‘ಸತ್ಯಜಿತ್ ರೇ ಚಿತ್ರಗಳಿಗೆ ಆಸ್ಕರ್ ಬರದಿದ್ದುದು ಸೋಜಿಗವೇ!’
ಗುರು ಅವರೆ, ನಮಸ್ಕಾರ, ಲೇಖನ ಬಹಳ ಚೆನ್ನಾಗಿ ಬಂದಿದೆ. ಅಭಿನಂದನೆಗಳು. ನನ್ನ ಕೆಲವು ಅಭಿಪ್ರಾಯಗಳನ್ನು ತಿಳಿಸುತ್ತಿದ್ದೇನೆ :
ಆಸ್ಕರ್ಗೆ ಭಾರತೀಯ ಚಿತ್ರರಂಗದ ಮಾನದಂಡ ಯಾವುದು? ಇದು ಬಹಳ ಸಂಶಯದ ವಿಷಯ. ಆಸ್ಕರ್ ಎಲ್ಲ ಗುಣಗಳನ್ನೂ ಬಯಸುವ ಪ್ರಶಸ್ತಿ. ಸ್ಕಿೃಪ್ಟ್ನಿಂದ ಹಿಡಿದು ಕೊನೆಯಲ್ಲಿ ಕ್ರೆಡಿಟ್ ಸ್ಕಿೃೕನಿನವರೆಗೆ ಗುಣಾವಗುಣಗಳನ್ನು ಅವಲೋಕಿಸುವ ಅದರ ಪರಿಯೇ ಒಂದು ರೀತಿಯಲ್ಲಿ ವೈಚಿತ್ರ್ಯಗಳಿಂದ ಕೂಡಿದ್ದು . ಅದರಲ್ಲೂ ಸಿನೆಮಟೋಗ್ರಫಿ ಮತ್ತು ಎಡಿಟಿಂಗ್ ತೀವ್ರ ತರವಾದ ವಿಮರ್ಶೆಗಳಿಗೆ ಒಳಪಡುವಂತದ್ದು . ತಾವು ಲೇಖನದಲ್ಲಿ ತಿಳಿಸಿದಂತೆ 'ಅಮೆರಿಕನ್ ಬ್ಯೂಟಿ" ಯಂಥ ಚಿತ್ರ ಜೀವನಕ್ಕೆ ಹತ್ತಿರದ ಸಂಬಂಧವನ್ನು ಬಯಸಿದಂತೆಯೇ ಪ್ರಸ್ತುತ ಪ್ರಪಂಚದ ಚಿತ್ರ ತಯಾರಿಕೆಅತ್ಯುತ್ತಮ ತಂತ್ರಜ್ಞಾನವನ್ನೂ ಬಯಸುತ್ತದೆ. ಭಾರತೀಯ ಚಿತ್ರರಂಗದ ಮೇಲೆ ಯಾವ ದುರುದ್ದೇಶವೂ ಇಲ್ಲದೇ ಹೇಳುತ್ತಿದ್ದೇನೆ, ಚಿತ್ರ ನಿರ್ಮಾಣದ ತಂತ್ರಜ್ಞಾನದಲ್ಲಿ ನಾವು ಹಾಲಿವುಡ್ ಮತ್ತು ಯುರೋಪಿಗಿಂತಾ ಹಿಂದೆ ಉಳಿದಿದ್ದೇವೆ. ತಾಳ್ಮೆಯನ್ನು ಪರೀಕ್ಷಿಸುವ ಎಡಿಟಿಂಗ್ನ ಅನೇಕ ಸೂಕ್ಷ್ಮಗಳಲ್ಲಿ ನಮ್ಮಲ್ಲಿ ಸ್ಥಾನವಿಲ್ಲ . ಕಾರಣಗಳು ಹಲವಾರು, ಆದರೆ ಆಸ್ಕರ್ನಲ್ಲಿ ಕಾರಣಗಳನ್ನು ಕೇಳುವರಾರು?
