಕ ದಿನಗಳ ಕುರಿತು ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಮದುವೆ ಮತ್ತು ಡಿವೋರ್ಸ್ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡಿರುವ ಚೈತ್ರಾ ಆ ಹಳೆಯ ಅಧ್ಯಾಯವನ್ನು ಮೆಲುಕು ಹಾಕಲು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಅದೆಲ್ಲ ನನಗೆ ಬೇಡವೇ ಬೇಡ ಅದೆಲ್ಲಾ ಮುಗಿದು ಹೋದ ಅಧ್ಯಾಯ ಎಂದು ಹೇಳಿರುವ ಚೈತ್ರಾ ಆ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಬೇಡ ಎಂದು ಹೇಳಿದ್ದಾರೆ. ನಾನು 15 ರಿಂದ 17 ವರ್ಷ ಕೋಮಾದಲ್ಲಿದ್ದೇ ಎಂದುಕೊಳ್ಳಿ ಯಾಕೆಂದರೆ ನಾನು ಹಾಗೇ ಅಂದುಕೊಂಡಿದ್ದೇನೆ ಎಂದು ಹೇಳಿರುವ ಚೈತ್ರಾ ಆ 15-17 ವರ್ಷವನ್ನು ನಾನು ನನ್ನ ಜೀವನದಿಂದ ಕಿತ್ತೆಸೆದಿದ್ದೇನೆ ಎಂದು ಹೇಳಿದ್ದಾರೆ.
ಹೀಗಾಗಿ 2006ರಲ್ಲಿ ಚೈತ್ರಾ ಕೋಮಾಗೆ ಜಾರಿದಳು 2021ರಲ್ಲಿ ಮತ್ತೆ ಮರಳಿ ಬಂದಳು ಎಂದುಕೊಳ್ಳಿ ಎಂದಿರುವ ಚೈತ್ರಾ 15 ವರ್ಷ ನಾನು ಕಾಣೆಯಾಗಿದ್ದೇ ಎಂದುಕೊಳ್ಳಿ ಆ ವಿಚಾರದ ಕುರಿತು ನನಗೇನು ಕೇಳಬೇಡಿ ನನಗೆ ಆ ಕುರಿತು ಮಾತನಾಡಲು ಇಷ್ಟ ಇಲ್ಲ ಎಂದು ಹೇಳಿದ್ದಾರೆ.


Click it and Unblock the Notifications











