'ಕ್ವಾಟ್ಲೆ ಸತೀಶ'ನಿಂದ ಕನ್ನಡ ಚಿತ್ರರಂಗದ ಬರ್ತ್ ಡೇ
ಕನ್ನಡ ಚಲನಚಿತ್ರ ರಂಗಕ್ಕೆ ಈಗ ಎಂಬತ್ತರ ಪ್ರಾಯ. 1933ರ ಮಾರ್ಚ್ ಮೂರರಂದು ಕನ್ನಡ ಮೊದಲ ವಾಕ್ಚಿತ್ರ 'ಸತಿ ಸುಲೋಚನ' ಬಿಡುಗಡೆಯಾಗಿತ್ತು. ಈ ಎಂಬತ್ತರ ಸಡಗರವನ್ನು 'ಕ್ವಾಟ್ಲೆ ಸತೀಶ' ವಿಭಿನ್ನವಾಗಿ ಆಚರಿಸಿಕೊಂಡು ಸಂಭ್ರಮಿಸಿದ್ದಾನೆ.
ಯಾರಪ್ಪಾ ಈ 'ಕ್ವಾಟ್ಲೆ ಸತೀಶ' ಅಂದರೆ, ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ, ಭೋಗೇಂದ್ರ ಹಾಗೂ ಡಾ.ಸೂರಿ ಅವರು ನಿರ್ಮಿಸುತ್ತಿರುವ ಚಿತ್ರವೇ 'ಕ್ವಾಟ್ಲೆ ಸತೀಸ'. ಚಿತ್ರಕ್ಕೆ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ಯೋಗರಾಜ್ ಭಟ್ ನಿರ್ದೇಶನದ 'ಡ್ರಾಮಾ' ಚಿತ್ರದಲ್ಲಿ ನೀನಾಸಂ ಸತೀಶ್ ಅವರು ಕ್ವಾಟ್ಲೆ ಸತೀಶ ಎಂಬ ಪಾತ್ರವನ್ನು ಪೋಷಿಸಿದ್ದರು. ಈಗ ಅದೇ ಶೀರ್ಷಿಕೆಯಲ್ಲಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಈ ಚಿತ್ರದ ನಾಯಕಿ ಸೋನಿಯಾ ಗೌಡ. ಈಕೆ ಈಗಾಗಲೆ 'ರಣ', 'ಜಿಂಕೆಮರಿ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಚಿತ್ರದ ನಿರ್ದೇಶಕರಾದ ಮಹೇಶ್ ರಾವ್ ಅವರು 'ಮುರಳಿ ಮೀಟ್ಸ್ ಮೀರಾ' ಚಿತ್ರವನ್ನು ನಿರ್ದೇಶಿಸಿದ್ದಾರೆ. ತಮಿಳಿನ 'ನಡುವುಲ ಕೊಂಜಂ ಪಕ್ಕಥ ಕಾಣೊಂ' ಎಂಬ ಚಿತ್ರದ ರೀಮೇಕ್. ಚಿತ್ರದ ಹೆಸರೇ ಹೇಳುವಂತೆ ಇದು ಪಕ್ಕಾ ಕಾಮಿಡಿ ಚಿತ್ರ.
ಮಹೇಶ್ ರಾವ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತ ನಿರ್ದೇಶನವಿದೆ. ಪವನ್ ಒಡೆಯರ್ ಚಿತ್ರಕ್ಕೆ ಮಾತು ಬರೆದರೆ ಯೋಗರಾಜ್ ಭಟ್ ಹಾಡುಗಳನ್ನು ಬರೆದಿದ್ದಾರೆ. ಆನಂದ್ ಕಲಾ ನಿರ್ದೇಶನ ಹಾಗೂ ದೀಪು.ಎಸ್.ಕುಮಾರ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ನೀನಾಸಂ ಸತೀಶ್, ಸೋನಿಯಾಗೌಡ, ಅಚ್ಯುತರಾವ್, ಚಿಕ್ಕಣ್ಣ, ಡಾ.ಸೂರಿ, ಸಿಲ್ಲಿಲಲ್ಲಿ ಆನಂದ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











