ಚಿತ್ರರಂಗದ ಚಿಟಿಕೆ ಸುದ್ದಿಗಳು... ವಾರದ ಸಿಂಹಾವಲೋಕನ
ಸಿಕ್ಕಾಪಟ್ಟೆ ಸುದ್ದಿ ಮಾಡಿದ ಅಮೀರ್ಖಾನ್ ಅಭಿನಯದ ಲಗಾನ್ ಗೊತ್ತಲ್ಲ. ಅಶುತೋಷ್ ಗೌರಿಕರ್ ಅವರ ಈ ಹಿಂದಿ ಚಿತ್ರ ಕೋಟ್ಯಂತರ ರುಪಾಯಿ ಲಾಭ ಮಾಡಿದೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. 'ಲಗಾನ್" 40 ಕೋಟಿ ರುಪಾಯಿ ನಷ್ಟ ಅನುಭವಿಸಿದೆಯಂತೆ.
ಕೇವಲ ಮುಂಬಯಿ ನಗರ ಒಂದರಲ್ಲೇ 'ಲಗಾನ್" 15 ಕೋಟಿ ರುಪಾಯಿಗಳಿಗೂ ಹೆಚ್ಚು ಲಾಭಗಳಿಸಬೇಕಿತ್ತು. ಆದರೆ, ಅದು ಕೇವಲ 6.75 ಕೋಟಿ ರುಪಾಯಿ ಮಾತ್ರ ಗಳಿಸಲು ಸಫಲವಾಗಿದೆ ಎಂದು ಚಿತ್ರದ ವಿತರಕರು ಹೇಕೊಂಡಿದ್ದಾರೆ.
ಅಣ್ಣಯ್ಯ -ತಮ್ಮಯ್ಯ ರಿರೆಕಾರ್ಡಿಂಗ್ : ಎಸ್. ಉಮೇಶ್ ನಿರ್ದೇಶನದ ಸಾಂಸಾರಿಕ ಚಿತ್ರ 'ಅಣ್ಣಯ್ಯ ತಮ್ಮಯ್ಯ" ಚಿತ್ರಕ್ಕೆ ನ.26ರಿಂದ ನಗರದ ವಸಂತ್ ಕಲರ್ ಲ್ಯಾಬ್ನಲ್ಲಿ ರೀರೆಕಾರ್ಡಿಂಗ್ ಕಾರ್ಯ ನಡೆಯಲಿದೆ. ಪ್ರಶಾಂತ್ ರಾಜ್ ಸಂಗೀತದಲ್ಲಿ ಶಂಕರ್ ನೆನಪಿನಂಗಳದ ಸ್ಟುಡಿಯೋದಲ್ಲಿ ಈ ಕಾರ್ಯ ನಡೆಯುತ್ತಿದೆ.
ಪರಂಪರೆಗೆ ಹಾಡುಗಳ ಧ್ವನಿಮುದ್ರಣ: ಟ್ರಿನಿಟಿ ಪಿಕ್ಚರ್ಸ್ ಲಾಂಛನದಲ್ಲಿ ಅಸುಂತ ಸೈಮನ್ ನಿರ್ಮಿಸುತ್ತಿರುವ 'ಪರಂಪರೆ" ಚಿತ್ರಕ್ಕೆ ಅಶ್ವಿನಿ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಾಧು ಕೋಕಿಲಾ ಅವರ ಸಂಗೀತ ನಿರ್ದೇಶನದಲ್ಲಿ ಐದು ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆದಿದೆ.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಒದಗಿಸಿರುವ ಜೋಸೈಮನ್ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ತಾರಾಗಣದಲ್ಲಿ ದೇವರಾಜ್, ರಾಜೇಂದ್ರ, ಸಾಧುಕೋಕಿಲಾ, ಜಯಂತಿ, ಹೇಮಾಚೌದರಿ ಮೊದಲಾದವರಿದ್ದಾರೆ. ಡಿ.5ರಿಂದ ಚಿತ್ರೀಕರಣ ಆರಂಭ.
ಕೋತಿಗಳಿಗೆ ಮಾತಿನ ಮರುಲೇಪನ: ಜೈಜಗದೀಶ್, ವಿಜಯಲಕ್ಷ್ಮೀ ಸಿಂಗ್, ದುಶ್ಯಂತ್ ಸಿಂಗ್ ನಿರ್ಮಿಸುತ್ತಿರುವ 'ಕೋತಿಗಳು ಸಾರ್ ಕೋತಿಗಳು" ಚಿತ್ರದ ಮಾತಿನ ಮರುಲೇಪನ ಕಾರ್ಯ ಪ್ರಸಾದ್ ಸ್ಟುಡಿಯೋದಲ್ಲಿ ನಡೆದು ಮುಕ್ತಾಯಗೊಂಡಿದೆ. ಕುರಿಗಳ ನಂತರದ ಕೋತಿಗೆ ರೀರೆಕಾರ್ಡಿಂಗ್ ನಡೆಯುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ.
ಮೊದಲ ಹಂತ ಮುಗಿಸಿದ ಜಮೀನ್ದಾರ್ರು : ಕೊಬ್ಬರಿ ಮಂಜು ನಿರ್ಮಿಸಿ ಎಸ್. ನಾರಾಯಣ್ ನಿರ್ದೇಶಿಸಿ ಸಾಹಸ ಸಿಂಹ ವಿಷ್ಣುವರ್ಧನ್ ನಾಯಕರಾಗಿರುವ 'ಜಮೀನ್ದಾರ್ರು" ಚಿತ್ರಕ್ಕೆ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಸತತ ಚಿತ್ರೀಕರಣ ನಡೆದು, ಮೊದಲ ಹಂತ ಮುಕ್ತಾಯವಾಗಿದೆ.
ಎಸ್. ನಾರಾಯಣ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಇರುವ ಈ ಚಿತ್ರದ ಛಾಯಾಗ್ರಾಹಕರು ಮ್ಯಾಥ್ಯು. ಅಂದಹಾಗೆ ಈ ತಂಡ ಹೈದರಾಬಾದ್ನಲ್ಲೇ ಕನ್ನಡ ರಾಜ್ಯೋತ್ಸವ ಆಚರಿಸಿತು.


Click it and Unblock the Notifications