ಚಿತ್ರರಂಗದ ಸಮಸ್ಯೆ.. ಪರಿಹಾರ; ಶಿವಣ್ಣ ಮನೆ ಸಭೆ ಬಗ್ಗೆ ಕೆ. ವಿ ಚಂದ್ರಶೇಖರ್ ಮಾಹಿತಿ
ಕನ್ನಡ ಚಿತ್ರರಂಗ ಮತ್ತೆ ಸಂಕಷ್ಟಕ್ಕೆ ಸಿಲುಕ್ಕಿದೆ. ಒಂದೆರಡು ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡಿದಾಗ ಎಲ್ಲಾ ಸರಿ ಹೋಯ್ತು ಎಂದು ಎಲ್ಲವನ್ನು ಮರೆತು ಸುಮ್ಮನಾಗಿಬಿಡುತ್ತಿದ್ದರು. ಆದರೆ ಕಳೆದ ಐದಾರು ತಿಂಗಳಲ್ಲಿ ಯಾವುದೇ ಕನ್ನಡ ಸಿನಿಮಾ ಗೆಲ್ಲದೇ ಚಿತ್ರಮಂದಿರಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿತ್ರಮಂದಿರ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇತ್ತೀಚೆಗೆ ನಟ ಶಿವರಾಜ್ಕುಮಾರ್ ಮನೆಯಲ್ಲಿ ಚಿತ್ರರಂಗದ ಕೆಲವರು ಸಭೆ ನಡೆಸಿ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ಏನು ಮಾಡಬಹುದು ಎಂದು ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ನಟರಾದ ಗಣೇಶ್, ಧ್ರುವ ಸರ್ಜಾ ಹಾಗೂ ಸಿನಿಮಾ ಪ್ರದರ್ಶಕರು, ವಿತರಕರು ಭಾಗಿ ಆಗಿದ್ದರು. ಮುಂದೆ ಚಿತ್ರತಂಡದ ಪ್ರಮುಖರನ್ನೆಲ್ಲಾ ಸೇರಿಸಿ ಮತ್ತೊಮ್ಮೆ ಸಭೆ ಮಾಡಿ ಸಂಕಷ್ಟ ಪರಿಹಾರಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸರ್ಕಾರದಿಂದ ಸಹಾಯ ಕೇಳಲು ತೀರ್ಮಾನಿಸಲಾಯಿತು.

ಅಷ್ಟಕ್ಕೂ ಚಿತ್ರರಂಗದ ಸಂಕಷ್ಟಕ್ಕೆ ಕಾರಣ ಏನು? ಶಿವಣ್ಣ ಅವರ ಶ್ರೀಮುತ್ತು ನಿವಾಸದಲ್ಲಿ ನಡೆದ ಸಭೆಯಲ್ಲಿ ಯಾವೆಲ್ಲಾ ವಿಚಾರಗಳು ಚರ್ಚೆಗೆ ಬಂದಿತ್ತು. ಅಂತಿಮವಾಗಿ ಎಲ್ಲರೂ ಸೇರಿ ಯಾವ ನಿರ್ಧಾರ ಕೈಗೊಂಡರು ಎನ್ನುವ ಬಗ್ಗೆ ಕರ್ನಾಟಕ ಚಿತ್ರಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ.ವಿ. ಚಂದ್ರಶೇಖರ್ ಫಿಲ್ಮಿಬೀಟ್ಗೆ ಮಾಹಿತಿ ನೀಡಿದ್ದಾರೆ.
