ಮೊದಲ ಪ್ರೀತಿಯಲ್ಲ,ಕೊನೆಯ ಪ್ರೀತಿ ಶುದ್ಧ; ಬ್ರೇಕಪ್ ಬೆಂಕಿಯಲ್ಲಿ ನೊಂದಿದ್ದಾರಾ ರಶ್ಮಿಕಾ? ಹೈದರಾಬಾದ್ ಸೊಸೆ ಮಾತು!
ಪ್ರೀತಿ ಎಂದರೆ ಸಂತೋಷ ಅದರ ಮಾಯೆಯೇ ಅಂತಹದು ಎನ್ನುವುದು ಅನುಭವಿಸಿದವರ ಅಭಿಪ್ರಾಯ. ಪ್ರೀತಿಸುವ ವ್ಯಕ್ತಿಯನ್ನು ಅಳೆಯಲಾಗದಷ್ಟು, ಅಂತ್ಯ ಇಲ್ಲದಷ್ಟು ಪ್ರೀತಿಸುವ ಅನೇಕರು ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿರುತ್ತಾರೆ. ಇನ್ನೂ ಈ ಪ್ರೀತಿ ಹಾಗೇ ಸುಲಭವಾಗಿ ಹುಟ್ಟಲ್ಲ. ಹೃದಯ ಹೃದಯಗಳ ಮಿಲನವಾದಾಗಲೇ ಅಲ್ಲಿ ಪ್ರೀತಿ ಮೂಡುತ್ತೆ. ಕೆಲವರಿಗೆ ಮೊದಲ ನೋಟದಲ್ಲಿಯೇ ಪ್ರೀತಿಯಾಗುತ್ತೆ. ಮತ್ತೂ ಕೆಲವರಿಗೆ ಕಾರಣಗಳಿಲ್ಲದೇ ಪ್ರೀತಿಯಾಗುತ್ತೆ.
ಹೀಗೆ ಆದ ಮೊದಲ ಪ್ರೀತಿಯನ್ನು ಬಹುತೇಕರು ಮರೆಯಲು ಸಾಧ್ಯ ಇಲ್ಲ. ಯಾಕೆಂದರೆ ಅದೊಂದು ಅದ್ಭುತ ಅನುಭವ. ಬದುಕಿನಲ್ಲಿ ಎಷ್ಟೇ ಸಲ ಪ್ರೀತಿಯಲ್ಲಿ ಬಿದ್ದರೂ ಕೂಡ ಈ ಮೊದಲ ಪ್ರೀತಿಯ ಜಾದೂ ಸದಾ ನೆನಪಿನಲ್ಲಿದ್ದೇ ಇರುತ್ತೆ. ಸುಲಭಕ್ಕೆ ಅದು ಅಳಿಸಿ ಹೋಗುವುದಿಲ್ಲ. ಆದರೆ ಈಗೀಗ ಸಂಬಂಧಗಳು ವ್ಯಾವಾಹಾರಿಕವಾಗಿವೆ. ಪ್ರೀತಿಯನ್ನು ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ.

ಬದಲಾದ ಈ ಕಾಲದಲ್ಲಿ ಮೊದಲ ಪ್ರೀತಿಗಿಂತ ಎರಡನೇ.. ಮೂರನೇ.. ಅಥವಾ ಕೊನೆಯ ಪ್ರೀತಿ ಮರೆಯಲಾಗದಂತಹದ್ದು ಆ ಪ್ರೀತಿಯೇ ನಮಗೆ ವಿಶೇಷ.. ವಿಶಿಷ್ಠ ಎನ್ನುವ ವರ್ಗ ಹೆಚ್ಚಾಗುತ್ತಿದೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ.
ಹೌದು, ರಶ್ಮಿಕಾ ಮಂದಣ್ಣ.. ಸದ್ಯದ ಬಹುಬೇಡಿಕೆಯ ನಾಯಕಿ. ಇವರ ಬೇಡಿಕೆ ಸದ್ಯ ಹೇಗಿದೆ ಅಂದರೆ ಮೂರು ವಾರಗಳಲ್ಲಿ ಇವರ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಆ ಪೈಕಿ ಆಯುಷ್ಮಾನ್ ಖುರಾನ ಜೊತೆ ಮಾಡಿರುವ ''ಥಮ್ಮ'' ಇಂದು ( ಅಕ್ಟೋಬರ್ 21 ) ಬಿಡುಗಡೆಯಾಗಿದೆ. ಇನ್ನೂ ದೀಕ್ಷಿತ್ ಶೆಟ್ಟಿ ಜೊತೆ ಅಭಿನಯಿಸಿರುವ ತೆಲುಗು ಚಿತ್ರ ''ದಿ ಗರ್ಲ್ಫ್ರೆಂಡ್'' ಮುಂದಿನ ತಿಂಗಳು ಅಂದರೆ ನವೆಂಬರ್ 7ರಂದು ಬಿಡುಗಡೆಯಾಗಲಿದೆ.
