ಏಪ್ರಿಲ್ನಲ್ಲಿ ತೆರೆಗೆ ಬರುವ ಕನ್ನಡ ಸಿನಿಮಾಗಳು; ಐಪಿಎಲ್ ಹವಾ ನಡುವೆಯೂ ತೊಡೆತಟ್ಟಿದ ಚಿತ್ರಗಳಿವು!
2023 ಕನ್ನಡ ಚಿತ್ರರಂಗದ ಪಾಲಿಗೆ ಅಷ್ಟೇನೂ ದೊಡ್ಡಮಟ್ಟದ ಸಕ್ಸಸ್ ನೀಡಿಲ್ಲ. ಅಭಿಮಾನಿಗಳನ್ನು ಹೊರತುಪಡಿಸಿ ಕನ್ನಡದ ಸಿನಿ ರಸಿಕರು ಮೆಚ್ಚಿ ಅಪ್ಪಿಕೊಂಡದ್ದು ಬೆರಳೆಣಿಕೆಯಷ್ಟು ಚಿತ್ರಗಳನ್ನು ಮಾತ್ರ. ಹೌದು, ಈ ವರ್ಷದ ಮಾರ್ಚ್ ತಿಂಗಳು ಮುಕ್ತಾಯಗೊಂಡಿದ್ದು, ಮೊದಲ 3 ತಿಂಗಳಿನಲ್ಲಿ ಸಿನಿ ರಸಿಕರಿಂದ ಫುಲ್ ಮಾರ್ಕ್ಸ್ ತೆಗೆದುಕೊಂಡದ್ದು ಒಂದೆರಡು ಚಿತ್ರಗಳು ಮಾತ್ರ. ಈ ಪೈಕಿ ಮೊನ್ನೆಯಷ್ಟೇ ( ಮಾರ್ಚ್ 30 ) ತೆರೆಕಂಡಿರುವ ಡಾಲಿ ಧನಂಜಯ್ ನಟನೆಯ ಗುರುದೇವ್ ಹೊಯ್ಸಳ ಸಹ ಒಂದು.
ಹೀಗೆ ಹೆಚ್ಚೇನು ಹಿಟ್ ಚಿತ್ರಗಳನ್ನು ಮೊದಲ ಮೂರು ತಿಂಗಳಿನಲ್ಲಿ ಪಡೆಯದ ಕನ್ನಡ ಚಿತ್ರರಂಗ ಉಳಿದ ಚಿತ್ರರಂಗಗಳಿಗೆ ಹೋಲಿಸಿದರೆ ಕಡಿಮೆ ಸಕ್ಸಸ್ ರೇಟ್ ಹೊಂದಿದೆ. ಹೀಗೆ ಮೊದಲ ಮೂರು ತಿಂಗಳಿನಲ್ಲಿ ಭರ್ಜರಿ ಗೆಲುವುಗಳನ್ನೇನೂ ಕಾಣದ ಕನ್ನಡ ಚಿತ್ರರಂಗದಿಂದ ಏಪ್ರಿಲ್ ತಿಂಗಳಿನಲ್ಲಿ ಹಲವು ಭರವಸೆ ಹುಟ್ಟುಹಾಕಿರುವ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಹಾಗಾದರೆ ಈ ತಿಂಗಳ ಯಾವ ದಿನಾಂಕದಂದು ಯಾವ ಚಿತ್ರಗಳು ತೆರೆಗೆ ಬರಲಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಏಪ್ರಿಲ್ 7: ಏಪ್ರಿಲ್ ತಿಂಗಳ ಮೊದಲ ವಾರ ಏಪ್ರಿಲ್ 7ರಂದು ಕನ್ನಡದಲ್ಲಿ ಪೆಂಟಗನ್ ಹಾಗೂ ವೀರಂ ಎಂಬ ಎರಡು ಚಿತ್ರಗಳು ತೆರೆಗೆ ಬರಲಿವೆ. ಪೆಂಟಗನ್ ಚಿತ್ರವನ್ನು ಗುರು ದೇಶಪಾಂಡೆ ನಿರ್ಮಿಸಿದ್ದು, ಈ ಚಿತ್ರದಲ್ಲಿ ಐದು ಕಥೆಗಳಿವೆ ಹಾಗೂ ಈ ಕಥೆಗಳನ್ನು ಐವರು ನಿರ್ದೇಶಕರು ನಿರ್ದೇಶಿಸಿದ್ದಾರೆ. ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ರಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ನಿರ್ದೇಶಿಸಿದ್ದಾರೆ. ಟ್ರೈಲರ್ ಕನ್ನಡ ಪರ ಹೋರಾಟಗಾರರ ವಿಚಾರವಾಗಿ ಈಗಾಗಲೇ ವಿವಾದ ಎಬ್ಬಿಸಿದ್ದು, ಚಿತ್ರ ಸದ್ದು ಮಾಡಿದೆ. ಇನ್ನು ವೀರಂ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ಶ್ರೀನಗರ ಕಿಟ್ಟಿ, ರಚಿತಾ ರಾಮ್ ಹಾಗೂ ಶಿಷ್ಯ ದೀಪಕ್ ಬಣ್ಣ ಹಚ್ಚಿದ್ದಾರೆ. ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಇದೊಂದು ರಿವೇಂಜ್ ಡ್ರಾಮಾದಂತೆ ಕಾಣುತ್ತಿದೆ.
