Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುಟ್ಟಪ್ಪನ ಮುದ್ದಿನ ಮಗಳು ಈ 'ಮಲೆಗಳಲ್ಲಿ ಮದುಮಗಳು'
ಬೆಂಗಳೂರಿನಲ್ಲಿ ಈಗ ಸಿಕ್ಕಾಪಟ್ಟೆ ಚಳಿ... ಸಂಜೆ ವೇಳೆ ಹೊರಗೆ ಹೋಗುವುದಕ್ಕೆ ಜನ ಹಿಂದು ಮುಂದು ನೋಡುತ್ತಾರೆ. ಆದರೆ ಇಂತಹ ಚಳಿಯಲ್ಲಿಯೂ ಒಂದು ಕಡೆ ಇಡೀ ರಾತ್ರಿ ಬೆಂಗಳೂರಿನ ಮಂದಿ ನಾಟಕ ನೋಡುತ್ತಿದ್ದಾರೆ. ಅದು ಪುಟ್ಟಪ್ಪನ ಮುದ್ದಿನ ಮಗಳು 'ಮಲೆಗಳಲ್ಲಿ ಮದುಮಗಳು' ನಾಟಕವನ್ನು.
ರಾಷ್ಟ್ರಕವಿ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದು ಮತ್ತು 'ಮಲೆಗಳಲ್ಲಿ ಮದುಮಗಳು' (1967) ಕೃತಿ ಬಿಡುಗಡೆಯಾಗಿ 50 ವರ್ಷ ಪೂರೈಸಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಕಲಾಗ್ರಾಮದಲ್ಲಿ 'ಮಲೆಗಳಲ್ಲಿ ಮದುಮಗಳು' ನಾಟಕ ಪ್ರದರ್ಶನ ನಡೆಯುತ್ತಿದೆ. ಡಿಸೆಂಬರ್ 29ಕ್ಕೆ ಶುರುವಾಗಿರುವ ಈ ನಾಟಕ ಪ್ರದರ್ಶನ ಜನವರಿ 31ರ ವರೆಗೆ ಇದೆ. ಇಂತಹ ಅಪೂರ್ವ ನಾಟಕವನ್ನು ನಾವು ಕೂಡ ಕಣ್ತುಂಬಿಕೊಂಡೆವು.
'ಮಲೆಗಳಲ್ಲಿ ಮದುಮಗಳು' ನಾಟಕ ನೋಡಿದ ಜನರನ್ನು ಸಿಲಿಕಾನ್ ಸಿಟಿಯಿಂದ ಸೀದಾ ಮಲೆನಾಡಿನ ತೀರ್ಥಹಳ್ಳಿಯ ಕರೆದುಕೊಂಡು ಹೋಗುತ್ತದೆ. ನಾಟಕ ಪ್ರದರ್ಶನ ರಾತ್ರಿ 8.30ಕ್ಕೆ ಪ್ರಾರಂಭವಾಗಿ ಬೆಳ್ಳಗೆ 6 ಗಂಟೆಯ ಸೂರ್ಯನ ದರ್ಶನದೊಂದಿಗೆ ಅಂತ್ಯವಾಯಿತು. ಸುದೀರ್ಘವಾಗಿ 9 ಗಂಟೆಗಳ ಕಾಲ ನಡೆದ ಈ ನಾಟಕ ಕುವೆಂಪು ಬರವಣಿಗೆ ಇಂದಿಗೂ ಎಂದಿಗೂ ಜೀವಂತ ಎನ್ನುವುದನ್ನು ಮತ್ತೆ ಸಾಬೀತು ಮಾಡಿತು. ಮುಂದೆ ಓದಿ..