ಈ ಹಿನ್ನೆಲೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ ತಮ್ಮ ಈ ಎರಡು ಚಿತ್ರಗಳ ಪ್ರಚಾರವನ್ನು ಮಾಡುತ್ತಿದ್ದಾರೆ. ಆ ಪೈಕಿ ಗಾಯಕಿ ಚಿನ್ಮಯಿ ಶ್ರೀಪಾದ ಅವರಿಗೆ ತಮ್ಮ ''ಗರ್ಲ್ ಫ್ರೆಂಡ್'' ತಂಡದ ಜೊತೆ ಸಂದರ್ಶನವನ್ನು ನೀಡಿದ್ದಾರೆ. ಇದೇ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಮೊದಲ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಬ್ರೇಕಪ್ ಆದಾಗ ಆಗುವ ನೋವಿನ ಕುರಿತು ಕೂಡ ಮಾತನಾಡಿದ್ದಾರೆ.
ದೀಕ್ಷಿತ್ ಶೆಟ್ಟಿ ಅವರಿಗೆ ಮೊದಲ ಪ್ರೀತಿ ಪರಿಶುದ್ಧನಾ..? ಎಂದು ಚಿನ್ಮಯಿ ಶ್ರೀಪಾದ್ ಕೇಳಿದಾಗ ನಡುವೆ ಮೂಗು ತೂರಿಸಿರುವ ರಶ್ಮಿಕಾ ಮೊದಲ ಪ್ರೀತಿಯಲ್ಲ ಕೊನೆಯ ಪ್ರೀತಿ ಪರಿಶುದ್ಧ ಎಂದು ಹೇಳಿದ್ದಾರೆ. ಮುಂದುವರೆದು ಪ್ರೀತಿ ಅಂದರೆ ಅಸೂಯೆ ಅಲ್ಲ. ಪ್ರೀತಿಯಲ್ಲಿ ಅಸೂಯೆಗೆ ಜಾಗ ಇರುವುದಿಲ್ಲ. ನಾನಾ ವಿಧದ ಭಾವನೆಗಳಿಂದ ಕೂಡಿರುವ ಸುಂದರವಾದ ಅನುಭವ ಪ್ರೀತಿ ಎಂದು ಹೇಳಿದ್ದಾರೆ.

ಇನ್ನೂ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಹುಡುಗಿಯರು ಬ್ರೇಕಪ್ ನೋವನ್ನು ಹುಡುಗರಿಗಿಂತ ಬೇಗ ಮರೆಯುತ್ತಾರೆ. ತಮ್ಮ ಜೀವನದಲ್ಲಿ ಮುಂದುವರೆಯುತ್ತಾರೆ, ಹೌದಾ..? ಎಂದು ಚಿನ್ಮಯಿ ಕೇಳಿದಾಗ, ಅದ್ಹೇಗೆ..? ಯಾಕೆ..? ಎಂದು ರಶ್ಮಿಕಾ ಮರು ಪ್ರಶ್ನೆ ಮಾಡಿದ್ದಾರೆ. ಹುಡುಗರು ತಮ್ಮ ವರ್ತನೆಗಳ ಮೂಲಕ ತಮ್ಮ ನೋವು ಹೊರ ಹಾಕುವ ಪ್ರಯತ್ನ ಮಾಡುತ್ತಾರೆ. ಗಡ್ಡ ಬಿಡುವುದರ ಮೂಲಕ, ಧೂಮಪಾನ.. ಮದ್ಯಪಾನ ಮಾಡುವ ಮೂಲಕ ತಾವು ನೋವಲ್ಲಿದ್ದೇವೆ ಎಂದು ತೋರಿಸಿಕೊಳ್ಳುತ್ತಾರೆ ಎಂದಿರುವ ರಶ್ಮಿಕಾ ಹುಡುಗಿಯರು ಹಾಗಲ್ಲ. ಅವರು ಮನದಲ್ಲಿಯೇ ನೊಂದು ಬೆಂದು ಹೋಗುತ್ತಾರೆ. ಹುಡುಗರಿಗಿಂತ ಹೆಚ್ಚಿನ ನೋವನ್ನು ಹುಡುಗಿಯರು ಅನುಭವಿಸುತ್ತಾರೆ ಎಂದು ಹೇಳಿದ್ದಾರೆ. ನಾನು ತುಂಬಾ ಒಳ್ಳೆಯ ಗರ್ಲ್ಫ್ರೆಂಡ್ ಎಂದು ನಾಚಿಕೊಂಡು ಹೇಳಿದ್ದಾರೆ.
ಈ ಇಡೀ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಎಲ್ಲಿಯೂ ತಮ್ಮ ಮಾಜಿ ಗೆಳೆಯ ರಕ್ಷಿತ್ ಶೆಟ್ಟಿ ಅವರ ಹೆಸರನ್ನು ಹೇಳಿಲ್ಲ. ಬ್ರೇಕಪ್ ನೋವು ತಾವು ಅನುಭವಿಸಿದ್ದಾಗಿ ಹೇಳಿಲ್ಲ. ಆದರೆ.. ಸದ್ಯ ರಶ್ಮಿಕಾ ಅವರ ಈ ಮಾತುಗಳಿಂದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಬ್ರೇಕಪ್ ಸ್ಟೋರಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮೊದಲ ಪ್ರೀತಿಗಿಂತ ಕೊನೆಯ ಪ್ರೀತಿ ಪರಿಶುದ್ಧ ಎಂದು ರಶ್ಮಿಕಾ ಹೇಳಿದ ಕಾರಣ ಮೊದಲ ಪ್ರೀತಿಯಲ್ಲಿ ರಶ್ಮಿಕಾ ಮಂದಣ್ಣ ಖುಷಿಯಾಗಿರಲಿಲ್ಲವೇನೋ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











