ಲೀಲಾವತಿ ಸಿನಿಯಾನ: ಕಾಮಿಡಿ ಅಂದ್ರೆ ಅಚ್ಚುಮೆಚ್ಚು.. ಆದ್ರೆ ಸಿಕ್ಕಿದ್ದೆಲ್ಲ ಕಣ್ಣೀರಿನ ಪಾತ್ರಗಳು
ಒಂದ್ಕಾಲದಲ್ಲಿ ನಾಟಕಗಳಲ್ಲಿ ನಟಿಸುತ್ತಿದ್ದವೇ ಮುಂದೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ವೃತ್ತಿರಂಗಭೂಮಿಯಲ್ಲಿ ಗುರ್ತಿಸಿಕೊಂಡಿದ್ದ ಲೀಲಾವತಿ ಮುಂದೆ ಸಿನಿಮಾಗಳಲ್ಲಿ ನಟಿಸಿದರು. 1937ರಲ್ಲಿ ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. 6 ವರ್ಷ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡಿದ್ದರು. ಜೀವನಕ್ಕಾಗಿ ಮೈಸೂರಿಗೆ ಬರುವಂತಾಯಿತು. ಒಪ್ಪೊತ್ತಿನ ಊಟಕ್ಕಾಗಿ ಪಾತ್ರೆ ತೊಳೆದು ಜೀವನ ಸಾಗಿಸಿದ್ದೂ ಉಂಟು. ಶಂಕರ್ ಸಿಂಗ್ ಅವರ 'ನಾಗಕನ್ನಿಕಾ' ಚಿತ್ರದಲ್ಲಿ ಮೊದಲು ಪುಟ್ಟ ಪಾತ್ರದಲ್ಲಿ ನಟಿಸಿದ್ದರು.
ಮಹಾಲಿಂಗ ಭಾಗವತರ್ ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮಾ ಕಂಪೆನಿಯಲ್ಲಿ ಸೇರಿಕೊಂಡಿದ್ದರು. ಮುಂದೆ 1958ರಲ್ಲಿ ಸುಬ್ಬಯ್ಯ ನಾಯ್ಡು ಅವರ 'ಭಕ್ತ ಪ್ರಹ್ಲಾದ', ಮಾಂಗಲ್ಯ ಯೋಗ, ಧರ್ಮ ವಿಜಯ, ರಣಧೀರ ಕಂಠೀರವ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. 'ರಾಣಿ ಹೊನ್ನಮ್ಮ' ಲೀಲಾವತಿಯವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ. 'ಸಂತ ತುಕಾರಾಂ', 'ಕಣ್ತೆರೆದು ನೋಡು', 'ಕೈವಾರ ಮಹಾತ್ಮೆ', 'ಗಾಳಿ ಗೋಪುರ', 'ಕನ್ಯಾರತ್ನ', 'ಕುಲವಧು', 'ವೀರ ಕೇಸರಿ', 'ಮನ ಮೆಚ್ಚಿದ ಮಡದಿ' ಹೀಗೆ ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಾ ಹೋದರು.

ಡಾ. ರಾಜ್ಕುಮಾರ್ ಹಾಗೂ ಲೀಲಾವತಿ ಜೋಡಿ ಸೂಪರ್ ಹಿಟ್ ಆಗಿತ್ತು. 'ವೀರ ಕೇಸರಿ', 'ಭಕ್ತ ಕುಂಬಾರ', 'ಸಿಪಾಯಿ ರಾಮು', 'ರಣಧೀರ ಕಂಠೀರವ' ಸೇರಿದಂತೆ ಏಳೆಂಟು ಸಿನಿಮಾಗಳಲ್ಲಿ ಇಬ್ಬರು ಒಟ್ಟಾಗಿ ನಟಿಸಿದ್ದರು. ಅಂದಾಜು 500ಕ್ಕೂಅಧಿಕ ಸಿನಿಮಾಗಳಲ್ಲಿ ಲೀಲಾವತಿ ಬಣ್ಣ ಹಚ್ಚಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತೆಲುಗು, ಮಲಯಾಳಂ, ತುಳು ಸಿನಿಮಾಗಳಲ್ಲೂ ಮಿಂಚಿ ಮೋಡಿ ಮಾಡಿದ್ದರು. ಚಿತ್ರವೊಂದಕ್ಕೆ 1500 ರೂ. ಸಂಭಾವನೆ ಪಡೆಯುವವರೆಗೂ ಲೀಲಾವತಿ ಸಾಕಷ್ಟು ಕಷ್ಟಗಳನ್ನು ಎದುರಿಸುವಂತಾಯಿತು.