"ಮುಚ್ಚುತ್ತಿರುವ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಸರ್ಕಾರದ ಬಳಿ ಹೋಗಿ ಸಹಾಯಧನ ಕೇಳಬೇಕು ಎಂದು ಶಿವಣ್ಣನ ಮನೆ ಸಭೆಯಲ್ಲಿ ಚರ್ಚಿಸಲಾಯಿತು. ಚಿತ್ರಮಂದರಗಳ ಎರಡು ವರ್ಷ ಕೆಇಬಿ ಬಿಲ್ ಹಾಗೂ ಆಸ್ತಿ ತೆರಿಗೆಗೆ 2 ವರ್ಷ ರಿಯಾಯಿತಿ ಕೇಳಬೇಕು ಎಂದು ತೀರ್ಮಾನಿಸಲಾಯಿತು. ಹಳೇ ಚಿತ್ರಮಂದಿರಗಳನ್ನು ರಿನೋವೇಷನ್ ಮಾಡುವುದಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವಂತೆ ಸರ್ಕಾರದ ಬಳಿ ಮನವಿ ಮಾಡಬೇಕು ಎಂದುಕೊಂಡಿದ್ದೇವೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ನೋಡಬೇಕು" ಎಂದು ಕೆ.ವಿ. ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ಬರೀ ಚಿತ್ರಮಂದಿರಗಳನ್ನು ಉಳಿಸಿಕೊಂಡರೆ ಸಾಲದು. ಮುಂದೆ ಒಳ್ಳೆ ಸಿನಿಮಾಗಳು ಬಂದರೆ ಮಾತ್ರ ಉಳಿಗಾಲ. ಈ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆಯಾಗಿದೆ. "ಚಿತ್ರಮಂದಿರಗಳು ಉಳಿಯಬೇಕು ಎನ್ನುವುದು ಒಂದು ಕಾನ್ಸೆಪ್ಟ್. ಒಳ್ಳೆ ಸಿನಿಮಾ ಮಾಡಬೇಕು ಎನ್ನುವುದು ಮತ್ತೊಂದು ಕಾನ್ಸೆಪ್ಟ್. ಪ್ರೇಕ್ಷಕರನ್ನು ನಾವು ಚಿತ್ರಮಂದಿರಕ್ಕೆ ಕರೆದುಕೊಂಡು ಬರಲು ಸಾಧ್ಯವಿಲ್ಲ. ಇನ್ನು ಮುಂದೆ ಎಲ್ಲರೂ ಹೆಚ್ಚು ಸಿನಿಮಾ ಮಾಡಬೇಕು ಎನ್ನುವ ಬಗ್ಗೆ ಕೂಡ ಕಲಾವಿದರ ಜೊತೆಗೂ ಮಾತನಾಡಲಾಗುತ್ತಿದೆ. ಕೆಲವರು ಮಾತ್ರ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿದ್ದಾರೆ. ಇನ್ನುಳಿದಂತೆ ಉಪೇಂದ್ರ, ಶಿವಣ್ಣ ಸೇರಿದಂತೆ ಎಲ್ಲರೂ ಹೊಸ ಹೊಸ ಸಿನಿಮಾ ಆರಂಭಿಸಿದ್ದಾರೆ. ಇನ್ನು 6 ತಿಂಗಳಲ್ಲಿ ಒಳ್ಳೆ ಸಿನಿಮಾಗಳು ಬರುತ್ತವೆ" ಎಂದು ವಿವರಿಸಿದ್ದಾರೆ.
ಒಳ್ಳೆ ಸಿನಿಮಾಗಳು ಬರುತ್ತವೆ ಎಂದು ಕಾದು ಕಾದು ಚಿತ್ರಮಂದಿರದ ಮಾಲೀಕರು ಸಂಕಷ್ಟಕ್ಕೆ ಸಿಲುತ್ತಿದ್ದಾಋಎ. ಅದೇ ಕಾರಣಕ್ಕೆ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ಸರ್ಕಾರದ ಸಹಾಯ ಕೇಳುತ್ತಿದ್ದೇವೆ. ನೋಡೋಣ ಸರ್ಕಾರ ಪ್ರತಿಕ್ರಿಯೆ ಏನು ಅಂತ. ನನ್ನದು ಸಿನಿಮಾ ಪ್ರದರ್ಶನ ವಿಭಾಗ. ಚಿತ್ರ ನಿರ್ಮಾಣದ ಬಗ್ಗೆ ಗೊತ್ತಿಲ್ಲ. ಎಲ್ಲಿ ಕನ್ನಡ ಸಿನಿಮಾಗಳು ಸೋಲುತ್ತಿದೆ ಎಂದು ಮೇಕರ್ಸ್ ತಿಳಿದುಕೊಳ್ಳಬೇಕು ಎಂದು ಕೆ.ವಿ. ಚಂದ್ರಶೇಖರ್ ತಿಳಿಸಿದ್ದಾರೆ.