ಮಲೆನಾಡಿನ ಕಥೆ
'ಮಲೆಗಳಲ್ಲಿ ಮದುಮಗಳು' ಮಲೆನಾಡಿನ ಮಣ್ಣಿನ ಕಥೆ. ಈ ಕಥೆ ಶಿವಮೊಗ್ಗದ ತೀರ್ಥಹಳ್ಳಿಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ನಡೆಯುವ ಕಥೆ. ಆ ಭಾಗದ ಮತ್ತು ಆ ಕಾಲದ ಜಾತಿ ವ್ಯವಸ್ಥೆ, ಧರ್ಮ, ಮೂಡನಂಬಿಕೆ, ರಾಜಕೀಯ, ಜೀತ ಪದ್ಧತಿ, ಮಲೆನಾಡ ಸೊಬಗು ಹೀಗೆ ಅನೇಕ ವಿಷಯಗಳನ್ನು ಹೇಳಿರುವ ಅಪರೂಪದ ಮತ್ತು ಕನ್ನಡದ ಹೆಮ್ಮೆಯ ಕೃತಿಯ ನಾಟಕ ಇದಾಗಿದೆ.
ಅದ್ಬುತ ರಂಗ ವೇದಿಕೆ
ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆದ ಈ ನಾಟಕ ನಿಜಕ್ಕೂ ನೋಡುಗರನ್ನು ಬೇರೆಯದೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಯಾವ ಸಿನಿಮಾಗೂ ಕಡಿಮೆ ಇಲ್ಲದ ರೀತಿಯಲ್ಲಿ ಈ ನಾಟಕವನ್ನು ಪ್ರದರ್ಶನ ಮಾಡಲಾಗಿತ್ತು. ನಾಟಕ 4 ಬೇರೆ ಬೇರೆ ವೇದಿಕೆಯಲ್ಲಿ ನಡೆದಿದ್ದು, ಅಲ್ಲಿನ ಸೆಟ್ ಮಲೆನಾಡಿನಲ್ಲಿ ಇದ್ದೇವೆ ಎಂಬ ಭಾವವನ್ನು ಮೂಡಿಸಿತ್ತು.
ಮನಸಿಗೆ ಹತ್ತಿರ ಆಗುವ ಪಾತ್ರಗಳು
'ಮಲೆಗಳಲ್ಲಿ ಮದುಮಗಳು' ನಾಟಕದಲ್ಲಿ ಅನೇಕ ಪಾತ್ರಗಳು ನೋಡ ನೋಡುತ್ತ ಮನಸಿಗೆ ಹತ್ತಿರ ಆಗಿಬಿಡುತ್ತದೆ. ಅದರಲ್ಲಿಯೂ ಗುತ್ತಿ, ಹುಲಿಯಾ, ಐತಾ, ಪಿಂಚುಲು, ತಿಮ್ಮಿ, ಹೆಗ್ಡೆ ಹೀಗೆ ಅನೇಕ ಪಾತ್ರಗಳು ನಮ್ಮನ್ನು ನಗಿಸುತ್ತದೆ. ಜೊತೆ ಜೊತೆಗೆ ಕೆಲ ಸಮಯದಲ್ಲಿ ಭಾವುಕವಾಗಿಸುತ್ತದೆ.
ಇಂದಿನ ವಿಧ್ಯಮಾನಗಳ ಬಳಕೆ
ಆ ಕಾಲದಲ್ಲಿ ರಚಿತವಾಗಿರುವ ಈ ನಾಟಕದಲ್ಲಿ ಇಂದಿನ ವಿಧ್ಯಮಾನವನ್ನು ಚೆನ್ನಾಗಿ ಸೇರಿಸಲಾಗಿದೆ. 'ಡಿಜಿಟಲ್ ಇಂಡಿಯಾ' ಸೇರಿದಂತೆ ಇಂದಿನ ಅನೇಕ ವಿಷಯಗಳನ್ನು ನಾಟಕದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ. ಅದರಲ್ಲಿಯೂ ನಿರೂಪಣೆಯನ್ನು ಮಾಡುವುದಕ್ಕೆ ಬರುವ ಜೋಗಪ್ಪ ನಾಟಕವನ್ನು ಸುಗಮವಾಗಿ ಸಂಚರಿಸುವಂತೆ ಮಾಡುತ್ತಾರೆ.
