ರಿಷಿ ಪ್ರಪಂಚ : ಬಿಡುಗಡೆಯಾಗಿರೋದು 1 ಸಿನಿಮಾ, ಕೈಲಿರೋದು 6 ಸಿನಿಮಾ
'ಬಿಡುಗಡೆಯಾಗಿರೋದು 1 ಸಿನಿಮಾ, ಕೈಲಿರೋದು 6 ಸಿನಿಮಾ' ಎಂಬ ಶೀರ್ಷಿಕೆ ನೋಡಿದ ತಕ್ಷಣ ಕೆಲವರಿಗೆ ಆಶ್ಚರ್ಯ ಆಗಬಹುದು. ಆದರೆ, ಇದು ಸತ್ಯ. ನಟ ರಿಷಿ ಅಭಿನಯದ ಒಂದು ಸಿನಿಮಾ ಸದ್ಯಕ್ಕೆ ಬಿಡುಗಡೆಯಾಗಿದೆ. ಆದರೆ, ಅವರ ಕೈನಲ್ಲಿ ಆರು ಸಿನಿಮಾಗಳಿವೆ.
''ಏನು ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದ್ದೀರಿ..?'' ಎಂದರೆ ''ಸಿನಿಮಾ ಮಾಡುವುದು ದೊಡ್ಡ ವಿಚಾರ ಅಲ್ಲ. ನಾನು ಮಾಡಿದ ಸಿನಿಮಾ, ನನ್ನ ಪಾತ್ರ ಜನರಿಗೆ ಇಷ್ಟ ಆಗಬೇಕು. ಅದು ಮುಖ್ಯ'' ಎನ್ನುತ್ತಾರೆ ರಿಷಿ.
ರಿಷಿ ಒಂದು ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕು ಎಂದರೆ ಕಥೆ, ನಿರ್ದೇಶಕ, ನಿರ್ಮಾಣ ಸಂಸ್ಥೆ ಹಾಗೂ ಪಾತ್ರ ಎಲ್ಲವೂ ಪ್ರಧಾನ ಆಗುತ್ತದೆಯಂತೆ. 'ಸಿನಿಮಾ ಗೆಲ್ಲಬೇಕು, ಅದೇ ಮುಖ್ಯ..' ಎನ್ನುವ ರಿಷಿ ತಮ್ಮ ಚಿತ್ರಗಳ ಆಯ್ಕೆಯ ವಿಧಾನವನ್ನು ತಿಳಿಸಿದರು.
ಕಿರುತೆರೆಯ ಅನುಭವವಿದ್ದ ರಿಷಿ, ಸಿಂಪಲ್ ಸುನಿ ಹೆಣೆದ 'ಆಪರೇಷನ್ ಅಲಮೇಲಮ್ಮ' ಚಿತ್ರದ ಮೂಲಕ ನಾಯಕ ನಟನಾದರು. ಆಪರೇಷನ್ ಸಕ್ಸಸ್ ಆಯ್ತು. ರಿಷಿ ಲವಲವಿಕೆಯ ನಟನೆ ಬಹಳ ಇಷ್ಟ ಆಯ್ತು. ರಿಷಿ ಕಂಡರೆ ಪ್ರೇಕ್ಷಕರಗೆ ಲವ್ ಜಾಸ್ತಿಯಾಯ್ತು.
ಅಂದಹಾಗೆ, ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಇದೀಗ ಫಿಲ್ಮಿಬೀಟ್ ಕನ್ನಡದ ಜೊತೆಗೆ ರಿಷಿ ಮಾತನಾಡಿದ್ದಾರೆ. ಅವರ ಚಿತ್ರಗಳ ಪಟ್ಟಿ ಹಾಗೂ ಅದರ ವಿವರ ಮುಂದಿದೆ ಓದಿ...

'ಕವಲುದಾರಿ' ಪೋಸ್ಟ್ ಪ್ರೊಡಕ್ಷನ್
'ಕವಲುದಾರಿ' ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ. ಈ ಚಿತ್ರದಲ್ಲಿ ರಿಷಿ ನಟಿಸುತ್ತಿದ್ದು, ಇದು ಅವರ ಎರಡನೇ ಸಿನಿಮಾವಾಗಿದೆ. ಈ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಸೆನ್ಸಾರ್ ಆದ ಬಳಿಕ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ. ಈ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ.