ಹಾಡುಗಳು ಯಾವತ್ತೂ ಛಾಯಾಚಿತ್ರಗ್ರಹಣದ ನಿಯಮಗಳನ್ನು ಪಾಲಿಸುವಲ್ಲಿಯ ಬಹುದೊಡ್ಡ ಸವಾಲು. (ನಾನು ಇಲ್ಲಿ cinematography ಕೋರ್ಸ್ ಮಾಡುತ್ತಿದ್ದಾಗ ನಮ್ಮ ಪ್ರೊಫೆಸರ್ ವಿದ್ಯಾರ್ಥಿಗಳಿಗೆ MTV ನೋಡದಂತೆ ಕಟ್ಟಪ್ಪಣೆ ಮಾಡಿದ್ದರು. ) ನನಗೆ ಗೊತ್ತು , ಹಾಡುಗಳು ಇರಬೇಕೇ ಬೇಡವೇ ಎನ್ನುವುದು ಬಹಳ ತಾರ್ಕಿಕವಾದ ವಿಷಯ. ಆದರೆ ಹಾಡುಗಳು ಕತೆಯ ಸುಲಲಿತ ನಿರೂಪಣೆಗೆ (easy flow) ಸ್ವಲ್ಪ ಮ್ಟಟಿಗೆ ಭಂಗ ತರುವುದಷ್ಟೇ ಅಲ್ಲ, ಸನ್ನಿವೇಶದ ಗಂಭೀರತೆಯನ್ನು ನೀರಾಗಿಸಿಬಿಡುತ್ತವೆ. ಈ ಕಾರಣದಿಂದಾಗಿಯೇ ನೀವು ಸತ್ಯಜಿತ್ ರೇನ ಚಿತ್ರಗಳಲ್ಲಾಗಲೀ ಅಥವಾ ನಮ್ಮ ಗಿರೀಶ್ ಕಾಸರವಳ್ಳಿಯವರ ಚಿತ್ರಗಳಲ್ಲಾಗಲೀ ಹಾಡುಗಳನ್ನು ಕಾಣುವುದಿಲ್ಲ . ಕೆಲವು ಕಲಾತ್ಮಕ ಚಿತ್ರಗಳು ಈ ಎಲ್ಲಾ ಸರಳ ತಂತ್ರಗಳನ್ನು ಒಳಗೊಂಡೇ ಸಂಕೀರ್ಣ ಅಭಿವ್ಯಕ್ತತೆಯಿಂದ ನಿಗೂಢವಾಗಿ ಉಳಿದುಬಿಡುತ್ತವೆ. ತಾವು ಲೇಖನದಲ್ಲಿ ತಿಳಿಸಿದಂತೆ ಇಂತಹ ಚಿತ್ರಗಳೂ ಕೂಡ ಆಸ್ಕರ್ಗೆ ಒಲಿಯುವಂಥವಲ್ಲ .
ನನಗನ್ನಿಸುವಂತೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಲ್ಲುವಂತೆ ಚಿತ್ರ ತಯಾರಿಸಿದ ಒಬ್ಬನೇ ಭಾರತೀಯನೆಂದರೆ ರೇ ಮಾತ್ರಾ. ಕತೆ ಹೇಳುವಲ್ಲಿ ಆತನಿಗೆ ಒಂದು ವಿನೂತನ ಶೈಲಿಯಿತ್ತು. ಸಾಮಾನ್ಯ ಬಜೆಟ್ನ್ನು ಮುಚ್ಚುವಂತೆ ಚಿತ್ರಗಳನ್ನು ಬದಲಿಸುವ ವಿಶಿಷ್ಟತೆಯಿತ್ತು . ಮುಖ್ಯವಾಗಿ ಒಂದು ದೃಶ್ಯದಿಂದ ಮತ್ತೊಂದಕ್ಕೆ ಕೂಡಿಸುವಲ್ಲಿ ಎಂತಹಾ ಅನುಬಂಧವಿತ್ತೆಂದರೆ ನನ್ನ ಮನಸ್ಸನ್ನು ತಿಳಿದೇ ಈ ಚಿತ್ರ ನಿರ್ಮಿಸಿದ್ದಾನೆಯೇ ಎಂದು ನೋಡುವವನು ಕೇಳಿಕೊಳ್ಳಬೇಕು, ಹಾಗಿರುತ್ತದೆ. ರೇಯ 'ಪಥೇರ್ ಪಾಂಚಾಲಿ", ಮಹಾನಗರ್, ಅಪುರ್, ಸನ್ಸಾರ್, ದೇವಿ, ಚಾರುಲತಾದಂತಹ ಸಿನಿಮಾಗಳಿಗೆ ಆಸ್ಕರ್ ಬರದಿದ್ದುದು ನನಗೆ ಯಾವಾಗಲೂ ಸೋಜಿಗವೇ. ಬಹುಶಃ ಅವು ಭಾರತದಿಂದ ಅಂಕಿತವಾಗದೇ ಹೋಗಿರಬಹುದು.
ನಿಮ್ಮ ಲೇಖನದ ಕೊನೆಯ ಭಾಗ ನನ್ನ ಮನಸ್ಸನ್ನು ಬಹಳ ಮುಟ್ಟಿತು. ಮಗುವಿನಂತೆ ನಿಷ್ಕಲ್ಮಷವಾಗಿ ಸಂದರ್ಭವನ್ನು ಸುಖಿಸಿದಾಗಲೇ ಕಲೆಯ ಸಾರ್ಥಕತೆಯು ಅಡಗಿದೆ.


Click it and Unblock the Notifications