ನಿಯಮಿತವಾಗಿ ಒಳ್ಳೆ ಸಿನಿಮಾಗಳು ಬಿಡುಗಡೆ ಆಗದೇ ಇರುವುದೇ ಕನ್ನಡ ಚಿತ್ರರಂಗದ ಹಿನ್ನಡೆಗೆ ಕಾರಣವಾಗಿದೆ. ಕೆಲ ನಟರು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮುಗುಳುಗಿದ್ದು ಸಿನಿಮಾ ಮಾಡುವುದು ತಡ ಮಾಡುತ್ತಿದ್ದಾರೆ. ಸ್ಟಾರ್ ನಟರ ದೊಡ್ಡ ಸಿನಿಮಾಗಳ ನಡುವೆ ಸಣ್ಣ ಸಿನಿಮಾಗಳು ಬಂದರೆ ಗೆಲ್ಲುತ್ತದೆ. ಬರೀ ಸಣ್ಣ ಸಿನಿಮಾಗಳನ್ನು ಪ್ರದರ್ಶನ ಮಾಡಿದರೆ ಚಿತ್ರಮಂದಿರಗಳು ಪ್ರೇಕ್ಷಕರ ಬರ ಎದುರಿಸುವಂತಾಗುತ್ತದೆ. ಈಗ ಕೂಡ ಆಗುತ್ತಿರುವುದೇ ಅದೇ.
'ಮ್ಯಾಕ್ಸ್' ಹಾಗೂ 'ಯುಐ' ಬಳಿಕ ಬಂದ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಈ 5 ತಿಂಗಳಲ್ಲಿ ಒಂದೇ ಒಂದು ಸಿನಿಮಾ ಹಿಟ್ ಆಗಲಿಲ್ಲ. ಐಪಿಎಲ್ ಆರ್ಭಟಕ್ಕೆ ಹೆದರಿ ಸಿನಿಮಾಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುವಂತಾಗಿದೆ. ಮುಂದಿನ 7 ತಿಂಗಳಲ್ಲಿ 'ಕೆಡಿ', '45', 'ಎಕ್ಕ', 'ಕಾಂತಾರ-1' ಸೇರಿ ಒಂದಷ್ಟು ಸಿನಿಮಾಗಳು ಗೆಲ್ಲುವ ಸಾಧ್ಯತೆಯಿದೆ. ಪರಭಾಷಾ ಸಿನಿಮಾಗಳೇ ಸದ್ಯಕ್ಕೆ ಕರ್ನಾಟಕದಲ್ಲಿ ಸದ್ದು ಮಾಡುತ್ತಿವೆ. ಯಶ್ ಸದ್ಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯಕ್ಕೆ ಯಶ್ ಕನ್ನಡ ಚಿತ್ರದಲ್ಲಿ ಮಾತ್ರ ನಟಿಸುವುದು ಕಷ್ಟ ಇದೆ. ಇನ್ನು ಮುಂದೆ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾತ್ರ ಮಾಡಬಹುದು ಎನ್ನಲಾಗ್ತಿದೆ. ಇನ್ನು ಸುದೀಪ್ 2 ವರ್ಷಗಳ ಬಳಿಕ 'ಮ್ಯಾಕ್ಸ್' ಕೊಟ್ಟಿದ್ದರು. ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ನಟಿಸೋಕೆ ಹೊರಟಿದ್ದಾರೆ. ನಡುವೆ 'ಮ್ಯಾಕ್ಸ್'-2 ಸಿನಿಮಾ ಕೂಡ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ರಿಷಬ್ ಶೆಟ್ಟಿ 'ಕಾಂತಾರ-1' ಚಿತ್ರದಿಂದ ಹೊರಗೆ ಬಂದಿಲ್ಲ. ಬಳಿಕ ಒಂದು ತೆಲುಗು ಹಾಗೂ ಹಿಂದಿ ಸಿನಿಮಾ ಒಪ್ಪಿಕೊಂಡಿದ್ದಾರೆ.
