ನನ್ನ ಜೀವನ ನಡೆಸೋಕೆ ಯಾರನ್ನಾದ್ರೂ ಕೇಳಬೇಕಾ ? ಬಿಗ್ಬಾಸ್ ,ಕ್ರಿಕೆಟ್ ಬಗ್ಗೆ ಚಕಾರ, ಸುದೀಪ್ ಬೆಂಕಿ ಉತ್ತರ, ಫ್ಯಾನ್ಸ್ ತತ್ತರ
ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಸುದೀಪ್ ತಾವು ಅತ್ಯುತ್ತಮ ನಿರೂಪಕ ಕೂಡ ಹೌದು. ಕರುನಾಡಿನಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಈ ಪರಿ ಯಶಸ್ವಿಯಾಗಲು ಪ್ರಮುಖವಾದ ಕಾರಣ ಸುದೀಪ್.
ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬಂದ ಸುದೀಪ್ ಈ ಕಾರ್ಯಕ್ರಮಕ್ಕೆ ದುಡ್ಡನ್ನು ಮೀರಿದ ಶ್ರಮವನ್ನು ಧಾರೆಯೆರೆದಿದ್ದಾರೆ. ಇದು ಆ ವಾಹಿನಿ ಈ ವಾಹಿನಿಯ ಕಾರ್ಯಕ್ರಮ ಎನ್ನದೇ ಯಾವುದೇ ಮೂಲೆಯಲ್ಲಿ ಇದ್ದರೂ ''ಬಿಗ್ ಬಾಸ್'' ಕಾರ್ಯಕ್ರಮಕ್ಕೆ ತೊಡಗಿಸಿಕೊಂಡಿದ್ದಾರೆ. ನಿದ್ರೆಯನ್ನು ಕೂಡ ಮರೆತು ''ಬಿಗ್ ಬಾಸ್''ಗೋಸ್ಕರ ಬೆವರು ಸುರಿಸಿದ್ಧಾರೆ.

ಇನ್ನು, ''ಬಿಗ್ ಬಾಸ್'' ಸುದೀಪ್ ಅವರ ಪಾಲಿಗೆ ಸೈಡ್ ಪ್ರಾಜೆಕ್ಟ್ ಆಗಿರಲಿಲ್ಲ. ಬದುಕಿನ ಬಹುಮುಖ್ಯವಾದ ಭಾಗವಾಗಿತ್ತು. ಖುದ್ದು ಸುದೀಪ್ ಈ ಮಾತನ್ನು ಈ ಹಿಂದೆ ಹೇಳಿದ್ದರು ಕೂಡ. ಆದರೆ, ಅದ್ಯಾಕೋ ಸುದೀಪ್ ಅವರ ಈ ನಡೆಯ ಕುರಿತು ಅವರ ಅಭಿಮಾನಿಗಳಲ್ಲಿಯೇ ಅಸಹನೆ ಇದೆ. ಇದಕ್ಕೆ ಕಾರಣ ಸುದೀಪ್ ಅವರ ಸಿನಿಮಾ ಕಮಿಟ್ಮೆಂಟ್.
ಮೂರು ತಿಂಗಳು ಕ್ರೀಡಾಂಗಣದಲ್ಲಿ, ಇನ್ನು ಮೂರು ತಿಂಗಳು ''ಬಿಗ್ ಬಾಸ್'' ಮನೆಯಲ್ಲಿದ್ದರೆ ಸಿನಿಮಾ ಮಾಡುವುದು ಯಾವಾಗ..? ಎನ್ನುವ ಚಿಂತೆ ಇವರ ಅಭಿಮಾನಿಗಳದ್ದು. ಇನ್ನು ಕನ್ನಡ ಚಿತ್ರರಂಗದ ಕಥೆ ಎಲ್ಲರಿಗೆ ಗೊತ್ತಿರುವಂತಹದ್ದೇ.
