ಲೇಖಕಿಯಾಗಿ ರೂಪುಗೊಂಡಿರುವ ಲೀಸಾ
ಯಾವುದೋ ಪ್ಲಾನ್ನಲ್ಲಿ ಮುಳುಗಿರುವಾಗ ಇನ್ನೇನೋ ಆಗಿಬಿಡುತ್ತೆ. ಏನೋ ಆಗಬೇಕೆಂದು ಹೊರಟ ನಾವು ಮತ್ತೇನೋ ಆಗಿ ಹೋಗಿರುತ್ತೇವೆ. ಇದು ಜೀವನ. ಈ ಕಾರಣಕ್ಕೇ ನಾನು ಏನನ್ನೂ ಪ್ಲಾನ್ ಮಾಡೋದಿಲ್ಲ !
ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ಮಂಗಳವಾರ (ಫೆಬ್ರವರಿ 12) ಬೆನೆಟನ್ ಸ್ಟೋರ್ ಉದ್ಘಾಟಿಸಿದ ಲೀಸಾ ರೇ ತತ್ವಜ್ಞಾನಿ ಧಾಟಿಯಲ್ಲಿ ಮಾತಾಡುತ್ತಿದ್ದರು. ಈಗ ಹಲವಾರು ಪತ್ರಿಕೆ- ನಿಯತಕಾಲಿಕಗಳಿಗೆ ಬರೆಯಲು ಶುರುವಿಟ್ಟುಕೊಂಡಿರುವ ಲೀಸಾಗೆ ಸಿನಿಮಾ ಅಂದರೆ ಅಷ್ಟಕ್ಕಷ್ಟೆ. ಹಾಗಂತ ಖುದ್ದು ಅವರೇ ಹೇಳಿಕೊಳ್ಳುತ್ತಾರೆ. ಅವರ ಮುಂದಿರುವ ನಿಜವಾದ ಸವಾಲು ಬರವಣಿಗೆಯಂತೆ.
ಕೆಂಪುಡುಗೆ ತೊಟ್ಟಿದ್ದ ಲೀಸಾ ಮಿರುಮಿರುಗುವ ದೀಪದಲ್ಲಿ ಯುವರಾಜ ಸಿನಿಮಾಗಿಂತ ಸಾಕಷ್ಟು ಚೆನ್ನಾಗಿ ಕಾಣುತ್ತಿದ್ದರು. ಯಾರು ಮಾತಾಡಿಸಿದರೂ, ಕಿಂಚಿತ್ತೂ ಚೆಲ್ಲುಚೆಲ್ಲೆನಿಸದ ಗಂಭೀರ ಮಾತು. ಮೊದಲು ಜೀವನ, ನಂತರ ಸಿನಿಮಾ ಅನ್ನುತ್ತಲೇ ಮಾತು ಪ್ರಾರಂಭಿಸುತ್ತಿದ್ದುದು. ಇನ್ನು ಮಾತೋ, ನೀವೂ ಕೇಳಿ....
- ನಾನು ಈಗ ಜೀವನದ ಹುಡುಕಾಟದ ಘಟ್ಟದಲ್ಲಿದ್ದೇನೆ. ನಿಜವಾಗಲೂ ಏನು ಮಾಡಬೇಕು ಎಂಬುದರ ಅನ್ವೇಷಣೆಯಲ್ಲಿ ತೊಡಗಿದ್ದೇನೆ. ಗೊಂದಲಗಳ ಮೆಟ್ಟಿ, ರ್ಯಾಟ್ ರೇಸ್ನಿಂದ ಹೊರ ಬರುವುದು ಹೇಗೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿದ್ದೇನೆ.
- ನನಗೆ ಬೆಂಗಳೂರು, ಇಲ್ಲಿನ ಜನ ಅಂದರೆ ತುಂಬಾ ಇಷ್ಟ. ಶೂಟಿಂಗ್ಗೆ, ಮತ್ಯಾವುದೋ ಫಂಕ್ಷನ್ಗೆ ಅಂತ ಬಂದಾಗಲೆಲ್ಲಾ ಇಲ್ಲಿಂದ ವಾಪಸ್ಸು ಹೋಗಲು ಮನಸ್ಸಾಗುವುದೇ ಇಲ್ಲ.
- ನನಗೆ ಬರೆಯುವುದರ ಜೊತೆಗೆ ಆರ್ಟ್ ಎಕ್ಸಿಬಿಷನ್ಗಳಲ್ಲಿ ತೊಡಗಿಕೊಳ್ಳುವುದು ಇಷ್ಟ. ಈ ಕಾರಣಕ್ಕೇ ನಾನೀಗ ಆರಿಸಿದ ಕೆಲವೇ ಚಿತ್ರಗಳಿಗೆ ಸಹಿ ಹಾಕುತ್ತಿರುವುದು.
- ದೀಪಾ ಮೆಹ್ತಾರ ಬಾಲಿವುಡ್ ಹಾಲಿವುಡ್ ಎಂಬ ಚಿತ್ರ ಪೈಪ್ಲೈನ್ನಲ್ಲಿದೆ. ಶೂಟ್ ಮಾಡಿದ್ದು ಕೆನಡಾದಲ್ಲಿ. ನನ್ನ ಜೀವಮಾನದ ಮರೆಯಲಾಗದ ವೃತ್ತಿಪರ ಗಳಿಗೆಗಳನ್ನು ಈ ಚಿತ್ರ ಕಟ್ಟಿಕೊಟ್ಟಿದೆ. ಅರ್ಜುನ್, ಐಶ್ವರ್ಯ ಕೂಡ ಇದರಲ್ಲಿ ಅಭಿನಯಿಸಿದ್ದಾರೆ. ಆದರೂ ಸಿನಿಮಾ ನನ್ನ ಜಗತ್ತಲ್ಲ.
- ನಾನು ಭವಿಷ್ಯ ಹೀಗೇ ಇರಬೇಕು ಅಂದುಕೊಳ್ಳುವುದಿಲ್ಲ. ಯಾವುದೇ ಲೆಕ್ಕಾಚಾರಗಳನ್ನೂ ಮಾಡುವುದಿಲ್ಲ. ಆಗುವುದು ಆಗಲಿ ಅಂತ ಸುಮ್ಮನಿದ್ದುಬಿಡುತ್ತೇನೆ. ಪಯಣ ಎತ್ತ ಬೇಕಾದರೂ ಸಾಗಬಹುದು !
English summary
I wont plan anything. Lets the life go in its own way, says Lisa Ray


Click it and Unblock the Notifications