ಅವಕಾಶಗಳ ಕೊರತೆಯೇ ಎಲ್.ಎನ್.ಶಾಸ್ತ್ರಿ ಅನಾರೋಗ್ಯಕ್ಕೆ ಕಾರಣವಾಯ್ತಾ.?
ಸುಶ್ರಾವ್ಯ ಗೀತೆಗಳಿಂದಲ್ಲದೇ, ಸಂಗೀತ ನಿರ್ದೇಶನದಿಂದಲೂ ತಮ್ಮದೇ ವರ್ಚಸ್ಸು ರೂಪಿಸಿಕೊಂಡಿದ್ದರೂ ಗಾಯಕ ಎಲ್.ಎನ್.ಶಾಸ್ತ್ರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಕರುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಗಾಯಕ ಎಲ್.ಎನ್.ಶಾಸ್ತ್ರಿ ಆಸ್ಪತ್ರೆ ಹಾಗೂ ಔಷಧಿ ಖರ್ಚಿಗಾಗಿ ಆರ್ಥಿಕ ಸಹಾಯ ಬಯಸಿದ್ದರು.
ನಟ ಜಗ್ಗೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಕೆಲವರು ಎಲ್.ಎನ್.ಶಾಸ್ತ್ರಿ ಸಹಾಯಕ್ಕೆ ಮುಂದಾದರು. ಆದ್ರೆ, ವಿಧಿ ಲಿಖಿತವೇ ಬೇರೆ ಆಗಿತ್ತು. ಗಾಯಕ ಎಲ್.ಎನ್.ಶಾಸ್ತ್ರಿ ಇಹಲೋಕ ತ್ಯಜಿಸಿದರು.
ಗಾಯಕ ಎಲ್.ಎನ್.ಶಾಸ್ತ್ರಿ ನಿಧನರಾಗಿ ಹತ್ತತ್ರ ಏಳು ತಿಂಗಳು ಉರುಳಿವೆ. 'ಎ', 'ಜನುಮದ ಜೋಡಿ', 'ಸಿಪಾಯಿ', 'ಜೋಡಿ ಹಕ್ಕಿ' ಚಿತ್ರದ ಹಾಡುಗಳು ಸೇರಿದಂತೆ 300 ಕ್ಕೂ ಹೆಚ್ಚು ಹಾಡುಗಳನ್ನ ಹಾಡಿರುವ ಎಲ್.ಎನ್.ಶಾಸ್ತ್ರಿ ಅವರನ್ನ ಕನ್ನಡ ಚಿತ್ರರಂಗ ನಡೆಸಿಕೊಂಡ ರೀತಿ ಬಗ್ಗೆ ಪತ್ನಿ ಸುಮಾ ಶಾಸ್ತ್ರಿ ಬೇಸರ ವ್ಯಕ್ತಪಡಿಸಿದ್ದಾರೆ.

''ಕನ್ನಡ ಚಿತ್ರರಂಗದಲ್ಲಿ ಸ್ಥಳೀಯ ಗಾಯಕರನ್ನು ತುಂಬಾ ಅವಹೇಳನ ಮಾಡುತ್ತಿದ್ದಾರೆ. ಹೊರಗಡೆ ಇಂದ ಬರುವ ಗಾಯಕರಿಗೆ ಉತ್ಸಾಹ, ಪ್ರೋತ್ಸಾಹ, ಸಂಭಾವನೆ... ಪ್ರತಿಯೊಂದು ತುಂಬಾ ಚೆನ್ನಾಗಿ ಸಿಗುತ್ತಿದೆ. ಆದ್ರೆ, ಸ್ಥಳೀಯ ಗಾಯಕರಿಗೆ ಯಾವತ್ತೂ ಸಿಗಲ್ಲ'' ಎಂದು ಹೇಳುವ ಮೂಲಕ ಕನ್ನಡದ ಗಾಯಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸುಮಾ ಶಾಸ್ತ್ರಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಮೇಲೊಬ್ಬ ಮಾಯಾವಿ' ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ ಸುಮಾ ಶಾಸ್ತ್ರಿ, ''ಸರಿಯಾದ ಅವಕಾಶಗಳು ಸಿಗಲಿಲ್ಲ ಅನ್ನೋ ಕೊರಗಿನಲ್ಲಿಯೇ ಅವರಿಗೆ (ಎಲ್.ಎನ್.ಶಾಸ್ತ್ರಿ) ಅನಾರೋಗ್ಯ ಬಂತೇನೋ. ಅವರ ಅಕಾಲಿಕ ಮರಣಕ್ಕೆ ಅವಕಾಶಗಳ ಕೊರತೆಯೂ ಕಾರಣವಾಯ್ತೇನೋ ಅಂತ ನನಗೆ ಅನ್ಸುತ್ತೆ'' ಎಂದು ಹೇಳಿದರು.
'ಕನ್ನಡ ಚಿತ್ರರಂಗ ಒಂದು ಮನೆ ಇದ್ದ ಹಾಗೆ. ನಾವೆಲ್ಲ ಒಂದೇ ಕುಟುಂಬದವರು' ಎಂಬ ಮಾತು ಹಲವು ನಟ-ನಟಿಯರ ಬಾಯಿಂದ ಹಲವು ಬಾರಿ ಬಂದಿದೆ. ಅದ್ರೆ, ಅವೆಲ್ಲವೂ ಕೇವಲ ಬಾಯ್ಮಾತಿಗಷ್ಟೇ ಸಮೀತವಾಗದೇ, ಎಲ್ಲರೂ ಒಂದೇ ಕುಟುಂಬದಂತೆ ಇದ್ದಿದ್ದರೆ, ಎಲ್.ಎಲ್.ಶಾಸ್ತ್ರಿ ಅಂತಹ ಪ್ರತಿಭಾವಂತರು ಇನ್ನೂ ನಮ್ಮೊಂದಿಗೆ ಇರುತ್ತಿದ್ದರೇನೋ.!


Click it and Unblock the Notifications