ಏಪ್ರಿಲ್ 14: ಏಪ್ರಿಲ್ ಎರಡನೇ ವಾರ ಶಿವಾಜಿ ಸುರತ್ಕಲ್ ಹಾಗೂ ಉಂಡೆನಾಮ ಎಂಬ ಎರಡು ಚಿತ್ರಗಳು ಬಿಡುಗಡೆಯಾಗಲು ಸಜ್ಜಾಗಿವೆ. 2020ರಲ್ಲಿ ಬಿಡುಗಡೆಯಾಗಿ ಬೃಹತ್ ಹಿಟ್ ಆಗಿದ್ದ ಶಿವಾಜಿ ಸುರತ್ಕಲ್ ಚಿತ್ರದ ಎರಡನೇ ಭಾಗವೇ ಈ ಶಿವಾಜಿ ಸುರತ್ಕಲ್ 2 ಆಗಿದ್ದು, ಈ ಚಿತ್ರದಲ್ಲಿಯೂ ಸಹ ರಮೇಶ್ ಅರವಿಂದ್ ಲೀಡ್ ರೋಲ್ ನಿರ್ವಹಿಸಿದ್ದಾರೆ. ಮೊದಲ ಭಾಗದಲ್ಲಿ ರಣಗಿರಿ ರಹಸ್ಯವನ್ನು ಬಗೆಹರಿಸಿದ್ದ ಶಿವಾಜಿ ಈ ಬಾರಿ ಮಾಯಾವಿಯ ರಹಸ್ಯ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಉಂಡೆನಾಮ ಚಿತ್ರದಲ್ಲಿ ಕೋಮಲ್ ಕುಮಾರ್ ನಾಯಕನಾಗಿ ನಟಿಸಿದ್ದು, ಕೆಎಲ್ ರಾಜಶೇಖರ್ ನಿರ್ದೇಶನ ಮಾಡಿದ್ದಾರೆ ಹಾಗೂ ನಂದಕಿಶೋರ್ ಬಂಡವಾಳ ಹೂಡಿದ್ದಾರೆ.

ಏಪ್ರಿಲ್ 28: ಏಪ್ರಿಲ್ ಅಂತಿಮ ವಾರದಲ್ಲಿ ರಾಘು ಹಾಗೂ ರಾಘವೇಂದ್ರ ಸ್ಟೋರ್ಸ್ ಚಿತ್ರಗಳು ತೆರೆಗೆ ಬರಲಿವೆ. ರಾಘು ಚಿತ್ರದಲ್ಲಿ ವಿಜಯ ರಾಘವೇಂದ್ರ ನಟಿಸಿದ್ದು, ಎಂ ಆನಂದ್ ರಾಜ್ ಎಂಬುವವರ ನಿರ್ದೇಶನವಿದೆ. ಇದೇ ದಿನ ಬಿಡುಗಡೆಯಾಗಲಿರುವ ಮತ್ತೊಂದು ಚಿತ್ರ ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ನಾಯಕ ನಟನಾಗಿ ನಟಿಸಿದ್ದು, ಇಂಡಸ್ಟ್ರಿ ಹಿಟ್ ಡೈರೆಕ್ಟರ್ ಸಂತೋಷ್ ಆನಂದ್ರಾಮ್ ನಿರ್ದೇಶನವಿದೆ ಹಾಗೂ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ.
ಇನ್ನು ಸದ್ಯ ಇನ್ನೆರಡು ತಿಂಗಳುಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯಲಿದ್ದು, ಸಿನಿ ರಸಿಕರು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬರುವುದಿಲ್ಲ. ಇಂತಹ ಸಮಯದಲ್ಲಿ ಈ ಮೇಲ್ಕಂಡ ಚಿತ್ರಗಳು ಬಿಡುಗಡೆಯಾಗಲು ರೆಡಿಯಾಗಿವೆ. ಈ ಪೈಕಿ ಶಿವಾಜಿ ಸುರತ್ಕಲ್ 2 ಹಾಗೂ ರಾಘವೇಂದ್ರ ಸ್ಟೋರ್ಸ್ ಮೇಲೆ ಹೆಚ್ಚಿನ ಭರವಸೆ ಸಿನಿ ರಸಿಕರಲ್ಲಿ ಇದೆ.


Click it and Unblock the Notifications