'ಸಾರ್ವಜನಿಕರಿಗೆ ಸುವರ್ಣಾವಕಾಶ' ಕೊನೆಯ ಹಂತದ ಚಿತ್ರೀಕರಣ
'ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರದ ಫೈನಲ್ ಹಂತದ ಚಿತ್ರೀಕರಣ ಸದ್ಯ ನಡೆಯುತ್ತಿದೆ. 'ಗುಳ್ಟು' ಟೀಮ್ ಸೇರಿ ಮಾಡುತ್ತಿರುವ ಹೊಸ ಸಿನಿಮಾ ಇದಾಗಿದೆ. ರಿಷಿಗೆ ಇಲ್ಲ ಧನ್ಯಾ ನಾಯಕಿ. ಅನೂಪ್ ರಾಮಸ್ವಾಮಿ ಕಶ್ಯಪ್ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

ಧನುಷ್ ನಿರ್ಮಾಣದ ಚಿತ್ರ
ಕಾಲಿವುಡ್ ನಟ ಧನುಷ್ ನಿರ್ಮಾಣದ ಮೊದಲ ಕನ್ನಡ ಚಿತ್ರಕ್ಕೆ ಸಹ ರಿಷಿ ಅವರೇ ಹೀರೋ. ಈ ಸಿನಿಮಾದ ಚಿತ್ರೀಕರಣ ಕೂಡ ಈಗಾಗಲೇ ಮುಗಿದಿದೆ. ನಿರ್ದೇಶಕ ಜೇಕಬ್ ವರ್ಗೀಸ್ ಸದ್ಯ 'ಚಂಬಲ್' ಬಿಡುಗಡೆಯ ಕೆಲಸದಲ್ಲಿ ಬ್ಯುಸಿ ಇದ್ದು, ಆ ಚಿತ್ರದ ಬಳಿಕ ಈ ಸಿನಿಮಾ ಅನೌನ್ಸ್ ಆಗುತ್ತದೆ. ಧನುಷ್ ಹಾಗೂ ಜೇಕಬ್ ವರ್ಗೀಸ್ ಇಬ್ಬರ ಸಹಯೋಗದಲ್ಲಿ ಈ ಸಿನಿಮಾ ಬರುತ್ತಿದೆ.

ಮುಂದಿನ ವರ್ಷ 'ಗಾಳಿಪಟ 2'
ಯೋಗರಾಜ್ ಭಟ್ ಮತ್ತೆ 'ಗಾಳಿಪಟ' ಹಾರಿಸಲು ಬಂದಿದ್ದಾರೆ. 'ಗಾಳಿಪಟ 2'ದಲ್ಲಿ ಸಹ ಮೂರು ನಟರು ಇದ್ದಾರೆ. ಶರಣ್, ರಿಷಿ ಹಾಗೂ ಪವನ್ ಕುಮಾರ್ ಸಿನಿಮಾದ ನಾಯಕರಾಗಿದ್ದಾರೆ. ಈ ಮೂಲಕ ರಿಷಿಗೆ ಮತ್ತೊಂದು ಒಳ್ಳೆಯ ಅವಕಾಶ ಸಿಕ್ಕಿದೆ. 'ಗಾಳಿಪಟ 2' ಮುಂದಿನ ವರ್ಷದಿಂದ ಹಾರಾಟ ಶುರು ಮಾಡಲಿದೆ.

'ರಾಮನ ಅವತಾರ'ದಲ್ಲಿ ರಿಷಿ
'ರಾಮನ ಅವತಾರ' ಯಂಗ್ ಟೀಮ್ ಸೇರಿ ಮಾಡುತ್ತಿರುವ ಹೊಸ ಸಿನಿಮಾ. ಈ ಚಿತ್ರದ ಮೂರು ನಾಯಕರ ಪೈಕಿ ರಿಷಿ ಕೂಡ ಒಬ್ಬರು. ವಿನಯ್ ಪಂಪಾಪತಿ ಹಾಗೂ ವಿಕಾಸ್ ಪಂಪಾಪತಿ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ವಿಭಿನ್ನ ಶೈಲಿಯ ಟೈಟಲ್ ಮತ್ತು ಪೋಸ್ಟರ್ ಮೂಲಕ ಈ ಸಿನಿಮಾ ಗಮನ ಸೆಳೆಯುತ್ತಿದೆ.

ಯೋಗರಾಜ್ ಭಟ್ - ಶಶಾಂಕ್ ಚಿತ್ರ
'ಗಾಳಿಪಟ 2' ಮುಗಿದ ಮೇಲೆ ನಿರ್ದೇಶಕರಾದ ಯೋಗರಾಜ್ ಭಟ್ ಹಾಗೂ ಶಶಾಂಕ್ ನಿರ್ಮಾಣದಲ್ಲಿ ಬರುತ್ತಿರುವ ಸಿನಿಮಾದಲ್ಲಿ ರಿಷಿ ನಟಿಸುತ್ತಿದ್ದಾರೆ. ಮೋಹನ್ ಸಿಂಗ್ ಈ ಸಿನಿಮಾದ ಡೈರೆಕ್ಟರ್. ಯೋಗರಾಜ್ ಭಟ್ ಅಸೋಸಿಯೇಟ್ ಆಗಿದ್ದ ಇವರು ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸಿನಿಮಾ ಮೇಕಿಂಗ್ ಬಗ್ಗೆ ಬಹಳ ಅನುಭವ ಹೊಂದಿರುವ ಮೋಹನ್ ಭಟ್ಟರ ಕಥೆಯ ಏಳೆಯನ್ನು ಪರದೆ ಮೇಲೆ ತೋರಿಸುತ್ತಿದ್ದಾರೆ.


Click it and Unblock the Notifications