ಸುಬ್ಬಯ್ಯ ನಾಯ್ಡು ಅವರ ವೃತ್ತಿ ನಾಟಕ ಕಂಪೆನಿಯಲ್ಲಿ ನಟಿಸುತ್ತಿದ್ದ ಲೀಲಾವತಿ ಅವರು ನಂತರ ಚಿತ್ರರಂಗಕ್ಕೆ ಬಂದರು. ಅಣ್ಣಾವ್ರ ಜೊತೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಾಯಕಿಯಾಗಿ, ಮಗಳಾಗಿ(ಭೂದಾನ) ಸಹೋದರಿಯಾಗಿ(ವಾತ್ಸಲ್ಯ) ಅತ್ತಿಗೆಯಾಗಿ(ಪ್ರೇಮಮಯಿ) ತಮ್ಮನ ಮಡದಿಯಾಗಿ (ಕಲಿತರು ಹೆಣ್ಣೆ), ಅತ್ತೆಯಾಗಿ (ವಸಂತ ಗೀತ, ನಾ ನಿನ್ನ ಮರೆಯಲಾರೆ, ಜ್ವಾಲಾಮುಖಿ) ನಟಿಸಿದ್ದು ವಿಶೇಷ. ಖ್ಯಾತ ನಟನ ಜೊತೆ ಇಷ್ಟು ವಿಭಿನ್ನವಾದ ಪಾತ್ರಗಳಲ್ಲಿ ನಟಿಸುವ ಅವಕಾಶ ಲೀಲಾವತಿ ಅವರಿಗೆ ಮಾತ್ರ ಸಿಕ್ಕಿತ್ತು.
60, 70ರ ದಶಕದಲ್ಲಿ ಲೀಲಾವತಿ ಅವರ ಕ್ರೇಜ್ ಹೇಗಿತ್ತು ಅಂದ್ರೆ ನಾಯಕ ನಟರಿಗಿಂತ ಎರಡರಷ್ಟು ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದರು. 'ಭಕ್ತ ಕುಂಬಾರ' ಚಿತ್ರದಲ್ಲಿ ಗೋರನ ಮಡದಿಯಾಗಿ, 'ಗೆಜ್ಜೆ ಪೂಜೆ' ಚಿತ್ರದಲ್ಲಿ ನಾಯಕಿಯ ತಾಯಿಯಾಗಿ, 'ನಾಗರಹಾವು' ಚಿತ್ರದಲ್ಲಿ ದೇವ್ರೇ ದೇವ್ರೇ ಎನ್ನುತ್ತ ರಾಮಾಚಾರಿ ಕಾಟಗಳನ್ನೆಲ್ಲಾ ಸಹಿಸಿಕೊಳ್ಳುವ ತುಂಗಮ್ಮನಾಗಿ, ತಮಿಳಿನ 'ಅವರ್ಗಳ್' ಚಿತ್ರದಲ್ಲಿ ಕ್ರೂರಿ ಮಗನಿಗೆ ಬುದ್ದಿ ಕಲಿಸುವ ತಾಯಿಯಾಗಿ ಲೀಲಾವತಿ ಅಭಿನಯಕ್ಕೆ ಮನಸೋಲದವರಿಲ್ಲ.