'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಬಂದೋಗಿ ವರ್ಷ ಕಳೆದರೂ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಸಿನಿಮಾ ಶುರು ಮಾಡೇಯಿಲ್ಲ. 'ಬಘೀರ' ಬಳಿಕ ಶ್ರೀಮುರಳಿ ಕೂಡ ಸೈಲೆಂಟ್ ಆಗಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಿಂದ ದರ್ಶನ್ ನಟನೆಯ ಸಿನಿಮಾಗಳು ತಡ ಆಗುವಂತಾಯಿತು. ಈ ವರ್ಷ 'ಡೆವಿಲ್' ಸಿನಿಮಾ ತೆರೆಗೆ ಬರಬಹುದು. 'ಯುಐ' ಬಳಿಕ ಉಪ್ಪಿ ನಟಿಸಿರುವ '45' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 'ಭಾರ್ಗವ' ಎಂಬ ಸಿನಿಮಾ ಘೋಷಣೆ ಮಾಡಿದ್ದಾರೆ.
'ಕೃಷ್ಣಂ ಪ್ರಣಯ ಸಖಿ' ಬಳಿಕ ಎರಡ್ಮೂರು ಸಿನಿಮಾಗಳನ್ನು ಗಣೇಶ್ ಒಪ್ಪಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ಯಾವುದು ಬಿಡುಗಡೆಗೆ ತಯಾರಿಲ್ಲ. 'ಮಾರ್ಟಿನ್' ಚಿತ್ರಕ್ಕಾಗಿ ಧ್ರುವ 3 ವರ್ಷ ವ್ಯಯಿಸಿಬಿಟ್ಟರು. 'KD' ಚಿತ್ರದಲ್ಲಿ ನಟಿಸುತ್ತಿದ್ದಾರೆ. ವರಲಕ್ಷ್ಮಿ ಹಬ್ಬಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.
'ಸಿಟಿಲೈಟ್ಸ್' ಸಿನಿಮಾ ನಿರ್ದೇಶನದ ಜೊತೆಗೆ ದುನಿಯಾ ವಿಜಯ್ 'ಲ್ಯಾಂಡ್ಲಾರ್ಡ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಈ ಎರಡೂ ಸಿನಿಮಾಗಳ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಮೋಹನ್ ಲಾಲ್, ಮಮ್ಮುಟ್ಟಿ ರೀತಿಯ ಹಿರಿಯ ಕಲಾವಿದರು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡುವ ಸಾಹಸ ಮಾಡುತ್ತಿದ್ದಾರೆ. ಎರಡು ತಿಂಗಳ ಅಂತರದಲ್ಲಿ ಮೋಹನ್ ಲಾಲ್ ನಟನೆಯ 'ಎಂಪುರಾನ್' ಹಾಗೂ 'ಥುಡರುಂ' ಸಿನಿಮಾಗಳು ಬಂದು ಬಾಕ್ಸಾಫೀಸ್ ಕೊಳ್ಳೆ ಹೊಡೆದಿವೆ. 4 ಚಿತ್ರಗಳು ಕೈಯಲ್ಲಿದೆ.
ಆಗಸ್ಟ್ 28ಕ್ಕೆ 'ಹೃದಯಪೂರ್ವಂ' ಎಂಬ ಸಿನಿಮಾ ಬಿಡುಗಡೆಗೆ ಮೋಹನ್ ಲಾಲ್ ಸಿದ್ಧವಾಗುತ್ತಿದ್ಧಾರೆ. ನಂದ ಕಿಶೋರ್ ನಿರ್ದೇಶನದಲ್ಲಿ 'ವೃಷಭ' ಎಂಬ ಸಿನಿಮಾ ಚಿತ್ರೀಕರಣ ಬಹುತೇಕು ಮುಕ್ತಾಯವಾಗಿದೆ. ಹೀಗೆ ಮೋಹನ್ ಲಾಲ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ ಕಲಾವಿದರು ಮಾತ್ರ ಎರಡ್ಮೂರು ವರ್ಷಕ್ಕೆ ಒಂದು ಸಿನಿಮಾ ಎನ್ನುವ ಧೋರಣೆ ತಳೆದಿದ್ದಾರೆ.
ನಟ ಶಿವಣ್ಣ ಮಾತ್ರ ಸಾಧ್ಯವಾದಷ್ಟು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಬಳಲಿದ್ದ ಅವರು ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದು ಬಂದರು. 3 ತಿಂಗಳ ಬಿಡುವಿನ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಈಗ ಶಿವಣ್ಣ ನೇತೃತ್ವದಲ್ಲೇ ಚಿತ್ರರಂಗದ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಯತ್ನ ನಡೀತಿದೆ.


Click it and Unblock the Notifications











