ದರ್ಶನ್ ಜೊತೆ ಸಂಧಾನ? ರೇಣುಕಾಸ್ವಾಮಿ ತಂದೆ ಹೇಳಿದ್ದೇನು?
ರೇಣುಕಾಸ್ವಾಮಿ ಕೊನೆಯುಸಿರೆಳೆದು ಒಂದೂವರೆ ತಿಂಗಳು ಕಳೆದಿದೆ. ನಟಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ ಕಾರಣಕ್ಕೆ ನಟ ದರ್ಶನ್ & ಗ್ಯಾಂಗ್ ಆತನನ್ನು ಅಪಹರಿಸಿ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ ಎನ್ನುವ ಆರೋಪ ಇದೆ. ಪ್ರಕರಣದಲ್ಲಿ ದರ್ಶನ್ ಸೇರಿ 17 ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ಪಟ್ಟಣಗೆರೆಯ ಶೆಡ್ನಲ್ಲಿ ಆತನನ್ನು ಕೂಡಿ ಹಾಕಿ ಥಳಿಸಿದ್ದರು. ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಚಾರ್ಜ್ಶೀಟ್ ಸಲ್ಲಿಕೆ ಆಗಲಿದೆ. ಇನ್ನು ರೇಣುಕಾಸ್ವಾಮಿ ಪತ್ನಿ ಸಹನಾ ಗರ್ಭಿಣಿಯಾಗಿದ್ದು ಕುಟುಂಬಸ್ಥರ ದುಃಖ ಇನ್ನು ಕಮ್ಮಿ ಆಗಿಲ್ಲ. ಮನೆಯ ಆಧಾರಸ್ತಂಭವನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.

ರೇಣುಕಾ ಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಸಂಧಾನ ಮಾಡಿಕೊಳ್ಳ್ಲ ಎಂದಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. ಅಂತೆಕಂತೆ ಸುದ್ದಿ ಬಗ್ಗೆ ಮಾತನಾಡುವುದಿಲ್ಲ. ನಾವು ದರ್ಶನ್ ಬಗ್ಗೆ ಆಗಲಿ, ಮಂತ್ರಿಗಳ ಬಗ್ಗೆ ಆಗಲಿ ಯಾವುದೇ ಹೇಳಿಕೆ ಕೊಡಲ್ಲ ಎಂದಿದ್ದಾರೆ.
ಒಂದು ವೇಳೆ ದರ್ಶನ್ ನಮ್ಮ ಮನೆಗೆ ಬಂದರೆ ಬರಲಿ. ಅವತ್ತು ಏನಾಗುತ್ತದೋ ನೋಡೋಣ. ನಾವು ಯಾರನ್ನು ಶತ್ರು ಎನ್ನಲ್ಲ. ನಾವು ಎಲ್ಲರಿಗೂ ಗೌರವ ಕೊಡುತ್ತೇವೆ. ಯಾರೇ ಮನೆಗೆ ಬರ್ತೀನಿ ಅಂದ್ರು ಬನ್ನಿ ಎನ್ನುತ್ತೇವೆ. ಬಂದ್ರೆ ಬನ್ನಿ ಕೂತ್ಕೊಳಿ, ಊಟ ಮಾಡಿ ಹೋಗಿ ಅಂತೀವಿ ಅಷ್ಟೇ. ಅವರು ಬಂದು ಕ್ಷಮೆ ಕೇಳುವ ಬಗ್ಗೆ ಈಗ ಯಾಕೆ ಮಾತಾಡೋಣ. ಬರಲಿ ಆಗ ನೋಡೋಣ.
ನಮಗೆ ಆಗಿರುವ ಅನ್ಯಾಯಕ್ಕೆ ಕಾನೂನು ಪ್ರಕಾರ ಏನು ತನಿಖೆ ನಡೆಯುತ್ತಿದೆ ನಡೆಯಲಿ. ಸರ್ಕಾರ ಇದೆ. ವಿಜಯಲಕ್ಷ್ಮಿ ದರ್ಶನ್, ದಿನಕರ್ ತೂಗುದೀಪ ಹೋಗಿ ಡಿಸಿಎಂ ಡಿ. ಕೆ ಶಿವಕುಮಾರ್ ಭೇಟಿ ಮಾಡಿರುವ ಬಗ್ಗೆಯೂ ನಾನು ಮಾತಾಡಲ್ಲ. ಮಿನಿಸ್ಟರ್ ಅವರ ಕರ್ತವ್ಯ ಮಾಡುತ್ತಾರೆ. ದರ್ಶನ್ನ ಕ್ಷಮಿಸೋದು ಬಿಡೋದು ಮುಂದೆ ನೋಡೋಣ. ನಮಗೂ ಮಗನನ್ನು ಕಳೆದುಕೊಂಡ ನೋವಿದೆ. ಅದನ್ನು ಭರಿಸೋದು ಹೇಗೆ? ಎಂದು ಕಾಶಿನಾಥಯ್ಯ ಶಿವನಗೌಡ ಹೇಳಿದ್ದಾರೆ.
ಅಂದಹಾಗೆ ಮೃತ ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮೀವೆಂಕಟೇಶ್ವರ ಬಡಾವಣೆಯ ನಿವಾಸಿ ಆಗಿದ್ದರು. ಅಪೊಲೋ ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ರೇಣುಕಾಸ್ವಾಮಿ ಕೂಡ ನಟ ದರ್ಶನ್ ಅಭಿಮಾನಿ ಆಗಿದ್ದರು. ವಿಜಯಲಕ್ಷ್ಮಿ ಹಾಗೂ ದರ್ಶನ್ ಸಂಸಾರ ಚೆನ್ನಾಗಿರಬೇಕು. ಮೂರನೇ ವ್ಯಕ್ತಿ ಪವಿತ್ರಾ ಗೌಡ ಇಬ್ಬರ ನಡುವೆ ಹೋಗುವುದು ದರ್ಶನ್ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿಗೆ ಇಷ್ಟವಿರಲಿಲ್ಲ. ಹಾಗಾಗಿ ಪವಿತ್ರಾಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿತ್ತು.
ಜೂನ್ 9ರಂದು ಸುಮನಹಳ್ಳಿಯ ರಿಂಗ್ ರೋಡ್ ಬಳಿ ಮೋರಿಯಲ್ಲಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು. ಪಕ್ಕದಲ್ಲೇ ಇದ್ದ ಅನುಗ್ರಹ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಆಫೀಸರ್ ಕೇವಲ್ ರಾಮ್ ದೋರ್ ಜೀ ಪೊಲೀಸರಿಗೆ ಶವದ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಕ್ಕೆ ಕಾರ್ತಿಕ್ ಸೇರಿದಂತೆ ನಾಲ್ವರು ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದರು. ಪೊಲೀಸರು ತನಿಖೆ ಚುರುಕುಗೊಳಿಸಿದ ಬಳಿಕ ಅಸಲಿ ಸತ್ಯ ಬಹಿರಂಗವಾಗಿತ್ತು.


Click it and Unblock the Notifications