ಶಿವರಾಜ್ ಕುಮಾರ್ ಅವರನ್ನು ಹೊರತು ಪಡಿಸಿದರೆ ಬೇರೆಯವರು ಬೆಳ್ಳಿತೆರೆಯಲ್ಲಿ ವರ್ಷಕ್ಕೆ ಒಮ್ಮೆ ದರ್ಶನ ನೀಡಿದರೆ ಹೆಚ್ಚು. ಅದರಲ್ಲಿಯೂ ಸದ್ಯ ಯಶ್ ಮತ್ತು ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದ ಪಾಲಿಗೆ ನಾಟ್ ರಿಚೇಬಲ್. ದರ್ಶನ್ ಸದ್ಯ ಜೈಲಿನಲ್ಲಿದ್ಧಾರೆ.
ಹೀಗಾಗಿ ಕನ್ನಡ ಚಿತ್ರರಂಗದ ಅಳಿವು ಉಳಿವಿಗಾಗಿ ನಮ್ಮ ಸ್ಟಾರ್ ಗಳು ಕೊನೆ ಪಕ್ಷ ವರ್ಷಕ್ಕೆ ಎರಡು ಚಿತ್ರವನ್ನಾದರೂ ಮಾಡಬೇಕೆನ್ನುವ ಮಾತು ಸಾಮಾನ್ಯ ಸಿನಿಮಾ ಪ್ರೇಮಿಗಳ ವಲಯದಲ್ಲಿ ಕೇಳಿ ಬರುತ್ತೆ. ಖುದ್ದು ಸುದೀಪ್ ಕೂಡ ಈ ಮಾತನ್ನು ಹಿಂದೆ ಒಪ್ಪಿದ್ದರು. ವರ್ಷಕ್ಕೆ ಕಡಿಮೆ ಅಂದರೂ ಎರಡು ಸಿನಿಮಾ ಮಾಡುವ ಭರವಸೆ ನೀಡಿದ್ದರು.

ಆದರೂ ಅದ್ಯಾಕೋ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಸುದೀಪ್ ಮಾಡಿದ್ದು ಕೇವಲ ಒಂದು ಸಿನಿಮಾ ಮಾತ್ರ. ಇನ್ನು ಈ ವರ್ಷದಲ್ಲಿ 6 ತಿಂಗಳು ಮುಗಿದು ಹೋಗಿವೆ. ಈ 6 ತಿಂಗಳಿನಲ್ಲಿ ವರ್ಷದ ಮೊದಲೆರಡು ತಿಂಗಳು ಸುದೀಪ್ ಕಾಣಿಸಿದ್ದು ಕ್ರಿಕೆಟ್ ಮೈದಾನದಲ್ಲಿ. ''ಬಿಲ್ಲಾ ರಂಗ ಬಾಷಾ'' ಆಗಲಿ ಅಥವಾ ಬೇರೆ ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಭಾಗಿಯಾಗಿದ್ದಾರೆ ಎನ್ನುವುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಸುದ್ದಿಯೂ ಇಲ್ಲ.
ಹೀಗಿರುವಾಗ ಇದೀಗ ಮತ್ತೆ ''ಬಿಗ್ ಬಾಸ್'' ಶುರುವಾಗುತ್ತಿದೆ. ಎಂದಿನಂತೆ ಮತ್ತದೇ ವರ್ಷಗಳಿಂದ ನಡೆಯುತ್ತಾ ಬಂದ ಡಿಬೇಟ್ ಮತ್ತೆ ಶುರುವಾಗಿದೆ. ಈ ಚರ್ಚೆಯನ್ನು ಗಮನಿಸಿರುವ ಸುದೀಪ್ ಈ ಬಾರಿ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ಧಾರೆ.
ಹೌದು, ಎಲ್ಲರಿಗೆ ಗೊತ್ತಿರವಂತೆ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಅಭಿನಯದ ''ಮ್ಯಾಂಗೋ ಪಚ್ಚಾ'' ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಈ ಹಿನ್ನೆಲೆ ಪ್ರಚಾರದ ಮೈದಾನಕ್ಕೆ ಖುದ್ದು ಧುಮುಕಿರುವ ಸುದೀಪ್ ಚಿತ್ರದ ಪ್ರಚಾರವನ್ನು ಮಾಡುತ್ತಿದ್ಧಾರೆ. ಸಂಚಿತ್ಗೆ ಸಿಕ್ಕ ಸ್ವಾಗತವನ್ನು ಕಂಡು ಪುಳಕಿತಗೊಂಡಿದ್ಧಾರೆ. ಉತ್ಸಾಹದಲ್ಲಿ ಸಂದರ್ಶನ ಕೂಡ ನೀಡುತ್ತಿದ್ಧಾರೆ.
