ಜಯಂತಿಯವರನ್ನು ಹೊಡೆದಿದ್ದ ತೆಲುಗು ನಟ: ನಟಿ ಲಕ್ಷ್ಮಿ
ಹಿರಿಯ ನಟಿ ಜಯಂತಿ ಇಂದು ನಿಧನ ಹೊಂದಿದ್ದಾರೆ. ಜಯಂತಿ ಜೊತೆ ಹಲವು ನಟ-ನಟಿಯರು, ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.
ಜಯಂತಿಯವರ ಜೊತೆ ಹಲವಾರು ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಲಕ್ಷ್ಮಿ, ಜಯಂತಿ ಅವರ ಕುರಿತಾಗಿ ಆಸಕ್ತಿಕರ ಘಟನೆಯೊಂದನ್ನು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.
ತೆಲುಗಿನ ನಟನೊಬ್ಬ ಜಯಂತಿ ಅವರಿಗೆ ಕಪಾಳಕ್ಕೆ ಹೊಡೆದ ಘಟನೆಯನ್ನು ಲಕ್ಷ್ಮಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಹೊಡೆಸಿಕೊಂಡರೂ ಸಹ ಜಯಂತಿ ಹೊಡೆದ ವ್ಯಕ್ತಿಯನ್ನು ಕ್ಷಮಿಸಿ ದೊಡ್ಡ ತನ ಮೆರೆದುದ್ದನ್ನು ನೆನಪಿಸಿಕೊಂಡಿದ್ದಾರೆ ಲಕ್ಷ್ಮಿ.
ಒಮ್ಮೆ ಹೈದರಾಬಾದ್ನ ಸ್ಟುಡಿಯೋ ಒಂದರಲ್ಲಿ ಜಯಂತಿ ಶೂಟಿಂಗ್ ಮಾಡುತ್ತಿದ್ದರು. ನಾನೂ ಅಲ್ಲಿಯೇ ಸಿನಿಮಾದ ಚಿತ್ರೀಕರಣದಲ್ಲಿದ್ದೆ. ಅದಾಗಲೇ ನಾವಿಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ನಟಿಸಿದ್ದೆವು. ಅದೇ ಶೂಟಿಂಗ್ನ ಮಧ್ಯಾಹ್ನದ ಊಟದ ವೇಳೆ ನಾವಿಬ್ಬರೂ ಭೇಟಿಯಾಗಿ ಕುಶಲೋಪರಿ ಮಾತನಾಡಿಕೊಂಡೆವು. ಆಗ ಜಯಂತಿ, ''ನನಗೆ ಸಂಜೆ ಬೆಂಗಳೂರಿನಲ್ಲಿ ಶೂಟಿಂಗ್ ಇದೆ. ಅಲ್ಲಿಗೆ ಬೇಗ ತೆರಳಬೇಕು ಆದರೆ ಈ ನಟ ನನ್ನನ್ನು ಬಿಡುತ್ತಲೇ ಇಲ್ಲ. ಇಲ್ಲಿಂದ ಏರ್ಪೋರ್ಟ್ಗೆ ಹೋಗಲು ಒಂದು ಗಂಟೆ ಸಮಯ ಬೇಕು ಏನು ಮಾಡಲಿ'' ಎಂದು ಆತಂಕ ಹೇಳಿಕೊಂಡರು.

ಅಂದಿನ ಘಟನೆ ನೆನಪು ಮಾಡಿಕೊಂಡ ಲಕ್ಷ್ಮಿ
''ನೀವು ಹಿರಿಯ ನಟಿ, ಅವರಿಗೆ ಕೇಳಿ ನನಗೆ ಮತ್ತೊಂದು ಶೂಟಿಂಗ್ ಇದೆ ಎಂದು. ಸುಮ್ಮನೆ ಏಕೆ ಇಲ್ಲಿದ್ದು ನಿಮ್ಮ ಸಮಯ ವ್ಯರ್ಥ ಮಾಡಿಕೊಳ್ಳುತ್ತೀರಿ. ಬೆಂಗಳೂರಿನಲ್ಲಿ ನಿಮಗಾಗಿ ಕಾಯುತ್ತಿರುವವರ ಸಮಯವೂ ವ್ಯರ್ಥವಾಗುತ್ತದೆ ಎಂದೆ. ಅದಕ್ಕೆ ಜಯಂತಿ, 'ಅಯ್ಯೋ ಆ ನಟ (ನಿರ್ಮಾಪಕನೂ ಅವನೇ) ಬಹಳ ಕೋಪಿಷ್ಟ ಎಂದರು'' ಎಂದು ಅಂದು ನಡೆದಿದ್ದ ಘಟನೆ ನೆನಪು ಮಾಡಿಕೊಂಡಿದ್ದಾರೆ ಲಕ್ಷ್ಮಿ.