ಹಂಸಲೇಖ ಹಾಡುಗಳು
'ಮಲೆಗಳಲ್ಲಿ ಮದುಮಗಳು' ನಾಟಕಕ್ಕೆ ಹಂಸಲೇಖ ಸಂಗೀತ ನೀಡಿದ್ದಾರೆ. ಬರಿ 5 ಲಕ್ಷ ಪಡೆದು 45 ಹಾಡುಗಳನ್ನು ನಾದಬ್ರಹ್ಮ ನೀಡಿದ್ದಾರಂತೆ. ಇಡೀ ನಾಟಕಕ್ಕೆ ದೊಡ್ಡ ಶಕ್ತಿ ಹಂಸಲೇಖ ಅವರ ಸಂಗೀತ. ನಾಟಕ ನೋಡುವಾಗ ಚಳಿಯ ಕಾಟಕ್ಕೆ ನಿದ್ದೆ ಬರುತ್ತಿದೆ ಎನ್ನುವ ವೇಳೆಗೆ ಸರಿಯಾಗಿ ಹಂಸಲೇಖ ಹಾಡುಗಳು ಹೊಸ ಉತ್ಸಾಹ ನೀಡುತ್ತಿತ್ತು. ಸಂಗೀತ ಜೊತೆಗೆ ಬೆಳಕು ನಾಟಕದ ಸೊಬಗನ್ನು ಹೆಚ್ಚಿಸಿತ್ತು.
ತಮಾಷೆ ಅಲ್ಲ
ಇಂದಿನ ಕಾಲದಲ್ಲಿ ಅದು ಕೂಡ ಇಡೀ ರಾತ್ರಿ ಒಂದು ನಾಟಕವನ್ನು ಜನರಿಗೆ ನೋಡುವಂತೆ ಮಾಡುವ ಕಾರ್ಯ ತಮಾಷೆ ಮಾತಲ್ಲ. ಆದರೆ ಇಲ್ಲಿ ಚಳಿ, ನಿದ್ದೆ ಎಲ್ಲವನ್ನು ಮರೆತು ಜನ ರಾತ್ರಿಯಿಂದ ಬೆಳ್ಳಗೆವರೆಗೆ ನಾಟಕವನ್ನು ಆನಂದಿಸುತ್ತಿದ್ದಾರೆ. ಇದರ ಕೀರ್ತಿ ಒಂದು ಕಡೆ ಕುವೆಂಪು ಅವರ ಬರವಣಿಗೆಗೆ ಸಲ್ಲಿದರೆ, ಇನ್ನೊಂದು ಕಡೆ ನಾಟಕವನ್ನು ಅಷ್ಟು ಚೆನ್ನಾಗಿ ಅಭಿನಯ ರೂಪಕ್ಕೆ ತಂದ ನಿರ್ದೇಶಕ ಮತ್ತು ಅವರ ಎಲ್ಲ ಕಲಾವಿದರಿಗೆ ಸೇರಬೇಕು.
ಕನ್ನಡ.. ಕನ್ನಡ.. ಕನ್ನಡ..
ಬೆಂಗಳೂರಿನಲ್ಲಿ ನಮ್ಮ ಕನ್ನಡದ ಕಂಪು ದಿನೇ ದಿನೇ ಕಡಿಮೆ ಆಗುತ್ತಿದೆ. ಎಲ್ಲಿಯೇ ಹೋದರು ಹಿಂದಿ.. ತಮಿಳು.. ತೆಲುಗು..ಮಲೆಯಾಳಂ ಭಾಷೆ ಕಿವಿಗೆ ಅಪ್ಪಳಿಸುತ್ತದೆ. ಆದರೆ ಕಲಾಗ್ರಾಮದ ಈ ವಾತಾವರಣ ಸಂಪೂರ್ಣ ಕನ್ನಡಮಯ ವಾಗಿತ್ತು. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ 'ಮಲೆಗಳಲ್ಲಿ ಮದುಮಗಳು' ನಾಟಕ ಒಂದು ಅನುಭವ.. ಅದನ್ನು ಅನುಭವಿಸಿದರೆ ಅದರ ನಿಜವಾದ ರುಚಿ ತಿಳಿಯುತ್ತದೆ.