ಹೀಗೆ, ಚಿತ್ರದ ವಿತರಣೆಯ ಜವಾಬ್ಧಾರಿ ಹೊತ್ತ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರ ಕೆ.ಆರ್.ಜಿ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸುದೀಪ್,ನನ್ನ ಇಷ್ಟ ಬಂದಿರೋ ಜೀವನ, ಅದನ್ನು ನಾನು ನಡೆಸಬೇಕಾದ್ರೆ ಯಾರನ್ನಾದ್ರೂ ಕೇಳಬೇಕಾ? ಎಂದು ಪ್ರಶ್ನಿಸಿದ್ದಾರೆ. ತಮಗೆ ಇಂದು ಸಿಕ್ಕಿರುವ ಯಶಸ್ಸು ಮತ್ತು ಸ್ಟಾರ್ಡಮ್ ಸುಲಭವಾಗಿ ಬಂದಿದ್ದಲ್ಲ ಎನ್ನುವುದನ್ನು ಕೂಡ ಕೆ.ಆರ್.ಜಿ ಯೂಟ್ಯೂಬ್ ಮೂಲಕ ಸಮಸ್ತ ಕನ್ನಡಿಗರಿಗೆ ನೆನಪಿಸಿರುವ ಸುದೀಪ್,
ಯಾವುದೇ ರಜೆ ತೆಗೆದುಕೊಳ್ಳದೆ ವರ್ಷಾನು ವರ್ಷ ಬೆವರು ಸುರಿಸಿ, ಈ ಹೆಸರು ಸಂಪಾದನೆ ಮಾಡಿದ್ಧೇನೆ ಎಂದು ಮಾರ್ಮಿಕವಾಗಿ ಹೇಳಿದ್ಧಾರೆ.
ಮುಂದುವರೆದು ''ಬಿಗ್ ಬಾಸ್'' ಮತ್ತು ಕ್ರಿಕೆಟ್ ಕುರಿತು ಕೂಡ ಮಾತನಾಡಿರುವ ಸುದೀಪ್, ''ಬಿಗ್ ಬಾಸ್'' ಆಗಲಿ ''ಕ್ರಿಕೆಟ್'' ಆಗಲಿ ಹೆಸರಿರುವ ಕಾರಣಕ್ಕೆ (ಬ್ಯ್ರಾಂಡ್ ವ್ಯಾಲ್ಯೂ) ನನ್ನನ್ನು ಹುಡುಕಿಕೊಂಡು ಬರುತ್ತವೇ ಎಂದು ಸ್ಪಷ್ಟ ಪಡಿಸಿರುವ ಸುದೀಪ್, ನಿಮ್ಮೆಲ್ಲರ ಪ್ರಕಾರ ನಾನು ಜೀವನದಲ್ಲಿ ಏನು ಮಾಡಲೇಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಜೀವನ ನನಗೆ ನಡೆಸಲು ಬಿಡಿ, ಇನ್ನೇನು ವಯಸ್ಸಾದ ಮೇಲೆ ಕೋಲು ಹಿಡ್ಕೊಂಡು ಕ್ರಿಕೆಟ್ ಆಡೋಕೆ ಹೋಗಲಾ..? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಸದ್ಯ ಸುದೀಪ್ ಅವರ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ತಮ್ಮ ಅಭಿಮಾಣಿಗಳನ್ನೇ ಸುದೀಪ್ ರೋಸ್ಟ್ ಮಾಡಿದ್ಧಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಸುದೀಪ್ ಅವರ ಈ ಮಾತುಗಳಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ಧಾರೆ. ಎಲ್ಲವೂ ಅವರವರ ಭಾವಕ್ಕೆ ಅವರವರ ಭಕೂತಿಗೆ.


Click it and Unblock the Notifications