'ಕೊಚಾಡಿಯನ್' ಪ್ರಕರಣ: ಬೆಂಗಳೂರು ಕೋರ್ಟ್ಗೆ ಹಾಜರಾಗಿ ಜಾಮೀನು ಪಡೆದ ಲತಾ ರಜನಿಕಾಂತ್
'ಕೊಚಾಡಿಯನ್' ಚಿತ್ರದ ವಿಚಾರವಾಗಿ ನಟ ರಜನಿಕಾಂತ್ ಪತ್ನಿ ಲತಾ ವಿರುದ್ಧ ವಂಚನೆ, ಸುಳ್ಳು ಹೇಳಿಕೆ, ಫೋರ್ಜರಿ ಆರೋಪ ಹೊರಿಸಲಾಗಿದೆ. ಅದೇ ಪ್ರಕರಣದ ಮುಂದುವರೆದ ಭಾಗವಾಗಿ ಮತ್ತೊಂದು ಪ್ರಕರಣವೂ ಇದೆ. ಈ ಪ್ರಕರಣ ಸಂಬಂಧ ಲತಾ ನಕಲಿ ದಾಖಲೆ ಹಾಗೂ ಸಹಿ ಬಳಕೆ ಆರೋಪ ಎದುರಿಸುತ್ತಿದ್ದಾರೆ.
ರಜನಿಕಾಂತ್ ನಟನೆಯ 'ಕೊಚಾಡಿಯನ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಈ ಚಿತ್ರವನ್ನು ಪುತ್ರಿ ಐಶ್ವರ್ಯಾ ನಿರ್ದೇಶನ ಮಾಡಿದ್ದರು. ಸುನಿಲ್ ಲುಲ್ಲು, ಸುನಂದಾ ಮುರಳಿ ಮನೋಹರ್, ಪ್ರಶಿತಾ ಚೌಧರಿ ಭಾರೀ ನಷ್ಟ ಅನುಭವಿಸಿದ್ದರು. ಹಾಗಾಗಿ ಮೆ. ಆ್ಯಡ್ ಬ್ಯೂರೋ ಅಡ್ವರ್ಟೈಸಿಂಗ್ ಸಂಸ್ಥೆಯು, ನಿರ್ಮಾಪಕಿ ಲತಾ ರಜನಿಕಾಂತ್ ಒಪ್ಪಂದದ ಪ್ರಕಾರ ನಷ್ಟ ಪರಿಹಾರ ನೀಡಿಲ್ಲವೆಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಯಾಕಂದರೆ ನಿರ್ಮಾಣ ಸಂಸ್ಥೆಗೆ ಲತಾ ರಜನಿಕಾಂತ್ ಸಿನಿಮಾ ಸೋತರೆ ನಷ್ಟಭರಿಸುವಾಗಿ ಗಾರೆಂಟಿ ಪತ್ರ ಬರೆದುಕೊಟ್ಟಿದ್ದರು.

ಅದೇ ಪ್ರಕರಣದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧಕಾಜ್ಞೆ ಪಡೆದುಕೊಳ್ಳಲು ಲತಾ ಅವರು ನಕಲಿ ದಾಖಲೆಗಳನ್ನು ಬಳಸಿದ್ದರೆಂಬ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು ಆ ಪ್ರಕರಣದಲ್ಲಿ ಇದೀಗ ಷರತ್ತು ಬದ್ಧ ಜಾಮೀನನ್ನು ಲತಾ ಅವರಿಗೆ ನೀಡಲಾಗಿದೆ. ಇಂದು (ಡಿಸೆಂಬರ್ 26) ಲತಾ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡರು.
ಇನ್ನು ಈ ವಿಚಾರವಾಗಿ ತಮ್ಮ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳನ್ನು ತಡೆಯಲು ಲತಾ ರಜನಿಕಾಂತ್ ನಿರ್ಬಂಧ ಹೇಳಿದ್ದರು. ಈ ತಡೆಯಾಜ್ಞೆಗಾಗಿ ಬೆಂಗಳೂರು ಪ್ರೆಸ್ಕ್ಲಬ್ ವಿಳಾಸ ಹಾಗೂ ಲೆಟರ್ ಹೆಡ್ ಇರುವ ಫೋರ್ಜರಿ ದಾಖಲೆ ಸಲ್ಲಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಲತಾ ರಜನಿಕಾಂತ್ ಇಂದು(ಡಿಸೆಂಬರ್ 26 ಷರತ್ತುಬದ್ಧ ಜಾಮೀನು ಪಡೆದಿದ್ದಾರೆ.
ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಲತಾ ರಜನಿಕಾಂತ್ ಖುದ್ದಾಗಿ ಹಾಜರಾಗಿ ಷರತ್ತುಬದ್ಧ ಜಾಮೀನು ಪಡೆದರು. ಈ ಬಗ್ಗೆ ಮಾಧ್ಯಮಗಳ ಜೊತೆ ಲತಾ ರಜನಿಕಾಂತ್ ಮಾತನಾಡಿದರು. "ನಾನು ಕಾನೂನಿಗೆ ಗೌರವ ಕೊಡುವ ಮಹಿಳೆ, ಅದೇ ಕಾರಣಕ್ಕೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿದ್ದೇನೆ. ಸೆಲೆಬ್ರಿಟಿ ಅನ್ನುವ ಕಾರಣಕ್ಕೆ ನನ್ನ ಮೇಲೆ ಹಲವು ವರ್ಷಗಳಿಂದ ದೌರ್ಜನ್ಯ ನಡೆಯುತ್ತಿದೆ. ಕಾನೂನು ಪ್ರಕ್ರಿಯೆಗಳು ನ್ಯಾಯಾಲಯದಲ್ಲಿ ನಡೆಯುತ್ತಿದೆ, ಅದರಂತೆ ನಾನು ಬರಬೇಕಿತ್ತು. ಅದಕ್ಕೆ ಬಂದಿದ್ದೇನೆ. ಉಳಿದಿದ್ದು ನಮ್ಮ ವಕೀಲರು ನೋಡಿಕೊಳ್ತಾರೆ. ಇದು ಹಣದ ವಿಚಾರ ಅಲ್ಲ. ಹಣವನ್ನು ಸೆಟ್ಲ್ ಮಾಡಿದ್ದಾಗಿದೆ" ಎಂದಿದ್ದಾರೆ.


Click it and Unblock the Notifications