ಜಯಂತಿಯವರ ಕಪಾಳಕ್ಕೆ ಹೊಡೆದಿದ್ದ ನಟ
''ಅದಾದ ಅರ್ಧ ಗಂಟೆಗೆ ವ್ಯಕ್ತಿಯೊಬ್ಬರು ಓಡಿಬಂದು ಜಯಂತಿ ಅಮ್ಮನನ್ನು ಹೊಡೆದುಬಿಟ್ಟರು' ನನಗೆ ಮೈಯೆಲ್ಲ ಉರಿದು ಹೋಯಿತು. ಹೋಗಿ ನೋಡಿದರೆ ಜಯಂತಿ ಅಳುತ್ತಿದ್ದಾರೆ. ನಾನು ಓಡಿ ಹೋಗಿ ಅವರನ್ನು ತಬ್ಬಿಕೊಂಡೆ. ಏನಾಯ್ತು ಎಂದು ಕೇಳಿದೆ. ಅದಕ್ಕೆ ಅವರು, 'ನೀವು ಸುಮ್ಮನೆ ತಡ ಮಾಡುತ್ತಿದ್ದೀರಿ. ನನ್ನ ಕ್ಲೋಸ್ ಅಪ್ ಶಾಟ್ ತೆಗೆದು ನನ್ನನ್ನು ಹೋಗಲಿ ಬಿಡಿ, ನಿಮ್ಮ ಶೂಟ್ ನಿಧಾನಕ್ಕೆ ಮಾಡಿಕೊಳ್ಳಿ ಎಂದೆ ಅದಕ್ಕೆ ಆತ ನನಗೆ ಹೇಳಲು ಬರಬೇಡ ಎಂದು ಹೊಡೆದು ಬಿಟ್ಟ'' ಎಂದು ಜಯಂತಿ ಹೇಳಿದರಂತೆ.

ನನ್ನ ಮಗ ಮಾಡಿದ ತಪ್ಪೆಂದು ಕ್ಷಮಿಸಿಬಿಡುತ್ತೇನೆ ಎಂದಿದ್ದ ಜಯಂತಿ
ಕೂಡಲೇ ಲಕ್ಷ್ಮಿಯವರು ಆ ನಟನಿಗೆ ಬೈಯ್ಯಲು ಆರಂಭಿಸಿದ್ದಾರೆ. ''ನೀನು ಚಿತ್ರರಂಗಕ್ಕೆ ಬರುವ ಮುನ್ನವೇ ಅವರು ನಟಿಯಾಗಿದ್ದವರು. ಅಂಥಹಾ ಹಿರಿಯ, ಪ್ರತಿಭಾವಂತ ನಟಿಯ ಮೇಲೆ ಕೈ ಎತ್ತಿರುವ ನಿನಗೆ ಒಳ್ಳೆಯದಾಗುವುದಿಲ್ಲ ಎಂದು ಬೈದೆ. ಆದರೆ ನನ್ನನ್ನು ಜಯಂತಿಯವರೇ ತಡೆದರು. ಹೋಗಲಿ ಬಿಡು, ಆಗಿದ್ದು ಆಗಿ ಹೋಗಿದೆ. ತಪ್ಪು ನಡೆದು ಹೋಗಿದೆ. ನನ್ನ ಮಗನೇ ಹೀಗೆ ಮಾಡಿದ್ದಾನೆ ಎಂದು ಕ್ಷಮಿಸಿಬಿಡುತ್ತೇನೆ ಎಂದರು ಜಯಂತಿ'' ಎಂದು ನೆನಪು ಮಾಡಿಕೊಂಡಿದ್ದಾರೆ ಲಕ್ಷ್ಮಿ.

ನೋವೊಂದು ಅವರನ್ನು ಕಾಡುತ್ತಿತ್ತು: ನಟಿ ಲಕ್ಷ್ಮಿ
''ಜಯಂತಿಯವರು ಯಾವಾಗಲೂ ನಗುತ್ತಲೇ ಇರುತ್ತಿದ್ದರು ಆದರೆ ಅವರ ಒಳಗೆ ನೋವು ಸದಾ ಕಾಡುತ್ತಿರುತ್ತಿತ್ತು. ಆದರೆ ನೋವನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ನೋವು ಸದಾ ಇದ್ದುದ್ದೆ ಅದನ್ನು ತೋರ್ಗೊಡಬಾರದು ಎಂದು ಲಕ್ಷ್ಮಿಯವರೇ ಹೇಳುತ್ತಿದ್ದರು. ಅವರ ಪುತ್ರ ಕೃಷ್ಣನಿಗೆ ಭಗವಂತ ಧೈರ್ಯ ನೀಡಲಿ'' ಎಂದರು ನಟಿ ಲಕ್ಷ್ಮಿ.


Click it and Unblock the Notifications