ಸಹಜ ಅಭಿನಯದಿಂದ ಲೀಲಾವತಿ ಮನೆ ಮಾತಾಗಿದ್ದರು. ಪ್ರಿಯತಮೆಯಾಗಿ, ಮಡದಿಯಾಗಿ, ತಾಯಿಯಾಗಿ, ಸಹೋದರಿಯಾಗಿ, ಅತ್ತೆಯಾಗಿ, ಅಜ್ಜಿಯಾಗಿ ಹೀಗೆ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿ ಲೀಲಾವತಿ ಗೆದ್ದರು. ಅಂತಹ ಪಾತ್ರಗಳು ಅವರನ್ನು ಅರಸಿ ಹೋಗಿದ್ದು ವಿಶೇಷ. ಕಾಮಿಡಿ ಅಂದರೆ ಲೀಲಾವತಿ ಅವರಿಗೆ ಬಹಳ ಇಷ್ಟವಾಗಿತ್ತು. ಆದರೆ ಬಹುತೇಕ ಸಿನಿಮಾಗಳಲ್ಲಿ ಕಣ್ಣೀರಿನ ಪಾತ್ರಗಳೇ ಸಿಕ್ಕಿತ್ತು. ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೌರವವೂ ಅವರಿಗೆ ಸಂದಾಯವಾಗಿತ್ತು.
ಲೀಲಾವತಿಯವರು ನಟಿಸಿದ 'ಮದುವೆ ಮಾಡಿ ನೋಡು' ಹಾಗೂ 'ಸಂತ ತುಕಾರಾಂ' ಚಿತ್ರಗಳಿಗೆ ಲೀಲಾವತಿಯವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ಇನ್ನು 'ಮಹಾತ್ಯಾಗ', 'ತುಂಬಿದ ಕೊಡ', 'ಮಹಾತ್ಯಾಗ', 'ಸಿಪಾಯಿ ರಾಮು', 'ಗೆಜ್ಜೆ ಪೂಜೆ', 'ಭಕ್ತ ಕುಂಬಾರ' ಚಿತ್ರಗಳಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದರು. ತಾವೇ ನಿರ್ಮಿಸಿದ 'ಕನ್ನಡದ ಕಂದ' ಚಿತ್ರದ ಅಭಿನಯಕ್ಕಾಗಿ ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದರು. ಇನ್ನು ಅಭಿಮಾನಿಗಳು ಹಾಗೂ ಸಂಘಸಂಸ್ಥೆಗಳಿಂದ ಈ ಅಭಿನೇತ್ರಿಗೆ ಸಿಕ್ಕ ಪ್ರಶಸ್ತಿ-ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಮಗ ವಿನೋದ್ ರಾಜ್ ನಟಿಸಿದ 'ಯಾರದು'(2009) ಚಿತ್ರದಲ್ಲಿ ಕೊನೆಯದಾಗಿ ಲೀಲಾವತಿ ಬಣ್ಣಹಚ್ಚಿದ್ದರು.
5 ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗಕ್ಕೆ ಲೀಲಾವತಿಯವರ ಕೊಡುಗೆ ಅಪಾರ. ವಿನೋದ್ ರಾಜ್ ನಟಿಸಿದ 'ಕಾಲೇಜ್ ಹೀರೊ', 'ಕನ್ನಡದ ಕಂದ', 'ಶುಕ್ರ' ಹಾಗೂ 'ಯಾರದು' ಚಿತ್ರಗಳನ್ನು ಸ್ವತಃ ಲೀಲಾವತಿ ನಿರ್ಮಾಣ ಮಾಡಿದ್ದರು. ಕಳೆದ ಹಲವು ವರ್ಷಗಳಿಂದ ನೆಲಮಂಗಲದ ಬಳಿ ತೋಟ ಮಾಡಿಕೊಂಡು ಮಗನ ಜೊತೆ ಲೀಲಾವತಿ ಅವರು ವಾಸಿಸುತ್ತಿದ್ದರು. ಸುತ್ತ ಮುತ್ತ ಊರುಗಳ ಜನರಿಗಾಗಿ ಸೋಲದೇವನಹಳ್ಳಿ ಅಂಚೆ ರಾಮಪುರದಲ್ಲಿ ಆಸ್ಪತ್ರೆಯನ್ನು ಕಟ್ಟಿಸಿದ್ದರು.


Click it and Unblock the Notifications











